ಹೆದ್ದಾರಿಯನ್ನು ಕೇಂದ್ರ ಸರ್ಕಾರದಿಂದಲೇ ನಿರ್ಮಿಸಲಾಗುತ್ತದೆ. ನಮ್ಮಿಂದ ನಿರಾಪೇಕ್ಷಣೆ (ಎನ್ಒಸಿ) ಪತ್ರ ನೀಡಬೇಕಾಗುತ್ತದೆ. ನಗರದ ಹೊರ ವಲಯಗಳನ್ನು ಸಂಪರ್ಕಿಸಲು ಪ್ರಮುಖ ಮಾರ್ಗಗಳಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಲಾಗಿದೆ. ಈ ಬಗ್ಗೆ ಕೇಂದ್ರ ಸಚಿವರೂ ಉತ್ಸಾಹ ತೋರಿದ್ದಾರೆ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
ಬೆಂಗಳೂರು(ಜು.29): ರಾಜಧಾನಿ ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣದ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದಲೇ ನಿರ್ಮಾಣ ಮಾಡುವ ಚಿಂತನೆಯಿದ್ದು, ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆದ್ದಾರಿಯನ್ನು ಕೇಂದ್ರ ಸರ್ಕಾರದಿಂದಲೇ ನಿರ್ಮಿಸಲಾಗುತ್ತದೆ. ನಮ್ಮಿಂದ ನಿರಾಪೇಕ್ಷಣೆ (ಎನ್ಒಸಿ) ಪತ್ರ ನೀಡಬೇಕಾಗುತ್ತದೆ. ನಗರದ ಹೊರ ವಲಯಗಳನ್ನು ಸಂಪರ್ಕಿಸಲು ಪ್ರಮುಖ ಮಾರ್ಗಗಳಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಲಾಗಿದೆ. ಈ ಬಗ್ಗೆ ಕೇಂದ್ರ ಸಚಿವರೂ ಉತ್ಸಾಹ ತೋರಿದ್ದಾರೆ ಎಂದರು.
ಬೆಂಗಳೂರು ಟ್ರಾಫಿಕ್ ಸಮಸ್ಯೆ ಮುಕ್ತಿಗೆ ಸುರಂಗ ನಿರ್ಮಾಣ, ಎಲ್ಲೆಲ್ಲಿ ಬರಲಿದೆ ಸುರಂಗ ರಸ್ತೆ?
ಇದಕ್ಕೂ ಮೊದಲು ದೆಹಲಿಯಲ್ಲಿ ಮಾತನಾಡಿದ ಸಚಿವ ಸತೀಶ್, ಪೀಣ್ಯದಿಂದ ಹೊಸೂರು ರಸ್ತೆವರೆಗೆ 40 ಕಿ.ಮೀ. ಉದ್ದದ ಸುರಂಗ ಮಾರ್ಗ ಮತ್ತು ಹೆಬ್ಬಾಳದಿಂದ ಕೆ.ಆರ್. ಪುರದವರೆಗೆ 22 ಕಿ.ಮೀ. ಉದ್ದದ ಸುರಂಗ ಮಾರ್ಗ ಸೇರಿದಂತೆ ಒಟ್ಟು 62 ಕಿ.ಮೀ. ಉದ್ದದ ಮೂರು ಪಥದ ರಸ್ತೆ ನಿರ್ಮಿಸುವ ಪ್ರಸ್ತಾವನೆ ಇದೆ. ಇದಿನ್ನೂ ಪ್ರಾಥಮಿಕ ಹಂತದ ಪ್ರಸ್ತಾವನೆ ಎಂದು ಹೇಳಿದರು.
ಹೊರವರ್ತುಲ ರಸ್ತೆ ಪ್ರತ್ಯೇಕ ಪ್ರಸ್ತಾವನೆಗೆ ಕೇಂದ್ರ ಸೂಚನೆ
ಕಳೆದ 10 ವರ್ಷದಿಂದ ಕೇಂದ್ರದಿಂದ ಹಲವು ಯೋಜನೆಗಳಿಗೆ ಹಣ ಬಿಡುಗಡೆ ಆಗುವುದು ಬಾಕಿ ಇದೆ. ಕೇಂದ್ರ ರಾಜ್ಯ ಹೆದ್ದಾರಿ ಸಂಬಂಧ ಪ್ರಸ್ತಾವನೆಗಳು ಬೇರೆ ಬೇರೆ ರೀತಿ ಇದೆ. ಈ ಬಗ್ಗೆ ಕೇಂದ್ರದ ಪ್ರತಿನಿಧಿಗಳ ಜತೆ ನಡೆಸಿದ ಒನ್ ಟು ಒನ್ ಸಭೆ ಯಶಸ್ವಿಯಾಗಿಲ್ಲ. ಶಿವಮೊಗ್ಗ, ಗದಗ, ರಾಯಚೂರು ಹೊರವರ್ತುಲ ರಸ್ತೆಗಳಿಗೆ ಪ್ರಸ್ತಾವನೆ ಬೇರೆ ಬೇರೆ ರೀತಿ ಪ್ರಸ್ತಾವನೆ ಕಳುಹಿಸಲು ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನಿಸಬೇಕು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಶಾಸಕಾಂಗ ಪಕ್ಷದ ಸಭೆಗೆ ಗೈರಾದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ದೆಹಲಿಗೆ ಹೋಗಿದ್ದರಿಂದ ಸಂಪುಟ ಸಭೆ, ಶಾಸಕಾಂಗ ಸಭೆಯಲ್ಲಿ ಭಾಗವಹಿಸಲಾಗಿಲ್ಲ ಎಂದು ಹೇಳಿದರು.
