Student Trapped in Nandi Hills: ಟ್ರೆಕ್ಕಿಂಗ್ ವೇಳೆ ಜಾರಿ ಬಿದ್ದ ಯುವಕನ ರೋಚಕ ರಕ್ಷಣೆ!
*ನಂದಿಯ ಬ್ರಹ್ಮಗಿರಿ ಬಳಿ ನಡೆದ ಘಟನೆ
*ದೆಹಲಿ ಮೂಲದ ಸ್ಟೂಡೆಂಟ್ ನಿಶಾಂತ್,
*ಬೆಂಗಳೂರು ಪಿಇಎಸ್ ಎಂಜಿನಿಯರಿಂಗ್ ವಿದ್ಯಾರ್ಥಿ
ಚಿಕ್ಕಬಳ್ಳಾಪುರ (ಫೆ. 21): ಟ್ರೆಕ್ಕಿಂಗ್ಗೆ ಆಗಮಿಸಿದ್ದ ವೇಳೆ ಅಕಸ್ಮಿಕವಾಗಿ ಕಾಲು ಜಾರಿ ಬರೊಬ್ಬರಿ 250 ಅಡಿಯಷ್ಟುಅಳಕ್ಕೆ ಬಿದ್ದು ದುರ್ಗಮ ಪ್ರದೇಶದಲ್ಲಿ ಸಿಲುಕಿಕೊಂಡು ವಿದ್ಯಾರ್ಥಿಯನ್ನು ಯುವಪಡೆ ಸೇನಾಧಿಕಾರಿಗಳು ಹೆಲಿಕಾಪ್ಟರ್ ಬಳಸಿ ಆತನ ಪ್ರಾಣ ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ವಿಶ್ವ ವಿಖ್ಯಾತ ನಂದಿ ಗಿರಿಧಾಮದ ಸಮೀಪ ಇರುವ ಬ್ರಹ್ಮಗಿರಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಬೆಂಗಳೂರಿನ ಪಿಇಎಸ್ ವಿಶ್ವ ವಿದ್ಯಾಲಯದಲ್ಲಿ (PES University Student) ಪ್ರಥಮ ವರ್ಷದ ಎಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ಓದುತ್ತಿರುವ ದೆಹಲಿ ಮೂಲದ ನಿಶಾಂತ್ ಗುಲ್ಲಾ (19) ಎಂಬಾತನನ್ನು ವಾಯಪಡೆ ರಕ್ಷಣಾ ಅಧಿಕಾರಿಗಳು, ಎನ್ಡಿಆರ್ಎಫ್, ಎಸ್ಡಿಆರ್ಫ್ ತಂಡಗಳು, ಆಗ್ನಿಶಾಮಕ ಠಾಣೆ ಹಾಗೂ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮಿಂಚಿನ ಕಾರ್ಯಾಚರಣೆ ಆತನ ಪ್ರಾಣ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಬ್ಬನೇ ಆಗಮಿಸಿದ್ದ: ವಾರಾಂತ್ಯದ ಹಿನ್ನೆಲೆಯಲ್ಲಿ ನಿಶಾಂತ್ ನಿನ್ನೆ ಬೆಳಗ್ಗೆ 5.30ಕ್ಕೆ ನಂದಿ ಗಿರಿಧಾಮದ ಸಮೀಪ ಇರುವ ಬ್ರಹ್ಮಗಿರಿಗೆ ಟ್ರಕ್ಕಿಂಗ್ ತೆರಳಿದ್ದಾನೆ. ಈ ವೇಳೆ ನಿಶಾಂತ್ ದುರ್ಗಮ ಪ್ರದೇಶದಲ್ಲಿ ಸಿಲುಕೊಂಡಿದ್ದಾನೆ. ಆಗ ಸ್ನೇಹಿತರಿಗೆ ತನ್ನ ಮೊಬೈಲ್ ಮೂಲಕ ಕರೆ ಮಾಡಿ ತಾನು ಸಿಲುಕಿಕೊಂಡಿರುವ ಬಗ್ಗೆ ಹೇಳಿಕೊಂಡು ಪ್ರಾಣ ರಕ್ಷಣೆಗೆ ಮೊರೆ ಇಟ್ಟಿದ್ದಾನೆ. ತಕ್ಷಣ ಆತನ ಸ್ನೇಹಿತರು ವಿಷಯವನ್ನು ನಂದಿ ಠಾಣೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ಕೂಡಲೇ ಆಗ್ನಿಶಾಮಕ ಠಾಣೆ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಹುಡುಕಾಟ ನಡೆಸಿದ್ದರೂ ನಿಶಾಂತ್ ಪತ್ತೆ ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ: Nandi Hills: ನಂದಿ ಗಿರಿಧಾಮಕ್ಕೂ ಬಂತು ಆನ್ಲೈನ್ ಟಿಕೆಟ್ ಬುಕಿಂಗ್..!
ಮೊಬೈಲ್ ಸ್ವಿಚ್ಆಫ್: ಕೆಲಹೊತ್ತ ಬಳಿಕ ನಿಶಾಂತ್ನ ಮೊಬೈಲ್ ಸಂಪರ್ಕವೂ ಕೂಡ ಕಡಿತಗೊಂಡಿದೆ. ಹೀಗಾಗಿ ನಿಶಾಂತ್ ಪತ್ತೆ ಕಾರ್ಯ ಆಗ್ನಿಶಾಮಕ ಠಾಣೆ ಹಾಗೂ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಕೂಡಲೇ ಜಿಲ್ಲಾಡಳಿತ ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ತಂಡಗಳನ್ನು ಸಂಪರ್ಕಿಸಿ ಪರಿಸ್ಥಿತಿ ಬಗ್ಗೆ ಗಮನ ಸೆಳೆದಾಗ ವಾಯಪಡೆಯ ಸೇನಾ ಅಧಿಕಾರಿಗಳು ಸ್ಥಳಕ್ಕೆ ಕಾಪ್ಟರ್ ಮೂಲಕ ದೌಡಾಯಿಸಿ ಸತತ ಒಂದೂವರೆ ಗಂಟೆ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಅರಣ್ಯ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಎಂಜನಿಯರಿಂಗ್ ವಿದ್ಯಾರ್ಥಿ ನಿಶಾಂತ್ನನ್ನು ಪತ್ತೆಯಾಗಿದ್ದಾನೆ.
ಕೊನೆಗೂ ಆತನ ಪ್ರಾಣ ರಕ್ಷಿಸುವಲ್ಲಿ ವಾಯುಪಡೆ ಅಧಿಕಾರಿಗಳು, ಪೊಲೀಸರು ಹಾಗೂ ಆಗ್ನಿಶಾಮಕ ಠಾಣೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗೆ ಸಣ್ಣಪುಟ್ಟಗಾಯಗಳಾಗಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Chikkaballapur ಜಿಲ್ಲಾದ್ಯಂತ 500 ಹೆಕ್ಟೇರ್ ಹಸಿರು ಪ್ರದೇಶ ಹೆಚ್ಚಳ
ವಿದ್ಯಾರ್ಥಿ ರಕ್ಷಣಾ ಕಾರ್ಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಉಪ ವಿಭಾಗದ ಆರಕ್ಷಕ ಉಪಾಧೀಕ್ಷಕ ವಿ.ಕೆ.ವಾಸುದೇವ್, ಸಿಪಿಐ ಪ್ರಶಾಂತ್, ಪಿಎಸ್ಐಗಳಾದ ಸುನೀಲ್, ವೇಣುಗೋಪಾಲ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಅನುಮತಿ ಪಡೆದಿರಲಿಲ್ಲ: ಚಿಕ್ಕಬಳ್ಳಾಪುರದ ನಂದಿಗಿರಿಧಾಮ ಸಮೀಪ ಇರುವ ಬ್ರಹ್ಮಗಿರಿಯಲ್ಲಿ ಟ್ರಕ್ಕಿಂಗ್ ನಡೆಸಲು ವಿದ್ಯಾರ್ಥಿ ನಿಶಾಂತ್ ಯಾವುದೇ ಪೂರ್ವ ಅನುಮತಿ ಪಡೆದಿರಲಿಲ್ಲ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರರ್ಸಲನ್ ಕನ್ನಡಪ್ರಭಗೆ ಸ್ಪಷ್ಟಪಡಿಸಿದರು. ಆತ ಒಬ್ಬನೇ ಟ್ರಕ್ಕಿಂಗ್ ಬಂದಿದ್ದ ಎಂದ ಅವರು, ಸದ್ಯಕ್ಕೆ ಆತನನ್ನು ಕ್ಯಾಪ್ಟರ್ ಬಳಸಿ ರಕ್ಷಿಸಲಾಗಿದೆಯೆಂದರು.
ಇನ್ಮುಂದೆ ನಂದಿಬೆಟ್ಟಕ್ಕೆ ‘ರೋಪ್ವೇ’ನಲ್ಲೇ ಹೋಗಿ: ಪ್ರವಾಸಿ ತಾಣ ನಂದಿಬೆಟ್ಟದಲ್ಲಿ(Nandi Hills) ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರೋಪ್-ವೇ(Rope-way) ನಿರ್ಮಿಸುವ ಯೋಜನೆಗೆ ಟೆಂಡರ್ ಆಹ್ವಾನಿಸಲು ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ(Cabinet Meeting) ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರೋಪ್-ವೇ ನಿರ್ಮಿಸುವ ಯೋಜನೆಯನ್ನು .93.40 ಕೋಟಿ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ರೋಪ್ ವೇಗಳ ಅಭಿವೃದ್ಧಿ ಮತ್ತು ಕಾರ್ಯಾಚರಣೆಗಾಗಿ ಖಾಸಗಿ ಪಾಲುದಾರರ ಆಯ್ಕೆಗೆ ಟೆಂಡರ್ ಆಹ್ವಾನಿಸಲು ಒಪ್ಪಿಗೆ ನೀಡಲಾಗಿದೆ.