Asianet Suvarna News Asianet Suvarna News

ಕಲ್ಯಾಣ ಭಾಗದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ: ಸಚಿವ ಶರಣಪ್ರಕಾಶ ಪಾಟೀಲ

ಕಲಬುರಗಿ ಹೃದಯ ಭಾಗದಲ್ಲಿ 6.8 ಎಕರೆ ಪ್ರದೇಶದಲ್ಲಿ 183 ಕೋಟಿ ರು. ವೆಚ್ಚದೊಂದಿಗೆ ನಿರ್ಮಾಣವಾಗುತ್ತಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಲಬುರಗಿ ಶಾಖಾ ಆಸ್ಪತ್ರೆಯ ಕಾಮಗಾರಿಗಳು ಕೊನೆ ಹಂತದಲ್ಲಿವೆ. 

Quality Medical Service in Kalyana Karnataka Says Minister Dr Sharan Prakash Patil grg
Author
First Published Jun 18, 2023, 1:36 PM IST | Last Updated Jun 18, 2023, 1:36 PM IST

ಕಲಬುರಗಿ(ಜೂ.18):  ಇಲ್ಲಿನ ಜಿಮ್ಸ್‌ ಆಸ್ಪತ್ರೆಯ 3ನೇ ಮಹಡಿಯಲ್ಲಿ ಕಳೆದ 7 ವರ್ಷದಿಂದ ಕಾರ್ಯಾರಂಭಿಸಿರುವ ಜಯದೇವ ಹೃದ್ರೋಗ ಆಸ್ಪತ್ರೆ ಇನ್ನೇನು 6 ತಿಂಗಳಲ್ಲೇ ತನ್ನದೇ ಆದಂತಹ ಸುಸಜ್ಜಿತವಾದಂತಹ ಸ್ವಂತ ಕಟ್ಟಡ ಹೊಂದಲಿದೆ. ಈಗಾಗಲೇ ಜಿಮ್ಸ್‌ 3ನೇ ಮಹಡಿಯಲ್ಲಿದ್ದುಕೊಂಡೇ ಜನಮನ ಸೆಳೆದಿರುವ ಜಯದೇವ ಆಸ್ಪತ್ರೆಗೆ ಬಹುಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಕಾಮಗಾರಿ ಕೊನೆ ಹಂತ ತಲುಪಿದೆ. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್‌, ಜಯದೇವ ಸಂಸ್ಥೆ ನಿರ್ದೇಶಕ ಡಾ. ಮಂಜುನಾಥ್‌ ಕಾಮಗರಿ ಪ್ರಗತಿ ಪರಿಶೀಲನೆ ನಡೆಸಿದ್ದು ಜನವರಿಯಲ್ಲೇ ಲೋಕಾರ್ಪಣೆ ಎಂದು ಘೋಷಿಸಿದ್ದಾರೆ.

ಕಲಬುರಗಿ ಹೃದಯ ಭಾಗದಲ್ಲಿ 6.8 ಎಕರೆ ಪ್ರದೇಶದಲ್ಲಿ 183 ಕೋಟಿ ರು. ವೆಚ್ಚದೊಂದಿಗೆ ನಿರ್ಮಾಣವಾಗುತ್ತಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಲಬುರಗಿ ಶಾಖಾ ಆಸ್ಪತ್ರೆಯ ಕಾಮಗಾರಿಗಳು ಕೊನೆ ಹಂತದಲ್ಲಿವೆ. ಅಗತ್ಯ ಉಪಕರಣಗಳಿಗೂ ಆದೇಶ ಮಾಡಿದ್ದಾಗಿದೆ. ಸಿಬ್ಬಂದಿ ನೇಮ​ಕಾ​ತಿ​ಯಲ್ಲಿ ಮಂಜುನಾಥ ಅವರು ಕ್ರಮ ಜರುಗಿಸುತ್ತಿದ್ದಾರೆ. ಹೀಗಾಗಿ 2024ರ ಜನವರಿಯಲ್ಲಿ ಆಸ್ಪತ್ರೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಿ ಜನಾರ್ಪಣೆ ಮಾಡಲಿದ್ದೇವೆ ಎಂದು ನಿರ್ದೇಶಕ ಡಾ. ಮಂಜುನಾಥ್‌ ಜೊತೆಗೂಡಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಘೋಷಿಸಿದ್ದಾರೆ.

ಮರಳು ಮಾಫಿಯಾಗೆ ಪೇದೆ ಬಲಿ: ಕರ್ತವ್ಯ ನಿರ್ಲಕ್ಷ ಆರೋಪದಡಿ ಮೂವರು ಪೊಲೀಸರ ಅಮಾನತ್ತು

ಕಲ್ಯಾಣ ನಾಡಿನ ಸಂಜೀವಿನಿ:

56 ಕೋಟಿ ರು. ವೆಚ್ಚದಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳೊಂದಿಗೆ ಆಸ್ಪತ್ರೆ ತನ್ನ ಸೇವೆ ಆರಂಭಿಸಲಿದೆ. ಹೀಗಾಗಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಿಬ್ಬಂದಿ ನೇಮಕಾತಿಗೂ ಸಂಪುಟ ಒಪ್ಪಿಗೆ ನೀಡಿದ್ದು, ಹಣಕಾಸು ಇಲಾಖೆಯು ಸಹಮತ ನೀಡಿದೆ. ಲೋಕಾರ್ಪಣೆ ಮುನ್ನವೇ ನೇಮಕಾತಿ ಪ್ರಕ್ರಿಯೆ ಸಹ ಪೂರ್ಣಗೊಳಿಸಲಾಗುವುದು. ಒಟ್ಟಾರೆಯಾಗಿ ಜಯದೇವ ಸಂಸ್ಥೆ ಕಲ್ಯಾಣ ಕರ್ನಾಟಕ ಭಾಗದ ಹೃದ್ರೋಗಿಗಳ ಪಾಲಿಗೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಕಲಬುರಗಿಯಲ್ಲಿ 2016ರಲ್ಲಿ ಜಯದೇವ ಆಸ್ಪತ್ರೆ ಆರಂಭಕ್ಕೂ ಮುನ್ನ ಇಲ್ಲಿನ ಹೃದ್ರೋಗಿಗಳು ಚಿಕಿತ್ಸೆಗೆ ನೆರೆಯ ಸೊಲ್ಲಾಪುರ, ಹೈದ್ರಾಬಾದ್‌ ಅಥವಾ ದೂರದ ಬೆಂಗಳೂರಿಗೆ ಹೋಗಬೇಕಿತ್ತು. ಜಯದೇವ ಆಸ್ಪತ್ರೆ ಸ್ಥಾಪನೆ ಪರಿಣಾಮ ಇದೀಗ ಇಲ್ಲಿಯೇ ಗುಣಮಟ್ಟದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸೊಲ್ಲಾ​ಪುರದ ರೋಗಿಗಳು ಇಲ್ಲಿನ ಜಯದೇವ ಸಂಸ್ಥೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಈ ಸಂಸ್ಥೆಯ ಸೇವಾ ಮನೋಭಾವನೆ ಮತ್ತು ಗುಣಮಟ್ಟದ ಚಿಕಿತ್ಸೆ ತೋರಿಸುತ್ತದೆ. ಜಯದೇವ ಎಂಬ ಪ್ರತಿಷ್ಠಿತ ಸಂಸ್ಥೆ ಬರೀ ದೇಶದಲ್ಲಿಯೇ ಅಷ್ಟೆಅಲ್ಲ ವಿದೇಶದಲ್ಲಿಯೂ ತನ್ನ ಸೇವೆಯಿಂದ ಮನೆ ಮಾತಾಗಿದೆ ಎಂದರು.

ಕಲಬುರಗಿ ಟ್ರಾಮಾ ಸೆಂಟರ್‌ಗೆ ವಿಶೇಷಾಧಿಕಾರಿ ನೇಮಕ

ನಮ್ಮ ಸರ್ಕಾರದ ಅವಧಿಯಲ್ಲಿ ಹಿಂದೆ ಕಲಬುರಗಿಯಲ್ಲಿ ನಿರ್ಮಿಸಲಾದ ಟ್ರಾಮಾ ಸೆಂಟರ್‌ ಮುಂದಿನ ಎರಡ್ಮೂರು ತಿಂಗಳಲ್ಲಿ ರೋಗಿಗಳಿಗೆ ಸೇವೆ ನೀಡಲು ಕಾರ್ಯರಂಭಗೊಳಿಸಲು ಚರ್ಚೆ ನಡೆದಿದ್ದು, ಇದಕ್ಕಾಗಿ ಬೆಂಗಳೂರಿನ ಟ್ರಾಮಾ ಸೆಂಟರ್‌ ಮುಖ್ಯಸ್ಥ ಡಾ.ಬಾಲಾಜಿ ಪೈ. ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಿ ಆಸ್ಪತ್ರೆ ಆರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಪ್ರತಿ ಕಂದಾಯ ವಿಭಾಗದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಕಲಬುರಗಿ, ಬೆಳಗಾವಿ ಹಾಗೂ ಮೈಸೂರಲ್ಲಿ ಆಸ್ಪತ್ರೆ ನಿರ್ಮಿಸಲು ಹಿಂದೇ ನಮ್ಮ ಸರ್ಕಾರದ ಅವಧಿಯಲ್ಲಿಯೇ ಮಂಜೂರಾತಿ ನೀಡಲಾಗಿತ್ತು, ಮುಂದಿನ 6 ತಿಂಗಳಲ್ಲಿ ಜಿಮ್ಸ್‌ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕಲಬುರಗಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು. ಇನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೂ ಜೀವ ತುಂಬಲಾಗುವುದು. ಕಲಬುರಗಿ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಮತ್ತಷ್ಟು ಸೇವೆ ಒದಗಿಸಲು ಸಹ ಕ್ರಮ ಕೈಗೊಂಡಿದೆ. ಒಟ್ಟಾರೆಯಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು.

ಜಿಲ್ಲೆಗೊಂದು ವೈದ್ಯಕೀಯ ಕಾಲೇಜು

ಪ್ರತಿ ಜಿಲ್ಲೆಯಲ್ಲಿ ಬಡವರಿಗೆ ಒಂದೇ ಸಂಸ್ಥೆಯಡಿ ಎಲ್ಲಾ ಆರೋಗ್ಯ ಸೇವೆ ದೊರಕಬೇಕೆಂಬ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪನೆ ಮಾಡಲಾಗುತ್ತಿದ್ದು, ಪ್ರಸ್ತುತ ರಾಜ್ಯದ 22 ಜಿಲ್ಲೆಗಳಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಸ್ಥಾಪಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿಯೂ ಸಹ ಮುಂದಿನ ವರ್ಷದಿಂದ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಆರ್ಥಿಕ ಇತಿಮಿತಿ ನೋಡಿಕೊಂಡು ಹೆಜ್ಜೆ ಇಡಲಾಗುವುದು. ಪ್ರಸ್ತುತ 5 ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರದ ಪ್ರಥಮಾದ್ಯತೆ ಆಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಉತ್ತರಿಸಿದರು.

ಸಂವಿಧಾನವೇ ನಮ್ಮ ಬದುಕಿಗೆ ದಾರಿದೀಪ: ಶಾಸಕ ಎಂ.ವೈ.ಪಾಟೀಲ್‌

ಪತ್ರಿಕಾಗೋಷ್ಠಿಯಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್‌. ಮಂಜುನಾಥ, ಶಾಸಕ ಅಲ್ಲಂಪ್ರಭು ಪಾಟೀಲ್‌, ಕಲಬುರಗಿ ಆಸ್ಪತ್ರೆಯ ಸಮನ್ವಯಾಧಿಕಾರಿ ಡಾ.ಬಾಬುರಾವ ಹುಡಗಿಕರ್‌, ಡಾ. ಶಂಕರ್‌, ಡಿಸಿಸಿ ಅಧ್ಯಕ್ಷ ಜಯದೇವ ಗುತ್ತೇದಾರ ಇದ್ದರು.

ಕಲಬುರಗಿ ಜಯದೇವ 371 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ

ಸಂವಿಧಾನಕ್ಕೆ ತಿದ್ದುಪಡಿ ತಂದು ಕಲಬುರಗಿ ವಿಭಾಗಕ್ಕೆ 371ಜೆ ವಿಶೇಷ ಮೀಸಲಾತಿ ದೊರಕಿದೆ. ಈ ನಿಟ್ಟಿನಲ್ಲಿ ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ ಜಯದೇವ ಸಂಸ್ಥೆಯ ನೂತನ ಆಸ್ಪತ್ರೆಯ ಹಾಸಿಗೆಗಳ ಸಂಖ್ಯೆಯೂ 371 ಇರಲಿದೆ. ಈ ಹಿಂದೆ 350 ಹಾಸಿಗೆಯ ಆಸ್ಪತ್ರೆ ಎಂದು ಹೇಳಲಾಗಿತ್ತು. ವಿಶೇಷ ಸ್ಥಾನಮಾನ ಹೊಂದಿರುವ ಪ್ರದೇಶ ಇದಾಗಿರುವುದರಿಂದ ಹಾಸಿಗೆ ಸಂಖ್ಯೆ 371ಕ್ಕೆ ಏರಿಸಲಾಗಿದೆ. ಜಿ+3 ಮಹಡಿಯ ಈ ಆಸ್ಪತ್ರೆ 100 ಐ.ಸಿ.ಯು ಬೆಡ್‌, 3 ಓಟಿ ಥಿಯೇಟರ್‌, 3 ಕ್ಯಾಥಲ್ಯಾಬ್‌ ಇರಲಿವೆ. ಬೆಂಗಳೂರು ಆಸ್ಪತ್ರೆಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಕಲಬುರಗಿಯ ಈ ನೂತನ ಆಸ್ಪತ್ರೆಯಲ್ಲಿ ಸಿಗಲಿದ್ದು, ಒಟ್ಟಾರೆಯಾಗಿ ಇದೊಂದು ಸುಸಜ್ಜಿತ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಲಿದೆ.

Latest Videos
Follow Us:
Download App:
  • android
  • ios