Asianet Suvarna News Asianet Suvarna News

Udupi ತಂಬಾಕು ಮುಕ್ತ ಅಪಾರ್ಟ್‍ಮೆಂಟ್ ಮಾಡಲು ಬಂತು ಪೈಲಟ್ ಯೋಜನೆ

ವಸತಿ ಸಮುಚ್ಛಯಗಳನ್ನು ತಂಬಾಕು ಮುಕ್ತ ಸಮುಚ್ಛಯಗಳನ್ನಾಗಿ ಮಾರ್ಪಡಿಸುವದರ ಬಗ್ಗೆ ಉಡುಪಿಯಲ್ಲಿ ಪೈಲಟ್ ಯೋಜನೆ ರೂಪಿಸಲಾಗಿದೆ.

Pilot Project Introduced  in Udupi for Tobacco Free Apartments rbj
Author
First Published Sep 14, 2022, 4:40 PM IST

ವರದಿ: ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
 

ಉಡುಪಿ, (ಸೆಪ್ಟೆಂಬರ್.14): ವಸತಿ ಸಮುಚ್ಚಯಗಳಲ್ಲಿ ತಂಬಾಕು ಉತ್ಪನ್ನ ಬಳಸುವುದನ್ನು ಸ್ವತ: ಅಲ್ಲಿನ ನಿವಾಸಿಗಳೇ ಸ್ವಯಂ ಪ್ರೇರಣೆಯಿಂದ ನಿರ್ಬಂದಿಸಿ, ತಂಬಾಕು ಮುಕ್ತ ವಸತಿ ಸಮುಚ್ಛಯವನ್ನಾಗಿ ನಿರ್ಮಿಸಬಹುದಾದ ಪ್ರಾಯೋಜಿಕ ಯೋಜನೆಯನ್ನು ಉಡುಪಿ ಜಿಲ್ಲೆಯಲ್ಲಿ ಪೈಲೆಟ್ ಆಗಿ ರಾಜ್ಯ ಸರ್ಕಾರ ಕೈಗೊಂಡಿದೆ. 

ಈ ಯೋಜನೆಯಿಂದ  ವಸತಿ ಸಮುಚ್ಛಯಗಳಲ್ಲಿನ ನಾಗರೀಕರಿಗೆ ಧೂಮಪಾನ ರಹಿತ ಶುದ್ದಗಾಳಿಯ ಸೇವನೆ ಜೊತೆಗೆ ತಂಬಾಕು ಉತ್ಪನ್ನಗಳ ಎರಡನೇ ಬಳಕೆದಾರರುಗಳನ್ನಾಗುವುದನ್ನು ತಪ್ಪಿಸಬಹುದಾಗಿದ್ದು, ಅವರಿಗೆ  ಆರೋಗ್ಯವಂತ ಜೀವನ ನಡೆಸಲು ಅನುವು ಮಾಡಿಕೊಡಲು ತಂಬಾಕು ಮುಕ್ತ ವಸತಿ ಸಮುಚ್ಚಯದ ನಿರ್ಮಾಣವಾಗಲಿದೆ.

Udupi ತಂಬಾಕು ಸೇವನೆ ಅಪಾಯದ ಕುರಿತು ಕಲಾವಿದನಿಂದ ವಿಶಿಷ್ಟ ಜಾಗೃತಿ

ತಂಬಾಕು ಉತ್ಪನ್ನಗಳನ್ನು ಪ್ರತ್ಯಕ್ಷವಾಗಿ ಬಳಸುವ ಜನರು ಅದರ ಪ್ರಾಥಮಿಕ ಬಳಕೆದಾರರಾದರೆ ಅವರ ಸಮೀಪದವರು ಪರೋಕ್ಷವಾಗಿ ಎರಡನೇ ಬಳಕೆದಾರರಾಗಿದ್ದಾರೆ.  ಪ್ರತಿ ವರ್ಷ ವಿಶ್ವದ ಪ್ರಮುಖ ನಗರಗಳಲ್ಲಿ ಸಂಭವಿಸುವ ತಡೆಯಬಹುದಾದ ಸಾವುಗಳ ಪ್ರಮಾಣದಲ್ಲಿ  2ನೇ ಸ್ಥಾನವಾಗಿದ್ದು, ಬಳಕೆದಾರರಿಗಿಂತಲೂ ಹೆಚ್ಚಿನ ಖಾಯಿಲೆಗಳು ಇವರಲ್ಲಿ ಕಾಣಿಸಿಕೊಳ್ಳುತ್ತವೆ. ಧೂಮಪಾನದಿಂದ 10 ಲಕ್ಷ ಸಾವುಗಳು ಸಂಭವಿಸಿದರೆ ಅದರಲ್ಲಿ 2 ಲಕ್ಷ ಮಂದಿ ಎರಡನೇ ಬಳಕೆದಾರರೇ ಆಗಿರುತ್ತಾರೆ. ಭಾರತದಲ್ಲಿ ಕಂಡುಬರುವ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ. 27 ರಷ್ಟು ತಂಬಾಕು ಬಳಕೆ ಕಾರಣವಾಗಿದೆ.

ತಂಬಾಕು ಮತ್ತು ಧೂಮಪಾನ ಉತ್ಪನ್ನಗಳ ನೇರ ಸೇವನೆಯಿಂದ ಮೃತಪಡುವವರಿಗಿಂತ ,ಇವುಗಳನ್ನು ಬಳಸುವ ಬಳಕೆದಾರರ ಕುಟುಂಬದವರು ಮತ್ತು ಸಮೀಪವರ್ತಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಾರೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. 

ಇದನ್ನು ತಪ್ಪಿಸಲು ತಂಬಾಕು ಮತ್ತು ಧೂಮಪಾನ ಬಳಕೆ ವಿರುದ್ದ ಹಲವು ನಿರ್ಭಂದಗಳನ್ನು ವಿಧಿಸಿದ್ದರೂ ಸಹ ಇದರ ನಿರೀಕ್ಷಿತ ಪ್ರಮಾಣ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ  ಯೋಜನೆಯ ಪ್ರಕಾರ,  ತಂಬಾಕು ಮುಕ್ತ ವಸತಿ ಸಮುಚ್ಛಯಗನ್ನು  ನಿರ್ಮಿಸಲು ಈಗಾಗಲೇ ಸಮುಚ್ಛಯದಲ್ಲಿ ಇರುವ  ನಿವಾಸಿಗಳ ಸರ್ವೇ ನಡೆಸಿ, ಅವರಲ್ಲಿ ದೂಮಪಾನ ಮತ್ತು ತಂಬಾಕು ಬಳಸುವವರ ಮತ್ತು ಬಳಸದೇ ಇರುವವರ ಪಟ್ಟಿ ಮಾಡಿ, ಅವರಿಗೆ ತಮ್ಮ ಮನೆಗಳಲ್ಲಿ ಧೂಮಪಾನ ಮುಕ್ತಗೊಳಿಸುವ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತದೆ.

ಉಡುಪಿ- ಮಣಿಪಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬಂದ ಕುಟುಂಬಗಳು, ವಿದ್ಯಾರ್ಥಿಗಳು, ನೌಕರರು  ವಾಸ ಮಾಡುತ್ತಿದ್ದು, ಇಲ್ಲಿ ವಸತಿ ಸಮುಚ್ಛಯಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿರುವುದರ  ಜೊತೆಗೆ ಅವುಗಳಿಗೆ ಬೇಡಿಕೆಯಿದೆ. ಆದರೆ ಇಲ್ಲಿಯವರೆಗೆ ಇಲ್ಲಿನ ಯಾವುದೇ ಸಮುಚ್ಛಯಗಳಲ್ಲಿ ತಂಬಾಕು ಮತ್ತು ಧೂಮಪಾನ ಮುಕ್ತಗೊಳಿಸುವಂತಹ ಚಟುವಟಿಕೆಗಳು ನಡೆದಿರುವ ಬಗ್ಗೆ  ಕಂಡುಬಂದಿಲ್ಲ. ಆದ್ದರಿಂದ ಇಲ್ಲಿನ  ವಸತಿ ಸಮುಚ್ಛಯಗಳನ್ನು ತಂಬಾಕು ಮುಕ್ತ ಸಮುಚ್ಛಯಗಳನ್ನಾಗಿ ಮಾರ್ಪಡಿಸುವದರ ಬಗ್ಗೆ ಪೈಲಟ್ ಯೋಜನೆ ರೂಪಿಸಿ , ಅದು ಯಶಸ್ವಿಯಾದಲ್ಲಿ ಈ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಉದ್ದೇಶವಿದೆ.

ಉಡುಪಿ ಜಿಲ್ಲಾ ಸವೇಕ್ಷಣಾ ಘಟಕದಿಂದ ಜಿಲ್ಲೆಯಲ್ಲಿ ಈ ಪ್ರಾಯೋಗಿಕ ಯೋಜನೆ ಅನುಷ್ಠಾನಗೊಳ್ಳಲಿದ್ದು, ವಸತಿ ಸಮುಚ್ಛಯಗಳ ಸಮೀಕ್ಷಾ ಕಾರ್ಯ ಮತ್ತು ಯೋಜನೆ ಅನುಷ್ಠಾನಕ್ಕೆ  ಅಗತ್ಯವಿರುವ ಎಲ್ಲಾ ಪೂರ್ವ ಸಿದ್ದತೆಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ.

ಪ್ರಸ್ತುತ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದ್ದು, ವಸತಿ ಸಮುಚ್ಛಯಗಳನ್ನು ಧೂಮಪಾನ ಮುಕ್ತಗೊಳಿಸುವುದರಿಂದ ಅಲ್ಲಿನ ನಿವಾಸಿಗಳಿಗೆ ಆರೋಗ್ಯಕರ ವಾತಾವರಣ ನಿರ್ಮಿಸಲು ಸಾದ್ಯವಾಗುವುದರ ಜೊತೆಗೆ ಮುಂದಿನ ದಿನಗಳಲ್ಲಿ ವಸತಿ ಸಮುಚ್ಛಯಗಳ ನಿರ್ಮಾಣ ಸಂದರ್ಭದಲ್ಲೇ ಸಾರ್ವಜನಿಕರು  ಧೂಮಪಾನ ಮುಕ್ತ ಸಮುಚ್ಛಯಗಳ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸುವ ಸಾದ್ಯತೆಗಳು ಇವೆ.
 
ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಉಡುಪಿ ತಾಲೂಕಿನ ಕೋಡಿಬೆಂಗ್ರೆ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಿದ್ದು, ಕಾರ್ಕಳದ  ರೆಂಜಾಳ ಮತ್ತು ಕುಂದಾಪುರದ ಕೊರ್ಗಿ ಗ್ರಾಮಗಳನ್ನು ತಂಬಾಕು ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳನ್ನು ಸಹ ತಂಬಾಕು ಮುಕ್ತ ಕಚೇರಿಗಳೆಂದು ಘೋಷಿಸಲು ಅಗತ್ಯ ಕ್ರಮ ಕೈಗೊಂಡು ದೃಢೀಕರಣ ಪತ್ರ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ.  ರಾಜ್ಯ ಸರ್ಕಾರ ಸೂಚಿಸಿರುವ ತಂಬಾಕು ಮುಕ್ತ ವಸತಿ ಸಮುಚ್ಛಯದ ಪೈಲಟ್ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಎಲ್ಲಾ ಪೂರ್ವ ಸಿದ್ದತೆಗಳನ್ನು ಮಾಡಿಕೊಂಡು ಅದರಂತೆ  ಕಾರ್ಯ ನಿರ್ವಹಿಸಲಾಗುವುದು ಎಂದು  ಸವೇಕ್ಷಣಾಧಿಕಾರಿ, ಡಾ.ನಾಗರತ್ನ, ತಿಳಿಸಿದ್ದಾರೆ.

Follow Us:
Download App:
  • android
  • ios