8 ತಿಂಗಳ ಬಳಿಕ ಚಿತ್ರಮಂದಿರ ಓಪನ್: ಟಾಕೀಸ್ ಸಿಬ್ಬಂದಿಗೆ ಸಿಹಿ ನೀಡಿ ಸ್ವಾಗತ..!
ಕೊರೋನಾ ಲಾಕ್ಡೌನ್ ಬಳಿಕ ಇದೇ ಮೊದಲ ಬಾರಿಗೆ ಚಿತ್ರಮಂದಿರಗಳು ಆರಂಭ| ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಶಿವಕುಮಾರ್ ಸುಬ್ಬಯ್ಯ ಹಾಗೂ ಧಾರವಾಡದ ಸಾಹಿತಿ ರಾಜಕುಮಾರ ಮಡಿವಾಳರ ನೇತೃತ್ವದಲ್ಲಿ ಚಿತ್ರಮಂದಿರ ಸಿಬ್ಬಂದಿಗಳಿಗೆ ಸಿಹಿ ಹಂಚಿ ಸ್ವಾಗತ| ಆ್ಯಕ್ಟ್ 1978 ಸಿನಿಮಾ ವೀಕ್ಷಿಸಿ ಸಂಭ್ರಮಪಟ್ಟ ಪ್ರೇಕ್ಷಕರು|
ಧಾರವಾಡ(ನ.20):ರಾಜ್ಯಾದ್ಯಂತ ಎಂಟು ತಿಂಗಳ ಬಳಿಕ ಚಿತ್ರಮಂದಿರಗಳು ಆರಂಭಗೊಳ್ಳುತ್ತಿದ್ದು, ಅದರಂತೆ ನಗರದಲ್ಲಿಯೂ ಸಹ ಚಿತ್ರಮಂದಿರಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಚಿತ್ರಮಂದಿರ ಸಿಬ್ಬಂದಿಗೆ ಸಿನಿಪ್ರಿಯರ ಬಳಗದಿಂದ ಸಿಹಿ ನೀಡಿ ಸ್ವಾಗತಿಸಿಕೊಳ್ಳಲಾಗಿದೆ.
ಕೊರೋನಾ ಲಾಕ್ಡೌನ್ ಬಳಿಕ ಇದೇ ಮೊದಲ ಬಾರಿಗೆ ಆರಂಭಗೊಳ್ಳುತ್ತಿರುವ ಚಿತ್ರಮಂದಿರಗಳಲ್ಲಿ ಮನ್ಸೋರೆ ನಿರ್ದೇಶನದ "ಆ್ಯಕ್ಟ್ 1978" ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಸಂಗಮ ಚಿತ್ರಮಂದಿರದಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದು, ಇಂದು ಮೊದಲ ಷೋ ಆರಂಭಕ್ಕೂ ಮುಂಚೆ ಕೆಲಸ ನಿರ್ವಹಿಸಲು ಬಂದ ಚಿತ್ರಮಂದಿರ ಸಿಬ್ಬಂದಿಯನ್ನು ವಿಶೇಷವಾಗಿ ಸ್ವಾಗತಿಸಿಕೊಳ್ಳಲಾಗಿದೆ. ಸಂಗಮ ಚಿತ್ರಮಂದಿರ ಸಿಬ್ಬಂದಿಗೆ ಧಾರವಾಡ ಸಿನಿ ಪ್ರಿಯರ ಬಳಗದ ವತಿಯಿಂದ ಸ್ವೀಟ್ ಬಾಕ್ಸ್ ನೀಡಿ ಸ್ವಾಗತ ಕೋರಲಾಗಿದೆ.
ಬೇಡಿಕೆ ಈಡೇರಿದರಷ್ಟೇ ಚಿತ್ರಮಂದಿರ ಓಪನ್..!
ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಶಿವಕುಮಾರ್ ಸುಬ್ಬಯ್ಯ ಹಾಗೂ ಧಾರವಾಡದ ಸಾಹಿತಿ ರಾಜಕುಮಾರ ಮಡಿವಾಳರ ನೇತೃತ್ವದಲ್ಲಿ ಚಿತ್ರಮಂದಿರ ಸಿಬ್ಬಂದಿಗಳಿಗೆ ಸಿಹಿ ಹಂಚಿ ಸ್ವಾಗತಿಸಿಕೊಳ್ಳಲಾಯಿತು. ಇನ್ನು 8 ತಿಂಗಳಿನಿಂದ ಚಿತ್ರಮಂದಿರಗಳು ಬಂದ್ ಆಗಿದ್ದರಿಂದ ಆರಂಭದ ನಿರೀಕ್ಷೆಯಲ್ಲಿದ್ದ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸಿನಿಮಾ ಟಿಕೆಟ್ ಪಡೆದು ಕೈಯಲ್ಲಿ ಹಿಡಿದು ಸಂಭ್ರಮಿಸಿ, ಆ್ಯಕ್ಟ್ 1978 ಸಿನಿಮಾ ವೀಕ್ಷಿಸಿದ್ದಾರೆ.