ಬೆಳಗಾವಿ: ಪ್ರವಾಹಕ್ಕೆ ತತ್ತರಿಸಿದ 4 ಗ್ರಾಮ ಶಾಶ್ವತ ಸ್ಥಳಾಂತರ
ಬೆಳಗಾವಿಯ ಕಾಗವಾಡ ತಾಲೂಕಿನಲ್ಲಿ ಪ್ರತಿವರ್ಷ ಮಳೆಗಾಲದ ಸಮಯದಲ್ಲಿ ಸಮಸ್ಯೆಯಾಗುತ್ತಿದೆ. ಇಲ್ಲಿನ ಗ್ರಾಮಸ್ಥರಿಗೆ ಪ್ರತಿವರ್ಷ ಸಮಸ್ಯೆಯಾಗುತ್ತಿದ್ದು, ಇವರಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಾಲ್ಕು ಗ್ರಾಮಗಳನ್ನು ಸ್ಥಳಾಂತರಿಸಲು ಪ್ರಾಮಾಣಿಕ ಯತ್ನ ಮಾಡುವುದಾಗಿ ನೂತನ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಬೆಳಗಾವಿ(ಆ.23): ಕಾಗವಾಡ ತಾಲೂಕಿನ ಜುಗೂಳ, ಮಂಗಾವತಿ, ಶಹಾಪುರ ಹಾಗೂ ಕೃಷ್ಣಾ ಕಿತ್ತೂರ ಗ್ರಾಮಗಳು ಪ್ರವಾಹದಿಂದ ಮುಳುಗಡೆಯಾಗುತ್ತಿದ್ದು, ಇವನ್ನು ಪ್ರವಾಹಪೀಡಿತ ಪ್ರದೇಶವೆಂದು ಘೋಷಿಸಿ ಈ ನಾಲ್ಕೂ ಗ್ರಾಮಗಳನ್ನು ಬೇರೆ ಕಡೆ ಶಾಶ್ವತವಾಗಿ ಸ್ಥಳಾಂತರಿಸಲು ಪ್ರಾಮಾಣಿಕ ಯತ್ನ ಮಾಡುವುದಾಗಿ ನೂತನ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಕಾಗವಾಡ ತಾಲೂಕಿನ ಜುಗೂಳ, ಮಂಗಾವತಿ, ಶಹಾಪುರ ಹಾಗೂ ಐನಾಪುರ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಪ್ರವಾಹ ಸಂತ್ರಸ್ತರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ನಾನು, ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಅವರು ಕೂಡಿಕೊಂಡು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಈ ನಾಲ್ಕೂ ಗ್ರಾಮಗಳನ್ನು ಬೇರೆ ಕಡೆಗೆ ಸ್ಥಳಾಂತರಿಸುವ ಬಗ್ಗೆ ಕೆಲಸ ಮಾಡುವುದಾಗಿ ಹೇಳಿದರು.
ಇದು ಪ್ರತಿವರ್ಷದ ಸಮಸ್ಯೆ:
ಪ್ರತಿವರ್ಷ ಮಳೆಗಾಲದಲ್ಲಿ ಪ್ರವಾಹದಿಂದ ತೊಂದರೆಯಾಗುತ್ತಿದ್ದು, ನಮಗೆ ಶಾಶ್ವತ ಪುನರ್ವಸತಿ ಕಲ್ಪಿಸಿ, ಮುಳುಗಡೆಯಾಗುವ ಭೂಮಿಗಳಿಗೆ ಪರಿಹಾರ ನೀಡುವಂತೆ ನಾಗರಿಕರು ಮನವಿ ಮಾಡಿಕೊಂಡಾಗ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರ ಸರ್ಕಾರವಿದ್ದು, ನಾನು ಹಾಗೂ ಲಕ್ಷ್ಮಣ ಸವದಿ ಸಚಿವರಾಗಿದ್ದೇವೆ. ಖಂಡಿತವಾಗಿಯೂ ತಮ್ಮ ಮನವಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಸದ್ಯ ತಮಗೆ ತಾತ್ಕಾಲಿಕ ಪರಿಹಾರ ನೀಡಲಾಗುತ್ತಿದೆ. ಹಾನಿಯಾದ ಬೆಳೆಗಳ ಸರ್ವೆ ಕಾರ್ಯ ನಡೆದಿದೆ ಶೀಘ್ರ ಬೆಳೆ ಪರಿಹಾರ ನೀಡಲಾಗುವುದು ಎಂದರು.
ಬೆಳಗಾವಿ: 10 ಸೇತುವೆಗಳು ಸಂಚಾರಕ್ಕೆ ಮುಕ್ತ
ಉಗಾರ ಗ್ರಾಮಕ್ಕೆ ಭೇಟಿ ನೀಡಿ ಪದ್ಮಾವತಿ ದೇವಿ ದರ್ಶನ ಪಡೆದ ನಂತರ, ಕಾರ್ಯಕರ್ತರು ಹಾಗೂ ಮುಖಂಡರು ಹೂಗುಚ್ಛಗಳನ್ನು ನೀಡಿ ಸ್ವಾಗತಿಸಿಕೊಂಡರು. ನಂತರ ಅಲ್ಲಿನ ಸಂತ್ರಸ್ತರ ಕುಂದು ಕೊರತೆ ಆಲಿಸಿ ಸಂತ್ರಸ್ತರಿಗೆ 10 ಸಾವಿರ ಪರಿಹಾರ ನೀಡಲಾಗುತ್ತಿದೆ, ಸಂಪೂರ್ಣ ಬಿದ್ದ ಮನೆಗಳಿಗೆ 5 ಲಕ್ಷ ಪರಿಹಾರ ನೀಡಲಾಗುವುದು ಎಂದರು. ನಂತರ ಐನಾಪುರ ಪಟ್ಟಣಕ್ಕೆ ಭೇಟಿ ನೀಡಿದರು.
ಈ ವೇಳೆ ಮಾಜಿ ಶಾಸಕ ರಾಜು ಕಾಗೆ ಮಾತನಾಡಿ ಜುಗೂಳ, ಮಂಗಾವತಿ, ಶಹಾಪುರ ಹಾಗೂ ಕೃಷ್ಣಾ ಕಿತ್ತೂರ ಈ 4 ಗ್ರಾಮಗಳ ಸ್ಥಳಾಂತರದ ಬಗ್ಗೆ ಸಚಿವರಾದ ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ, ಸಂಸದರಾದ ಅಣ್ಣಾಸಾಬ ಜೊಲ್ಲೆ ಹಾಗೂ ನಮ್ಮ ಪಕ್ಷದ ಹಿರಿಯ ನಾಯಕಾರ ಡಾ. ಪ್ರಭಾಕರ ಕೋರೆಯವರ ನೇತೃತ್ವದ ನಿಯೋಗವೊಂದನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ನಾಲ್ಕೂ ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಪ್ರವಾಹ ಎಫೆಕ್ಟ್: ಬೆಳಗಾವಿಯಲ್ಲಿ ಜನರೇಟರ್ಗಳಿಗೆ ಭಾರೀ ಬೇಡಿಕೆ
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶೀತಲಗೌಡ ಪಾಟೀಲ, ಎಪಿಎಂಸಿ ಅಧ್ಯಕ್ಷ ಅನೀಲ ಕಡೋಲಿ, ಮುಖಂಡರಾದ ಅಣ್ಣಾಸಾಬ ಪಾಟೀಲ, ಅಪ್ಪಾಸಾಬ ಚೌಗುಲೆ, ವಜ್ರಕುಮಾರ ಮಗದುಮ್, ಶಿವಾನಂದ ಪಾಟೀಲ, ಅಭಯಕುಮಾರ ಅಕಿವಾಟೆ, ಅಣ್ಣಾಗೌಡ ಪಾಟೀಲ, ಚಿದಾನಂದ ಡೂಗನವರ, ಶಿವಗೌಡ ಪಾರಶೆಟ್ಟಿ, ಗಜಾನನ ಯರಂಡೋಲಿ, ಅಣ್ಣಾಸಾಹೇಬ ಡೂಗನವರ, ಉದಯಕುಮಾರ ನಿಡಗುಂದಿ, ಕಾಕಾ ಪಾಟೀಲ, ಪ್ರಮೋದ ಹೊಸುರೆ, ಬಾಬು ಅಕಿವಾಟೆ, ಭೂಪಾಲ ಹೊಸುರೆ, ಸುರೇಶ ಕುಸನಾಳೆ, ಮಹಾವೀರ ವಸವಾಡೆ, ಮನೋಜ ಕುಸನಾಳೆ, ಭರತೇಶ ಖಂಡೇರಾಜುರೆ, ಪ್ರಮೋದ ಆಳಪ್ಪನವರ, ಅಭಿಷೇಕ ಚೌಗುಲೆ, ಶಶಾಂಕ ಸೇರಿದಂತೆ ಅನೇಕರು ಇದ್ದರು.