ನಾವಿನ್ನು ಬಾಲ್ಯಾವಸ್ಥೆಯಲ್ಲಿ : ರವಿ ಡಿ ಚೆನ್ನಣ್ಣನವರ್ ಬೇಸರ
ಉದ್ಯೋಗಂ ಪುರುಷ ಲಕ್ಷಣಂ ಎನ್ನುತ್ತಿದ್ದ ಕಾಲವೊಂದಿತ್ತು, ಆದರೆ ಈಗ ಪ್ರತಿಯೊಬ್ಬರೂ ಉದ್ಯೋಗ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅವಕಾಶ ವಂಚಿತರನ್ನು ಗುರುತಿಸಿ ಅವರಿಗೆ ಸೂಕ್ತ ಅವಕಾಶ ಕಲ್ಪಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ. ಎಲ್ಲರ ಕಷ್ಟವನ್ನು ನಮ್ಮದೇ ಕಷ್ಟವೆಂದು ಅರಿತು ಕೆಲಸ ಮಾಡುವ ಅಗತ್ಯವಿದೆ
ಹೆಚ್.ಡಿ.ಕೋಟೆ[ಸೆ.30]: ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ಜ್ಞಾನ ಸಂಪತ್ತನ್ನು ನಮ್ಮ ಪೂರ್ವಜರು ಗುರುಕುಲದಲ್ಲಿಯೇ ನೀಡುತ್ತಿದ್ದರು ಎಂದು ಎಸಿಪಿ ರವಿ ಡಿ. ಚೆನ್ನಣ್ಣನವರ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಕೌಶಲ್ಯ ತರಬೇತಿ ಶಿಬಿರದ ಮುಖ್ಯಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ, ನಮ್ಮ ದೇಶ ಮಾತ್ರ ಬಾಲ್ಯಾವಸ್ಥೆಯಲ್ಲಿಯೇ ಇದೆ. ಅದಕ್ಕೆ ನೇರ ಕಾರಣ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಆಗಿದೆ. ದೇಶದ ಏಳಿಗಾಗಿ ನಾನು ಏನಾದರೂ ಸಾಧಿಸಬೇಕು. ನನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವ ಜವಾಬ್ದಾರಿ ಅರಿತು ಸಾಧನೆ ಮಾಡಬೇಕಿದೆ ಎಂದರು.
ನಮ್ಮ ಪರಿಶ್ರಮ ಅಗತ್ಯ:
ಏಕಲವ್ಯ ಕೇವಲ ಗುರುಗಳ ಪ್ರತಿಮೆಯನ್ನು ಇಟ್ಟು ಪೂಜಿಸಿ ವಿದ್ಯೆಯನ್ನು ಕಲಿತ, ಅಂತೆಯೇ ನಾವುಗಳೂ ಗುರುವಿನ ಸಹಕಾರದಿಂದ ವಿದ್ಯೆಗೆ ನಮ್ಮದೇ ಪರಿಶ್ರಮದ ಅಗತ್ಯವಿದೆ. ವಿದ್ಯಾರ್ಥಿಗಳು ಓದಿದ್ದರಲ್ಲಿ ಅತಿ ಮುಖ್ಯವಾದ ಅಂಶಗಳನ್ನು ನೆನಪಿಟ್ಟುಕೊಂಡು, ಹೊಸ ಸಂಶೋಧನೆ ಮಾಡುತ್ತಿರಬೇಕು. ಉದ್ಯೋಗಂ ಪುರುಷ ಲಕ್ಷಣಂ ಎನ್ನುತ್ತಿದ್ದ ಕಾಲವೊಂದಿತ್ತು, ಆದರೆ ಈಗ ಪ್ರತಿಯೊಬ್ಬರೂ ಉದ್ಯೋಗ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅವಕಾಶ ವಂಚಿತರನ್ನು ಗುರುತಿಸಿ ಅವರಿಗೆ ಸೂಕ್ತ ಅವಕಾಶ ಕಲ್ಪಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ. ಎಲ್ಲರ ಕಷ್ಟವನ್ನು ನಮ್ಮದೇ ಕಷ್ಟವೆಂದು ಅರಿತು ಕೆಲಸ ಮಾಡುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಶಾಸಕ ಸಿ. ಅನಿಲ್ ಕುಮಾರ್ ಮಾತನಾಡಿ, ತಾಲೂಕಿನ ನಿರುದ್ಯೋಗ ಸಮಸ್ಯೆಯನ್ನು ನೀಗಿಸುವುದೇ ನನ್ನ ಆದ್ಯ ಕರ್ತವ್ಯ. ಪ್ರತಿ ಕುಟುಂಬವೂ ಆದಾಯಗಳಿಸಿ ಎಲ್ಲರಂತೆ ಉತ್ತಮ ಜೀವನ ನಡೆಸಬೇಕು ಎನ್ನುವುದು ನನ್ನ ಕನಸಾಗಿದೆ ಎಂದರು.
ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಗಿರಿಗೌಡ, ಏಜಾ ಪಾಷ, ಮನುಗನಹಳ್ಳಿ ಮಾದಪ್ಪ, ಕೃಷ್ಣೇಗೌಡ, ನಂದಿನಿ, ಎ.ಸಿ. ಮಂಜುನಾಥ್, ಚಿಕ್ಕವೀರನಾಯಕ,ಪರಶಿವಮೂರ್ತಿ, ಪುರಸಭೆ ಸದಸ್ಯರಾದ ಎ.ಸಿ. ನರಸಿಂಹಮೂರ್ತಿ, ಮಧು, ಪ್ರೇಮಕುಮಾರ್, ವೆಂಕಟೇಶ್, ಮಧು, ಸೋಮಶೇಖರ್, ಶಾಂತಮ್ಮ, ಆಸ್ಫಿ, ರಾಜು, ವೃಕ್ಷಂ ಸಂಸ್ಥೆಯ ಸುರೇಶ್ ಲೋಹಿತ್ ಇದ್ದರು.