ನಕಲಿ ತುಪ್ಪ ತಯಾರಿಕೆ ತಡೆಗೆ ಟಾಸ್ಕ್‌ಫೋರ್ಸ್‌ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿಕೆ

ಮೈಸೂರು (ಜ.05): ನಕಲಿ ನಂದಿನಿ ತುಪ್ಪ (Nandini Ghee) ತಯಾರಿಕೆ ತಡೆಗೆ ಟಾಸ್ಕ್‌ಫೋರ್ಸ್‌ (ಜಾಗೃತ ದಳ) ರಚಿಸಲಾಗಿದ್ದು, 7 ಸದಸ್ಯರ ಈ ತಂಡಕ್ಕೆ ಪೂರ್ಣ ಅಧಿಕಾರ ನೀಡಲಾಗಿದೆ. ಎಲ್ಲಾ ರೀತಿಯಲ್ಲೂ ತನಿಖೆ ಮಾಡಲು ಸೂಚಿಸಲಾಗಿದೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (Minister ST Somashekar) ತಿಳಿಸಿದರು. ಮೈಸೂರು (Mysuru) ಹಾಲು ಉತ್ಪಾದಕರ ಮಹಾ ಮಂಡಳಿಯ (ಮೈಮುಲ್‌), ಕೆಎಂಎಫ್‌ (KMF) ಅಧಿಕಾರಿಗಳು ಹಾಗೂ ಪದಾಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಂಎಫ್‌ನಲ್ಲಿ (KMF) ಲಕ್ಷಾಂತರ ರೈತರು, 5 ಕೋಟಿ ಗ್ರಾಹಕರಿದ್ದಾರೆ. ಸಂಬಳ ಪಡೆದು ಸಂಸ್ಥೆಗೆ ಮೋಸ ಮಾಡಿದರೆ ಸಹಿಸುವುದಿಲ್ಲ. ಪೊಲೀಸರಿಗೆ (Police) ಸಂಪೂರ್ಣ ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಟಾಸ್ಕ್‌ ಪೋರ್ಸ್‌ (Task Force) 14 ಹಾಲು ಒಕ್ಕೂಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಈಗಾಗಲೇ ಜಾಗೃತ ದಳದ ಅಧಿಕಾರಿಗಳು ಹೊಸ ಕೋಟೆಯಲ್ಲಿ 1728 ಲೀಟರ್‌ ತುಪ್ಪ, ನೆಲಮಂಗಲದ (Nelemangala) ಮಾಕಳಿ ಪ್ರದೇಶದಲ್ಲಿ 6990 ಲೀಟರ್‌ ತುಪ್ಪ, ಜಯನಗರದ ಡಿಪಾರ್ಟ್‌ ಮೆಂಟಲ್‌ ಸ್ಟೋ​ರ್‍ಸ್ನಲ್ಲಿ 4 ಲೀಟರ್‌ ತುಪ್ಪ ಪತ್ತೆ ಮಾಡಿದ್ದಾರೆ. ಕೆಎಂಎಫ್‌ (KMF) ಏಜೆಂಟರ್‌ ಸಹಕಾರದಿಂದ ನಂದಿನಿ ನಕಲಿ ತುಪ್ಪ (Ghee) ತಯಾರಿಸಿರಬಹುದು. ನಂದಿನಿ ಪ್ಯಾಕೆಟ್‌, ಶೇ.30 ರಿಂದ 40 ಕಲಬೆರಕೆ ಮಾಡಿರುವ ಬಗ್ಗೆ ಮಾಹಿತಿ ಇದೆ. ಅಲ್ಲದೆ, ಕಡಿಮೆ ದರದಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಗ್ರಾಹಕರು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಅವರು ಕೋರಿದರು.

ತಿರುಪತಿ ಮತ್ತು ವಿದೇಶಗಳಿಗೆ ನಂದಿನಿ ತುಪ್ಪ ಕಳುಹಿಸಲಾಗುತ್ತದೆ. ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗಬಾರದೆಂದು ನಕಲಿ ತುಪ್ಪ ಪ್ರಕರಣಗಳ ಸಂಬಂಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಪೊಲೀಸ್‌ (Police) ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ. ವ್ಯತ್ಯಾಸ ಕಂಡು ಬಂದರೆ ಬಂಧಿಸುವಂತೆ ಆದೇಶಿಸಲಾಗಿದೆ ಎಂದರು.

ನಕಲಿ ನಂದಿನಿ ತುಪ್ಪ (Nandini) ತಯಾರಿಕೆ ಪ್ರಕರಣದ ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರು ಯಾರೇ ಇದ್ದರೂ ಶಿಕ್ಷೆಯಾಗುತ್ತದೆ. ಈ ಪ್ರಕರಣದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದರೆ ಕೆಲಸದಿಂದ ತೆಗೆದು, ಆಸ್ತಿ ಮುಟ್ಟು ಗೋಲು ಹಾಕಿಕೊಳ್ಳುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಮೈಮುಲ್‌ (Mymul) ಅಧ್ಯಕ್ಷ ಪಿ.ಎಂ. ಪ್ರಸನ್ನ, ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಸತೀಶ್‌, ಮೈಮುಲ್‌ ವ್ಯವಸ್ಥಾಪಕ ನಿರ್ದೇಶಕ ವಿಜಯ್‌ಕುಮಾರ್‌, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ಹೆಚ್ಚುವರಿ ಎಸ್ಪಿ ಆರ್‌. ಶಿವಕುಮಾರ್‌ (shivakumar) ಮೊದಲಾದವರು ಇದ್ದರು.

ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ನಂದಿನಿ ಉತ್ಪನ್ನ ಮಾತ್ರವಲ್ಲದೇ ಎಲ್ಲಾ ಆಹಾರ ಪದಾರ್ಥಗಳನ್ನು ಪರಿಶೀಲಿಸುತ್ತಾರೆ. ದೂರು ಬಂದಾಗ ತನಿಖೆ ಮಾಡುತ್ತಾರೆ. ನಕಲಿ ನಂದಿನಿ (Nandini) ತುಪ್ಪ ತಯಾರಿಕೆ ತನಿಖೆಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ಪ್ರಾಥಮಿಕ ಮಾಹಿತಿ ಮಾತ್ರ ನೀಡಿದ್ದೇವೆ.

ಡಾ. ಬಗಾದಿ ಗೌತಮ್‌, ಜಿಲ್ಲಾಧಿಕಾರಿ

  •  ನಕಲಿ ತುಪ್ಪ ತಯಾರಿಕೆ ತಡೆಗೆ ಟಾಸ್ಕ್‌ಫೋರ್ಸ್‌
  • ಎಲ್ಲಾ ರೀತಿಯಲ್ಲೂ ತನಿಖೆ ಮಾಡಲು ಸೂಚಿಸಲಾಗಿದೆ 
  • ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌
  • ಮೈಸೂರು ಹಾಲು ಉತ್ಪಾದಕರ ಮಹಾಮಂಡಳಿಯ (ಮೈಮುಲ್‌), ಕೆಎಂಎಫ್‌ ಅಧಿಕಾರಿಗಳು ಹಾಗೂ ಪದಾಧಿಕಾರಿಗಳೊಂದಿಗೆ ಸಭೆ
  • ಟಾಸ್ಕ್‌ಪೋರ್ಸ್‌ 14 ಹಾಲು ಒಕ್ಕೂಟಗಳಿಗೆ ಭೇಟಿ ನೀಡಿ ಪರಿಶೀಲನೆ 
  • ತಿರುಪತಿ ಮತ್ತು ವಿದೇಶಗಳಿಗೆ ನಂದಿನಿ ತುಪ್ಪ ಕಳುಹಿಸಲಾಗುತ್ತದೆ - ಈ ನಿಟ್ಟಿನಲ್ಲಿ ಎಚ್ಚರಿಕೆ