ಪ್ರಪಂಚದ ಜ್ಞಾನವನ್ನೇ ಅರಿಯದ ನಾಲ್ಕು ವರ್ಷದ ಕಂದ ಅದು. ತನ್ನ ತಾಯಿಯೊಂದಿಗೆ ಆಟವಾಡಿಕೊಂಡು ಕಾಲ ಕಳೆದುಕೊಂಡಿತ್ತು. ಆದರೆ ಅದೇ ತಾಯಿಯ ಅನೈತಿಕ ಸಂಬಂಧವೇ ಈ ಮಗುವಿನ ಜೀವಕ್ಕೆ ಎರವಾಗುತ್ತದೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಆ.14): ಪ್ರಪಂಚದ ಜ್ಞಾನವನ್ನೇ ಅರಿಯದ ನಾಲ್ಕು ವರ್ಷದ ಕಂದ ಅದು. ತನ್ನ ತಾಯಿಯೊಂದಿಗೆ ಆಟವಾಡಿಕೊಂಡು ಕಾಲ ಕಳೆದುಕೊಂಡಿತ್ತು. ಆದರೆ ಅದೇ ತಾಯಿಯ ಅನೈತಿಕ ಸಂಬಂಧವೇ ಈ ಮಗುವಿನ ಜೀವಕ್ಕೆ ಎರವಾಗುತ್ತದೆ, ಬಲಿ ಪಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಹೌದು ಆಕೆಯ ಅನಾಚಾರಕ್ಕೆ ಏನೂ ತಪ್ಪು ಮಾಡದ ಆ ಮಗು ದಾರುಣವಾಗಿ ಅಂತ್ಯಕಂಡಿದೆ. ಅಂಗನವಾಡಿಗೆ ಹೋಗಿ ಬರುತ್ತಾ ತನ್ನ ತಾಯಿಯೊಂದಿಗೆ ಆಟಮಾಡಿಕೊಂಡು ಇದ್ದ ನಾಲ್ಕು ವರ್ಷದ ಕಂದ ಇದು. ಹೆಸರು ಚರಣ್ ಕೊಡಗು ಜಿಲ್ಲೆ ವಿರಾಜಪೇಟೆ ಪಟ್ಟಣದ ವ್ಯಾಪ್ತಿಯಲ್ಲಿ ಲೈನ್ ಮನೆಯೊಂದರಲ್ಲಿ ತಾಯಿ ಮತ್ತವರ ಸಂಬಂಧಿಕರ ಮನೆಯವರೊಂದಿಗೆ ಇತ್ತು.

ಆದರೆ ಅದೇ ತಾಯಿ ಮತ್ತು ದೊಡ್ಡಪ್ಪ ಪ್ರತಾಪನ ಅನೈತಿಕ ಸಂಬಂಧಕ್ಕೆ ಬಲಿಯಾಗಿ ಈ ಮಗು ಹೀಗೆ ಶಾಶ್ವತವಾಗಿ ಕಣ್ಮುಚ್ಚುವಂತೆ ಆಗಿದೆ. ಹೌದು ಮೂಲತಃ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕದನೂರಿನವಳಾದ ಸುಚಿತ್ರಾ ಐದಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮೂಲತಃ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನವನಾದ ಪಂಪನಗೌಡ ಎಂಬುವರನ್ನು ಪ್ರೀತಿ ಮದುವೆ ಆಗಿದ್ದಳು. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಇಬ್ಬರು ಮಕ್ಕಳು ಹುಟ್ಟಿದ್ದರು. ಅದರಲ್ಲಿ ಕಿರಿಯವನು ಈಗ ಹೀಗೆ ಮಲಗಿರುವ ಬಾಲಕ ಚರಣ್. ಕೂಲಿ ಮಾಡಿದ್ದರೂ ಇಬ್ಬರು ಮಕ್ಕಳೊಂದಿಗೆ ಸುಖ ಸಂಸಾರ ನಡೆಯುತಿತ್ತು.

ಇದರ ನಡುವೆಯೇ ಈ ಸುಚಿತ್ರಾಗೆ ತನ್ನ ಸೋದರ ಸಂಬಂಧಿ ಅಕ್ಕನ ಗಂಡನೊಂದಿಗೆ ಅನೈತಿಕ ಸಂಬಂಧ ಬೆಳಸಿಕೊಂಡಿದ್ದಳು. ಇದು ಆರಂಭದಲ್ಲಿ ಪಂಪನಗೌಡನಿಗೆ ಗೊತ್ತೇ ಆಗಿರಲಿಲ್ಲ. ಆದರೆ ಅದ್ಯಾವಾಘ ಮಿತಿಮೀರಿ ಹೋಯಿತೊ, ಪಂಪನಗೌಡ ಇವರ ಸಹವಾಸವೇ ಬೇಡ ಎಂದು ದೂರವಾಗುವುದಕ್ಕೆ ಶುರುಮಾಡಿದ್ದ. ಆರು ತಿಂಗಳ ಹಿಂದೆ ಅಜ್ಜಿಯ ಮನೆಗೆ ಹೋಗಿ ಬರುತ್ತೇನೆ ಬೆಂಗಳೂರಿನಿಂದ ಕೊಡಗಿಗೆ ಬಂದಿದ್ದ ಸುಚಿತ್ರಾ ವಿರಾಜಪೇಟೆಯಲ್ಲಿರುವ ತನ್ನ ಸಹೋದರ ಸಂಬಂಧಿ ಅಕ್ಕನ ಮನೆಯಲ್ಲಿಯೇ ಪರ್ಮನೆಂಟ್ ಆಗಿ ಉಳಿದಿದ್ದಳು. ಇದು ಬೇಸರವಾದಾಗ ಸುಚಿತ್ರಾ ಗಂಡ ಪಂಪನಗೌಡ ಬೆಂಗಳೂರು ಬಿಟ್ಟು ರಾಯಚೂರಿಗೆ ಹೋಗಿದ್ದ.

ಇತ್ತ ಎಲ್ಲರೂ ಕೂಲಿ ಕಾರ್ಮಿಕರಾಗಿರುವ ಸುಚಿತ್ರಾ, ಆಕೆಯ ಬಾವ ಪ್ರತಾಪ್ ಹಾಗೂ ಆತನ ಪತ್ನಿ ಸೇರಿದಂತೆ ಮೂವರು ವಿರಾಜಪೇಟೆಯ ಕಾಫಿ ತೋಟವೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾ ಲೈನ್ ಮನೆಯೊಂದರಲ್ಲಿ ವಾಸವಾಗಿದ್ದರು. ಮದ್ಯಕ್ಕೆ ದಾಸರಾಗಿದ್ದ ಸುಚಿತ್ರಾ ಹಾಗೂ ಪ್ರತಾಪ್ ನಡುವೆ ಇರುವ ಅಕ್ರಮ ಸಂಬಂಧದ ವಿಷಯಕ್ಕೆ ಆಗಿಂದ್ದಾಗೆ ಗಲಾಟೆಯನ್ನು ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಪಾಪಿ ಪ್ರತಾಪ್ ತನ್ನ ಪತ್ನಿಗೆ ನೀನು ಬೇಡ ಹೊರಟು ಹೋಗು, ನನಗೆ ಸುಚಿತ್ರನೇ ಸಾಕು ಎಂದು ಗಲಾಟೆ ಮಾಡುತ್ತಿದ್ದನಂತೆ.

ಇದೇ ವಿಚಾರವಾಗಿ ಗುರುವಾರವೂ ಕೂಡ ಗಲಾಟೆಯಾಗಿದೆ ಎನ್ನಾಗಿದೆ. ಮಾತಿಗೆ ಮಾತು ಬೆಳೆದು ಪಾಪಿ ಪ್ರತಾಪ್ ಸುಚಿತ್ರಾಳ ಮೇಲೆ ಹಲ್ಲೆ ಮಾಡಿದ್ದಾನೆ. ಆಕೆಯ ತಲೆಗೆ ಕೊಡಲಿಯಿಂದ ಕೊಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಆಕೆ ಸದ್ಯ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಗಲಾಟೆ ವೇಳೆ ಜೊತೆಯಲ್ಲಿಯೇ ಇದ್ದ ನಾಲ್ಕು ವರ್ಷದ ಮಗು ಚರಣ್ಗೆ ಮಗು ಎನ್ನುವುದನ್ನು ನೋಡದೆ ಬಡಿಗೆಯಿಂದ ಯದ್ವಾತದ್ವಾ ಹೊಡೆದಿದ್ದಾನೆ. ತೀವ್ರಪೆಟ್ಟು ತಿಂದ ಬಾಲಕ ನೋವು ತಾಳಲಾರದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋದ ವಿರಾಜಪೇಟೆ ನಗರ ಠಾಣೆ ಪೊಲೀಸರು ಪಾಪಿ ಪ್ರತಾಪ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರ ಅಕ್ರಮ ಸಂಬಂಧದ ಜಗಳದಲ್ಲಿ ಏನೂ ಅರಿಯದ ನಾಲ್ಕು ವರ್ಷದ ಕಂದ ಚರಣ್ ದಾರುಣವಾಗಿ, ಬರ್ಭರವಾಗಿ ಹ*ತ್ಯೆಯಾಗಿದೆ. ಚಿಕ್ಕಮಗುವೆಂದು ನೋಡದೆ ಬಡಿಗೆಯಿಂದ ಹೊಡೆದು ಬಾಲಕನನ್ನು ಹ*ತ್ಯೆ ಮಾಡಿ ಹೇಯ ಕೃತ್ಯವೆಸಗಿದ ಪಾಪಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಮಗುವಿನ ತಂದೆ ಪಂಪನಗೌಡ ಒತ್ತಾಯಿಸಿದ್ದಾರೆ.