ಶಾಸಕ ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್‌ ಸಾವು ಸಂಶಯಾಸ್ಪದವಾಗಿದ್ದು, ಎಲ್ಲ ಕೋನದಿಂದಲೂ ತನಿಖೆ ನಡೆಯುತ್ತಿದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದರು. 

ಶಿವಮೊಗ್ಗ (ನ.05): ಶಾಸಕ ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್‌ ಸಾವು ಸಂಶಯಾಸ್ಪದವಾಗಿದ್ದು, ಎಲ್ಲ ಕೋನದಿಂದಲೂ ತನಿಖೆ ನಡೆಯುತ್ತಿದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ತನಿಖೆ ನಂತರ ಸತ್ಯಾಂಶ ಹೊರಬಲಿದೆ. ಈ ಸಂದರ್ಭದಲ್ಲಿ ಸವಿನ ಬಗ್ಗೆ ಟೀಕೆ, ಟಿಪ್ಪಣಿ ಮಾಡಲು ಸಾಧ್ಯವಿಲ್ಲ. ಪೂರಕ ದಾಖಲೆಗಳು ಇದ್ದರಷ್ಟೆಸ್ಪಷ್ಟವಾಗಿ ಹೇಳಲು ಸಾಧ್ಯ ಎಂದು ಹೇಳಿದರು.

ಚಂದ್ರಶೇಖರ್‌ ಸಾವಿನ ಬಗ್ಗೆ ಹುಬ್ಬಳ್ಳಿ, ದಾವಣಗೆರೆಯಿಂದಲೂ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ. ಮರಣೋತ್ತರ ಪರೀಕ್ಷಾ ವರದಿ ಬಂದಮೇಲೆ ಎಲ್ಲಾ ಮಾಹಿತಿ ಸಿಗುತ್ತದೆ. ಸಿಸಿ ಟಿವಿಯ ಫäಟೇಜ್‌ ಸಿಕ್ಕಿದೆ. ಡ್ರೋಣ್‌ ಮೂಲಕ ಕಾಲುವೆ ಬಳಿ ಪರಿಶೀಲನೆ ನಡೆಸಿದಾಗ ಕಾರಿನ ಮುಂಭಾಗ ನೀರಿನಲ್ಲಿ ಕಂಡುಬಂದಿದ್ದು, ಕಾರನ್ನು ಮೇಲಕ್ಕೆತ್ತಿದಾಗ ಅದರಲ್ಲಿ ಚಂದ್ರಶೇಖರ್‌ ಶವ ಸಿಕ್ಕಿದೆ. ಕುಟುಂಬದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ಸಾಕ್ಷಿಗಳನ್ನು ಸಂಗ್ರಹಿಸಲಾಗುತ್ತಿದೆ. ಎಎಸ್‌ಐಎಲ್‌ ಲ್ಯಾಬ್‌ ವರದಿ ಬಂದ ಬಳಿಕ ಖಚಿತ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಅವಳಿ ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆಯಿಂದ ದಿಗ್ಭ್ರಮೆಗೆ ಒಳಗಾಗಿದ್ದೇನೆ: ಸಚಿವ ಸುಧಾಕರ್‌

ಅಗತ್ಯ ಬಿದ್ದರೆ ವಿನಯ್‌ ಗುರೂಜಿ ವಿಚಾರಣೆ: ಪ್ರಕರಣ ಸಂಬಂಧ ಅನುಮಾನಾಸ್ಪದ ವ್ಯಕ್ತಿಗಳ ತನಿಖೆ ನಡೆಯುತ್ತಿದೆ. ಚಂದ್ರಶೇಖರ್‌ ಸಾವಿಗೂ ಮುನ್ನ ಗೌರಿಗದ್ದೆಗೆ, ಶಿವಮೊಗ್ಗಕ್ಕೆ ಬಂದು ಹೋಗಿರುವ ಬಗ್ಗೆ ಮಾಹಿತಿ ಇದೆ. ಈಗಾಗಲೇ ಅನೇಕರನ್ನು ವಿಚಾರಣೆ ಮಾಡಿ ಮಾಹಿತಿ ಕಲೆ ಹಾಲಾಗುತ್ತಿದೆ. ಪ್ರಾಥಮಿಕ ಹಂತದ ತನಿಖೆಯಲ್ಲಿ ವಿನಯ್‌ ಗುರೂಜಿ ವಿಚಾರಣೆ ಅಗತ್ಯ ಎನ್ನಿಸಿಲ್ಲ. ಅವಶ್ಯಕತೆ ಕಂಡು ಬಂದಲ್ಲಿ ಅವರನ್ನೂ ತನಿಖೆಗೆ ಒಳಪಡಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾಧ್ಯಮಗಳ ಸಂಯಮ ಅಗತ್ಯ: ಸಿಬ್ಬಂದಿಗೆ ವಾರದ ರಜೆ ನೀಡುತ್ತಿಲ್ಲ ಎಂಬ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿಬ್ಬಂದಿಗೆ ರಜೆ ನೀಡಬೇಕಾದರೆ ಮಾಧ್ಯಮಗಳ ಸಹಕಾರ ಅತಿ ಮುಖ್ಯ. ಸಣ್ಣಪುಟ್ಟಘಟನೆಗಳನ್ನು ಶಿವಮೊಗ್ಗ ಧಗಧಗ.. ಭಗಭಗ.. ಎಂದು ವೈಭವೀಕರಿಸಿದರೆ, ಅದರ ಪರಿಣಾಮ ಸಾರ್ವಜನಿಕರಲ್ಲಿ ಆತಂಕ ಉಂಟಾಗುತ್ತದೆ. ಪ್ರವಾಸಿಗರು ಮತ್ತು ಉದ್ಯಮಿಗಳು ಶಿವಮೊಗ್ಗಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ತೊಡಕಾಗುತ್ತದೆ. ಪೊಲೀಸ್‌ ಸಿಬ್ಬಂದಿಗೂ ಹೆಚ್ಚುವರಿ ಬಂದೋಬಸತ್‌ ಕರ್ತವ್ಯ ಬೀಳುವುದರಿಂದ ರಜೆ ನೀಡಲು ಕಷ್ಟವಾಗುತ್ತದೆ ಎಂದರು.

ಎಲ್ಲದನ್ನೂ ಪೊಲೀಸರೇ ಮಾಡಲು ಸಾಧ್ಯವಿಲ್ಲ: ರೋಲ್‌ಕಾಲ್‌ ಬೆದರಿಕೆ, ಧಮ್ಕಿ ಹಾಕಿ ಹಣ ವಸೂಲಿ, ಗಾಂಜಾ, ಮಟ್ಕಾ ಮುಂತಾದ ಕಾನೂನುಬಾಹಿರ ಚಟುವಟಿಕೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ಮರಳು ಮತ್ತು ಗಣಿಗಾರಿಕೆ ಬಗ್ಗೆ ಮಾಹಿತಿ ನಿಡಿದರೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮಾಂತರದಲ್ಲಿ ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿರುವ ದೂರುಗಳು ಬರುತ್ತಿದೆ. ಆದರೆ ಎಲ್ಲವನ್ನೂ ಪೊಲೀಸರೇ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಅಬಕಾರಿ ಇಲಾಖೆ ಜವಾಬ್ದಾರಿಯೂ ಇದೆ. ಪೊಲೀಸರಿಂದ ಎಷ್ಟುಸಾಧ್ಯವೋ ಅಷ್ಟನ್ನು ನಾವು ಮಾಡಲು ಸಿದ್ದವಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಸ್ತೆ ಅಭಿವೃದ್ಧಿ ಮೂಲಕ ಭಾರತ ಜೋಡಿಸುವ ಕೆಲಸ: ನಳಿನ್‌ ಕುಮಾರ್‌ ಕಟೀಲ್‌

ಹೊಸ ಎಸ್‌ಪಿ ನೇತೃತ್ವದಲ್ಲಿ ತನಿಖೆ: ಬ್ಯಾಕೋಡಿನಲ್ಲಿ ಮೂರು ವರ್ಷಗಳ ಹಿಂದೆ ನಡೆದ ಜೋಡಿ ಕೊಲೆ ಪ್ರಕರಣದ ತನಿಖೆಯನ್ನು ಕೈಬಿಟ್ಟಿಲ್ಲ. ಇದುವರೆಗೆ 150 ಜನರನ್ನು ವಿಚಾರಣೆಗೆ ಒಳಗಪಡಿಸಲಾಗಿದೆ. ಮತ್ತೆ ಹೊಸ ಎಸ್‌ಪಿ ಅವರ ನೇತೃತ್ವದಲ್ಲಿ ತನಿಖೆ ಚುರುಕುಗೊಳಿಸಲಾಗುವುದು. ಕಾನೂನುಬಾಹಿರ ಚಟುವಟಿಕೆ ನಡೆಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಂಕಿತ ಉಗ್ರರ ಪೈಕಿ ಶಾಕೀರ್‌ ಇನ್ನೂ ಪತ್ತೆಯಾಗಿಲ್ಲ. ತುಂಬಾ ದಿನ ಬಿಟ್ಟರೆ ಅವರು ತಪ್ಪಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹೀಗಾಗಿ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ. ಆದಷ್ಟುಬೇಗ ಆರೋಪಿಯನ್ನು ಬಂಧಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪೂರ್ವವಲಯ ಐಜಿಪಿ ತ್ಯಾಗರಾಜ್‌, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ್‌ ಅಮ್ಟೆ, ಡಿವೈಎಸ್‌ಪಿ ಬಾಲರಾಜ್‌, ಸಾಗರದ ಎಎಸ್‌ಪಿ ರೋಷನ್‌ ಜಗದೀಶ್‌, ಭದ್ರಾವತಿ ಎಎಸ್ಪಿ ಜೀತೆಂದ್ರ ಮತ್ತಿತರರು ಇದ್ದರು.