ಕಾಂಗ್ರೆಸ್ ಪಕ್ಷ ಯಾವುದೇ ಜಾತಿಗೆ ಸೀಮಿತವಾದ ಪಾರ್ಟಿ ಅಲ್ಲ| ಎಲ್ಲ ಜಾತಿಗಳನ್ನು ಒಟ್ಟಿಗೆ ತಗೆದುಕೊಂಡು ಹೋಗುವ ಪಕ್ಷ ಕಾಂಗ್ರೆಸ್| ಎಸ್ಐಟಿ ತನಿಖೆ ಮೇಲೆ ನಂಬಿಕೆ ಇಲ್ಲ| ಸತೀಶ್ ಜಾರಕಿಹೊಳಿ‌ ಬಹಳ ಒಳ್ಳೆಯ, ಸಮರ್ಥ ಅಭ್ಯರ್ಥಿ: ಸಿದ್ದರಾಮಯ್ಯ| 

ಬೆಳಗಾವಿ(ಮಾ.29): ಉಪಚುನಾವಣೆಯಲ್ಲಿ ಸಿಡಿ ಪ್ರಕರಣ ಬಿಜೆಪಿಗೆ ವಿರುದ್ಧವೇ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಇಂದು(ಸೋಮವಾರ) ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ‌ ಸಿಡಿ ಬಹಿರಂಗ ಪ್ರಕರಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಆಗುತ್ತದೆ. ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ಸಿಡಿ ಪ್ರಕರಣದವನ್ನ ಕಾಂಗ್ರೆಸ್‌ ಚುನಾವಣಾ ವಿಷಯವಾಗಿ ಬಳಸಿಕೊಳ್ಳುವುದಿಲ್ಲ. ಎಸ್ಐಟಿ ತನಿಖೆ ಮೇಲೆ ನಂಬಿಕೆ ಇಲ್ಲ. ಸಿಡಿ ಪ್ರಕರಣವನ್ನ ನಿಷ್ಪಕ್ಷಪಾತವಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆಗಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ತಿಳಿಸಿದ್ದಾರೆ.

ಬೆಳಗಾವಿ: ಸಿಡಿ ಲೇಡಿ ಕುಟುಂಬಸ್ಥರ ಆರೋಪ, ಪ್ರತಿಕ್ರಿಯೆಗೆ ಡಿಕೆಶಿ ನಕಾರ

ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸ್ಟ್ಯಾಂಡ್ ಇಲ್ಲ, ಅದು ಬಸ್‌ಸ್ಟ್ಯಾಂಡ್ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಬಸ್ ಸ್ಟ್ರಾಂಡ್ ಆಗಿರೋರು ಯಾರಪ್ಪ, ಮಿಸ್ಟರ್ ನರೇಂದ್ರ ಮೋದಿ, ಪ್ರಹ್ಲಾದ್ ಜೋಶಿ ಒಬ್ಬ ಸೈಡ್ ಆ್ಯಕ್ಟರ್, ಡೈರೆಕ್ಟರ್ ಆರ್‌ಎಸ್‌ಎಸ್ ಎಂದು ಜೋಶಿ ವಿರುದ್ಧ ಹರಿಹಾಯ್ದಿದ್ದಾರೆ.

ಬೆಲೆ ಏರಿಕೆ, ರೈತ ವಿರೋಧಿ ಕಾನೂನು ತಂದಿದ್ದಾರೆ. ಬೆಲೆ ಏರಿಕೆ ನಿಯಂತ್ರಣ ಇಲ್ಲ, ಅಚ್ಛೆ ದಿನ್ ಇಲ್ಲ, ನರಕ ಆಗಿಬಿಟ್ಟಿದೆ. ಕಾಂಗ್ರೆಸ್ ಪಕ್ಷ ಯಾವುದೇ ಜಾತಿಗೆ ಸೀಮಿತವಾದ ಪಾರ್ಟಿ ಅಲ್ಲ. ಕಾಂಗ್ರೆಸ್ ಎಲ್ಲ ಜಾತಿಗಳನ್ನು ಒಟ್ಟಿಗೆ ತಗೆದುಕೊಂಡು ಹೋಗುವ ಪಕ್ಷವಾಗಿದೆ. ಸತೀಶ್ ಜಾರಕಿಹೊಳಿ‌ ಬಹಳ ಒಳ್ಳೆಯ, ಸಮರ್ಥ ಅಭ್ಯರ್ಥಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.