Asianet Suvarna News Asianet Suvarna News

ಟಿಪ್ಪುಜಯಂತಿ ಆಚರಿಸಿದ ಸ್ಥಳ ಗೋಮೂತ್ರದಿಂದ ಶುದ್ಧೀಕರಣ ಮಾಡಿದ ಮುತಾಲಿಕ್

  • ಟಿಪ್ಪುಜಯಂತಿ ಆಚರಿಸಿದ ಸ್ಥಳ ಶುದ್ಧೀಕರಣ
  • ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗೋಮೂತ್ರ ಸಿಂಪಡಿಸಿದ ಮುತಾಲಿಕ್‌
  • ಬಳಿಕ ಅಲ್ಲೇ ಕನಕ ಜಯಂತಿ ಆಚರಣೆ
  • ಮೈಸೂರಿನಲ್ಲಿ ಟಿಪ್ಪು ಪುತ್ಥಳಿ ನಿರ್ಮಿಸಿದರೆ ಒಡೆದು ಹಾಕ್ತೇವೆ: ಮುತಾಲಿಕ್‌
Pramod Muthalik cleaned with gomutra the place where Tipu Jayanti was celebrated rav
Author
First Published Nov 12, 2022, 3:20 AM IST

ಹುಬ್ಬಳ್ಳಿ (ನ.12) : ನಿನ್ನೆಯಷ್ಟೇ ಇಲ್ಲಿನ ಈದ್ಗಾ ಮೈದಾನದಲ್ಲಿ ಕೆಲವು ಸಂಘಟನೆಗಳು ಟಿಪ್ಪು ಜಯಂತಿ ಆಚರಿಸಿದ್ದವು. ಇಂದು ಶ್ರೀರಾಮ ಸೇನೆ ಕಾರ್ಯಕರ್ಯರು ಬೆಳಗ್ಗೆ ಗೋಮೂತ್ರ ಸಿಂಪಡಿಸಿ ಮೈದಾನವನ್ನು ಶುದ್ಧೀಕರಣ ಮಾಡಿ, ಕನಕ ಜಯಂತಿ ಆಚರಿಸಿದರು. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಸ್ವತಃ ನಿಂತು ಟಿಪ್ಪು ಜಯಂತಿ ಆಚರಣೆ ನಡೆದ ಸ್ಥಳ ಸೇರಿದಂತೆ ಮೈದಾನವನ್ನೆಲ್ಲ ಗೋಮೂತ್ರ ಸಿಂಪಡಿಸಿ ಶುದ್ಧೀಕರಿಸಿದರು. ಬಳಿಕ ಮೈದಾನದಲ್ಲಿ ಪೆಂಡಾಲ್‌ ಹಾಕಿ ಕನಕದಾಸರ ದಾಸರ ಭಾವಚಿತ್ರಕ್ಕೆ ಹಾರ ಹಾಕಿ ಪೂಜೆ ಸಲ್ಲಿಸಿ ಸಿಹಿ ಹಂಚಿದರು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಮೋದ ಮುತಾಲಿಕ್‌, ಇದು ಪವಿತ್ರ ನೆಲವಾಗಿದೆ. ಮತಾಂಧ, ಕ್ರೂರಿ, ಹಿಂದೂ ವಿರೋಧಿ ಜಯಂತಿ ಮಾಡಿ ಇದನ್ನು ಅಪವಿತ್ರಗೊಳಿಸಲಾಗಿದೆ. ಹಾಗಾಗಿ ಗೋಮೂತ್ರದಿಂದ ಶುದ್ಧಗೊಳಿಸಲಾಗಿದೆ ಎಂದರು. ಚೆನ್ನಮ್ಮ ಮೈದಾನವನ್ನು ಪವಿತ್ರ ಮಾಡಿ ಕನಕದಾಸ ಜಯಂತಿ ಆಚರಿಸಲಾಗಿದೆ. ಕನಕದಾಸರ ವಿಚಾರ ಇಂದಿಗೂ ಪ್ರಸ್ತುತವಾಗಿದೆ. ಇಂದಿನ ಸಮಾಜದಲ್ಲಿ ಆಗುತ್ತಿರುವ ಒಡಕನ್ನು, ಅಸಮಾನತೆ ದೂರ ಮಾಡುವ ನಿಟ್ಟಿನಲ್ಲಿ ಏಕತೆ ಸ್ಥಾಪಿಸಲು ಸಂತರ ಆದರ್ಶ ಪಾಲಿಸೋಣ ಎಂದರು.

ಟಿಪ್ಪು ಜಯಂತಿಗೆ ಅವಕಾಶ ಕೊಟ್ಟರೆ ಸಂಘರ್ಷ ನಿಶ್ಚಿತ: ಪ್ರಮೋದ್‌ ಮುತಾಲಿಕ್‌

ಬೆಳಗ್ಗೆ 9ರಿಂದ 11ರ ವರೆಗೆ ಈದ್ಗಾ ಮೈದಾನದಲ್ಲಿ ಕನಕದಾಸ ಜಯಂತಿ ಆಚರಿಸಲು ಮಹಾನಗರ ಪಾಲಿಕೆ ಅನುಮತಿ ನೀಡಿತ್ತು. ಹೀಗಾಗಿ 11 ಗಂಟೆಯಾದ ಕೂಡಲೇ ಶ್ರೀರಾಮಸೇನೆ ಕಾರ್ಯಕರ್ತರನ್ನು ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸರು ಮೈದಾನದಿಂದ ಹೊರಕ್ಕೆ ಕಳುಹಿಸಿದರು. ಬಳಿಕ ಕನಕದಾಸರ ಭಾವಚಿತ್ರ ತೆಗೆಯಲು ಶ್ರೀರಾಮಸೇನೆ ಕಾರ್ಯಕರ್ತರಿಗೆ ಪೊಲೀಸರು ಸೂಚಿಸಿದರು.

ಈ ವೇಳೆ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಅಪ್ಪಣ್ಣ ದಿವಟಗಿ, ಮಂಜು ಕಾಟಕರ, ಬಸು ದುರ್ಗದ, ಪ್ರವೀಣ ಮಾಳದಕರ ಹಾಗೂ ಮತ್ತಿತರರಿದ್ದರು. ಈದ್ಗಾ ಮೈದಾನದ ಸುತ್ತಲೂ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಭದ್ರತೆ ಮಾಡಲಾಗಿತ್ತು.

ಓಬವ್ವ ಜಯಂತಿ ಇಲ್ಲ

ಈದ್ಗಾ ಮೈದಾನದಲ್ಲಿ ಒನಕೆ ಓಬವ್ವ ಜಯಂತಿ ಆಚರಣೆಗೆ ಅವಕಾಶ ನೀಡುವಂತೆ ನ. 8ರಂದು ಮಹಾನಗರ ಪಾಲಿಕೆಗೆ ರಿಪಬ್ಲಿಕ್‌ ಪಾರ್ಟಿ ಆಫ್‌ ಇಂಡಿಯಾದ ಕಾರ್ಯಕರ್ತರು ಮನವಿ ಸಲ್ಲಿಸಿದ್ದರು. ಅದರಂತೆ ಪಾಲಿಕೆ ಮಧ್ಯಾಹ್ನ 1ರಿಂದ 3ರ ವರೆಗೆ ಅನುಮತಿ ನೀಡಿತ್ತು. ಆದರೆ ಮುಸ್ಲಿಮರ ಭಾವನೆಗೆ ಧಕ್ಕೆಯಾಗುವ ಹಿನ್ನೆಲೆ ಜಯಂತಿ ಆಚರಣೆ ಮಾಡಲ್ಲ ಎಂದು ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.

 

ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ: ಪ್ರಮೋದ್‌ ಮುತಾಲಿಕ್‌

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿರೋಧ ಪಕ್ಷದ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿದ್ದು ಅಕ್ಷಮ್ಯ ಅಪರಾಧ. ವಿಪಕ್ಷದವರು ಸರ್ಕಾರದ ಜಾಗ ಬಿಟ್ಟು ಬೇರೆಡೆ ಜಯಂತಿ ಆಚರಣೆ ಮಾಡಬಹುದಿತ್ತು. ಅವರ ಮೇಲೆ ಮೇಯರ್‌ ಕೇಸ್‌ ಹಾಕಬೇಕು. ಇಲ್ಲದಿದ್ದರೆ ನಾವು ಪ್ರಕರಣ ದಾಖಲಿಸುತ್ತೇವೆ.

ಪ್ರಮೋದ ಮುತಾಲಿಕ, ಶ್ರೀರಾಮಸೇನೆ ಮುಖ್ಯಸ್ಥ

Follow Us:
Download App:
  • android
  • ios