ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯ ಅಂಚೆ ಮತಪತ್ರಗಳ ಮರು ಎಣಿಕೆ ಚಿಕ್ಕಮಗಳೂರಿನ ಐಡಿಎಸ್ಜಿ ಕಾಲೇಜಿನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಎಣಿಕಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಚಿಕ್ಕಮಗಳೂರು (ಮೇ.2): ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆ ಅಂಚೆ ಮತಪತ್ರಗಳ ಮತ ಎಣಿಕೆ ಮೇ 2ರ ಶನಿವಾರ ಬೆಳಗ್ಗೆ 9ಕ್ಕೆ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಎಣಿಕಾ ಕೇಂದ್ರದ 200 ಮೀ. ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಆದೇಶಿಸಿದ್ದಾರೆ.
ಹೈಕೋರ್ಟ್ ಸೂಚನೆಯಂತೆ ಅಂಚೆ ಮತಪತ್ರದ ಮರು ಎಣಿಕೆ ನಡೆಸಲು ಚುನಾವಣಾ ಆಯೋಗದ ಸೂಚನೆ ಮೇಲೆ ಜಿಲ್ಲಾ ಚುನಾವಣಾಧಿಕಾರಿಗಳಿಂದ ಸಕಲ ಸಿದ್ಧತೆ ಮಾಡಲಾಗಿದೆ. ನಗರದ ಐಡಿಎಸ್ಜಿ ಕಾಲೇಜಿನ ಮೊದಲ ಮಹಡಿಯ ಕೊಠಡಿ ಸಂಖ್ಯೆ 12 ರಲ್ಲಿ ಮತ ಎಣಿಕೆ ನಡೆಯಲಿದೆ.
ಈ ನಿಟ್ಟಿನಲ್ಲಿ ಶನಿವಾರ ಬೆಳಗ್ಗೆ 6 ರಿಂದ ಸಂಜೆ 5ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಮರುಮತ ಎಣಿಕೆ ಕೇಂದ್ರದ ಸುತ್ತಲೂ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಮತ ಮರು ಎಣಿಕೆ ಕೇಂದ್ರದ 200 ಮೀಟರ್ ಸುತ್ತಳತೆಯಲ್ಲಿ ಎಣಿಕೆ ಹಾಗೂ ಬಂದೋ ಬಸ್ತ್ ಗೆ ನೇಮಕವಾದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಚುನಾವಣಾ ಅಧಿಕಾರಿಗಳನ್ನು ಹೊರತುಪಡಿಸಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಮರು ಮತ್ತು ಎಣಿಕೆ ಕೇಂದ್ರದಲ್ಲಿ ಸುತ್ತಲೂ ಆಯುಧ. ಅಪಾಯಕಾರಿ ವಸ್ತುಗಳನ್ನು ತರುವುದನ್ನು ಪ್ರತಿಬಂಧಿಸಲಾಗಿದೆ. ಎಣಿಕೆ ಕೇಂದ್ರದ ವ್ಯಾಪ್ತಿಯಲ್ಲಿ ವಾದ್ಯಬಾರಿಸುವುದು, ಘೋಷಣೆ ಕೂಗುವುದನ್ನೂ ನಿಷೇಧಿಸಲಾಗಿದೆ.ಮೂರು ಮತ ಎಣಿಕೆ ಕೇಂದ್ರದ ಸುತ್ತಲೂ ಇರುವ ಸೈಬರ್ ಕೆಫೆ ಜೆರಾಕ್ಸ್ ಅಂಗಡಿ ಹಾಗು ಇನ್ನಿತರ ಅಂತರ್ಜಾಲ ಕೇಂದ್ರ ಗಳನ್ನು ನಿಷೇಧಜ್ಞೆ ಅವಧಿಯಲ್ಲಿ ಕಡ್ಡಾಯವಾಗಿ ಮುಚ್ಚಲು ಆದೇಶಿಸಲಾಗಿದೆ.
ಶುಕ್ರವಾರ ಸಂಜೆಯೇ ಪೊಲೀಸರು ಐಡಿಎಸ್ ಜಿ ಕಾಲೇಜು ಬಳಿ ಬ್ಯಾರಿಕೇಡ್ ಅಳವಡಿಕೆ ಮಾಡಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಪೊಲೀಸರಿಗೆ ಶುಕ್ರವಾರ ತರಬೇತಿ
ಜಿಲ್ಲೆಯ ವಿವಿಧ ಪೊಲೀಸ್ ವಿಭಾಗದ ಸುಮಾರು 500ಕ್ಕೂ ಅಧಿಕ ಪೊಲೀಸ್ ಅಧಿಕಾರಿ ಸಿಬ್ಬಂದಿಗೆ ಶುಕ್ರವಾರ ಐಡಿಎಸ್ಜಿ ಕಾಲೇಜಿನ ಸಭಾಂಗಣದಲ್ಲಿ ತರಬೇತಿ ನೀಡಲಾಯಿತು. ಜತೆಗೆ, ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಮೇ 2 ರಂದು ಎಲ್ಲೆಲ್ಲಿ ಕರ್ತ್ಯಕ್ಕೆ ಹಾಜರಾಗಬೇಕೆಂಬ ಆದೇಶ ನೀಡಲಾಯಿತು.
ಅಭ್ಯರ್ಥಿಗಳಿಗೆ ಮತ್ತು ಏಜೆಂಟ್ಗೆ ಮಾತ್ರ ಪ್ರವೇಶಕ್ಕೆ ಅವಕಾಶ
ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಅಥವಾ ಅವರ ಏಂಜೆಂಟ್ ಗಳಿಗೆ ಮಾತ್ರ ಮತ ಎಣಿಕೆ ಕೇಂದ್ರದ ಒಳಗೆ ತೆರಳಲು ಅವಕಾಶವಿದೆ. ಮತ ಎಣಿಕೆ ಸಿಬ್ಬಂದಿ, ಮತ ಎಣಿಕೆ ಕಾರ್ಯಕ್ಕೆ ನಿಯೋಜಿತ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರಿಗೂ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಹಾಗೂ ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಮತ ಎಣಿಕೆಕೇಂದ್ರಕ್ಕೆ ತೆರಳಿ ಅಲ್ಲಿನ ಸಿದ್ಧತೆಗಳನ್ನು ಪರಿಶೀಲಿಸಿದರು.
ಬೆಳಗ್ಗೆ 7 ರಿಂದ 7.30ಕ್ಕೆ ಸಗನೀಪುರದಲ್ಲಿರುವ ಸ್ಟ್ರಾಂಗ್ ರೂಂ ಓಪನ್ಬೆಳಗ್ಗೆ 8 ರಿಂದ 8.15ಕ್ಕೆ ಸ್ಟ್ರಾಂಗ್ ರೂಂ ನಿಂದ ಮತ ಎಣಿಕಾ ಕೇಂದ್ರಕ್ಕೆ ಸಾಗಾಣಿಕೆ ಬೆಳಗ್ಗೆ 8.30 ರಿಂದ 9 ವರೆಗೆ ಸಿದ್ಧತೆ
ಬೆಳಗ್ಗೆ 9ಕ್ಕೆ ಅಂಚೆ ಮತ ಪರಿಶೀಲನೆ ಆರಂಭ, ಎಣಿಕೆ ಮಕ್ತಾಯದ ಬಳಿಕ ಫಲಿತಾಂಶ ಪ್ರಕಟ---ಬಾಕ್ಸ್---
ಅಂಚೆ ಮತಪತ್ರದ ವಿವರ
- ಒಟ್ಟು ಅಂಚೆ ಮತ ಪತ್ರ:1822
- ಮಾನ್ಯಗೊಂಡ ಅಂಚೆ ಮತ ಪತ್ರ:1540
- ತಿರಸ್ಕೃತ ಅಂಚೆ ಮತಪತ್ರ: 279
- ನೋಟಾ ಅಂಚೆ ಮತಪತ್ರ:03
ಫೋಟೋಅಂಚೆ ಮತ ಮರು ಎಣಿಕಾ ಕೇಂದ್ರದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಶುಕ್ರವಾರ ತರಬೇತಿ ನೀಡಿ, ಶನಿವಾರದ ಕರ್ತವ್ಯಕ್ಕೆ ನಿಯೋಜನೆ ಮಾಡಲಾಯಿತು.


