Asianet Suvarna News Asianet Suvarna News

ಸಾವು ಗೆದ್ದು ಬಂದ ಶಿರಸಿಯ ಉರಗ ರಕ್ಷಕ ಸೈಯ್ಯದ್ ಇದೀಗ ಮತ್ತೆ ಹಾವು ರಕ್ಷಣೆಗೆ ಅಣಿ

* ಸೈಯ್ಯದ್ ಇದೀಗ ಮತ್ತೆ ಉರಗ ರಕ್ಷಣೆಗೆ ಅಣಿ
* ಸಾವು ಗೆದ್ದು ಬಂದ ಶಿರಸಿಯ ಉರಗ ರಕ್ಷಕ
* ಮಾರ್ಚ್ ತಿಂಗಳಿನಲ್ಲಿ ಮೂರು ನಾಗರಹಾವಿನೊಂದಿಗೆ ಆಟವಾಡಲು ಹೋಗಿ ಕಚ್ಚಿಸಿಕೊಂಡಿದ್ದ ಸೈಯ್ಯದ್

sirsi Maaz Sayed to Starts Snake catching Who Came From Hospital rbj
Author
Bengaluru, First Published Apr 26, 2022, 5:43 PM IST

ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್

ಉತ್ತರ ಕನ್ನಡ, (ಏ.26):
ಹಾವಿನಿಂದ ಕಚ್ಚಿಸಿಕೊಂಡು ಸಾವು ಗೆದ್ದು ಬಂದ ಶಿರಸಿ ತಾಲೂಕಿನ ಉರಗ ರಕ್ಷಕ ಮಾಝ್ ಸೈಯದ್ ಅಹ್ಮದ್ ಇದೀಗ ಮತ್ತೆ ಉರಗ ರಕ್ಷಣೆಗೆ ಅಣಿಯಾಗಿದ್ದಾರೆ. 8 ದಿ‌ನಗಳ ಹಿಂದೆ ಅರಣ್ಯ ಅಧಿಕಾರಿಯೋರ್ವರ ಮನೆಯಲ್ಲಿ ಹಾವಿನ‌ ರಕ್ಷಣೆ ಮಾಡಿದ್ದ ಸೈಯ್ಯದ್ ಇದೀಗ ಟಿಪ್ಪು ನಗರ ನಿವಾಸಿಯೋರ್ವರ ಮನೆಯೊಳಗೆ ಬಂದಿದ್ದ ನಾಗರ ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. 

ಸಾವು ಗೆದ್ದು ಬಂದ ಉರಗ ರಕ್ಷಕನಿಂದ‌‌ ಇದೀಗ ಮತ್ತೆ ಉರಗ ರಕ್ಷಣಾ ಕಾರ್ಯ ಕಂಡು ಸಾರ್ವಜನಿಕರಿಗೂ ಸಂತೋಷವಾಗಿದೆ.‌ ಅಂದಹಾಗೆ, ಶಿರಸಿಯ ಮುಸ್ಲಿಂ ಗಲ್ಲಿಯ ನಿವಾಸಿಯಾಗಿರುವ ಮಾಝ್ ಸೈಯ್ಯದ್ ಅಹ್ಮದ್ (21), ಕಳೆದ ಮಾರ್ಚ್ ತಿಂಗಳಿನಲ್ಲಿ ಮೂರು ನಾಗರಹಾವಿನೊಂದಿಗೆ ಆಟವಾಡಿ, ಕಾಲಿಗೆ ಕಚ್ಚಿಸಿಕೊಂಡಿದ್ದರು. ಬಳಿಕ ಚಿಕಿತ್ಸೆ ಪಡೆದು ಮನೆಯಲ್ಲಿ ಸುಧಾರಿಸಿಕೊಳ್ಳುತ್ತಿದ್ದರು. ಮಾರ್ಚ್‌ನಲ್ಲಿ ಒಂದೇ ದಿನದಲ್ಲಿ ಮೂರು ಹಾವುಗಳನ್ನು ರಕ್ಷಣೆ ಮಾಡಿದ್ದ ಸೈಯ್ಯದ್, ಶಿರಸಿ ನಗರದ ಸಮೀಪದಲ್ಲಿರುವ ದೇವಿ ಕೆರೆ ಕಾಡಿನಲ್ಲಿ ಈ ಹಾವುಗಳನ್ನು ಬಿಡಲು ತೆರಳಿದ್ದರು. 

ಹಾವುಗಳ ಜೊತೆ ಸರಸವಾಡಲು ಹೋಗಿ ಆಸ್ಪತ್ರೆ ಸೇರಿದ ಯುವಕ: ವಿಡಿಯೋ ವೈರಲ್‌

ಆದರೆ, ಈ ವೇಳೆ ಹಾವುಗಳನ್ನು ಬಿಡೋ ಮೊದಲು ಆಟವಾಡಿಸಿದ್ದರಿಂದ, ಒಂದು ಹಾವು ಎಗರಿ ಸೈಯ್ಯದ್ ಕಾಲಿಗೆ ಏಕಾಏಕಿ ಕಚ್ಚಿತ್ತು. ತಕ್ಷಣ ಶಿರಸಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ, 3 ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡು ಬಳಿಕ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದರು. ಸೈಯ್ಯದ್ ಕಳೆದ 12 ವರ್ಷಗಳಿಂದಲೂ ನಾಗರಹಾವನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದು, ಈವರೆಗೆ 3 ಸಾವಿರಕ್ಕೂ ಅಧಿಕ ಹಾವುಗಳ ರಕ್ಷಣೆ ಮಾಡಿದ್ದಾರೆ. ಆದರೆ, ಕಳೆದ ಬಾರಿ ಮಾತ್ರ ಹಾವಿನೊಂದಿಗಿನ ಆಟ ಪ್ರಾಣ ಸಂಕಟಕ್ಕೆ ಕಾರಣವಾಗಿತ್ತು. 

ಆ ಘಟನೆಯ ಬಗ್ಗೆ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ನೋಡುಗರು ಯುವಕನ ಆಟವನ್ನು ವಿರೋಧಿಸಿದ್ದರು. ಇದರಿಂದಾಗಿ ಒಮ್ಮೆಲೆ ವಿಡಿಯೋ ವೈರಲ್ ಆಗಿತ್ತು. ಹಾವಿನೇಟು ತಿಂದು ಇದೀಗ ಹುಷಾರಾಗಿರುವ ಸೈಯ್ಯದ್, ಮತ್ತೆ ಹಾವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುವ ಸಮಾಜ ಸೇವೆಯನ್ನು ಮುಂದುವರಿಸಿದ್ದಾರೆ. 

ಹಾವಿನೇಟು ತಿಂದು ಇದೀಗ ಹುಷಾರಾಗಿ ಬಂದ ಸೈಯದ್
ಹಾವಿನಿಂದ ಕಚ್ಚಿಸಿಕೊಂಡ ಈ ಸೈಯದ್‌ ಅವರ ಯೂಟ್ಯೂಬ್ ಚಾನಲ್‌ನಲ್ಲಿ ಇಂತಹದ್ದೇ ದೃಶ್ಯಗಳಿರುವ ವಿಡಿಯೋಗಳೇ ತುಂಬಿವೆ. ಅಂದರೆ ಈತ ಈ ಹಿಂದೆಯೂ ಇಂತಹ ಹುಚ್ಚು ಸಾಹಸ ಮಾಡಿ ಯಶಸ್ವಿಯಾಗಿದ್ದ. ಆದರೆ ಈ ಬಾರಿ ಆತನ ಗ್ರಹಚಾರ ಕೆಟ್ಟಿತ್ತೇನೋ. ಹಾವು ಚಂಗನೇ ಮೇಲೇರಿ ಈತನಿಗೆ ಕಚ್ಚಿದೆ. ಈ ವೇಳೆ ಕುಳಿತಿದ್ದ ಆತನೂ ಒಮ್ಮೆಲೆ ಮೇಲೇರಿದ್ದು, ಕಚ್ಚಿದ  ಹಾವನ್ನು ತನ್ನ ಕೈಯಿಂದ ಎಳೆಯುತ್ತಾನೆ. ಆದರೆ ಅದು ಗಟ್ಟಿಯಾಗಿ ಕಚ್ಚಿ ಹಿಡಿದಿತ್ತು.

ಹಾವುಗಳ ಬಗ್ಗೆ ಆಸಕ್ತಿ ಹೊಂದಿರುವ ಶಿರಸಿ ಯುವಕ ಮಾಜ್‌ ಸೈಯ್ಯದ್ (Maaz Sayed) ಎಂಬಾತನೇ ಹೀಗೇ ಹಾವುಗಳೊಂದಿಗೆ ಸರಸವಾಡಲು ಹೋಗಿ ಕಚ್ಚಿಸಿಕೊಂಡ ಯುವಕ. ವಿಡಿಯೋದಲ್ಲಿ ಈತ ಮೂರು ಹೆಡೆ ಎತ್ತಿ ನಿಂತಿರುವ ನಾಗರಹಾವುಗಳ ಮುಂದೆ ಕುಳಿತು ಮೆಲ್ಲ ಮೆಲ್ಲನೇ ಅವುಗಳನ್ನು ಮುಟ್ಟಲು ಅವುಗಳ ಬಾಲವನ್ನು ಎಳೆಯಲು ಆರಂಭಿಸಿದ್ದಾನೆ. ಅಲ್ಲದೇ ಅವುಗಳ ಮುಂದೆ ತನ್ನ ಕೈಗಳನ್ನು ಹಾಗೂ ಕಾಲುಗಳನ್ನು ಹೆಡೆ ಆಡಿಸಿದಂತೆ ಆಡಿಸಿದ್ದಾನೆ. ಈ ವೇಳೆ ಭಯಗೊಂಡ ಹಾವೊಂದು ಆತನ ಮೊಣಕಾಲಿಗೆ ಕಚ್ಚಿತ್ತು. ಈ ವಿಡಿಯೋ ಫುಲ್ ವೈರಲ್ ಅಗಿತ್ತು.

Follow Us:
Download App:
  • android
  • ios