ಯಾರಿಗಾದರೂ ಚಿನ್ನ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ. ಜನರಂತೂ ಕಳೆದ ಅನೇಕ ವರ್ಷಗಳಿಂದ ಮಳೆಗಾಲದಲ್ಲಿ ಚಿನ್ನದ ಭೇಟಿ ನಡೆಸುತ್ತಲೇ ಇದ್ದಾರೆ. 

ವರದಿ: ಶಶಿಧರ ಮಾಸ್ತಿ ಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ

Add Asianetnews Kannada as a Preferred SourcegooglePreferred

ಉಡುಪಿ(ಜು.16):  ಉಡುಪಿಯ ಮಲ್ಪೆ ಬೀಚ್‌ನಲ್ಲಿ ದಿನಬೆಳಗಾದರೆ ನೂರಾರು ಜನ ಚಿನ್ನದ ಹುಡುಕಾಟ ನಡೆಸುತ್ತಿದ್ದಾರೆ. ಅಲೆಗಳು ತಂದು ಹಾಕಿದ ಕಸದ ನಡುವೆ, ಚಿನ್ನದ ಆಭರಣಗಳು ಸಿಗುತ್ತೆ ಅನ್ನೋ ಆಸೆಯೊಂದಿಗೆ ದಿನವೂ ಚಿನ್ನದ ಬೇಟೆಯಾಡುತ್ತಾರೆ! ಮಳೆಗಾಲ ಕರಾವಳಿಯ ಚಿತ್ರಣವನ್ನೇ ಬದಲಿಸಿ ಬಿಡುತ್ತದೆ. ಸಮುದ್ರದ ಅಲೆಗಳಂತೂ ಹೊಸ ಅಬ್ಬರದೊಂದಿಗೆ ತೀರ ಪ್ರದೇಶಕ್ಕೆ ಅಪ್ಪಳಿಸುತ್ತವೆ. ಈ ವೇಳೆ ಕಡಲ ಅಡಿಯಲಿದ್ದ ಕಸದ ರಾಶಿ ತೀರ ಪ್ರದೇಶಕ್ಕೆ ಬಂದು ಬೀಳೋದು ಸಾಮಾನ್ಯ!

ವಿಶ್ವ ಪ್ರಸಿದ್ಧ ಮಲ್ಪೆ ಬೀಚ್‌ಗೆ ಈಗೊಮ್ಮೆ ಬಂದು ನೋಡಿ, ಎಲ್ಲಿ ನೋಡಿದರೂ ಲೋಡುಗಟ್ಟಲೆ ಕಸದ ರಾಶಿ. ಆದರೆ ಈ ಕಸದ ನಡುವೆ, ಅಪರೂಪಕಮ್ಮೆ ಚಿನ್ನವೂ ಸಿಗುತ್ತೆ! ಇದೇ ಆಸೆಯಲ್ಲಿ ಕಡಲ ತಡಿಯ ಜನ ಕಸದಿಂದ ರಸ ಹುಡುಕುವ ಕೆಲಸ ಮಾಡುತ್ತಿರುತ್ತಾರೆ.

COASTAL KARNATAKA SEA EROSION; ಕಡಲು ಕೊರೆತಕ್ಕೆ ಬೇಕಿರುವುದು ತಾತ್ಕಾಲಿಕವಲ್ಲ ಶಾಶ್ವತ ಪರಿಹಾರ

ಇಷ್ಟಕ್ಕೂ ಚಿನ್ನ ಬರೋದು ಎಲ್ಲಿಂದ?

ಸಮುದ್ರ ತನ್ನ ಒಡಲಲ್ಲಿ ಏನನ್ನೂ ಇರಿಸಿಕೊಳ್ಳುವುದಿಲ್ಲ ಅನ್ನೋ ಮಾತಿದೆ. ಅದರಂತೆ ನಾವು ಸಮುದ್ರಕ್ಕೆ ಹಾಕಿದ ಕಸವೆಲ್ಲ ತೀರಪ್ರದೇಶಕ್ಕೆ ಬಂದು ಬೀಳೋದು ಸಾಮಾನ್ಯ. ಅದೇ ರೀತಿ ಲಕ್ಷಾಂತರ ಜನರು ಭೇಟಿ ಕೊಡುವ ಮಲ್ಪೆ ಸಮುದ್ರದಲ್ಲಿ, ಈಜಾಟ ಮೋಜು-ಮಸ್ತಿಯ ವೇಳೆ ಅನೇಕ ಮಂದಿ ತಮ್ಮ ಚಿನ್ನಾಭರಣ ಕಳೆದುಕೊಳ್ಳುತ್ತಾರೆ. ಹೀಗೆ ಕಳೆದು ಹೋದ ಚಿನ್ನದ ಆಭರಣಗಳು ಕಡಲ ಅಡಿ ಸೇರುತ್ತಂತೆ.

ಮಳೆಗಾಲದಲ್ಲಿ ತೂಫಾನ್ ಎದ್ದಾಗ, ಕಡಲು ಅಡಿಮೇಲಾಗುತ್ತದೆ. ಆಳದಲ್ಲಿರುವ ವಸ್ತುಗಳೆಲ್ಲ ಮೇಲಕ್ಕೆ ತೇಲಿ ಬರುತ್ತವೆ. ಹೀಗೆ ಕಸದರಾಶಿಯೇ ಸಮುದ್ರ ಬದಿಗೆ ಬಂದು ಬೀಳುತ್ತದೆ. ಕಸದ ಜೊತೆ ಕಡಲು ಪಾಲಾದ ಚಿನ್ನಾಭರಣಗಳು ಕೂಡ ತೀರ ಪ್ರದೇಶಕ್ಕೆ ತೇಲಿ ಬರುತ್ತಂತೆ. ಈ ರೀತಿ ಹುಡುಕಾಟ ನಡೆಸಿದ ಕೆಲವರಿಗೆ ಅಪರೂಪಕ್ಕೊಮ್ಮೆ ಚಿನ್ನದ ಆಭರಣ ಸಿಕ್ಕಿದ್ದೂ ಇದೆಯಂತೆ. 

ಉಡುಪಿಯಲ್ಲಿ ಮಳೆಗಾಲದ ಜಲಪಾತಗಳು, ಮಣಿಪಾಲದ ಅರ್ಬಿ ಮನಮೋಹಕ

ಯಾರಿಗಾದರೂ ಚಿನ್ನ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ! ಜನರಂತೂ ಕಳೆದ ಅನೇಕ ವರ್ಷಗಳಿಂದ ಮಳೆಗಾಲದಲ್ಲಿ ಚಿನ್ನದ ಭೇಟಿ ನಡೆಸುತ್ತಲೇ ಇದ್ದಾರೆ. ಕಡಲಲ್ಲಿ ತೂಫಾನ್ ಎದ್ದರೆ ಸಾಕು; ಅನೇಕ ಮಂದಿ ಬೀಚ್‌ನಲ್ಲಿ ಹುಡುಕಾಟ ಆರಂಭಿಸುತ್ತಾರೆ. ಈ ರೀತಿ ಹುಡುಕಾಟ ನಡೆಸಿದ ಯಾರು ಕೂಡ ನಮಗೆ ಚಿನ್ನ ಸಿಕ್ಕಿದೆ ಎಂದು ಹೇಳಿಲ್ಲ. ಹಾಗಂತ ಚಿನ್ನದ ಹುಡುಕಾಟವೇನೂ ನಿಂತಿಲ್ಲ. ಈಗಲೂ ದಿನ ಬೆಳಗಾದರೆ ಜನ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಇಂದಲ್ಲ ನಾಳೆ ಚಿನ್ನ ಸಿಕ್ಕೇ ಸಿಗುತ್ತೆ ಎಂದು ಹುಡುಕಾಟ ನಡೆಸುತ್ತಾರೆ.

ಮಲ್ಪೆ ಬೀಚ್‌ಗೆ ನಿರ್ಬಂಧ

ಮಳೆಗಾರದಲ್ಲಿ ಮಲ್ಪೆ ಕಡಲು ಅಪಾಯಕಾರಿಯಾಗಿ ವರ್ತಿಸುತ್ತದೆ. ಹಾಗಾಗಿ ಯಾವುದೇ ಪ್ರವಾಸಿಗರೂ ಇಲ್ಲಿ ಭೇಟಿ ನೀಡಿದಂತೆ ಸಮುದ್ರದ ಉದ್ದಕ್ಕೂ ಬಲೆಯ ಬೇಲಿ ಹಾಕಲಾಗಿದೆ. ಬಲೆಯ ಹೊರಮಗ್ಗಲಲ್ಲಿ ನಿಂತು ಸಮುದ್ರವನ್ನು ನೋಡಬೇಕು. ಹಾಗಾಗಿ ಚಿನ್ನ ಸಿಗುತ್ತೆ ಅಂತ ಯಾರೂ ಮಲ್ಪೆ ಬೀಚ್‌ಗೆ ಬರೋದಕ್ಕೆ ಹೋಗಬೇಡಿ.