ಜನರ ಬೇಡಿಕೆಯಂತೆ ಆರಂಭವಾದ ಹಳಿಯಾಳ-ಭಟ್ಕಳ ಬಸ್ ಸೇವೆ ಕಳೆದ ಎರಡು ತಿಂಗಳಿಂದ ಅನಿಯಮಿತವಾಗಿದ್ದು, ವಿಶೇಷವಾಗಿ ಭಾನುವಾರದಂದು ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ಪ್ರಯಾಣಿಕರು, ನೌಕರರು ಮತ್ತು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸಾರಿಗೆ ಇಲಾಖೆ ಶೀಘ್ರದಲ್ಲೇ ಸೇವೆ ಪುನರಾರಂಭಿಸುವುದಾಗಿ ಭರವಸೆ ನೀಡಿದೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಕೆಳಗಿನ ತಾಲೂಕಿನ ಜನರ ಅಪಾರ ಬೇಡಿಕೆಯಂತೆ ಕಳೆದ ವರ್ಷವಷ್ಟೇ ಆರಂಭಗೊಂಡಿದ್ದ ಹಳಿಯಾಳ-ಭಟ್ಕಳ-ಹಳಿಯಾಳ ಬಸ್ ಕಳೆದೆರೆಡು ತಿಂಗಳಿಂದ ನಿಯಮಿತವಾಗಿ ಬಿಡದಿರುವುದರಿಂದ ಬಸ್ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ.

Add Asianetnews Kannada as a Preferred SourcegooglePreferred

ಇತ್ತೀಚಿನ ಕೆಲವು ದಿನಗಳಿಂದ ಈ ಬಸ್ ಭಾನುವಾರ ಸಂಚರಿಸುತ್ತಿಲ್ಲ. ಈ ಕುರಿತು ಸಾರಿಗೆ ಘಟಕದ ನಿರ್ವಾಹಕರಿಗೆ ವಿಚಾರಿಸಿದರೇ ಭಾನುವಾರ ರಜೆ ದಿನವಾಗಿ ಮಾರ್ಪಡಿಸಿದ್ದರಿಂದ ಹಳಿಯಾಳ-ಭಟ್ಕಳ್ಳ-ಹಳಿಯಾಳ ಸಂಚರಿಸುವುದಿಲ್ಲವೆಂದು ಹೇಳುತ್ತಾರೆ. ಒಮ್ಮೊಮ್ಮೆ ಬಸ್ ದುರಸ್ತಿ ಇದೇ, ಸಿಬ್ಬಂದಿ ಕೊರತೆ ಎಂದು ಅಸಂಬದ್ಧ ಸಬೂಬು ಹೇಳಿ ನುಣುಚಿಕೊಳ್ಳುತ್ತಾರೆಂಬುದು ಪ್ರಯಾಣಿಕರು ಆರೋಪವಾಗಿದೆ.

ಬಸ್ ವೇಳಾಪಟ್ಟಿ

ಬೆಳಗ್ಗೆ 8 ಗಂಟೆಗೆ ಹಳಿಯಾಳದಿಂದ ಹೊರಡುವ ಈ ಬಸ್ ಯಲ್ಲಾಪುರ, ಅಂಕೋಲಾ, ಕುಮಟಾ, ಹೊನ್ನಾವರ ಮಾರ್ಗವಾಗಿ ಭಟ್ಕಳಕ್ಕೆ ಮಧ್ಯಾಹ್ನ 1.30ಕ್ಕೆ ತಲುಪುತ್ತದೆ. ಮಧ್ಯಾಹ್ನ 2.30ಕ್ಕೆ ಭಟ್ಕಳದಿಂದ ಹೊರಡುವ ಬಸ್ ರಾತ್ರಿ 8ಗಂಟೆಗೆ ಹಳಿಯಾಳಕ್ಕೆ ತಲಪುತ್ತದೆ.

ವಾರಾಂತ್ಯದ ದಿನ ಘಟ್ಟದ ಕೆಳಗಿನ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಸಿಬ್ಬಂದಿ, ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಊರಿಗೆ ಹೋದರೇ ಸೋಮವಾರ ಹಿಂದಿರುಗಿ ಬರಲು ತಡವಾಗುತ್ತದೆ ಎಂಬ ಕಾರಣಕ್ಕೆ ಭಾಬಯವಾರ ಸಂಜೆಯೇ ಈ ಬಸ್ ಮೂಲಕ ಹಳಿಯಾಳಕ್ಕೆ ಬರುತ್ತಿದ್ದರು.

ಸರ್ವರಿಗೂ ಅನುಕೂಲಕರವಾಗಿರುವ ಬಸ್

ಈ ಬಸ್ ಆರಂಭಗೊಂಡ ನಂತರ ಜಿಲ್ಲಾ ಕೇಂದ್ರ ಕಾರವಾರವಾಗಲಿ ಅಥವಾ ಶಿರಸಿ ಶೈಕ್ಷಣಿಕ ಜಿಲ್ಲೆಗೆ ಭೇಟಿ ನೀಡಿ ಬರುವ ಪ್ರಯಾಣಿಕರಿಗೆ ಹಳಿಯಾಳಕ್ಕೆ ಮರಳಲು ಈ ಬಸ್ ಅನುಕೂಲಕರವಾಗಿತ್ತು. ಅದಲ್ಲದೇ ಯಲ್ಲಾಪುರದಿಂದ ಹಳಿಯಾಳಕ್ಕೆ ಬರಲು ಸಂಜೆ ಸಮಯದಲ್ಲಿ ಕೊನೆಯ ಬಸ್ ಇದಾಗಿರುವುದರಿಂದ ಸರ್ವರಿಗೂ ಈ ಬಸ್ ಬಾರಿ ಅನುಕೂಲಕರವಾಗಿತ್ತು.

ಇದನ್ನೂ ಓದಿ: ಸಿದ್ದಾಪುರ To ಶಿರಸಿ: ಸಾರಿಗೆ ಬಸ್ ವೇಳಾಪಟ್ಟಿ ಬದಲಾವಣೆ, ವಿದ್ಯಾರ್ಥಿಗಳ ಹೋರಾಟದ ಫಲ

ಕೆಲವು ಆಡಳಿತಾತ್ಮಕ ಕಾರಣಗಳಿಂದ ಭಾನುವಾರ ಬಸ್ ಸಂಚಾರ ಬಂದ್ ಮಾಡಲಾಗಿತ್ತು. ಇದರಿಂದಾಗಿ ಈ ರೂಟಿನ ಸಂಚರಿಸುವರಿಗೆ ತೊಂದರೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ವಾರದಿಂದ ವಾರದ ಏಳು ದಿನವೂ ಬಸ್ ಸಂಚಾರ ಎಂದಿನಂತೆಯೇ ಆರಂಭಿಸಲಿದ್ದೇವೆ ಎಂದು ಹಳಿಯಾಳ ಸಾರಿಗೆ ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ.

ಇದನ್ನೂ ಓದಿ: Sirsi: ಯಕ್ಷಗಾನ ನಡೆಸುವ ಜಾಗದ ವಿಚಾರ; ಚಪ್ಪಲಿ, ಪೊರಕೆಯಲ್ಲಿ ಹೊಡೆದಾಡಿಕೊಂಡ ಶಿರಸಿಯ ದಾಯಾದಿಗಳು!