ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದ ಐಎಎಫ್‌ ವಿಮಾನ ಪತನದಲ್ಲಿ ಮೃತರಾದ ವಿಂಗ್‌ ಕಮಾಂಡರ್‌ ಹನುಮಂತರಾವ್‌ ರೇವಣ ಸಿದ್ದಪ್ಪ ಸಾರಥಿ (36) ಮನೆಯಲ್ಲೀಗ ದುಃಖ ಮಡುಗಟ್ಟಿದೆ.

ಬೆಳಗಾವಿ (ಜ.29) : ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದ ಐಎಎಫ್‌ ವಿಮಾನ ಪತನದಲ್ಲಿ ಮೃತರಾದ ವಿಂಗ್‌ ಕಮಾಂಡರ್‌ ಹನುಮಂತರಾವ್‌ ರೇವಣ ಸಿದ್ದಪ್ಪ ಸಾರಥಿ (36) ಮನೆಯಲ್ಲೀಗ ದುಃಖ ಮಡುಗಟ್ಟಿದೆ.

ಇತ್ತೀಚೆಗಷ್ಟೆಇಡೀ ಕುಟುಂಬವೇ ಮೃತ ಕಮಾಂಡರ್‌ ಸೋದರ ಪ್ರವೀಣ ಸಾರಥಿ(Praveen sarathi) ಸೇವೆ ಸಲ್ಲಿಸುತ್ತಿದ್ದ ಪಠಾಣಕೋಟ್‌ಗೆ ತೆರಳಿ, ಒಂದೆಡೆ ಕಲೆತು ಸಂಭ್ರಮಿಸಿತ್ತು. ಹನುಮಂತ ರಾವ್‌ ಕೂಡ ಕುಟುಂಬಸ್ಥರೊಂದಿಗೆ ಸಂಭ್ರಮಿಸಲು ಗ್ವಾಲಿಯರ್‌ನಿಂದ ನೇರವಾಗಿ ಪಠಾಣಕೋಟ್‌ಗೆ ಬಂದಿಳಿದಿದ್ದರು. ಈ ವೇಳೆ ತಂದೆ, ತಾಯಿ, ಸಹೋದರ, ಸಹೋದರಿ ಹಾಗೂ ಮಕ್ಕಳೊಂದಿಗೆ ಸಂತಸದ ಕ್ಷಣಗಳನ್ನು ಕಳೆದಿದ್ದ ಹನುಮಂತರಾವ್‌, ಮತ್ತೆ ನೇರ ಕರ್ತವ್ಯ ನಿರತ ಸ್ಥಳಕ್ಕೆ ಕುಟುಂಬ ಸಮೇತ ತೆರಳಿದ್ದರು. ಹಾಗೆ ಸಂಭ್ರಮಿಸಿದ್ದ ಈ ಸೇನಾ ಕುಟುಂಬದಲ್ಲೀಗ ನೀರವ ಮೌನ.

ಮಧ್ಯಪ್ರದೇಶಲ್ಲಿ ಯುದ್ಧ ವಿಮಾನ ಡಿಕ್ಕಿ: ಬೆಳಗಾವಿಯ ವಿಂಗ್‌ ಕಮಾಂಡರ್‌ ಹುತಾತ್ಮ

ಕಮಾಂಡರ್‌ ವಿಮಾನ ಪಥನದ ಸುದ್ದಿ ತಿಳಿಯುತ್ತಿದ್ದಂತೆ ಬೆಳಗಾವಿಯ ಏರ್‌ಮೆನ್‌ ತರಬೇತಿ ಕೇಂದ್ರದ ಅಧಿಕಾರಿಗಳು ಮತ್ತು ಎಂಎಲ…ಐಆರ್‌ಸಿಯ ಸೇನಾ ಸಿಬ್ಬಂದಿ ಹನುಮಂತ ರಾವ್‌ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸುದ್ದಿ ತಿಳಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಮೃತ ಹನುಮಂತ ರಾವ್‌ ಅವರ ಮನೆಗೆ ಧಾವಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಸೇನೆಯ ಕುಟುಂಬ: ಮೃತ ಹನುಮಂತರಾವ್‌ ಅವರ ಕುಟುಂಬವು ಸೇನೆಯ ಕುಟುಂಬವಾಗಿದೆ. ಈ ಕುಟುಂಬ ಮೂಲತಃ ಹಾವೇರಿ ಜಿಲ್ಲೆಯ ಮಕನೂರು ಗ್ರಾಮದವರು. ಹನುಮಂತರಾವ್‌ ಅವರ ತಂದೆ ರೇವಣಸಿದ್ದಪ್ಪ ಅವರು ಬೆಳಗಾವಿಯಲ್ಲಿ ಭಾರತೀಯ ಸೇನೆಯಿಂದ ಗೌರವ ಕ್ಯಾಪ್ಟನ್‌ ಆಗಿ ನಿವೃತ್ತರಾಗಿದ್ದಾರೆ. ಹನುಮಂತರಾವ್‌ ಅವರ ಹಿರಿಯ ಸಹೋದರ ಪ್ರವೀಣ ಸಾರಥಿ ಕೂಡ ಏರ್‌ಫೋರ್ಸ್‌ನಲ್ಲಿ ಗ್ರೂಪ್‌ ಕ್ಯಾಪ್ಟನ್‌ ಆಗಿದ್ದು, ಪಠಾಣಕೋಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರವೀಣ ಅವರ ಪತ್ನಿ ರಾಜಲಕ್ಷ್ಮಿ ಪಾಟೀಲ ಕೂಡ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ವದೇಶಿ ವಿಮಾನ ಉತ್ಪಾದನೆ: ಭಾರತೀಯ ಸೇನೆಗೆ ರತನ್ ಟಾಟಾ ಕೊಡುಗೆ ಅಷ್ಟಿಷ್ಟಲ್ಲ!