Asianet Suvarna News Asianet Suvarna News

Mangaluru: ಮರಕಡ ಪರಾಶಕ್ತಿ ಮಠದ ಶ್ರೀ ನರೇಂದ್ರನಾಥ ಸ್ವಾಮೀಜಿ ಲಿಂಗೈಕ್ಯ

*   ಶ್ರೀ ಕ್ಷೇತ್ರ ಮರಕಡದಲ್ಲಿ ದೈವಿಕ, ಸಾಮಾಜಿಕ ಕಾರ್ಯಗಳನ್ನು ನಡೆಸುತ್ತ ಬಂದಿದ್ ಶ್ರೀ
*   ಅಸಂಖ್ಯ ಭಕ್ತಸಂದೋಹವನ್ನು ಅಗಲಿದ ಸ್ವಾಮೀಜಿ 
*   ಇಂದು ಸಂಜೆ 4 ಕ್ಕೆ ನಡೆಯಲಿರುವ ಸಮಾಧಿ ಕ್ರಿಯೆ 
 

Shri Narendranath Yogeshwar Swamiji Passed Away at age of 72 in Mangaluru grg
Author
Bengaluru, First Published Jan 27, 2022, 12:41 PM IST

ಮಂಗಳೂರು(ಜ.27):  ಮರಕಡ ಶ್ರೀ ಗುರು ಪರಾಶಕ್ತಿ ಮಠದ ಪರಮಪೂಜ್ಯ ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿಯವರು(72)(Shri Narendranath Yogeshwar Swamiji) ನಿನ್ನೆ(ಬುಧವಾರ) ರಾತ್ರಿ 10: 40 ಕ್ಕೆ ಅಸ್ತಂಗತರಾಗಿದ್ದಾರೆ.

ಪೂಜ್ಯ ಸ್ವಾಮೀಜಿಯವರು ಕಳೆದ 28 ವರ್ಷಗಳಿಂದ ಮರಕಡದಲ್ಲಿ ತಮ್ಮ ಕುಟುಂಬಿಕರಾದ ಶ್ರೀ ರವೀಂದ್ರ ಕೋಟೆಕಾರ್ ಇವರ ಮನೆಯನ್ನೇ ಶ್ರೀ ಗುರು ಪರಾಶಕ್ತಿ ಮಠವನ್ನಾಗಿಸಿಕೊಂಡು(Shri Parashakti Matha) ನೋವಿನ ನೋವನ್ನೇ ಉಣ್ಣುತ್ತಿರುವ ಜನಮಾನಸಕ್ಕೆ ಸಾಂತ್ವನವನ್ನು ಕೊಡುತ್ತಾ ಬಂದಿದ್ದರು. ಜೀವಿತದಲ್ಲಿ ನೊಂದು ಬೆಂದವರಿಗೆ ಪ್ರಾಯಶ್ಚಿತ್ತಪೂರ್ವಕವಾದ ‘ಕಣ್ಣೀರ ತರ್ಪಣ’ದೊಂದಿಗೆ ಕ್ಷಮಾಯಾಚನೆಯ ಪ್ರಾರ್ಥನೆಯ ಮೂಲಕ ಸರಳವೂ ಸುಲಭವೂ ಆದ ಪರಿಹಾರದ ಮಾರ್ಗವನ್ನು ತೋರಿಸಿ ಕೊಟ್ಟಿದ್ದರು ಪೂಜ್ಯರು.

ರಾಮಕ್ಷತ್ರಿಯ ಮನೆತನದ ಗಣಪತಿ ಮತ್ತು ಸಾವಿತ್ರಿ ದಂಪತಿಗಳ ಕಿರಿಯ ಪುತ್ರನಾಗಿ ಜನಿಸಿದ ಇವರು, ಪೂರ್ವಾಶ್ರಮದಲ್ಲಿ ಇಂಜಿನಿಯರಿಂಗ್ ವೃತ್ತಿಯನ್ನು ಕೈಗೊಂಡು ನಂತರ ಸಾಂಸಾರಿಕ ಜೀವಿತದಲ್ಲಿದ್ದು ಬಳಿಕ ದೈವಿಕತೆಯತ್ತ ಪರಿವರ್ತನಗೊಂಡಿದ್ದರು. ನರೇಂದ್ರನಾಥ ಸ್ವಾಮೀಜಿಯವರು ಶ್ರೀ ಕ್ಷೇತ್ರ ಮರಕಡದಲ್ಲಿ ದೈವಿಕ, ಸಾಮಾಜಿಕ ಕಾರ್ಯಗಳನ್ನು(Social Work) ನಿರಂತರವಾಗಿ ನಡೆಸುತ್ತಾ ಬಂದಿದ್ದರು. 

CM Condolence Message: ಕರ್ನಾಟಕ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮಂಜುನಾಥ್‌ ನಿಧನ

ಕಾಲಗರ್ಭದಲ್ಲಿ ಸಿಲುಕಿ ನಾಶವೇ ಆಗಿದ್ದ ಅದೆಷ್ಟೋ ದೇಗುಲಗಳು, ಆರಾಧನಾಲಯಗಳು, ನಾಗಾಲಯಗಳು, ಪುಣ್ಯತೀರ್ಥಗಳು ಪೂಜ್ಯ ಸ್ವಾಮಿಯವರಿಂದ ನಾಡಿನಾದ್ಯಂತ ಪುನರುಜ್ಜೀವನಗೊಂಡಿವೆ. ಆಯಾ ಪರಿಸರದ ಜನರನ್ನೇ ಒಟ್ಟು ಸೇರಿಸಿ ಈ ಕಾರ್ಯವನ್ನು ಸಾಕಾರಗೊಳಿಸಿದ್ದರು. ‘ಕರಸೇವೆ’ಯಲ್ಲಿ ಸಾಮೂಹಿಕವಾಗಿ ತೊಡಗಿಸಿಕೊಂಡ ಅಪಾರ ಭಕ್ತ ಸಂದೋಹದ ‘ಬೆವರ ತರ್ಪಣ’ವೇ ಇಲ್ಲಿ ಕಾರ್ಯಪ್ರವೃತ್ತವಾಗಿದೆ. 

ಮಡ್ಯಾರಿನಲ್ಲಿ(Madyar) ನಿರ್ಮಾಣವಾಗಿರುವ ಶ್ರೀ ಪರಾಶಕ್ತಿ ದೇಗುಲ ಸಮುಚ್ಚಯ, ಕೋಟೆಕಾರಿನಲ್ಲಿ ದೇವರ ಅರಮನೆ, ಕಡೆಕಾರಿನಲ್ಲಿ ಗುರುವನ ಶ್ರೀ ದುರ್ಗಾ ಕ್ಷೇತ್ರ, ಮರಕಡದಲ್ಲಿ ನಿರ್ಮಾಣವಾಗಿರುವ ಶ್ರೀ ಗುರು ಪರಾಶಕ್ತಿ ಮಠ ಮತ್ತು ದೇಗುಲ ಸಮುಚ್ಚಯ ಅವರ ಕಾಯಕ ಯೋಗದ ಮಹತ್ವವನ್ನು ಸಾರುತ್ತಿವೆ. ನಿರಂತರ ಅನ್ನದಾನವೂ ಶ್ರೀ ಕ್ಷೇತ್ರಗಳಲ್ಲಿ ನಡೆದುಕೊಂಡು ಬಂದಿದೆ. ಶ್ರೀಗಳಿಗೆ ನಾಡಿನಾದ್ಯಂತ ಅಪಾರ ಭಕ್ತ(Devotees) ಸಮೂಹ ಇದೆ.
ಪೂಜ್ಯ ಸ್ವಾಮಿಯವರು ತಮ್ಮ ಸಹಧರ್ಮಿಣಿಯಾದ ಮಾತೆ ಶಕುಂತಲಾ ಅಮ್ಮನವರು, ಪುತ್ರ ನಿತಿನ್ ಕೋಟೆಕಾರ್, ಪುತ್ರಿಯರಾದ ಶೀತಲ್ ಕೋಟೆಕಾರ್, ಕಾವ್ಯಶ್ರೀ ಕೋಟೆಕಾರ್, ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಅಪಾರ ಬಂಧುಗಳು ಹಾಗೂ ಅಸಂಖ್ಯ ಭಕ್ತಸಂದೋಹವನ್ನು ಅಗಲಿದ್ದಾರೆ. 

ಇಂದು ಬೆಳಗ್ಗಿನಿಂದಲೂ ನಾಡಿನ ಗಣ್ಯರು ಹಾಗೂ ದುಃಖತಪ್ತ ಭಕ್ತಸಮೂಹ ಪೂಜ್ಯ ಗುರುಗಳ ದರ್ಶನವನ್ನು ಪಡೆಯುತ್ತಿದ್ದಾರೆ. ಇಂದು ಸಂಜೆ 4 ಕ್ಕೆ ಸಮಾಧಿ ಕ್ರಿಯೆಯು(Funeral) ನಡೆಯಲಿದೆ. 
 

Follow Us:
Download App:
  • android
  • ios