ಬೆಳಗಾವಿ ದೊಡ್ಡ ಜಿಲ್ಲೆ ಮಾತ್ರವಲ್ಲದೇ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವುದರಿಂದ ಮಾದಕವಸ್ತುಗಳ ಮಾರಾಟ, ಸಾಗಾಣಿಕೆ ಹಾಗೂ ಸೇವನೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಅವರು ಸೂಚನೆ ನೀಡಿದರು.

 ಬೆಳಗಾವಿ : ಬೆಳಗಾವಿ ದೊಡ್ಡ ಜಿಲ್ಲೆ ಮಾತ್ರವಲ್ಲದೇ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವುದರಿಂದ ಮಾದಕವಸ್ತುಗಳ ಮಾರಾಟ, ಸಾಗಾಣಿಕೆ ಹಾಗೂ ಸೇವನೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಅವರು ಸೂಚನೆ ನೀಡಿದರು.

Add Asianetnews Kannada as a Preferred SourcegooglePreferred

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈಚೆಗೆ ಮಾದಕ ವಸ್ತುಗಳ ಮಾರಾಟ ​ಸಾಗಾಣಿಕೆ ನಿಯಂತ್ರಣ ಕುರಿತು ನಡೆದ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾದಕವಸ್ತುಗಳ ತಡೆ ನಿಟ್ಟಿನಲ್ಲಿ ಕೃಷಿ, ಅರಣ್ಯ, ಆರೋಗ್ಯ, ಪೊಲೀಸ್‌ ಇಲಾಖೆಯ ಪಾತ್ರ ಬಹಳ ಪ್ರಮುಖವಾಗಿರುತ್ತದೆ. ಈ ಇಲಾಖೆಯ ಅಧಿಕಾರಿಗಳು ಅತ್ಯಂತ ಜಾಗರೂಕತೆಯಿಂದ ಕೆಲಸ ಮಾಡಬೇಕು. ಎಲ್ಲೆಡೆ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಮಾತನಾಡಿ, ಪೊಲೀಸ್‌ ಇಲಾಖೆ ವತಿಯಿಂದ ಮಾದಕವಸ್ತು ಸಾಗಾಣಿಕೆ, ಮಾರಾಟ ತಡೆಗೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ. ಇದಲ್ಲದೇ ಗಾಂಜಾ ಬೆಳೆ ಪತ್ತೆ, ಗಾಂಜಾ ಮತ್ತಿತರ ಅಮಲು ಪದಾರ್ಥಗಳ ಸಾಗಾಣಿಕೆ ಪತ್ತೆ ಮಾಡಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಮಾದಕವಸ್ತುಗಳ ಸೇವನೆ ದುಷ್ಪರಿಣಾಮಗಳ ಕುರಿತು ಜಾಗೃತಿ ಮಾಡಿಸಬೇಕು. ವಸತಿನಿಲಯಗಳಲ್ಲಿ ತಪಾಸಣೆ ನಡೆಸಬೇಕು. ಹೆದ್ದಾರಿ ಪಕ್ಕದ ಡಾಬಾ, ಹೋಟೆಲ…ಗಳ ಮೇಲೆ ನಿಗಾ ವಹಿಸಬೇಕು. ಹೊಲಗದ್ದೆಗಳಲ್ಲಿ ಗಾಂಜಾ ಬೆಳೆ ಬಗ್ಗೆ ಮಾಹಿತಿ ಕಲೆ ಹಾಕಬೇಕು. ವೈದ್ಯರ ಚೀಟಿ ಇಲ್ಲದೇ ಯಾವುದೇ ತರಹದ ಔಷಧ ಮಾರಾಟ ಮಾಡದಂತೆ ನಿಗಾ ವಹಿಸಬೇಕು. ಮಾದಕವಸ್ತುಗಳ ಸೇವನೆಯಿಂದ ಯುವ ಸಮುದಾಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ನಗರ ಪೊಲೀಸ್‌ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಮಾತನಾಡಿ, ಮಾದಕವಸ್ತು ಸಾಗಾಣಿಕೆ, ಮಾರಾಟ ತಡೆಯುವುದು ಕೇವಲ ಪೊಲೀಸ್‌ ಇಲಾಖೆಯ ಕೆಲಸ ಎಂದುಕೊಳ್ಳಬಾರದು. ಅಬಕಾರಿ, ಅರಣ್ಯ, ಕೃಷಿ, ಆರೋಗ್ಯ ಮತ್ತಿತರ ಇಲಾಖೆಗಳು ಕೂಡ ಈ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯ ಜತೆ ಕೈಜೋಡಿಸಬೇಕು ಎಂದರು. ಮಾದಕವಸ್ತುಗಳ ಬಗ್ಗೆ ಯಾವುದೇ ಮಾಹಿತಿ ದೊರೆತರೂ ತಕ್ಷಣವೇ ಪೊಲೀಸ್‌ ಇಲಾಖೆಗೆ ಮಾಹಿತಿಯನ್ನು ನೀಡಬೇಕು ಎಂದರು.

ಸಭೆಯಲ್ಲಿ ಡಿಎಫ್‌ಒ ಹರ್ಷಭಾನು ಸೇರಿದಂತೆ ಕೃಷಿ, ಅರಣ್ಯ, ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಗಾಂಜಾ ಡಾಕ್ಟರ್ಸ್ ಕರ್ಮಕಾಂಡ ಬಯಲು

ಮಂಗಳೂರು (ಜ.13): ಮಂಗಳೂರಿನ ಪ್ರತಿಷ್ಠಿತ ಮೂರು ವೈದ್ಯಕೀಯ ಕಾಲೇಜಿನ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಭಾಗಿಯಾಗಿರುವ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮತ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಸಂಗತಿಗಳು ಬಯಲಾಗುತ್ತಿದ್ದು, ಮತ್ತಿನ ಲೋಕದ ಭಯಾನಕ ಚಿತ್ರಣಗಳು ಹೊರಬೀಳುತ್ತಿವೆ. ವೈದ್ಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ವೈದ್ಯರು ‘ಲಿವಿಂಗ್‌ ಟುಗೆದರ್‌’ ಹೆಸರಿನಲ್ಲಿ ಪಿ.ಜಿ., ಹಾಸ್ಟೆಲ್‌ ಬಿಟ್ಟು, ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ ಮಾಡುತ್ತಿದ್ದರು. ಅಲ್ಲಿ ವಿದ್ಯಾರ್ಥಿಗಳು ತಮ್ಮ ಗರ್ಲ್‌ಫ್ರೆಂಡ್‌ಗಳಿಗೆ ಗಾಂಜಾದ ರುಚಿ ತೋರಿಸುತ್ತಿದ್ದರು.

ಅಲ್ಲದೆ, ಸ್ಥಳೀಯರೇ ಇವರಿಗೆಲ್ಲಾ ಡ್ರಗ್ಸ್‌ ಪೂರೈಸುತ್ತಿದ್ದರು. ಕೇರಳದ ಕಾಸರಗೋಡು, ಗೋವಾ, ಮಹಾರಾಷ್ಟ್ರದಿಂದ ರೈಲಿನಲ್ಲಿ ಮಂಗಳೂರಿಗೆ ಗಾಂಜಾ ಪೂರೈಕೆಯಾಗುತ್ತಿತ್ತು. ಬಂಧಿತ ಆರೋಪಿಗಳು ಆನ್‌ಲೈನ್‌ ಮೂಲಕವೂ ಮಾದಕದ್ರವ್ಯ ಪೂರೈಕೆಗೆ ಬುಕ್ಕಿಂಗ್‌ ಮಾಡುತ್ತಿದ್ದರು. ಇ-ಮೇಲ್‌, ವಾಟ್ಸಪ್‌ನಲ್ಲೂ ಡ್ರಗ್ಸ್‌ ಬುಕ್ಕಿಂಗ್‌ ದಂಧೆ ನಡೆಯುತ್ತಿತ್ತು. ಗಾಂಜಾ ಮತ್ತು ಸಿಂಥೆಟಿಕ್‌ ಡ್ರಗ್ಸ್‌ಗಳಾದ ಎಂಡಿಎಂಎ, ಕೊಕೇನ್‌, ಚರಸ್‌, ಹಶೀಶ್‌ಗಳನ್ನು ಇವರು ಯಥೇಚ್ಛವಾಗಿ ಪೂರೈಕೆ ಮಾಡುತ್ತಿದ್ದರು ಎಂಬುದು ಪೊಲೀಸ್‌ ತನಿಖೆ ವೇಳೆ ತಿಳಿದು ಬಂದಿದೆ.