ನಿರಂತರ ಕಮಲ ಪಾಳಯ ಸಂಪರ್ಕ : ಕೊಳ್ಳೇಗಾಲ ಶಾಸಕ ಶೀಘ್ರ ಬಿಜೆಪಿ ಸೇರ್ಪಡೆ?
- ಸಮ್ಮಿಶ್ರ ಸರ್ಕಾರ ಪತನ ಹಾಗೂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆ ಸಂದರ್ಭಗಳಲ್ಲಿ ತಟಸ್ಥ
- ಪರೋಕ್ಷವಾಗಿ ಕಮಲಕ್ಕೆ ಸೈ ಎಂದಿದ್ದ ಕೊಳ್ಳೇಗಾಲ ಶಾಸಕ ಎನ್.ಮಹೇಶ್
- ಎನ್.ಮಹೇಶ್ ಶೀಘ್ರದಲ್ಲೆ ಬಿಜೆಪಿ ಸೇರ್ಪಡೆಗೊಳ್ಳುವುದು ಶತಸಿದ್ದ
ಕೊಳ್ಳೇಗಾಲ (ಜು.20): ಸಮ್ಮಿಶ್ರ ಸರ್ಕಾರ ಪತನ ಹಾಗೂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆ ಸಂದರ್ಭಗಳಲ್ಲಿ ತಟಸ್ಥವಾಗುಳಿದು ಪರೋಕ್ಷವಾಗಿ ಕಮಲಕ್ಕೆ ಸೈ ಎಂದಿದ್ದ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಶೀಘ್ರದಲ್ಲೆ ಬಿಜೆಪಿ ಸೇರ್ಪಡೆಗೊಳ್ಳುವುದು ಶತಸಿದ್ದ ಎನ್ನಲಾಗಿದೆ.
ಬಿಎಸ್ಪಿಯಿಂದ ಉಚ್ಛಾಟನೆಗೊಂಡ ಬಳಿಕ ನಾನು ಸ್ವತಂತ್ರ ಶಾಸಕ, ಬಿಜೆಪಿ ಸರ್ಕಾರ ರಚನೆಯಲ್ಲಿ ನನ್ನ ಪಾತ್ರವಿಲ್ಲ ಎನ್ನುತ್ತಲೆ ಬಂದಿದ್ದ ಮಹೇಶ್ ಹಿಂದಿನಿಂದಲೂ ಬಿಜೆಪಿ ಸಂಪರ್ಕದಲ್ಲಿದ್ದರು. ಸಮ್ಮಿಶ್ರ ಸರ್ಕಾರ ರಚನೆ ವೇಳೆ ಸಹಾ ಸಾಥ್ ನೀಡಿದ್ದರು ಎಂಬುದನ್ನ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೊಳ್ಳೇಗಾಲಕ್ಕೆ ಆಗಮಿಸಿದ್ದ ವೇಳೆ ಸ್ಪಷ್ಟಪಡಿಸಿದ್ದರು. ಇದಕ್ಕೂ ಮುನ್ನ ಬಿಜೆಪಿ ಕಾರ್ಯಕ್ರಮಕ್ಕೆ ಕೊಳ್ಳೇಗಾಲಕ್ಕೆ ಆಗಮಿಸಿದ್ದ ಬಿ.ವೈ.ವಿಜಯೇಂದ್ರ ಸಹಾ ಸರ್ಕಾರ ರಚನೆ ವೇಳೆ ಶಾಸಕ ಮಹೇಶ್ ಸಾಥ್ ನೀಡಿದ್ದಾರೆ. ಅವರು ಯಾವಾಗ ಬಿಜೆಪಿ ಸೇರ್ಪಡೆಗೊಳ್ಳಬೇಕು ಎಂಬುದನ್ನ ಅವರು ತೀರ್ಮಾನಿಸಬೇಕು ಎಂದಿದ್ದನು ಸ್ಮರಿಸಬಹುದು.
'17 ಶಾಸಕರಿಗೂ, ನನಗೂ ಸಂಬಂಧವಿಲ್ಲ'
ಶಾಸಕ ಮಹೇಶ್ ಮುಂದಿನ ವಿಧಾನಸಭಾ ಚುನಾವಣೆ ಟಿಕೆಟ್ ಬಯಸಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಮುಂದೆ ಬಿಜೆಪಿ ನನಗೆ ಟಿಕೆಟ್ ನೀಡುವುದು ಶತಸಿದ್ಧ, ಮತದಾರರ ಆಶೀರ್ವಾದದಿಂದ ಮತ್ತೊಮ್ಮೆ ಆಯ್ಕೆಯಾಗಬಹುದೆಂಬ ವಿಶ್ವಾಸದಿಂದಲೇ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗುತ್ತಿದೆ.