ಶಿವಮೊಗ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿ ಅಶ್ವಿನಿ ಸಾವಿಗೀಡಾಗಿದ್ದಾರೆ. ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದಾಗಿ ನಿರಂತರ ರಕ್ತಸ್ರಾವದಿಂದಾಗಿ ಈ ದುರ್ಘಟನೆ ಸಂಭವಿಸಿದೆ. ಸಾಗರದ ಉಪ ವಿಭಾಗೀಯ ಆಸ್ಪತ್ರೆಯಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ವರ್ಗಾಯಿಸುವಾಗ ಮೃತಪಟ್ಟಿದ್ದಾರೆ.

ಶಿವಮೊಗ್ಗ (ಜ.28): ರಾಜ್ಯದಲ್ಲಿ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಕೇವಲ ಒಂದು ವಾರದ ಅಂತರದಲ್ಲಿ 5 ಬಾಣಂತಿಯರು ಸಾವನ್ನಪಿದ್ದರು. ಈ ಘಟನೆಯ ನಂತರವೂ ರಾಜ್ಯ ಆರೋಗ್ಯ ಇಲಾಖೆ ಮಾತ್ರ ಎಚ್ಚೆತ್ತುಕೊಂಡು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಿನ ಸರಣಿ ಮುಂದುವರೆಯುತ್ತಲೇ ಇದೆ. ಇದೀಗ ಶಿವಮೊಗ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿ ಅಶ್ವಿನಿ ಸಾವಿಗೀಡಾಗಿದ್ದಾರೆ.

Add Asianetnews Kannada as a Preferred SourcegooglePreferred

ರಾಜ್ಯದಲ್ಲಿ ಮುಂದುವರೆದ ಬಾಣಂತಿಯರ ಸರಣಿ ಸಾವಿನ ಸರಣಿ ಇನ್ನೂ ಮುಂದುವರೆಯುತ್ತಿದೆ. ಒಂದೂವರೆ ತಿಂಗಳ ಗರ್ಭಿಣಿ ಅಶ್ವಿನಿ (30) ಸಾವಿಗೀಡಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸಾಗರದ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ಅಶ್ವಿನಿ ಅವರನ್ನು ದಾಖಲಿಸಲಾಗಿತ್ತು. ಆಗ ವೈದ್ಯರು ಭ್ರೂಣದ ಸಮಸ್ಯೆ ಇದೆ ಎಂದು ಚಿಕಿತ್ಸೆ ನೀಡಿದ್ದರು. ಆದರೆ, ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಮಹಿಳೆಗೆ ತೀವ್ರ ರಕಸ್ತ್ರಾವ ಶುರುವಾಗಿದೆ. ಎಪಿಟಿಟಿ ಎಂಬ ರಕ್ತ ಹೆಪ್ಪುಗಟ್ಟುವಿಕೆ ವಿಳಂಬವಾಗುವ ಆರೋಗ್ಯ ಸಮಸ್ಯೆಯಿಂದ ನಿರಂತರ ರಕ್ತಸ್ರಾವ ಆಗಿ ಮಹಿಳೆಯ ಜೀವಕ್ಕೆ ಆಪತ್ತು ಬಂದಿದೆ.

ಅಶ್ವಿನಿಗೆ ಚಿಕಿತ್ಸೆ ಮಾಡುವುದು ಕ್ಲಿಷ್ಟಕರ ಎಂದು ಗೊತ್ತಾಗುತ್ತಿದ್ದಂತೆ ಸಾಗರ ತಾಲೂಕು ಸರ್ಕಾರಿ ವೈದ್ಯರಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ತಂದಾಗ ಅಶ್ವಿನಿ ಸಾವನ್ನಪ್ಪಿರುವ ಬಗ್ಗೆ ವೈದ್ಯರ ದೃಢೀಕರಣ ಮಾಡಿದ್ದಾರೆ. ಕೇವಲ ಒಂದುವರೆ ವರ್ಷದ ಹಿಂದೆ ಮದುವೆಯಾಗಿದ್ದ ಅಶ್ವಿನಿ, ಹೊಸನಗರ ತಾಲೂಕಿನ ನಗರ ಪಟ್ಟಣದಲ್ಲಿ ಕೋಳಿ ಫಾರಂ ನಡೆಸುತ್ತಿರುವ ಪ್ರಕಾಶ್ ಎಂಬುವವರನ್ನು ಮದುವೆಯಾಗಿದ್ದರು. ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಶ್ವಿನಿ ಶವದ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ದಾವಣಗೆರೆ: ಕಳಪೆ ಆರ್‌ಎಲ್‌ ಸಲೈನ್‌ನಿಂದಾಗಿ ಒಬ್ಬ ಬಾಣಂತಿ ಸಾವು?