ಬೀದಿ ನಾಯಿಯ ಮಾರಣಾಂತಿಕ ದಾಳಿಯಿಂದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉದ್ದಿನಮಲ್ಲನಹೊಸೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ರಮೇಶ್‌ ಪುತ್ರ ದೀಕ್ಷಿತ್‌(5) ನಾಯಿ ದಾಳಿಯಿಂದ ಗಾಯಗೊಂಡ ಬಾಲಕ. ಭಾನುವಾರ ನರ್ಸರಿ ಶಾಲೆಗೆ ರಜೆ ಇದ್ದ ಕಾರಣ ಬೆಳಗ್ಗೆ ಸುಮಾರು 8.30ರಲ್ಲಿ ಮನೆಯಿಂದ ಹೊರಗಡೆ ಬಂದಿದ್ದಾನೆ.

ಕಿಕ್ಕೇರಿ (ಜು.18) :  ಬೀದಿ ನಾಯಿಯ ಮಾರಣಾಂತಿಕ ದಾಳಿಯಿಂದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉದ್ದಿನಮಲ್ಲನಹೊಸೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ರಮೇಶ್‌ ಪುತ್ರ ದೀಕ್ಷಿತ್‌(5) ನಾಯಿ ದಾಳಿಯಿಂದ ಗಾಯಗೊಂಡ ಬಾಲಕ. ಭಾನುವಾರ ನರ್ಸರಿ ಶಾಲೆಗೆ ರಜೆ ಇದ್ದ ಕಾರಣ ಬೆಳಗ್ಗೆ ಸುಮಾರು 8.30ರಲ್ಲಿ ಮನೆಯಿಂದ ಹೊರಗಡೆ ಬಂದಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಳಿಕ ತುಸು ದೂರದಲ್ಲಿರುವ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿರುವವರನ್ನು ಕಂಡು ಅಲ್ಲಿಗೆ ಹೋಗಲು ಹೆಜ್ಜೆ ಹಾಕಿದ್ದಾನೆ. ಬೀಡಾಡಿ ನಾಯಿ ಮನೆ ಮುಂದೆಯೇ ಈತನ ಮೇಲೆ ಏಕಾಏಕಿ ದಾಳಿ ಮಾಡಿ ಕೈ ಬೆರಳು, ಮುಖ, ಮೈ ಮೇಲೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ.

ಪ್ರಥಮ ಬಾರಿಗೆ ಬೀದಿ ನಾಯಿ ಗಣತಿಗೆ ಬಿಬಿಎಂಪಿ ಡ್ರೋಣ್ ಬಳಕೆ!

ಬಾಲಕನ ಗಲ್ಲವನ್ನು ಆಳವಾಗಿ ಸೀಳಿದೆ. ಇದರಿಂದ ಬಾಲಕ ಪ್ರಜ್ಞಾಹೀನನಾಗಿದ್ದಾನೆ. ಗ್ರಾಮಸ್ಥರು ನಾಯಿ ದಾಳಿ ಮಾಡುತ್ತಿರುವ ಘಟನೆ ಕಂಡು ಕೂಗಿಕೊಂಡು ಸ್ಥಳಕ್ಕೆ ಓಡಿ ಬಂದಿದ್ದಾರೆ. ಅಷ್ಟರಲ್ಲಿ ನಾಯಿ ಬೊಗಳುತ್ತ ಓಡಿ ಹೋಗಿದೆ.

ಕೂಡಲೇ ಅರೆಪ್ರಜ್ಞೆಯಲ್ಲಿ ರಕ್ತಸಿಕ್ತವಾಗಿದ್ದ ಬಾಲಕನನ್ನು ಚನ್ನರಾಯಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭಯದಿಂದ ಬಾಲಕ ವಿಚಲಿತನಾಗಿದ್ದಾನೆ. ಗುಣಮುಖನಾಗಲು ಕಾಣಲು ಸಾಕಷ್ಟುಸಮಯ ಬೇಕಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಹೇಳಲಾಗಿದೆ.

ನಾಯಿಗಳ ಉಪಟಳ ಹೆಚ್ಚಳ:

ಕಿಕ್ಕೇರಿ ಸೇರಿದಂತೆ ಹೋಬಳಿಯಲ್ಲೆಡೆ ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಮುಂದಾದಾಗ ಹಲವು ಪ್ರಾಣಿದಯಾ ಸಂಘದವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತವಾಗಿತ್ತು. ಮಾದಾಪುರ ಕ್ರಾಸ್‌ನ ಪ್ರದೇಶದಲ್ಲಿ ಮೀನು, ಮಾಂಸದ ಅಂಗಡಿ, ಮಾಂಸದ ಹೋಟೆಲ್‌ಗಳು ಹೆಚ್ಚಾಗಿದ್ದು ಬಹುತೇಕ ನಾಯಿಗಳು ಠಿಕಾಣಿ ಹೂಡಿವೆ.

ನಾಯಿಗಳು ಸುತ್ತಮುತ್ತಲ ಪ್ರದೇಶದ ಹಳ್ಳಿಗಳ ತೋಟದಲ್ಲಿ ರಾತ್ರಿ ವೇಳೆ ತಂಗುತ್ತಿವೆ. ಹಗಲು ವೇಳೆ ಮಕ್ಕಳು, ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಕೂಡಲೇ ನಾಯಿಗಳ ಉಪಟಳ ನಿಯಂತ್ರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬೀದಿ ನಾಯಿಗಳ ಕಾಟ ತಾಳಲಾರದೆ ಶಾಲೆಗಳಿಗೆ ರಜೆ ಕೊಟ್ಟ ಪಂಚಾಯಿತಿ!

ಹೋಬಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿ ಕಂಡು ಬಂದಿದೆ. ಮೇಲಾಧಿಕಾರಿಗಳಿಗೆ ತಿಳಿಸಿ ತುರ್ತು ನಾಯಿ ನಿಯಂತ್ರಣಕ್ಕೆ ನಿಗವಹಿಸಲಾಗುವುದು.

ಸುರೇಶ್‌ ಬಾಬು, ಪಿಡಿಒ, ಲಕ್ಷ್ಮೇಪುರ ಗ್ರಾಪಂ.

ಸಂತಾನಹರಣ ಚಿಕಿತ್ಸೆ ಮೂಲಕ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಪ್ರಾಣಿದಯಾ ಸಂಸ್ಥೆ ಮೂಲಕ ನಾಯಿಗಳ ಹಿಡಿಯದಂತೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರು. ಈಗ ನಾಯಿ ಹಾವಳಿ ಹೆಚ್ಚಾಗಿದೆ. ಪ್ರಾಣಿದಯಾ ಸಂಸ್ಥೆ ಶ್ವಾನ ಶಾಲೆ ತೆರೆದು ನಾಯಿಗಳನ್ನು ಸಾಕುವ ವ್ಯವಸ್ಥೆ ಮಾಡಿಕೊಂಡರೆ ಜನರು ನೆಮ್ಮದಿಯಿಂದ ಬೀದಿಯಲ್ಲಿ ಸಂಚರಿಸಲು ಅನುಕೂಲವಾಗಲಿದೆ.

ಅಶೋಕ್‌ಕುಮಾರ್‌, ಗ್ರಾಪಂ ಅಧ್ಯಕ್ಷರು.

ಮನೆಯಲ್ಲಿ ಮಾಲೀಕರು ಸಾಕಿರುವ ನಾಯಿಗಳು ಜನರು, ಮಕ್ಕಳ ಮೇಲೆ ದಾಳಿ ಮಾಡುತ್ತಿಲ್ಲ. ದಾಳಿ ಮಾಡುತ್ತಿರುವ ಬೀಡಾಡಿ ನಾಯಿಗಳನ್ನು ಗ್ರಾಪಂನವರು ನಿಯಂತ್ರಿಸಲಿ. ಇಲ್ಲವಾದಲ್ಲಿ ಪ್ರಾಣಿದಯಾ ಸಂಘದವರಾದರೂ ಸಾಕಿಕೊಳ್ಳಲಿ. ಜನರು ಯಾವುದೇ ಭಯವಿಲ್ಲದೇ ಸಂಚರಿಸಲು ಅವಕಾಶ ಮಾಡಿಕೊಟ್ಟರೆ ಅಷ್ಟೆಸಾಕು.

ನಾಗಣ್ಣ. ಗ್ರಾಮಸ್ಥ