ಸರ್ಕಾರ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡುವ ಫಾರ್ಮ್‌ಗಳಿಗೆ ಸರ್ಕಾರಿ ಮತ್ತು ಖಾಸಗಿ ಗೆಜೆಟೆಡ್‌ ಹುದ್ದೆಯ ಅಧಿಕಾರಿಗಳಿಗೆ ಅಧಿಕಾರ ನೀಡಿದೆ. ಇವರು ಮಾತ್ರ ಇಲ್ಲಸಲ್ಲದ ನೆಪ ಹೇಳಿ ಸಾರ್ವಜನಿಕರಿಗೆ ಸಹಿ ಮಾಡಲು ಅವರಿಂದ ಇವರಿಗೆ, ಇವರಿಂದ ಅವರಿಗೆ ಅಲೆದಾಡಿಸುತ್ತಿದ್ದಾರೆ. ದಿನಾಲು ಕೂಲಿ ನಾಲಿ ಮಾಡಿ ಬದುಕುವ ಜನರಿಗೆ ಇವರ ಬೆನ್ನು ಹತ್ತಿ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಿಸಿ ಮಕ್ಕಳಿಗೆ ಶಾಲೆಗೆ ಕಳಿಸುವುದೇ ಒಂದು ಹರಸಾಹಸವಾಗಿದೆ. 

ಮಹೇಶ ಆರಿ

ಮಹಾಲಿಂಗಪುರ(ಜೂ.03): ಪ್ರತಿಯೊಬ್ಬರಿಗೂ ಆಧಾರ್‌ ಕಾರ್ಡ್‌ ಅವಶ್ಯಕ. ಆಧಾರ ಇಲ್ಲದೇ ಇದ್ದರೆ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ. ಆದರೆ, ಇದೇ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಲು ಇದೀಗ ಪಟ್ಟಣದ ಜನರು ಅಲೆದಾಡಿ ಹೈರಾಣಾಗುತ್ತಿದ್ದಾರೆ.

ಹೌದು, ಸರ್ಕಾರ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡುವ ಫಾರ್ಮ್‌ಗಳಿಗೆ ಸರ್ಕಾರಿ ಮತ್ತು ಖಾಸಗಿ ಗೆಜೆಟೆಡ್‌ ಹುದ್ದೆಯ ಅಧಿಕಾರಿಗಳಿಗೆ ಅಧಿಕಾರ ನೀಡಿದೆ. ಇವರು ಮಾತ್ರ ಇಲ್ಲಸಲ್ಲದ ನೆಪ ಹೇಳಿ ಸಾರ್ವಜನಿಕರಿಗೆ ಸಹಿ ಮಾಡಲು ಅವರಿಂದ ಇವರಿಗೆ, ಇವರಿಂದ ಅವರಿಗೆ ಅಲೆದಾಡಿಸುತ್ತಿದ್ದಾರೆ. ದಿನಾಲು ಕೂಲಿ ನಾಲಿ ಮಾಡಿ ಬದುಕುವ ಜನರಿಗೆ ಇವರ ಬೆನ್ನು ಹತ್ತಿ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಿಸಿ ಮಕ್ಕಳಿಗೆ ಶಾಲೆಗೆ ಕಳಿಸುವುದೇ ಒಂದು ಹರಸಾಹಸವಾಗಿದೆ. ಅಲ್ಲದೇ ಮದುವೆಯಾಗಿ ಗಂಡನಮನೆಗೆ ಬಂದ ಹೆಣ್ಣು ತಮ್ಮ ಗಂಡನ ಮನೆ ಹೆಸರಲ್ಲಿ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಿಸಬೇಕಾದರೆ ಸುಮಾರು 15 ದಿನಗಳಿಂದ ಅಲೆದಾಡುವ ಪರಿಸ್ಥಿತಿ ಬಂದಿದೆ.

ಬಾಗಲಕೋಟೆ: ಎರಡೂವರೆ ವರ್ಷವಾದ್ರೂ ಮುಗಿಯದ ಕಾಮಗಾರಿ, ಜನರಿಗೆ ತಪ್ಪದ ಸಂಕಷ್ಟ..!

ಖಾಸಗಿ ಅಂಗಡಿಯವರ ದರ್ಬಾರ್‌:

ಇದೆ ಒಳ್ಳೆಯ ಅವಕಾಶ ಎಂದು ಖಾಸಗಿ ಇಂಟರ್ನೆಟ್‌ ಅಂಗಡಿಯವರು ಇದನ್ನೇ ದಂಧೆಯಾಗಿಸಿಕೊಂಡಿದ್ದಾರೆ. ಬಡವರು ಇವರಿಗೆ ದುಡ್ಡ ಕೊಡಲು ಆಗದೆ, ಮಕ್ಕಳ ತೊಂದರೆಯನ್ನು ನೋಡದೆ ಗೋಳಾಡುವ ಪರಿಸ್ಥಿತಿ ಬಂದು ಸರ್ಕಾರಕ್ಕೆ ಹಿಡಿಶಾಪ ಹಾಕುವಂತಾಗಿದೆ. ಎಲ್ಲವನ್ನು ಪುಕ್ಕಟೆಯಾಗಿ ನೀಡುವ ಸರ್ಕಾರಗಳು ಮೊದಲು ಸಾರ್ವಜನಿರಿಗೆ ಅನುಕೂಲವಾಗುವ ಇಂತಹ ಸರ್ಕಾರಿ ಕೆಲಸಗಳನ್ನು ಯಾವುದೇ ಹಣ ಇಲ್ಲದೇ ಜನರಿಗೆ ಒದಗುವ ಹಾಗೆ ಮಾಡಿದರೆ ಸಾಕು ಎನ್ನುತ್ತಾರೆ ಜನರು.

ಮುಖ್ಯಾಧಿಕಾರಿಗಳು, ಸರ್ಕಾರಿ ಮುಖ್ಯ ವ್ಯೆದ್ಯಾಧಿಕಾರಿಗಳು, ಕೆಇಬಿ ಅಧಿಕಾರಿಗಳು, ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರು, ಪಶುವೈದ್ಯರು ಹೀಗೆ ಇನ್ನೂ ಹಲವಾರು ಜನರಿಗೆ ಆಧಾರ್‌ ಕಾರ್ಡ್‌ ತಿದ್ದುಪಡಿ ಫಾಮ್‌ರ್‍ಗೆ ಸಹಿ ಮಾಡುವ ಅಧಿಕಾರಿ ಇದ್ದರೂ ಸಹಿ ಮಾಡದೇ ಜನರನ್ನು ಸತಾಯಿಸುತ್ತಿದ್ದಾರೆ. ಹೀಗಾಗಿ ಜನರ ಆಧಾರ ತಿದ್ದುಪಡಿ ಮಾಡಲು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಆಧಾರ್‌ ತಿದ್ದುಪಡಿ ಫಾಮ್‌ರ್‍ಗೆ ಸಹಿ ಹಾಕಿಸಲು ಪುರಸಭೆಯಲ್ಲಿ ಮುಖ್ಯಾಧಿಕಾರಿಗಳು ಇಲ್ಲ ಅಂದರೆ ಸಾಕು, ಅಲ್ಲಿಂದ ಸರ್ಕಾರಿ ಆಸ್ಪತ್ರೆ ಸುಮಾರು 3 ಕಿಮೀ ಇದೆ. ಅಲ್ಲಿವರೆಗೂ ಬಿಸಿಲಲ್ಲಿ ನಡೆದುಕೊಂಡು ಹೋಗುವುದೇ ಒಂದು ಸವಾಲಾದರೆ, ಇನ್ನು ಸಮುದಾಯ ಆರೋಗ್ಯ ಕೇಂದ್ರದ ಮುಖ್ಯಾಧಿಕಾರಿಗಳು ತಮ್ಮ ಕಚೇರಿಯಲ್ಲಿ ಒಂದು ಬೋರ್ಡ್‌ ಹಾಕಿ ಬಿಟ್ಟಿದ್ದಾರೆ. ನಾವು ಯಾವುದೇ ಆಧಾರ್‌ ಕಾರ್ಡ್‌ ಫಾಮ್‌ರ್‍ಗಳಿಗೆ ಸಹಿ ಮಾಡುವುದಿಲ್ಲ. ಕೇಳಿದರೆ ಇದು ನಮಗೆ ಅನ್ವಯವಾಗುವುದಿಲ್ಲ ಎಂದು ಹೇಳಿ ಮತ್ತೆ ವಾಪಸ್‌ ಕಳಿಸಿಬಿಡುತ್ತಾರೆ. ಹೀಗಾಗಿ ಜನ ಬಿಸಿಲಿನ ತಾಪಕ್ಕೆ ಅಲೆದಾಡಲು ಆಗದೇ ಎಷ್ಟೋ ಜನ ತಿದ್ದುಪಡಿಯನ್ನೇ ಬಿಟ್ಟು ಬಿಟ್ಟಿದ್ದಾರೆ.

ದುಡ್ಡಿದ್ದರೆ ಸಹಿ:

ಖಾಸಗಿ ಇಂಟರ್ನೆಟ್‌ ಸೆಂಟರ್‌ಗಳು ಮಾತ್ರ ಇಂತಹ ಬಡಪಾಯಿಗಳ ಉಪಯೋಗವನ್ನು ಸರಿಯಾಗಿ ಮಾಡಿಕೊಳ್ಳುತ್ತಿವೆ. ಆಧಾರ್‌ ಕಾರ್ಡ್‌ ಹೆಸರು ಬದಲಿಸಬೇಕಾ? ಇಷ್ಟುಕೊಡಿ, ಬೇರೆ ಆಧಾರ್‌ ಕಾರ್ಡ್‌ ಬೇಕಾ? ಇಷ್ಟುಕೊಡಿ ಎಂದು ಹಣ ದೋಚುತ್ತಿದ್ದಾರೆ. ಕೆಲ ಬಡವರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಅವರ ಉನ್ನತ ಭವಿಷ್ಯಕ್ಕಾಗಿ ತಮ್ಮ ಭವಿಷ್ಯವನ್ನು ಬದಿಗಿಟ್ಟು ಅವರು ಕೇಳಿದಷ್ಟುಹಣ ನೀಡಿ ಆಧಾರ್‌ ಕಾರ್ಡ್‌ ತಿದ್ದುಪಡಿಮಾಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಜನರಿಗೆ ಸುಲಭವಾಗಿ ಆಧಾರ್‌ ಕಾರ್ಡ್‌ ಹಾಗೂ ಆಧಾರ್‌ ತಿದ್ದುಪಡಿ ಆಗುವಂತೆ ಕ್ರಮ ವಹಿಸಬೇಕು.

ಆಧಾರ್‌ ಕಾರ್ಡ್‌ ತಿದ್ದುಪಡಿ ಫಾಮ್‌ರ್‍ಗೆ ಸಹಿ ಹಾಕಲು ಇರುವ ಎಲ್ಲ ಅಧಿಕಾರಿಗಳಿಗೆ ಇದು ಸಾರ್ವಜನಿಕ ಕೆಲಸವಾಗಿದೆ. ಯಾರು ಜನರನ್ನು ಅಲೆದಾಡಿಸದೇ ತಮ್ಮ ಕೆಲಸವೆಂದು ತಿಳಿದು ಯಾರನ್ನು ಮರಳಿ ಕಳಿಸದಂತೆ ನಾನು ತಾಲೂಕಾಡಳಿತದ ವತಿಯಿಂದ ಒಂದು ಪತ್ರಮಾಡಿ ಕಳಿಸುತ್ತೇನೆ. ಅಲ್ಲದೇ ಸಂಬಂಧಪಟ್ಟವರಿಗೆ ನಾನೇ ಸ್ವತಃ ಕರೆ ಮಾಡಿ ತಿಳಿಸುತ್ತೇನೆ. ಇನ್ನು ಮುಂದೆ ಯಾರಿಗೂ ಈ ರೀತಿ ತೊಂದರೆಯಾಗದಂತೆ ನಿಗಾ ವಹಿಸುತ್ತೇನೆ ಅಂತ ರಬಕವಿ-ಬನಹಟ್ಟಿ ತಹಸೀಲ್ದಾರ್‌ ಡಾ.ಡಿ.ಎಚ್‌.ಹೂಗಾರ ತಿಳಿಸಿದ್ದಾರೆ. 

ರೈತನ ಕೈ ಹಿಡಿಯುತ್ತಾ ರೋಹಿಣಿ ಮಳೆ?: ಭೂಮಿ ಹದಗೊಳಿಸಿ ಸಜ್ಜುಗೊಳಿಸಿದ ಅನ್ನದಾತ

ಆಧಾರ್‌ ತಿದ್ದುಪಡಿ ಫಾಮ್‌ರ್‍ಗಳಿಗೆ ಸಹಿ ಹಾಕದೇ ನಾನು ಯಾರನ್ನು ವಾಪಸ್‌ ಕಳಿಸಿಲ್ಲ. ನಾನು ಬೇರೆ ಕಡೆ ಸಭೆಗೆ ಹೋದಾಗ ಈ ಸಮಸ್ಯೆ ಬರುತ್ತಿದೆ. ಎಲ್ಲ ಅಧಿಕಾರಿಗಳು ಸಹ ಈ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಿದರೆ ಸಾಕು, ಒಬ್ಬರಿಲ್ಲದ ಸಮಯದಲ್ಲಿ ಒಬ್ಬರು ಜವಾಬ್ದಾರಿಯಿಂದ ಕೆಲಸ ಮಾಡಿದರೆ ಸಾಕು. ಇಂತಹ ಸಮಸ್ಯೆಗಳಿಗೆ ಮುಕ್ತಿ ನೀಡಲು ಸಾಧ್ಯ. ನಾನು ಕಚೇರಿಯಲ್ಲಿದ್ದಾಗ ಬೇಕಾದಷ್ಟುಜನ ಬಂದು ಫಾಮ್‌ರ್‍ ಸಹಿ ಮಾಡಿಸಿಕೊಳ್ಳಲಿ ಅಂತ ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ ಹೇಳಿದ್ದಾರೆ. 

ನಾನು ನನ್ನ ಹೆಂಡತಿಯ ಆಧಾರ್‌ ಕಾರ್ಡ್‌ನಲ್ಲಿ ಅವಳ ಅಡ್ರೆಸ್‌ ತಿದ್ದುಪಡಿ ಮಾಡಿಸಲು ಸುಮಾರು 15 ದಿನಗಳಿಂದ ಎಲ್ಲ ಅಧಿಕಾರಿ ಕಡೆ ಅಲೆದಾಡುತಿದ್ದೇನೆ. ಯಾರು ಸಹಿ ಮಾಡುತ್ತಿಲ್ಲ. ಬರೀ ನೆಪ ಹೇಳಿ ಕಳಿಸುತ್ತಿದ್ದಾರೆ. ಸರ್ಕಾರಿ ಡಾಕ್ಟರ್‌ ಸಹಿ ಬೇಕು ಅಂತಾರೆ, ಆದರೆ ಅವರು ಸಹಿ ಮಾಡುವುದಿಲ್ಲ ಅಂತ ಹೇಳುತ್ತಾರೆ. ಏನ್‌ ಮಾಡೋದು ಸರ್‌ ಬರಿ ಅಲೆದಾಡುವುದಾಗಿದೆ ಅಂತ ಮಹಾಲಿಂಗಪುರ ಅಂಬಿ ಓಣಿ ನಿವಾಸಿ ಪ್ರವೀಣ ಈಶ್ವರ ನುಚ್ಚಿ ತಿಳಿಸಿದ್ದಾರೆ.