ಇತ್ತೀಚೆಗೆ ಸುರಿದ ಮಳೆಗೆ ಹಾನಿಗೊಳಗಾದ ಬೆಳೆಗಳ ವರದಿಯನ್ನು ಡಿಸಿ, ಸಿಇಓ ಸಲ್ಲಿಸುವಂತೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು  

ಚಿಕ್ಕಮಗಳೂರು(jಜು.30) :ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಮಲೆನಾಡಿನ ಹಳ್ಳಕೊಳ್ಳಗಳು ತುಂಬಿ ದುಮ್ಮಿಕ್ಕಿದವು. ಭಾರೀ ಮಳೆ(Heavy rainfall)ಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಿಸಬೇಕಾಯಿತು. ಜನರು ಬೆಳೆ, ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದರು. ಹಾನಿ ಆಗಿರುವ ಕಾಫಿ, ತೋಟಗಾರಿಕೆ ಮತ್ತು ಕೃಷಿ ಬೆಳೆಗಳ ಸಮಗ್ರ ವರದಿಯನ್ನು ಶೀಘ್ರದಲ್ಲಿ ಜಿಲ್ಲಾಧಿಕಾರಿ ಮತ್ತು ಸಿಇಓ ಅವರಿಗೆ ಸಲ್ಲಿಸುವಂತೆ ಶಾಸಕ ಎಂ.ಪಿ.ಕುಮಾರಸ್ವಾಮಿ(M.P.Kumaraswamy) ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಕಚೇರಿಯಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಳೆಯಿಂದ ಮನೆ ಕಳೆದುಕೊಂಡ ಫಲಾನುಭವಿಗಳಿಗೆ ಪರಿಹಾರದ ಚೆಕ್‌ ವಿತರಿಸಿ ಮಾತನಾಡಿದ ಅವರು, ಮನೆಗಳು ಸೇರಿದಂತೆ ಶಾಲೆ, ಅಂಗನವಾಡಿ ಕಟ್ಟಡಗಳೆಷ್ಟುಹಾನಿಯಾಗಿದೆ ಹಾಗು ಜಿಪಂ, ತಾಪಂ, ಲೋಕೋಪಯೋಗಿ ರಸ್ತೆಗಳು ಹಾನಿ ಆಗಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದರು.

ಕರ್ನಾಟಕದಲ್ಲಿ 2 ದಿನ ಭಾರಿ ಮಳೆ ಸಾಧ್ಯತೆ: ಯೆಲ್ಲೋ ಅಲರ್ಟ್‌

ಮೂಡಿಗೆರೆ ಕ್ಷೇತ್ರಕ್ಕೆ ಸಂಬಂಧಿಸಿದ ಮಳೆಹಾನಿ ಕುರಿತ ಅರ್ಜಿ ಸ್ವೀಕರಿಸಿ ಇಲಾಖಾವಾರು ವರದಿ ತಯಾರಿಸಿ ಸಲ್ಲಿಸಬೇಕು. ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ ಅವರನ್ನು ಭೇಟಿ ಮಾಡಿ ಅತಿವೃಷ್ಟಿಬಗ್ಗೆ ಮಾಹಿತಿ ನೀಡಿ ಪರಿಹಾರಕ್ಕಾಗಿ ಚರ್ಚಿಸಲಾಗಿದೆ. ಮಳೆಯಿಂದ ಮನೆ ಕಳೆದು ಕೊಂಡ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಳ್ಳಲು .5 ಲಕ್ಷ ನೀಡಲಾಗುತ್ತಿದ್ದು, ಮೊದಲ ಕಂತಿನಲ್ಲಿ .95 ಸಾವಿರ ಚೆಕ್‌ ಹಸ್ತಾಂತರಿಸಲಾಗಿದೆ ಎಂದರು.

ತಹಸೀಲ್ದಾರ್‌ ವಿನಾಯಕ್‌ ಸಾಗರ್‌ ಮಾತನಾಡಿ ಮಳೆ ಹಾನಿ ಹಾಗೂ ಪರಿ​ಹಾರ ಕುರಿತ ವಿವರ ನೀಡಿ​ದರು. ತಾಪಂ ಇಓ ತಾರಾನಾಥ್‌, ತೋಟಗಾರಿಕಾ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸಹಾಯಕ ಕೃಷಿ ನಿರ್ದೇಶಕ ಎಚ್‌.ಆರ್‌.ಸುರೇಶ್‌, ಲೋಕೋಪಯೋಗಿ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

ಮಳೆಯಲ್ಲಿ ನೆನೆಯೋದು ಒಳ್ಳೇದಲ್ಲ, ಆದರೆ, ಮಳೆ ನೀರಲ್ಲಿ ಸ್ನಾನ ಮಾಡೋದು ಒಳಿತು!

 ಹಲವು ಜಿಲ್ಲೆಯಲ್ಲಿ ಮಳೆ ಮುನ್ಸೂಚನೆ ಯೆಲ್ಲೋ ಅಲರ್ಟ್:

(ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನು ಎರಡು ದಿನ ಭರ್ಜರಿ ಮಳೆಯಾಗಲಿದೆ. ಶನಿವಾರ ಬೆಳಗ್ಗೆ 8.30ರ ತನಕ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ ಮತ್ತು ಬೀದರ್‌ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯೊಂದಿಗೆ ಯೆಲ್ಲೋ ಅಲರ್ಚ್‌ ನೀಡಲಾಗಿದೆ. ಶನಿವಾರದಿಂದ ಭಾನುವಾರ ಬೆಳಗ್ಗೆ 8.30ರ ತನಕ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗೆ ಯೆಲ್ಲೋ ಅಲರ್ಚ್‌ ನೀಡಲಾಗಿದೆ. ಭಾನುವಾರದಿಂದ ಸೋಮವಾರ ತನಕ ಮಳೆ ಅಬ್ಬರ ತುಸು ಕಡಿಮೆ ಇರಲಿದೆ. ಆದರೆ ಸೋಮವಾರ ಮತ್ತು ಮಂಗಳವಾರ ಮತ್ತೆ ಮಳೆ ಅಬ್ಬರಿಸಲಿದ್ದ ಮಲೆನಾಡಿನ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗೆ ಅತಿ ಭಾರಿ ಮಳೆಯ ಆರೆಂಜ್‌ ಅಲರ್ಚ್‌ ನೀಡಲಾಗಿದೆ.