ಗೃಹ ಜ್ಯೋತಿ ಯೋಜನೆಗೆ ಪ್ರತಿ ಫಲಾನುಭವಿಯು ತನ್ನ ಕಸ್ಟಮರ್‌ ಐಡಿ ಅಥವಾ ಅಕೌಂಟ್‌ ಐಡಿಯನ್ನು ಆಧಾರ್‌ಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕಿದ್ದು, ಈ ಪ್ರಕ್ರಿಯೆ ಮಾಡಿಸಲು ಅಲೆದಾಟ ಶುರುವಾಗಿದೆ. 

ಅಫಜಲ್ಪುರ(ಜೂ.20):  ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದಂತೆ ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನ ಭಾಗ್ಯ, ಯುವ ನಿಧಿ ಹಾಗೂ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ಜಾರಿಗೆ ತರು​ತ್ತಿದೆ. ಈ ನಡುವೆ ಗ್ಯಾರಂಟಿ ಭಾಗ್ಯಗಳಿಗೆ ಅಗತ್ಯ ದಾಖಲೆಗಳನ್ನು ನೀಡಲು ನಾಗರಿಕರು ಆಧಾರ್‌ ಕಾರ್ಡ್‌, ಕುಟುಂಬ ಪಡಿತರ ಚೀಟಿ, ಪಾನ್‌ ಕಾರ್ಡ್‌ ದಾಖಲೆಗಳನ್ನು ಸಿದ್ಧ ಪಡಿಸಿಕೊಳ್ಳಲು ಹಾತೊರೆಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರ್ಕಾರದ ಎಲ್ಲಾ ಯೋಜನೆಗಳಿಗೆ ಮುಖ್ಯವಾಗಿ ಬೇಕಾಗಿರುವ ಆಧಾರ್‌ ಕಾರ್ಡ್‌. ಇದಕ್ಕೆ ಮೊಬೈಲ್‌ ಸಂಖ್ಯೆ ಜೋಡಣೆ, ಸರಿಯಾದ ವಿಳಾಸ ಮೊದಲಾದ ದಾಖಲಾತಿಗಳು ಸರಿಯಾಗಿರಬೇಕು. ಈ ಹಿನ್ನೆಲೆಯಲ್ಲಿ ನವೀಕೃತ ಆಧಾರ್‌ ಕಾರ್ಡ್‌ ಪಡೆದುಕೊಳ್ಳಲು ಆಧಾರ ಕೇಂದ್ರ, ಬ್ಯಾಂಕ್‌, ಸೈಬರ್‌ ಸೆಂಟರ್‌ಗಳಲ್ಲಿ ಜನರು ಮುಗಿ ಬೀಳುತ್ತಿರುವುದು ಕಂಡು ಬರುತ್ತಿದೆ. ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿರುವ ಆಧಾರ್‌ ಕಾರ್ಡ್‌ ಕೇಂದ್ರದಲ್ಲಿ ಬೆಳಗಿನಿಂದಲೇ ಜನ ಕಾದು ನಿಂತು ತಮ್ಮ ಆಧಾರ್‌ ಕಾರ್ಡ್‌ಗಳನ್ನು ನವೀಕರಿಸಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂದಿತು.

ಗೃಹಲಕ್ಷ್ಮೀ ಯೋಜನೆ ಅನುಷ್ಠಾನಕ್ಕೆ ಪ್ರಜಾಪ್ರತಿನಿಧಿ ನೇಮಿಸ್ತಾರಾ?: ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದೇನು?

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಹೆಚ್ಚಳ:

ಇನ್ನು ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳಿಗೆ ಬಿಪಿಎಲ್‌ ಅಥವಾ ಎಪಿಎಲ್‌ ಪಡಿತರ ಚೀಟಿ ಅಗತ್ಯವಾಗಿರುವುದರಿಂದ ಹೊಸ ಪಡಿತರ ಚೀಟಿಗಾಗಿ ಅರ್ಜಿಗಳನ್ನು ಸಲ್ಲಿಸುವುದು ಹೆಚ್ಚಾಗಿದೆ. ಗೃಹ ಜ್ಯೋತಿ ಯೋಜನೆಗೆ ಪ್ರತಿ ಫಲಾನುಭವಿಯು ತನ್ನ ಕಸ್ಟಮರ್‌ ಐಡಿ ಅಥವಾ ಅಕೌಂಟ್‌ ಐಡಿಯನ್ನು ಆಧಾರ್‌ಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕಿದ್ದು, ಈ ಪ್ರಕ್ರಿಯೆ ಮಾಡಿಸಲು ಅಲೆದಾಟ ಶುರುವಾಗಿದೆ. ಇನ್ನು ಯುವ ನಿಧಿಗಾಗಿ ನಿರುದ್ಯೋಗ ಭತ್ಯೆ ಪಡೆಯಲು ಪದವಿ ವ್ಯಾಸಂಗ ಪತ್ರ, ಆಧಾರ್‌, ವಾಸ ದೃಢೀಕರಣ ಮೊದಲಾದ ದಾಖಲೆಗಳನ್ನು ಹವಣಿಸಿಟ್ಟುಕೊಳ್ಳಬೇಕಿದೆ. ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯ ಪಡೆಯಲು ಪೂರಕವಾಗುವ ಶಕ್ತಿ ಸ್ಮಾರ್ಚ್‌ ಕಾರ್ಡ್‌ಗಳನ್ನು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕಿದೆ.