Asianet Suvarna News Asianet Suvarna News

ಕಾರ್ಕಳ, ಹೆಬ್ರಿ ತಾಲೂಕಲ್ಲಿ ನೀರಿನ ತೀವ್ರ ಅಭಾವ, ರೈತರು ಕಂಗಾಲು

ಕಾರ್ಕಳ ತಾಲೂಕಿನಲ್ಲಿ ನೀರಿನ ಅಭಾವ ಮತ್ತಷ್ಟುಬಿಗಡಾಯಿಸುತ್ತಿದೆ. ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾದರೂ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಮಳೆ ಬಾರದೆ ನೀರಿನ ಬವಣೆ ಹೆಚ್ಚಿದೆ. ಮಲೆನಾಡಿನ ತಪ್ಪಲಿನ ಪ್ರದೇಶಗಳಾದ ಕಾರ್ಕಳ ಹೆಬ್ರಿ ತಾಲೂಕುಗಳಲ್ಲಿನ ಜೀವನದಿಗಳಾಗಿರುವ ಸ್ವರ್ಣ ಹಾಗೂ ಸೀತಾ ನದಿಗಳು ಸಂಪೂರ್ಣ ಬತ್ತಿ ಹೋಗಿವೆ.

Severe shortage of water in Karkala, Hebri taluk udupi rav
Author
First Published May 25, 2023, 5:08 AM IST

ರಾಂ ಅಜೆಕಾರು

 ಕಾರ್ಕಳ (ಮೇ.25) : ಕಾರ್ಕಳ ತಾಲೂಕಿನಲ್ಲಿ ನೀರಿನ ಅಭಾವ ಮತ್ತಷ್ಟುಬಿಗಡಾಯಿಸುತ್ತಿದೆ. ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾದರೂ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಮಳೆ ಬಾರದೆ ನೀರಿನ ಬವಣೆ ಹೆಚ್ಚಿದೆ. ಮಲೆನಾಡಿನ ತಪ್ಪಲಿನ ಪ್ರದೇಶಗಳಾದ ಕಾರ್ಕಳ ಹೆಬ್ರಿ ತಾಲೂಕುಗಳಲ್ಲಿನ ಜೀವನದಿಗಳಾಗಿರುವ ಸ್ವರ್ಣ ಹಾಗೂ ಸೀತಾ ನದಿಗಳು ಸಂಪೂರ್ಣ ಬತ್ತಿ ಹೋಗಿವೆ.

ಟ್ಯಾಂಕರ್‌ ನೀರೇ ಗತಿ: ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿನ ಸ್ವರ್ಣ ನದಿಯ ಮುಂಡ್ಲಿ ಡ್ಯಾಂನಲ್ಲಿ ನೀರಿಲ್ಲದೆ ಬತ್ತಿ ಹೋದ ಕಾರಣ ಕಾರ್ಕಳ ರಾಮಸಮುದ್ರವನ್ನು ಆಶ್ರಯಿಸಿ ಜನರಿಗೆ ನೀರು ಪೂರೈಸಲಾಗುತ್ತಿದೆ. ತಾಲೂಕಿನ 34 ಗ್ರಾ.ಪಂ.ಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಗಣಿನಾಡಿನ 83 ಹಳ್ಳಿಗಳಲ್ಲಿ ಕುಡಿವ ನೀರಿನ ಅಭಾವ: ಫ್ಲೋ ರೈಡ್‌ ಮಿಶ್ರಿತ ನೀರು ಬಳಕೆ!

ಘಟ್ಟಪ್ರದೇಶದ ತಪ್ಪಲಿನ ಭಾಗವಾದ ಹೆಬ್ರಿ ತಾಲೂಕಿನ ಜೀವನದಿಯಾಗಿ ಪರಿಣಮಿಸಿದ ಸೀತಾ ನದಿ ಸಂಪೂರ್ಣ ಹರಿವನ್ನು ನಿಲ್ಲಿಸಿದೆ. ಅದರಿಂದಾಗಿ ನಾಡ್ಪಾಲು, ಸೋಮೇಶ್ವರ, ಚಾರ ಶಿವಪುರ, ಹೆಬ್ರಿಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ಕಬ್ಬಿನಾಲೆಯ ನದಿ ಬತ್ತಿದ್ದು, ಕಬ್ಬಿನಾಲೆಯಲ್ಲೂ ನೀರಿನ ಸಮಸ್ಯೆ ತಲೆದೋರಿದೆ. ಮುದ್ರಾಡಿ ಗ್ರಾ.ಪಂ. ಮೂಲಕ ಕೆಲವು ಕಬ್ಬಿನಾಲೆಯ ಕೆಲವು ಸ್ಥಳಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಶಾಲೆಗಳಿಗೆ ಕಾಡಲಿದೆ ನೀರಿನ ಬವಣೆ: ಮೇ 29ರಂದು ಶಾಲೆಗಳು ಪುನರಾರಂಭವಾಗಲಿವೆ. ಬಿರು ಬೇಸಿಗೆ ಒಂದೆಡೆಯಾದರೆ ಕುಡಿಯುವ ನೀರಿನ ಸಮಸ್ಯೆಯೂ ಕಾಡುತ್ತಿದೆ. ಕಾರ್ಕಳ ಹೆಬ್ರಿ ತಾಲೂಕಿನಲ್ಲಿರುವ ಎಪ್ಪತ್ತಕ್ಕು ಹೆಚ್ಚು ಶಾಲೆಗಳ ಪೈಕಿ ನಲವತ್ತು ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದರಿಂದಾಗಿ ಪೋಷಕರು ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುವಂತಾಗಿದೆ. ಶಾಲೆಗಳನ್ನು ಒಂದು ವಾರ ತಡವಾಗಿ ಆರಂಭಿಸುವಂತೆ ಮನವಿ ಮಾಡುತ್ತಿದ್ದಾರೆ.

ತೋಟಗಾರಿಗೆ, ಕೃಷಿ ಬೆಳೆ ಹಾನಿ : ಹೆಬ್ರಿ ಹಾಗೂ ಕಾರ್ಕಳ ತಾಲೂಕುಗಳಲ್ಲಿ ಒಟ್ಟು 29044 ಹೆಕ್ಟೇರ್‌ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿದ್ದು ಅದರಲ್ಲಿ ಬತ್ತ 7020 ಹೆಕ್ಟೇರ್‌, ಅಡಕೆ 9097 ಹೆಕ್ಟೇರ್‌, ತೆಂಗು 8294 ಹೆಕ್ಟೇರ್‌, ಬಾಳೆ 896 ಹೆಕ್ಟೇರ್‌, ಗೇರು 1576 ಹೆಕ್ಟೇರ್‌, ಕಾಳುಮೆಣಸು 1034 ಹೆಕ್ಟೇರ್‌ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ಕೃಷಿಗೂ ನೀರಿನ ಸಮಸ್ಯೆ ತಟ್ಟಿದ್ದು ಅದರಲ್ಲೂ ಗುಡ್ಡಗಾಡು ಪ್ರದೇಶದಲ್ಲಿ ಬೆಳೆದ ತೋಟಗಾರಿಕಾ ಬೆಳೆಗಳು ತೀವ್ರ ಉಷ್ಣಾಂಶದಿಂದ ನೀರಿನ ಕೊರತೆಯುಂಟಾಗಿ ಹಾನಿಗೀಡಾಗಿವೆ. ಸೀತಾನದಿಯ ನೀರನ್ನು ಅವಲಂಬಿಸಿ ಕೃಷಿ ಮಾಡುತಿದ್ದ ಬೆಳೆಗಾರರು ನೀರಿನ ಹರಿವಿಲ್ಲದೆ ಮಳೆಗಾಗಿ ಎದುರು ನೋಡುತ್ತಿದ್ದಾರೆ.

600 ಅಡಿ ಬೋರ್‌ವೆಲ್‌ ತೋಡಿದರೂ ನೀರು ಸಿಗುತ್ತಿಲ್ಲ: ಕಾರ್ಕಳ ತಾಲೂಕಿನ ಮರ್ಣೆ, ಶಿರ್ಲಾಲು,ಕೆರುವಾಶೆ ಭಾಗಗಳಲ್ಲಿ 600 ಅಡಿ ಬೊರ್ವೆಲ್‌ ತೋಡಿದರೂ ನೀರು ಲಭ್ಯವಾಗುತ್ತಿಲ್ಲ. ಇನ್ನೊಂದೆಡೆ ಹೆಬ್ರಿ ಹಾಗೂ ಕಾರ್ಕಳ ತಾಲೂಕುಗಳಲ್ಲಿ ನಿತ್ಯ 20ಕ್ಕೂ ಹೆಚ್ಚು ಬೋರ್‌ವೆಲ್‌ಗಳನ್ನು ತೋಡಲಾಗುತಿದ್ದು ಅದರಲ್ಲಿ 11ಕ್ಕೂ ಹೆಚ್ಚು ಬೋರ್‌ವೆಲ್‌ಗಳಲ್ಲಿ ನೀರೇ ಸಿಗುತ್ತಿಲ್ಲ.

ಸುವರ್ಣ ನದಿ ಹರಿಯುವ ಪ್ರದೇಶವಾದ ಕೆರುವಾಶೆಯ ಮಲೆಬೆಟ್ಟಿನ ಹೊಂಡ ಪ್ರದೇಶದಲ್ಲಿ ನೀರು ನಿಂತಿದ್ದು ಮೀನು ಹಿಡಿಯಲು ಹೊಳೆಯ ನೀರಿಗೆ ಭಾನುವಾರ ದುಷ್ಕರ್ಮಿಗಳು ವಿಷ ಪ್ರಶಾಸನ ಮಾಡಿದ್ದಾರೆ. ಜಲಕ್ಷಾಮದಿಂದಾಗಿ ಸ್ಥಳೀಯರು ಇದೇ ಹೊಳೆಯ ನೀರನ್ನು ಕುಡಿಯಲು ಬಳಸುತ್ತಿದ್ದರು. ಆದರೆ ದುಷ್ಕರ್ಮಿಗಳು ನೀರಿಗೆ ವಿಷಪ್ರಾಶನ ಮಾಡಿರುವ ಕಾರಣದಿಂದ ಸ್ಥಳೀಯರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

 

ಅಧಿಕಾರಿಗಳ ನಿರ್ಲಕ್ಷ್ಯ, ಚಿತ್ರದುರ್ಗದಲ್ಲಿ ಬೇಸಿಗೆಗೂ ಮೊದಲೇ ಕುಡಿಯುವ ನೀರಿನ ಅಭಾವ

ಈಗಾಗಲೇ ಹೆಬ್ರಿ ಹಾಗೂ ಕಾರ್ಕಳ ತಾಲೂಕುಗಳಲ್ಲಿ ಶೇ.15 ರಿಂದ 20ರಷ್ಟುತೋಟಗಾರಿಕಾ ಬೆಳೆಗೆ ಹಾನಿಯಾಗಿರುವುದು ಗಮನಕ್ಕೆ ಬಂದಿದೆ. ಇದರ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು

- ಶ್ರೀನಿವಾಸ್‌ ನಿರ್ದೇಶಕರು, ಕಾರ್ಕಳ ತೋಟಗಾರಿಕಾ ಇಲಾಖೆ

Follow Us:
Download App:
  • android
  • ios