Asianet Suvarna News Asianet Suvarna News

ರಾಹುಲ್‌ ಗಾಂಧಿ ಅನರ್ಹತೆ ಅಸಂವಿಧಾನಿಕ ನಡೆ : ಹಿಂದುಳಿದ ವರ್ಗಗಳ ಜಾಗೃತ ವೇದಿಕೆ

ಸಂಸದ ಸ್ಥಾನದಿಂದ ರಾಹುಲ್‌ ಗಾಂಧಿ ಅವರನ್ನು ಅನರ್ಹಗೊಳಿಸಿರುವ ಅಸಂವಿಧಾನಿಕ ನಡೆ ಪ್ರಜಾಪ್ರಭುತ್ವದ ಕಗ್ಗೋಲೆ ಖಂಡಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯವರು ಮೈಸೂರಿನ ಪುರಭವನದ ಆವರಣದಲ್ಲಿರುವ ಡಾ.ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆ ಮುಂಭಾಗ ಶನಿವಾರ ಪ್ರತಿಭಟಿಸಿದರು.

Rahul Gandhis disqualification is an unconstitutional move  snr
Author
First Published Mar 26, 2023, 6:00 AM IST

  ಮೈಸೂರು :  ಸಂಸದ ಸ್ಥಾನದಿಂದ ರಾಹುಲ್‌ ಗಾಂಧಿ ಅವರನ್ನು ಅನರ್ಹಗೊಳಿಸಿರುವ ಅಸಂವಿಧಾನಿಕ ನಡೆ ಪ್ರಜಾಪ್ರಭುತ್ವದ ಕಗ್ಗೋಲೆ ಖಂಡಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯವರು ಮೈಸೂರಿನ ಪುರಭವನದ ಆವರಣದಲ್ಲಿರುವ ಡಾ.ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆ ಮುಂಭಾಗ ಶನಿವಾರ ಪ್ರತಿಭಟಿಸಿದರು.

ಸಂಸತ್‌ ಸದಸ್ಯತ್ವದಿಂದ ರಾಹುಲ್‌ ಗಾಂಧಿ ಅವರನ್ನು ಅನರ್ಹಗೊಳಿಸಿರುವುದು ಭಾರತದ ಪ್ರಜಾಪ್ರಭುತ್ವಕ್ಕೆ ಶೋಭೆ ತರುವ ಕೆಲಸವಲ್ಲ. ಇದು ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿರುವ ಮುನ್ಸೂಚನೆ. ರಾಹುಲ್‌ ಗಾಂಧಿ ವಿರುದ್ಧ ಮಾನನಷ್ಟ ಪ್ರಕರಣವೊಂದರಲ್ಲಿ ಸೂರತ್‌ನ ನ್ಯಾಯಾಲಯವು 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ 30 ದಿನಗಳ ಕಾಲಾವಕಾಶವನ್ನು ನೀಡಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದೆ. ಈ ಮಧ್ಯೆ ಏಕಾಏಕಿ ಸಂಸತ್‌ ಕಾರ್ಯದರ್ಶಿಗಳು ನ್ಯಾಯಾಲಯದ ಆದೇಶದ ಪ್ರತಿಯನ್ನು ಪಡೆಯದೇ, ಮೇಲ್ಮನವಿಗೆ ಕಾಲಾವಕಾಶ ನೀಡಿರುವುದನ್ನು ಲೆಕ್ಕಿಸದೆ ಏಕಾಏಕಿ ರಾಹುಲ್‌ ಗಾಂಧಿ ಅವರನ್ನು ಸಂಸತ್‌ ಸದಸ್ಯತ್ವದಿಂದ ಅನರ್ಹಗೊಳಿಸಿರುವ ನಡೆ ಸಂವಿಧಾನ ವಿರೋಧಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅನರ್ಹಗೊಳಿಸಿದ ಪ್ರಕ್ರಿಯೆಯೇ ಪ್ರಶ್ನಾರ್ಹವಾಗಿದೆ. ವಿರೋಧ ಪಕ್ಷಗಳ ನಾಯಕರು ಮತ್ತು ಟೀಕಾಕಾರರನ್ನು ಧಮನಿಸಲು ಅವರು ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸಿದಂತೆ ತಡೆಯಲು, ಕಾನೂನು ಮತ್ತು ಇತರ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಬಳಸಿಕೊಳ್ಳುವ ನಿರುಕಂಶಾಧಿಪತ್ಯದ ದೇಶಗಳ ಸಾಲಿಗೆ ಈಗ ಭಾರತವನ್ನು ಸೇರಿಸಲಾಗಿದೆ ಎಂದು ಅವರು ಕಿಡಿಕಾರಿದರು.

ಸಚಿವರಾದ ಡಾ. ಅಶ್ವತ್ಥನಾರಾಯಣ್‌, ಆರ್‌. ಅಶೋಕ್‌, ಮಾಜಿ ಸಚಿವರಾದ ಸಿ.ಟಿ. ರವಿ, ಕೆ.ಎಸ್‌. ಈಶ್ವರಪ್ಪ ಮುಂತಾದವರು ದ್ವೇಷ ಭಾಷಣ, ವಿರೋಧ ಪಕ್ಷದ ನಾಯಕರನ್ನು ಕೊಲೆ ಮಾಡಲು ಕರೆ ನೀಡಿರುವುದು ಮತ್ತು ಇತರೆ ಕೃತ್ಯಗಳಲ್ಲಿ ಭಾಗಿಯಾಗಿದ್ದರೂ ಕೂಡ ಅವರ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಶಾಸಕರಾದ ನೆಹರು ಓಲೆಕರ್‌ ಅವರಿಗೆ ಎರಡು ವರ್ಷಗಳ ಶಿಕ್ಷೆಯಾಗಿದೆ. ಮತ್ತೊಂದು ಚೆಕ್‌ಬೌನ್ಸ್‌ ಪ್ರಕರಣದಲ್ಲಿ ಶಾಸಕ ಕುಮಾರಸ್ವಾಮಿ ಅವರಿಗೆ 4 ವರ್ಷಗಳ ಶಿಕ್ಷೆಯಾಗಿದೆ. ಆದರೂ ರಾಜ್ಯ ಸರ್ಕಾರವು ಶಾಸಕ ಸ್ಥಾನದಿಂದ ವಜಾಗೊಳಿಸಿಲ್ಲ. ಇವರಿಗೆ ಅನ್ವಯಸದ ಕಾನೂನು ರಾಹುಲ್‌ ಗಾಂಧಿ ಅವರ ಮೇಲೆ ಏಕೆ ಎಂದು ಅವರು ಪ್ರಶ್ನಿಸಿದರು.

ವಿಧಾನಪರಿಷತ್ತು ಸದಸ್ಯ ಡಾ.ಡಿ. ತಿಮ್ಮಯ್ಯ, ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್‌. ಶಿವರಾಮು, ಮುಖಂಡರಾದ ಎನ್‌.ಆರ್‌. ನಾಗೇಶ್‌, ಲೋಕೇಶ್‌ಕುಮಾರ್‌, ಜಯ್‌ಕುಮಾರ್‌, ವಿವೇಕ್‌, ಶಿವಣ್ಣ, ಕುಮಾರ್‌, ಮಹೇಂದ್ರ, ರೋಹಿತ್‌, ಶೋಭಾ, ಶಾಂತಮ್ಮ, ಆರ್‌.ಕೆ. ರವಿ, ಬಸವಣ್ಣ, ಮೋಹನ್‌, ಯೋಗೇಶ್‌ ಉಪ್ಪಾರ್‌, ಸುನಿಲ್‌, ಹರೀಶ್‌, ರವಿನಂದನ್‌, ಸತ್ಯನಾರಾಯಣ್‌ ಮೊದಲಾದವರು ಇದ್ದರು.

ಕಾಂಗ್ರೆಸ್‌ ಪ್ರತಿಭಟನೆ

ಸಂಸದ ಸ್ಥಾನದಿಂದ ರಾಹುಲ್‌ ಗಾಂಧಿ ಅವರನ್ನು ಅನರ್ಹಗೊಳಿಸಿರುವುದನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ನಗರದ ನ್ಯಾಯಾಲಯ ಮುಂಭಾಗದ ಗಾಂಧಿ ಪುತ್ಥಳಿ ಬಳಿ ಶನಿವಾರ ಪ್ರತಿಭಟಿಸಿದರು. ಇದು ಭಾರತದ ಪ್ರಜಾಪ್ರಭುತ್ವದಲ್ಲಿ ಕಪ್ಪು ದಿನ ಎಂದು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Follow Us:
Download App:
  • android
  • ios