Asianet Suvarna News Asianet Suvarna News

Karnataka Budget 2023: ಸಿದ್ದು ಸರ್ಕಾರ ಶೂನ್ಯ ಸಾಧನೆಯ ಬಜೆಟ್‌: ಗೋವಿಂದ ಕಾರಜೋಳ

ಬೊಮ್ಮಾಯಿ ಸರ್ಕಾರದಲ್ಲಿ ಘೋಷಿತ ಕೆಲ ನೀರಾವರಿ ಯೋಜನೆಗಳ ಮುಂದುವರಿಕೆಯ ಪ್ರಸ್ತಾಪ ಬಿಟ್ಟರೆ ಮತ್ತೆ ಯಥಾಸ್ಥಿತಿ ಎಂಬಂತೆ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಯ ಹಲವು ಯೋಜನೆಗಳ ಘೋಷಣೆ ಬಿಟ್ಟರೆ ಒಟ್ಟಾರೆ ಜಿಲ್ಲೆಯ ಮಟ್ಟಿಗೆ ಬಜೆಟ್‌ ನಿರಾಶಾದಾಯಕ ಎಂಬಂತೆ ಕಾಣುತ್ತಿದೆ.

Siddaramaiah Government Zero Achievement Budget says Former DCM Govind Karjol grg
Author
First Published Jul 8, 2023, 10:00 PM IST

ಈಶ್ವರ ಶೆಟ್ಟರ

ಬಾಗಲಕೋಟೆ(ಜು.08): ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಬಾಗಲಕೋಟೆ ಜಿಲ್ಲೆಗೆ ಸಿಗಬೇಕಾದ ಪ್ರಾತಿನಿಧ್ಯ ಸಿಕ್ಕಿಲ್ಲ. ಮಂಜೂರಾದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅನುದಾನ ನೀಡದ ಸರ್ಕಾರ, ಬೊಮ್ಮಾಯಿ ಅವರ ಸರ್ಕಾರದಲ್ಲಿ ಘೋಷಿತ ಕೆಲ ನೀರಾವರಿ ಯೋಜನೆಗಳ ಮುಂದುವರಿಕೆಯ ಪ್ರಸ್ತಾಪ ಬಿಟ್ಟರೆ ಮತ್ತೆ ಯಥಾಸ್ಥಿತಿ ಎಂಬಂತೆ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಯ ಹಲವು ಯೋಜನೆಗಳ ಘೋಷಣೆ ಬಿಟ್ಟರೆ ಒಟ್ಟಾರೆ ಜಿಲ್ಲೆಯ ಮಟ್ಟಿಗೆ ಬಜೆಟ್‌ ನಿರಾಶಾದಾಯಕ ಎಂಬಂತೆ ಕಾಣುತ್ತಿದೆ.

ಹಲವು ನದಿಗಳ, ಹಲವು ಕಾರ್ಖಾನೆಗಳ, ಲಕ್ಷಾಂತರ ಎಕರೆ ನೀರಾವರಿ ಹೊಂದಿದ ಬಾಗಲಕೋಟೆ ಜಿಲ್ಲೆಗೆ ಸಿಗಬೇಕಾದ ಪ್ರಾತಿನಿಧ್ಯ ಈ ಬಜೆಟ್‌ನಲ್ಲಿ ಸಿಕ್ಕಿಲ್ಲ. ಜೊತೆಗೆ ಘೋಷಿತ ಯೋಜನೆಗಳ ಅನುಷ್ಠಾನದ ಕುರಿತು ಸಹ ಕೆಲವು ಹೊರತುಪಡಿಸಿದರೆ ಇನ್ನುಳಿದ ಘೋಷಿತ ಯೋಜನೆಗಳಿಗೆ ಬಜೆಟ್‌ನಲ್ಲಿ ಯಾವ ಪ್ರಸ್ತಾಪವು ಸಹ ಇರದೆ ಹೋಗಿದ್ದರಿಂದ ಸಹಜವಾಗಿ ಜಿಲ್ಲೆಯ ಜನತೆ ನಿರಾಶೆಗೊಂಡಿದೆ.

KARNATAKA BUDGET 2023: ಆಶಾದಾಯಕ, ಜನಪರ, ಜನಸ್ನೇಹಿ ಬಜೆಟ್‌: ಸತೀಶ್‌ ಜಾರಕಿಹೊಳಿ

ವೈದ್ಯಕೀಯ ಕಾಲೇಜಿಗೆ ಸಿಗದ ಅನುದಾನ:

ಹೊಸ ಸರ್ಕಾರದಲ್ಲಿ ಅದರಲ್ಲೂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಬಾಗಲಕೋಟೆಗೆ ಮಂಜೂರಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಈ ವರ್ಷದ ಬಜೆಟ್‌ನಲ್ಲಿ ಸೂಕ್ತ ಅನುದಾನ ದೊರಕುತ್ತದೆ ಎಂಬುವುದು ಬಹುತೇಕರ ವಿಶ್ವಾಸವಾಗಿತ್ತು. ಅದಕ್ಕೆ ಕಾರಣವೂ ಇತ್ತು. ಸಿದ್ದರಾಮಯ್ಯನವರೆ 2014-15ರ ಬಜೆಟ್‌ನಲ್ಲಿ ಬಾಗಲಕೋಟೆ ನವನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮಂಜೂರಾತಿ ನೀಡುವ ಜೊತೆಗೆ ನವನಗರದಲ್ಲಿ ಎರಡು ಸೆಕ್ಟರ್‌ ಸ್ಥಳವನ್ನು ಕಾಯ್ದಿರಿಸಿದ್ದರು.

ತಮ್ಮ ಅಂದಿನ ಅವ​ಧಿಯಲ್ಲಿ ಸೂಕ್ತ ಅನುದಾನ ನೀಡದೇ ಇರುವುದರಿಂದ ವೈದ್ಯಕೀಯ ಕಾಲೇಜು ಸ್ಥಾಪನೆ ನೆನಗುದಿಗೆ ಬಿದ್ದಿತ್ತು. ನಂತರದ ಬಿಜೆಪಿ ಸರ್ಕಾರದಲ್ಲಿ ವೈದ್ಯಕೀಯ ಕಾಲೇಜಿಗೆ ಅನುದಾನ ನೀಡುವ ಮಾತು ಭರವಸೆಯಾಗಿತ್ತು. ಇದರಿಂದ ನಿರಾಶೆಗೊಂಡ ಕನ್ನಡಪರ ಹಾಗೂ ಎಎಪಿ ಪಕ್ಷ ನಿರಂತರ ಹೋರಾಟವನ್ನು ಮಾಡಿತ್ತು. ಅದು ಯಾವುದು ಸಹ ಆಳುವ ಸರ್ಕಾರಕ್ಕೆ ಪ್ರಾತಿನಿಧ್ಯ ನೀಡುವ ವಿಷಯವಾಗಿರಲಿಲ್ಲ. ಆದರೆ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅ​ಧಿಕಾರ ಸ್ವೀಕರಿಸಿದ ಸಂದರ್ಭದಿಂದ ಈವರೆಗೆ ಜಿಲ್ಲೆಯ ಜನತೆ ಈ ಬಜೆಟ್‌ನಲ್ಲಿ ಅನುದಾನ ಸಿಗಬಹುದು ಎಂಬ ಭರವಸೆ ನಿರಾಶೆಯಾಗಿದ್ದರಿಂದ ಸಹಜವಾಗಿ ಸರ್ಕಾರದ ನಿರ್ಧಾರಕ್ಕೆ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ.

ನೀರಾವರಿ ಕ್ಷೇತ್ರಕ್ಕೂ ಅಷ್ಷಕಷ್ಟೇ:

ಕಳೆದ ಬೊಮ್ಮಾಯಿ ಸರ್ಕಾರದಲ್ಲಿ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರ ಆಸಕ್ತಿ ಮೇರೆಗೆ ಜಾರಿಯಾದ ಕುಲಹಳ್ಳಿ, ಹುನ್ನೂರ, ಸಸಾಲಟ್ಟಿ,ಶಿವಲಿಂಗೇಶ್ವರ ಮತ್ತು ಮಂಟೂರ ಮಹಾಲಕ್ಷ್ಮೇ ಏತನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಬೇಕಾದ ಅನುದಾನ ಹಾಗೂ ಅಂದಾಜು 39134 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶದ ನೀರಾವರಿ ಪೂರ್ಣಗೊಳಿಸುವ ಮಾತುಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಇದು ಈ ಸರ್ಕಾರದ ಸಾಧನೆ ಎಂದು ಪರಿಗಣಿಸಲಾಗದು.

ಯಥಾ ಪ್ರಕಾರ ಕೃಷ್ಟಾಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕೆ ಬೇಕಾದ ಸಿದ್ಧತೆಗಳನ್ನು ಮತ್ತು ಅನುದಾನದ ಕುರಿತು ಮತ್ತು ರಾಜ್ಯಕ್ಕೆ ಹಂಚಿಕೆಯಾಗಿರುವ 130 ಟಿಎಂಸಿ ನೀರಿನ ಬಳಕೆ ಕುರಿತು ಬೇಕಾದ ಭೂಸ್ವಾಧೀನ ಮತ್ತು ಪುನರ್ವಸತಿ ನಿರ್ಮಾಣಕ್ಕೆ ಆದ್ಯತೆ ನೀಡುವ ಮಾತುಗಳನ್ನು ಬಜೆಟ್‌ನಲ್ಲಿ ಹೇಳಿರುವ ಸಿದ್ದರಾಮಯ್ಯ ಅವರ ಮಾತು ಕೃತಿಯಲ್ಲಿ ಬರಬೇಕಾದರೆ ಈ ಯೋಜನೆಗೆ ಬೇಕಾದ ಹಣವನ್ನು ಸರ್ಕಾರ ನೀಡಲು ಸದ್ಯ ಸಿದ್ಧವಿದೆಯೇ ಎಂಬ ಪ್ರಶ್ನೆ ಸಂತ್ರಸ್ತರದ್ದಾಗಿದೆ.

ಬಜೆಟ್‌ನಲ್ಲಿ ಜಿಲ್ಲೆಗೆ ಪಾಲು

ಇಡೀ ಬಜೆಟ್‌ನಲ್ಲಿ ಬಾಗಲಕೋಟೆ ಜಿಲ್ಲೆಗೆ ಪ್ರಸ್ತಾಪವಾಗಿರುವ ವಿಷಯಗಳಲ್ಲಿ ಕೇವಲ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂ​ಧಿಸಿದ್ದು ಎಂದರೆ ತಪ್ಪಾಗಲಾರದು. ಬಾದಾಮಿ ಬನಶಂಕರಿ ಪ್ರವಾಸಿ ತಾಣಗಳ ಅಭಿವೃದ್ಧಿ ಕುರಿತು ಪ್ರಸ್ತಾಪಿಸಿರುವ ಸಿದ್ದರಾಮಯ್ಯ ಅವರು ಜೊತೆಗೆ ಬಾದಾಮಿ ಗುಹೆಗಳ ಬಳಿ ರಾತ್ರಿ ವೇಳೆಯಲ್ಲಿ ಪ್ರವಾಸಿಗರ ಭೇಟಿಯನ್ನು ಉತ್ತೇಜಿಸಲು 3ಡಿ ಪ್ರೋಜೆಕ್ಷನ್‌ ಮಲ್ಟಿಮಿಡಿಯಾ ಸೌಂಡ್‌ ಮತ್ತು ಲೈಟ್‌ ಶೋ ಯೋಜನೆ ಕೈಗೊಳ್ಳುವ ಪ್ರಸ್ತಾಪ ಮಾಡಿದ್ದಾರೆ. ಹಂಪಿ, ಬಾದಾಮಿ ಐಹೋಳೆ ಪಟ್ಟದಕಲ್ಲು, ವಿಜಯಪುರ ಪ್ರವಾಸಿ ವೃತ್ತವನ್ನಾಗಿ ಮಾಡಿ ಅಭಿವೃದ್ಧಿ ಪಡಿಸುವ ಕುರಿತು ಬಜೆಟ್‌ನಲ್ಲಿ ಹೇಳಿದ್ದನ್ನು ಬಿಟ್ಟರೆ ಜಿಲ್ಲೆಗೆ ಸರ್ಕಾರದ ಕೊಡುಗೆ ಬೇರೆ ಏನು ಕಾಣುತ್ತಿಲ್ಲ.

2023-24ನೇ ಸಾಲಿನ ಬಜೆಟ್‌ನಲ್ಲಿ ದುಂದುವೆಚ್ಚ ತಡೆಯಲು ಕಾಂಗ್ರೆಸ್‌ ಸರ್ಕಾರ ಗಮನ ನೀಡಿಲ್ಲ. ಸಂಪನ್ಮೂಲ ಸಂಗ್ರಹದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಪ್ರಾರಂಭದಲ್ಲಿಯೇ ಸೋತಂತೆ ಕಾಣುತ್ತಿದೆ. ಅದರ ಪರಿಣಾಮ ರಾಜ್ಯದ ಜನತೆಯ ಮೇಲೆ ತೆರಿಗೆ ಹೊರೆ ಹಾಕಿದೆ. ನಿರುದ್ಯೋಗಿ ಪದವೀಧರ ಯುವಕರಿಗೆ .3 ಸಾವಿರ ಹಾಗೂ .1500 ನಿರುದ್ಯೋಗಿ ಭತ್ಯೆ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ನಂತರ ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡಲು ಬಜೆಟ್‌ನಲ್ಲಿ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಗ್ಯಾರಂಟಿ ಹೆಸರಿನಲ್ಲಿ ನೀರಾವರಿ ಯೋಜನೆಗಳನ್ನು ಕಡೆಗಣಿಸಿದ ಸರ್ಕಾರ ರಾಜ್ಯಕ್ಕೆ ಹಂಚಿಕೆಯಾದ ನೀರನ್ನು ಬಳಕೆ ಮಾಡಲು ಪ್ರಾಮಾಣಿಕ ಚಿಂತನೆ ಮಾಡಿಲ್ಲ. ರಾಜ್ಯಕ್ಕೆ ಯಾವುದೇ ಹೊಸ ಯೋಜನೆಗಳನ್ನಾಗಲಿ ಅಥವಾ ಅಭಿವೃದ್ಧಿ ಕೆಲಸ ಕಾರ್ಯಗಳನ್ನಾಗಲಿ ನೀಡದ ಸರ್ಕಾರ ಶೂನ್ಯ ಸಾಧನೆಯ ಬಜೆಟ್‌ ಆಗಿದೆ. ಕಾಂಗ್ರೆಸ್‌ ಸರ್ಕಾರ ಪ್ರಾಮಾಣಿಕತೆಗಿಂತಲೂ ಪ್ರಚಾರಕ್ಕೆ ಹೆಚ್ಚು ಮಹತ್ವ ನೀಡಿದ್ದು ಗ್ಯಾರಂಟಿ ಅಂತ ಮಾಜಿ ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.  

ಸಿದ್ದರಾಮಯ್ಯನವರೇ ಘೋಷಿಸಿದ್ದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕನಿಷ್ಠ ಅನುದಾನವನ್ನು ನೀಡದೆ ತಮ್ಮದೆ ಸರ್ಕಾರ ಕನಸಿನ ಕೂಸನ್ನು ಪಾಪದ ಕೂಸನ್ನಾಗಿ ಮಾಡಿದ್ದಾರೆ. ಅತಿ ಹೆಚ್ಚು ನೇಕಾರರನ್ನು ಹೊಂದಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಜವಳಿ ಪಾರ್ಕ ಸಹ ನಿರ್ಮಾಣವಾಗುತ್ತಿಲ್ಲ , ಎಲ್ಲವನ್ನು ಕಡೆಗಣಿಸಿರುವ ಈ ಸರ್ಕಾರದ ವಿರುದ್ಧ ಹೋರಾಟ ರೂಪಿಸಲಾಗುವುದು ಅಂತ ಆಮ್‌ ಆದ್ಮಿ ಪಕ್ಷದ ರಾಜ್ಯ ಜಂಟೀ ಕಾರ್ಯದರ್ಶಿ ರಮೇಶ ಬದ್ನೂರ ತಿಳಿಸಿದ್ದಾರೆ.  

Karnataka budget 2023: ಬೀದರ್ ಜಿಲ್ಲೆಗೆ ಹಳೆಯ ಯೋಜನೆಗಳೇ ಪುನರಾವರ್ತನೆ, ಬಹುತೇಕ ನಿರ್ಲಕ್ಷ್ಯ!

ರಾಜಕೀಯ ಪುನರ್ಜನ್ಮವನ್ನು ಬಾಗಲಕೋಟೆ ಜಿಲ್ಲೆಯ ಜನತೆ ಸಿದ್ಧರಾಮಯ್ಯ ಅವರಿಗೆ ನೀಡಿತ್ತು. ಘೋಷಿತ ವೈದ್ಯಕೀಯ ಕಾಲೇಜು ಶಂಕುಸ್ಥಾಪನೆಗೆ ನಮ್ಮ ಸರ್ಕಾರ ಬಂದ ತಕ್ಷಣವೇ ಹಣ ಬಿಡುಗಡೆ ಮಾಡಿ ನಾನೆ ಬರುತ್ತೇನೆ ಎಂದು ಮಾತು ಕೊಟ್ಟಸಿದ್ದರಾಮಯ್ಯನವರೇ ಇಂದು ತಮ್ಮ ಮಾತನ್ನು ತಪ್ಪಿರುವುದು ನೋಡಿದರೆ ಜಿಲ್ಲೆಗೆ ಅವರಲ್ಲಿರುವ ನಿರ್ಲಕ್ಷ್ಯ ಭಾವನೆ ತೋರುತ್ತದೆ ಅಂತ ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಹೇಳಿದ್ದಾರೆ. 

ಮುಖ್ಯಮಂತ್ರಿಗಳು ಹಾಗೂ ಹಣಕಾಸು ಸಚಿವರು ಆದ ಸಿದ್ದರಾಮಯ್ಯನವರು ತಮ್ಮ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ಬಜೆಟ್‌ನಲ್ಲಿ ಹಣಕಾಸು ಶಿಸ್ತು ಕಾಪಾಡಿರುವುದು ಶ್ಲಾಘನೀಯ. .3 ಕೋಟಿ 27 ಲಕ್ಷ ಬಜೆಟ್‌ನಲ್ಲಿ ಚುನಾವಣಾ ಪೂರ್ವ ಗ್ಯಾರಂಟಿ ಯೋಜನೆಯ ಘೋಷಣೆಯ ಅನುಷ್ಠಾನಕ್ಕೆ ಬೇಕಾಗುವ .6 ಸಾವಿರ ಕೋಟಿ ಜೊತೆ ಅಭಿವೃದ್ಧಿ ಯೋಜನೆಗಳಿಗೆ ಬೇಕಾದ ಸಂಪನ್ಮೂಲಗಳ ಕ್ರೊಢೀಕರಕ್ಕಾಗಿ ಜನ ಸಾಮಾನ್ಯರ ಮೇಲೆ ಯಾವುದೇ ಹೆಚ್ಚಿನ ತೆರಿಗೆಗಳನ್ನು ವಿಧಿಸದೇ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದ್ದಾರೆ ಅಂತ ಇಳಕಲ್ಲ ನಗರದ ಚಾರ್ಟಡ್‌ ಟ್ಯಾಕ್ಸ್‌ ಪ್ರಾಕ್ಟಿಶನರ್‌ ಪ್ರಶಾಂತ ಹಂಚಾಟೆ ಹೇಳಿದ್ದಾರೆ. 

Follow Us:
Download App:
  • android
  • ios