ಕಾಞಂಗಾಡ್-ಕಾಣಿಯೂರು ರೈಲ್ವೆ ಮಾರ್ಗ ಸಮೀಕ್ಷೆಗೆ ಶೀಘ್ರ ಸಿಎಂ ಸಭೆ
ಕೇರಳದ ಕಾಞಂಗಾಡ್-ಕರ್ನಾಟಕದ ಕಾಣಿಯೂರು ನಡುವಿನ ಪ್ರಸ್ತಾವಿತ ರೈಲು ಮಾರ್ಗದ ಸಮೀಕ್ಷೆ ಬಗ್ಗೆ ಶೀಘ್ರದಲ್ಲಿಯೇ ಸಿಎಂ ಯಡಿಯೂರಪ್ಪ ಅವರು ಸಭೆ ನಡೆಸಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಕಾಞಂಗಾಡ್ನಿಂದ ಕರ್ನಾಟಕ ಗಡಿ ಭಾಗದವರೆಗೆ ಕೇರಳದಲ್ಲಿ ಈ ರೈಲು ಮಾರ್ಗದ ಸರ್ವೆ ಪೂರ್ಣಗೊಳಿಸಲಾಗಿದೆ.
ಮಂಗಳೂರು(ಸೆ.14): ಕೇರಳದ ಕಾಞಂಗಾಡ್-ಕರ್ನಾಟಕದ ಕಾಣಿಯೂರು ನಡುವಿನ ಪ್ರಸ್ತಾವಿತ ರೈಲು ಮಾರ್ಗದ ಸಮೀಕ್ಷೆ ಕುರಿತಂತೆ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಬೆಂಗಳೂರಿನಲ್ಲಿ ರೈಲ್ವೆ ಅಧಿಕಾರಿಗಳ ಸಭೆ ಶೀಘ್ರ ನಡೆಯಲಿದೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಪಂಚಾಯ್ತಿಯ ನೇತ್ರಾವತಿ ಸಭಾಂಗಣದಲ್ಲಿ ಶುಕ್ರವಾರ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ರೈಲ್ವೆ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಈ ಮಾತು ಹೇಳಿದರು.
ಕಾಞಂಗಾಡ್ನಿಂದ ಕರ್ನಾಟಕ ಗಡಿ ಭಾಗದವರೆಗೆ ಕೇರಳದಲ್ಲಿ ಈ ರೈಲು ಮಾರ್ಗದ ಸರ್ವೆ ಪೂರ್ಣಗೊಳಿಸಲಾಗಿದೆ. ಆದರೆ ರಾಜ್ಯದ ವ್ಯಾಪ್ತಿಯಲ್ಲಿ ಗಡಿ ಭಾಗದಿಂದ ಕಾಣಿಯೂರು ವರೆಗೆ ಸರ್ವೆ ಕಾರ್ಯಕ್ಕೆ ಅರಣ್ಯ ಪ್ರದೇಶ ಅಡ್ಡಿಯಾಗಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ರೈಲ್ವೆ ಅಧಿಕಾರಿಗಳ ಸಭೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು.
ಮಂಗಳೂರಲ್ಲಿ ರೈಲ್ವೆ ಸಚಿವರ ಸಭೆ:
ಕರಾವಳಿ ಜಿಲ್ಲೆಯ ರೈಲ್ವೆ ಸಮಸ್ಯೆಗಳ ಬಗ್ಗೆ ಕೇಂದ್ರ ರೈಲ್ವೆ ಸಹಾಯಕ ಸಚಿವ ಸುರೇಶ್ ಅಂಗಡಿ ಅವರು ಇನ್ನು 15 ದಿನದಲ್ಲಿ ಮಂಗಳೂರಿಗೆ ಆಗಮಿಸಿ ಸಭೆ ನಡೆಸಲಿದ್ದಾರೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ವಿಶ್ವದರ್ಜೆ, ರೈಲ್ವೆ ಯೋಜನೆಗಳು, ಕೊಂಕಣ ರೈಲ್ವೆ ಪ್ರಾದೇಶಿಕ ವಿಭಾಗ ಸೇರಿದಂತೆ ವಿವಿಧ ಬೇಡಿಕೆ ಹಾಗೂ ಕುಂದುಕೊರತೆಗಳ ಬಗ್ಗೆ ಈ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಭೂಕುಸಿತ ಪ್ರದೇಶಗಳಲ್ಲಿ ಜಲಪಾತಗಳು ಸೃಷ್ಟಿ; ಬೆಟ್ಟಗಳ ಮೇಲಿಂದ ಜುಳು ಜುಳು ನಾದ
ಫಾಲ್ಘಾಟ್ ವಿಭಾಗದ ರೈಲ್ವೆ ಕುಂದುಕೊರತೆ ಕುರಿತಂತೆ ಅಲ್ಲಿನ ಎಲ್ಲ ಸಂಸದರ ಜೊತೆಗೆ ಸೆ.18ರಂದು ತ್ರಿವೆಂಡ್ರಂನಲ್ಲಿ ರೈಲ್ವೆ ಅಧಿಕಾರಿಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ಫಾಲ್ಘಾಟ್ ವಿಭಾಗದ ರೈಲು ಅಭಿವೃದ್ಧಿ ಕುರಿತೂ ಪ್ರಸ್ತಾಪಗೊಳ್ಳಲಿದೆ ಎಂದು ಫಾಲ್ಘಾಟ್ ವಿಭಾಗೀಯ ಅಧಿಕಾರಿ ಪ್ರತಾಪ್ಸಿಂಗ್ ಶಮಿ ಹೇಳಿದರು.
ಮಂಗಳೂರು ಪಂಪ್ವೆಲ್ ಮೇಲ್ಸೇತುವೆ ಡಿಸೆಂಬರ್ಗೆ ಪೂರ್ಣ..?