ಕೇಂದ್ರ ಸರ್ಕಾರವು ಶಿವಮೊಗ್ಗ ಲೋಕಸಭಾ ಕ್ಷೇತ ವ್ಯಾಪ್ತಿಯ ನೆಟ್‍ವರ್ಕ್ ಸಂಪರ್ಕವಿಲ್ಲದ ಗ್ರಾಮೀಣ ಪ್ರದೇಶಗಳಿಗೆ ಅತ್ಯಾಧುನಿಕ ದೂರಸಂಪರ್ಕ ವ್ಯವಸ್ಥೆಯಾದ 4ಜಿ ಟವರ್‌ಗಳನ್ನು ಮಂಜೂರು ಮಾಡಿದೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ತಿಳಿಸಿದರು. 

ವರದಿ: ರಾಜೇಶ್‌ ಕಾಮತ್, ಏಷ್ಯಾನೆಟ್ ಸುವರ್ಣ ನ್ಯೂಸ್, ಶಿವಮೊಗ್ಗ

ಶಿವಮೊಗ್ಗ (ನ.06): ಕೇಂದ್ರ ಸರ್ಕಾರವು ಶಿವಮೊಗ್ಗ ಲೋಕಸಭಾ ಕ್ಷೇತ ವ್ಯಾಪ್ತಿಯ ನೆಟ್‍ವರ್ಕ್ ಸಂಪರ್ಕವಿಲ್ಲದ ಗ್ರಾಮೀಣ ಪ್ರದೇಶಗಳಿಗೆ ಅತ್ಯಾಧುನಿಕ ದೂರಸಂಪರ್ಕ ವ್ಯವಸ್ಥೆಯಾದ 4ಜಿ ಟವರ್‌ಗಳನ್ನು ಮಂಜೂರು ಮಾಡಿದೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ತಿಳಿಸಿದರು. ಇಂದು ಶಿವಮೊಗ್ಗ ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಈ ಕುರಿತಾದ ಮಾಹಿತಿಯನ್ನು ನೀಡಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ದೂರ ಸಂಪರ್ಕ ವ್ಯವಸ್ಥೆಯಲ್ಲಿನ ಅಭಿವೃದ್ದಿ ಮತ್ತು ಸುಧಾರಣಾ ದೃಷ್ಟಿಯಿಂದ ಕೇಂದ್ರದ ದೂರ ಸಂಪರ್ಕ ಸಚಿವರಾದ ಅಶಿನಿ ವೈಷ್ಣವ್‍ರವರಿಗೆ ಮನವಿ ಸಲ್ಲಿಸಲಾಗಿತ್ತು. 

ದೂರಸಂಪರ್ಕ ವ್ಯವಸ್ಥೆಯಿಂದ ವಂಚಿತರಾದ 96 ಕುಗ್ರಾಮಗಳನ್ನು ಗುರುತಿಸಿ, ಆ ಗ್ರಾಮಗಳಿಗೆ ತುರ್ತಾಗಿ ದೂರಸಂಪರ್ಕ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಲಾಗಿತ್ತು. ಕೇಂದ್ರ ಸಚಿವರು ಈ ಮನವಿಗೆ ಕೂಡಲೇ ಸ್ಪಂದಿಸಿ ಹಲವಾರು ಕ್ರಮಗಳನ್ನು ಕೈಗೊಂಡು ಅಕ್ಟೋಬರ್ 27ರಂದು ಪತ್ರ ಮುಖೇನ ವಿವರಗಳನ್ನು ತಿಳಿಸಿದ್ದಾರೆ. ಆತ್ಮನಿರ್ಭರ ಭಾರತದ 4 ಜಿ ಟೆಕ್ನಾಲಜಿ ಯೋಜನೆಯಡಿ ದೇಶದಾದ್ಯಂತ ನೆಟ್‍ವರ್ಕ್ ಇಲ್ಲದ ಕುಗ್ರಾಮಗಳಿಗೆ ಅತ್ಯಾಧುನಿಕ ದೂರಸಂಪರ್ಕ ನೀಡಲು ರೂ.26,136 ಕೋಟಿ ವೆಚ್ಚದ 4ಜಿ ಮೊಬೈಲ್ ಸರ್ವಿಸ್ ಯೋಜನೆ ಮಂಜೂರು ಮಾಡಲಾಗಿದೆ. ಈ ಯೋಜನೆಯಡಿ ದೇಶದ ಸುಮಾರು 24,680 ಕುಗ್ರಾಮಗಳಿಗೆ 4ಜಿ ಮೊಬೈಲ್ ಸರ್ವಿಸ್ ನೀಡಲಾಗುವುದು.

ಮೊಬೈಲ್ ಡಯಲ್ ಪ್ಯಾಡ್ ಬಳಸಿ ಮ್ಯೂಸಿಕ್: ಯುವ ಕಲಾವಿದನ ಮ್ಯಾಜಿಕ್!

ಆತ್ಮನಿರ್ಭರ ಭಾರತ ಯೋಜನೆಯ ಯೂನಿವರ್ಸಲ್ ಸರ್ವಿಸ್ ಆಬ್ಲಿಗೇಷನ್ ಫಂಡ್(ಯುಎಸ್‍ಒಎಫ್) ನಿಂದ ಬಿಎಸ್‍ಎನ್‍ಎಲ್ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ದೇಶದ ನಾಲ್ಕು ರಾಜ್ಯಗಳ ಒಂದೊಂದು ತಾಲ್ಲೂಕುಗಳ ಗ್ರಾಮಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ. ಕರ್ನಾಟಕದ ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿಯ ಹಳ್ಳಿಗಳು, ಹರಿಯಾಣ, ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳ ತಾಲ್ಲೂಕುಗಳನ್ನು ಆಯ್ಕೆ ಮಾಡಲಾಗಿದೆ. ಮೊದಲ ಹಂತದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 54 ಅತ್ಯಾಧುನಿಕ ದೂರಸಂಪರ್ಕ ವ್ಯವಸ್ಥೆಯಾದ 4ಜಿ ಟವರ್‌ಗಳನ್ನು ಮಂಜೂರು ಮಾಡಲಾಗಿದೆ. 

ಹೊಸನಗರ-24, ಸಾಗರ-12, ಶಿವಮೊಗ್ಗ-03, ತೀರ್ಥಹಳ್ಳಿ-11 ಮತ್ತು ಬೈಂದೂರು-04 ಒಟ್ಟು 54 ಟವರ್‍ಗಳನ್ನು ಮಂಜೂರು ಮಾಡಲಾಗಿದೆ. ಇನ್ನುಳಿದ ಗ್ರಾಮಗಳನ್ನು ಅತೀ ಶೀಘ್ರದಲ್ಲಿ ಈ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರದ ಸಚಿವರು ಭರವಸೆ ನೀಡಿದ್ದಾರೆ. ಅಲ್ಲದೆ ಬ್ಯಾಟರಿ ಬ್ಯಾಕ್‍ಅಪ್ ಇಲ್ಲದೇ ಆಗಾಗ ದೂರ ಸಂಪರ್ಕ ವ್ಯವಸ್ಥೆಯಲ್ಲಿ ಆಗುತ್ತಿರುವ ಅಡಚಣೆ ಕುರಿತು ಸಚಿವರ ಗಮನಕ್ಕೆ ತರಲಾಗಿತ್ತು. ಇದಕ್ಕಾಗಿ ಅವರು 22 ಬ್ಯಾಟರಿ ಸೆಟ್‍ಗಳ ಮಂಜೂರಾತಿ ನೀಡಿರುವುದಲ್ಲದೇ, ಇನ್ನುಳಿದಂತೆ ಇಡೀ ಜಿಲ್ಲೆಯಾದ್ಯಂತ ದೂರಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ 104 ಬ್ಯಾಟರಿ ಸೆಟ್‍ಗಳ ಮಂಜೂರಾತಿಗಾಗಿ ಕ್ರಮ ಕೈಗೊಂಡಿರುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ ಎಂದರು. 

ದೂರಸಂಪರ್ಕ ಕ್ಷೇತ್ರದಲ್ಲಿ ಹಲವಾರು ಸುಧಾರಣಾ ಕ್ರಮಗಳು ಜಾರಿಯಲ್ಲಿದ್ದು, ಭಾರತ್ ನೆಟ್ ವ್ಯವಸ್ಥೆಯಡಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಅತ್ಯಂತ ಸುಧಾರಿತ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಈಗಾಗಲೇ 151 ಗ್ರಾ.ಪಂ ಗಳಿಗೆ ನೀಡಲಾಗಿದೆ. ಉಳಿದ ಗ್ರಾ.ಪಂ ಗಳಿಗೂ ಆದಷ್ಟು ಶೀಘ್ರವಾಗಿ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಲೆನಾಡಿನ ಪ್ರದೇಶವಾದ ಶಿವಮೊಗ್ಗ ಜಿಲ್ಲೆಯಲ್ಲಿನ ನೆಟ್‍ವರ್ಕ್ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಅದರ ಮೇರೆಗೆ ಕೇಂದ್ರ ಸರ್ಕಾರವು ಭಾರತ್‍ನೆಟ್ ಉದ್ಯಮಿ(ಬಿಎನ್‍ಯು) ಸ್ಕೀಂ ಅಡಿಯಲ್ಲಿ ದೇಶದ ನಾಲ್ಕು ಬ್ಲಾಕ್‍ಗಳಲ್ಲಿ ಪೈಲಟ್ ಯೋಜನೆಯಾಗಿ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಬಿಎಸ್‍ಎನ್‍ಎಲ್ ವತಿಯಿಂದ ಕಾರ್ಯಗತಗೊಳಿಸಲು ತೀರ್ಮಾನಿಸಿದ್ದು, ಅದರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ಬ್ಲಾಕ್‍ನ್ನು ಆಯ್ಕೆ ಮಾಡಲಾಗಿದೆ. 

ವಿವಿಧ ಆಪರೇಟರ್‌ಗಳಿಂದ ಪಡೆಯಲಾದ ಲೆವಿ ಮೊತ್ತವನ್ನು ಯುಎಸ್‍ಒಎಫ್ ಅಡಿಯಲ್ಲಿ ವಿನಿಯೋಗಿಸಿ, ದೇಶದ ವಿವಿಧೆಡೆ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ಯೋಜನೆಯಡಿ ಸಂಪರ್ಕ ಪಡೆಯಲು ಯಾವುದೇ ವೆಚ್ಚ ಇರುವುದಿಲ್ಲ. ಉಚಿತವಾಗಿ ಮೊಡೆಮ್ ಒದಗಿಸಲಾಗುತ್ತದೆ. ಹಾಗು 200 ಎಂಬಿಪಿಎಸ್‌ವರೆಗಿನ ಸ್ಪೀಡ್ ಲಭ್ಯವಿದ್ದು, ಮೊದಲ 75 ದಿನಗಳವರೆಗೆ ಉಚಿತವಾಗಿದ್ದು ನಂತರ ಕೇವಲ ರೂ. 275/- ಮಾತ್ರ ಶುಲ್ಕ ಪಡೆಯಲಾಗುವುದು. ಈ ಯೋಜನೆಯನ್ನು ಡಿಸೆಂಬರ್ ಅಂತ್ಯದೊಳಗೆ ಕಾರ್ಯಗತಗೊಳಿಸಲು ನಿರ್ಧರಿಸಲಾಗಿದೆ ಎಂದರು. 

ಚಂದ್ರಶೇಖರ್‌ ಪ್ರಕರಣ ಎಲ್ಲ ಕೋನಗಳಿಂದ ತನಿಖೆ: ಎಡಿಜಿಪಿ ಅಲೋಕ್‌ ಕುಮಾರ್‌

ಈ ಯೋಜನೆಯಿಂದಾಗಿ ಮಲೆನಾಡಿನ ಗುಡ್ಡಗಾಡು ಮತ್ತು ಕುಗ್ರಾಮಗಳಲ್ಲಿ ತುಂಬಾ ದಿನಗಳಿಂದ ಕಂಡು ಬರುತ್ತಿದ್ದ ಇಂಟರ್ನೆಟ್ ಸಮಸ್ಯೆ ದೂರವಾಗಲಿದೆ, ಅಲ್ಲದೇ ಈ ಯೋಜನೆಯ ಯಶಸ್ವಿಯ ನಂತರ ಇದನ್ನು ಜಿಲ್ಲೆಯ ವಿವಿಧ ಬ್ಲಾಕ್‍ಗಳಿಗೂ ವಿಸ್ತರಿಸುವ ಉದ್ದೇಶ ಹೊಂದಲಾಗಿದ್ದು, ಈ ಯೋಜನೆಯನ್ನು ನೀಡಿದ ಕೇಂದ್ರ ಸರ್ಕಾರ ಹಾಗು ದೂರಸಂಪರ್ಕ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಜನರಲ್ ಮ್ಯಾನೇಜರ್ ಧನಂಜಯಕುಮಾರ್ ತ್ರಿಪಾಠಿ, ಡೆಪ್ಯುಟಿ ಜನರಲ್ ಮ್ಯಾನೇಜರ್‌ಗಳಾದ ಕೃಷ್ಣ ಮೊಗೇರ್, ಹೆಚ್.ಎಸ್.ವೆಂಕಟೇಶ್, ಶೇಷಗಿರಿ ಇದ್ದರು.