Shivamogga : ಎಸ್ಸಿ ವರ್ಗಕ್ಕೆ ಮೇಯರ್, ಹಿಂದುಳಿದ ವರ್ಗ (ಮಹಿಳೆ)ಕ್ಕೆ ಉಪ ಮೇಯರ್ ಸ್ಥಾನ ಮೀಸಲು
- ಎಸ್ಸಿ ವರ್ಗಕ್ಕೆ ಮೇಯರ್, ಹಿಂದುಳಿದ ವರ್ಗ (ಮಹಿಳೆ)ಕ್ಕೆ ಉಪ ಮೇಯರ್ ಸ್ಥಾನ ಮೀಸಲು
- ಹೈ ಕೋರ್ಚ್ ಆದೇಶ ಮೇರೆಗೆ ಮೀಸಲು ಬದಲಿಸಿದ ಸರ್ಕಾರ
- ಮೇಯರ್ ಸ್ಥಾನಕ್ಕೆ ಧೀರರಾಜ್ ಹೊನ್ನವಿಲೆ, ಶಿವಕುಮಾರ್ ಮಧ್ಯೆ ಪೈಪೋಟಿ
- ಉಪ ಮೇಯರ್ ಸ್ಥಾನಕ್ಕೆ ಎಸ್.ಲಕ್ಷ್ಮೇ, ಮೀನಾ ಗೋವಿಂದರಾಜ್ ಮಧ್ಯೆ ಪೈಪೋಟಿ
ಶಿವಮೊಗ್ಗ (ಅ.1) : ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಮೀಸಲಾತಿಯನ್ನು ಹೈಕೋರ್ಚ್ ಆದೇಶದ ಮೇರೆಗೆ ಸರ್ಕಾರ ಬದಲಾವಣೆ ಮಾಡಿದ್ದು, ಎರಡನೇ ಬಾರಿ ಎಸ್ಸಿ ವರ್ಗಕ್ಕೆ ಮೀಸಲಾತಿ ದಕ್ಕಿದೆ. ಇದರೊಂದಿಗೆ ಮೇಯರ್ ಸ್ಥಾನದ ಪ್ರಮುಖ ಸ್ಪರ್ಧಿ ಎಂದೇ ಹೇಳಲಾಗುತ್ತಿದ್ದ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಅವರ ಆಪ್ತ ಜ್ಞಾನೇಶ್ವರ ಅವರ ಆಸೆಗೆ ಫುಲ್ಸ್ಟಾಪ್ ಬಿದ್ದಿದೆ.
ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಕಡತ ವಿಲೇವಾರಿಗೆ ಡಿಜಿಫೈಲ್ ತಂತ್ರಾಂಶ ಅಳವಡಿಕೆ
ಈ ಹಿಂದೆ ಮೇಯರ್, ಉಪಮೇಯರ್ ಸ್ಥಾನಕ್ಕೆ ನೀಡಿದ ಮೀಸಲಾತಿಯನ್ನು ಪ್ರಶ್ನಿಸಿ ಪಾಲಿಕೆ ಸದಸ್ಯರೊಬ್ಬರು ಹೈ ಕೋರ್ಚ್ ಮೊರೆ ಹೋಗಿದ್ದರು. ಈ ಬಗ್ಗೆ ಕೋರ್ಚ್ ತೀರ್ಪು ನೀಡುವ ಮೊದಲೇ ಸರ್ಕಾರ ಮೀಸಲಾತಿ ಪ್ರಕಟ ಮಾಡಿದೆ. ಸರ್ಕಾರ ಪ್ರಕಟಿಸಿರುವ ನೂತನ ಮೀಸಲಾತಿಯಲ್ಲಿ ಮೇಯರ್ ಸ್ಥಾನ ಪರಿಶಿಷ್ಟಜಾತಿಗೆ ಹಾಗೂ ಉಪ ಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ (ಮಹಿಳೆ)ಗೆ ಮೀಸಲಿರಿಸಿದೆ.
ಇದಕ್ಕೆ ಮೊದಲು ಪ್ರಕಟಗೊಂಡ ಮೀಸಲಾತಿ ಅನ್ವಯ ಮೇಯರ್ ಸ್ಥಾನವನ್ನು ಒಬಿಸಿಗೆ ಮೀಸಲಿಸಲಾಗಿತ್ತು. ಆಗ ಮೇಯರ್ ಸ್ಥಾನಕ್ಕೆ ಜ್ಞಾನೇಶ್ವರ ಹೆಸರು ಮುಂಚೂಣಿಗೆ ಬಂದಿತ್ತು. ಈ ಮೀಸಲಾತಿ ಪ್ರಶ್ನಿಸಿ ಹೈಕೋರ್ಚ್ ಮೊರೆಹೋಗಿದ್ದ ಪಾಲಿಕೆ ಸದಸ್ಯ ನಾಗರಾಜ್ ಅವರು ಪರಿಶಿಷ್ಟಜಾತಿಗೆ ಮೇಯರ್ ಸ್ಥಾನ ನೀಡುವಂತೆ ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆಗೂ ಮುನ್ನವೇ ಸರ್ಕಾರ ಹೊಸ ಮೀಸಲು ಪ್ರಕಟಿಸಿದ್ದು, ಬದಲಾದ ಮೀಸಲಾತಿ ನಿರ್ಧಾರದಿಂದಾಗಿ ಜ್ಞಾನೇಶ್ವರ್ ಅವರು ಮೇಯರ್ ಆಗುವ ಕನಸಿಗೆ ತಣ್ಣೀರು ಹಾಕಿದಂತಾಗಿದೆ.
ಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ:
ಎರಡನೇ ಅವಧಿಗೆ ಮೇಯರ್ ಸ್ಥಾನಕ್ಕೆ ಎಸ್ಸಿ ಸಮುದಾಯದ ಸದಸ್ಯರಿಗೆ ಅವಕಾಶ ನೀಡುವುದರಿಂದ ಬಿಜೆಪಿಯಲ್ಲಿ ಎಸ್ಸಿ ಸಮುದಾಯ ಸದಸ್ಯರಾದ ಧೀರರಾಜ್ ಹೊನ್ನವಿಲೆ ಹಾಗೂ ಶಿವಕುಮಾರ್ ಮಧ್ಯೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಮುಂದಿನ ಮೇಯರ್ ಯಾರಾಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಧೀರರಾಜ್ ಹೊನ್ನವಿಲೆ ಮೊದಲ ಬಾರಿಗೆ ಪಾಲಿಕೆ ಸದಸ್ಯರಾಗಿ ಆಯ್ಕೆಯಾದರೂ ಹಲವು ವರ್ಷಗಳಿಂದ ಬಿಜೆಪಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಸಾಮಾನ್ಯವಾಗಿ ಸಂಘಟನೆಯಲ್ಲಿ ಗುರುತಿಸಿಕೊಂಡವರನ್ನು ಪರಿಗಣಿಸಿದರೆ, ಇವರು ಮೇಯರ್ ಆಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಶಿವಕುಮಾರ್ ಅವರೂ ಮೇಯರ್ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಉಪ ಮೇಯರ್ ಸ್ಥಾನಕ್ಕೆ ಎಸ್.ಲಕ್ಷ್ಮೇ, ಮೀನಾ ಗೋವಿಂದರಾಜ್ ಮಧ್ಯೆ ಪೈಪೋಟಿ ಇದೆ ಎಂದು ತಿಳಿದುಬಂದಿದೆ. ಶಿವಮೊಗ್ಗ ದಸರಾ ಉತ್ಸವಕ್ಕೆ ಸರ್ಕಾರದಿಂದ 1 ಕೋಟಿ ಅನುದಾನ