ಹೊಸಪೇಟೆ ಬಳಿ ಕಾರು ಅಪಘಾತ ಪ್ರಕರಣ| ತನಿಖೆಗೆಗಾಗಿ ಬೆಂಗಳೂರಿಗೆ ತೆರಳಿದ ಸಂಡೂರು ಸಿಪಿಐ ನೇತೃತ್ವದ ತಂಡ|ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು. ಯಾರೇ ಆದರೂ ಸೂಕ್ತ ಕ್ರಮ ಜರುಗಿಸಬೇಕು: ಶಾಸಕ ಭೀಮಾನಾಯ್ಕ|

ಬಳ್ಳಾರಿ[ಫೆ.15]: ಜಿಲ್ಲೆಯ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿ ಬಳಿ ಫೆ. 10ರಂದು ಸಂಭವಿಸಿದ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಡೂರು ಸಿಪಿಐ ನೇತೃತ್ವದ ತಂಡ ಬೆಂಗಳೂರಿಗೆ ತನಿಖೆಗೆ ತೆರಳಿದೆ. ಅಂದು ಕಾರ್‌ನಲ್ಲಿದ್ದವರನ್ನು ತನಿಖೆ ನಡೆಸಿ, ಸತ್ಯಾಂಶ ಹೊರತರಲು ತಂಡ ತೆರಳಿದೆ. ಮತ್ತೊಂದು ಪೊಲೀಸ್‌ ತಂಡ ಹಂಪಿ ಸುತ್ತಮುತ್ತಲ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Add Asianetnews Kannada as a Preferred SourcegooglePreferred

FIRನಲ್ಲಿ ಸಣ್ಣ ತಪ್ಪು: ಬೆಂಜ್, ಆಡಿ ವಿವಾದ ಬೇಡ ಎಂದ ಯತ್ನಾಳ್!

ಫೆ.10ರಂದು ಬಂದಿದ್ದ ಯುವಕರು ಎಲ್ಲಿ ಉಳಿದುಕೊಂಡಿದ್ದರು? ಎಲ್ಲೆಲ್ಲಿ ಓಡಾಟ ಮಾಡಿದರು? ಎಷ್ಟುಗಂಟೆಗೆ ಅಲ್ಲಿಂದ ನಿರ್ಗಮಿಸಿದರು? ಎಂಬಿತ್ಯಾದಿ ಮಾಹಿತಿ ಕಲೆ ಹಾಕುತ್ತಿದೆ. ಪ್ರಕರಣದಲ್ಲಿ ಯಾರಾರ‍ಯರಿದ್ದರು ಎಂಬ ಮಾಹಿತಿಯನ್ನು ಅಧಿಕಾರಿಗಳ ತಂಡ ಕಲೆ ಹಾಕುತ್ತಿದೆ ಎಂದು ಪೊಲೀಸ್‌ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನೋಡ ನೋಡುತ್ತಿದ್ದಂತೆಯೇ ನಮ್‌ ರವಿ ಸತ್ತೋದ:

ಪ್ರಕರಣ ಪ್ರತ್ಯಕ್ಷದರ್ಶಿ, ರವಿ ನಾಯ್ಕ ಅವರ ಚಿಕ್ಕಪ್ಪ ಲಕ್ಷ್ಮಣ ನಾಯ್ಕ ಅವರು ಫೆ. 10ರಂದು ನಡೆದ ಘಟನೆಯನ್ನು ಬಿಚ್ಚಿಡುತ್ತಾರೆ. ಅಂದು ನಾನು ಮತ್ತು ರವಿ ಬೈಕ್‌ ಪಂಕ್ಚರ್‌ ಹಾಕಿಸಲು ಹೋಗಿದ್ದೆವು. ಟೀ ಕುಡಿಯುತ್ತಾ ನಿಂತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ರವಿಗೆ ಡಿಕ್ಕಿ ಹೊಡೆಯಿತು. ನೋಡ ನೋಡುತ್ತಿದ್ದಂತೆಯೇ ಕಣ್‌ ಮುಂದೆಯೇ ನಡೆದ ಘಟನೆಯಿಂದ ನಾನು ಮೂರ್ಛೆ ಹೋದೆ. ಬಳಿಕ ಏನಾಯ್ತು ಎಂದು ನನಗೆ ಗೊತ್ತಾಗಲಿಲ್ಲ. ಕಾರಿನಲ್ಲಿ ನಾಲ್ಕು ಐದು ಜನ ಇದ್ರು ಅಂತಷ್ಟೇ ಗೊತ್ತಾಯಿತು. ಯಾರ ಮಕ್ಕಳು ಇದ್ರು ಎಂಬುದು ಗೊತ್ತಿಲ್ಲ. ಎಚ್ಚರವಾದ ಬಳಿಕ ಠಾಣೆಗೆ ಹೋಗಿ ದೂರು ನೀಡಿದೆ. ಹೀಗೆಂದು ಘಟನೆ ನೆನಪಿಸಿಕೊಂಡು ಬಿಕ್ಕಿಬಿಕ್ಕಿ ಅಳುವ ಲಕ್ಷ್ಮಣ ನಾಯ್ಕ, ನಮ್ಮ ರವಿ ನಾಯ್ಕನನ್ನು ಅನ್ಯಾಯವಾಗಿ ಕೊಂದು ಹಾಕಿದ್ರು. ನಮಗೆ ನ್ಯಾಯ ಕೊಡಿಸಿ ಎಂದು ಅಳಲು ತೋಡಿಕೊಂಡರು.

ಮೊದಲು ಖಾಸಗಿ ಆಸ್ಪತ್ರೆಗೆ:

ರಸ್ತೆ ಅಪಘಾತವಾದ ಕೂಡಲೇ ಕಾರಿನಲ್ಲಿದ್ದವರು ಮೊದಲು ಖಾಸಗಿ ಆಸ್ಪತ್ರೆಗೆ ತೆರಳಿದ್ದು, ಗಾಯಾಳುಗಳನ್ನು ದಾಖಲಿಸಲು ಸ್ಟ್ರಚರ್‌ ಕೊಡಿ ಎಂದು ತರಾತುರಿ ಮಾಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಆಯಾ ಎಂದು ಕೆಲಸ ಮಾಡುತ್ತಿದ್ದ ಮೃತ ರವಿ ನಾಯ್ಕ ಅತ್ತೆ ಭಾರತಿಬಾಯಿ ಸ್ಟೆ್ರಚರ್‌ ಕೊಡಲು ನಿರಾಕರಿಸಿದ್ದಾರಲ್ಲದೆ, ವೈದ್ಯರ ಅನುಮತಿ ಪಡೆಯದೆ ಸ್ಟೆ್ರಚರ್‌ ಕೊಡಲ್ಲ ಎಂದಿದ್ದಾರೆ. ಅಲ್ಲಿನ ವೈದ್ಯರು ಸರ್ಕಾರಿ ಆಸ್ಪತ್ರೆಗೆ ತೆರಳಿ ಎಂದು ಸೂಚಿಸಿದ ಬಳಿಕವೇ ಗಾಯಾಳುಗಳನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಹೊಸಪೇಟೆ ಅಪಘಾತ: ಅನುಮಾನ ಹೆಚ್ಚಿಸಿದ ವೈದ್ಯರು - ಪೊಲೀಸರ 'ಡಿಫರೆಂಟ್' ಹೇಳಿಕೆ

ಆದರೆ, ಖಾಸಗಿ ಆಸ್ಪತ್ರೆಯ ಆಯಿಯಾಗಿದ್ದ ಭಾರತಿಬಾಯಿಗೆ ಆ ಸಂದರ್ಭದಲ್ಲಿ ತನ್ನ ಅಳಿಯ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಗೊತ್ತಾಗಿರಲಿಲ್ಲ. ಬಳಿಕವಷ್ಟೇ ತಿಳಿದು ಬಂದಿದ್ದು ಖಾಸಗಿ ಆಸ್ಪತ್ರೆಗೆ ಬಂದಿದ್ದು ಇವರೇ ಎಂದು ಗೊತ್ತಾಗಿದೆ.

ಬಳ್ಳಾರಿ ಕಾರು ಅಪಘಾತಕ್ಕೆ ಟ್ವಿಸ್ಟ್: ಸಚಿವ ಅಶೋಕ್ ಪುತ್ರ ಕಾರಲ್ಲಿ ಇರಲಿಲ್ಲ?

ಈ ಬಗ್ಗೆ ಮಾತನಾಡಿದ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಅವರು, ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು. ಯಾರೇ ಆದರೂ ಸೂಕ್ತ ಕ್ರಮ ಜರುಗಿಸಬೇಕು. ಮೃತ ರವಿ ನಾಯ್ಕ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.