ಸದ್ಯಕ್ಕೆ ಕಳೆದ 2 ವಾರದಿಂದ ಮಾರುಕಟ್ಟೆಯಲ್ಲಿ ಹಸಿ ಮೆಣಸಿನಕಾಯಿಯಿಂದ ಹಿಡಿದು ಎಲ್ಲಾ ನಮೂನೆ ತರಕಾರಿ ಬೆಲೆ ಶತಕ ದಾಟಿದೆ. ಇದರಿಂದಾಗಿ ಸಾಮಾನ್ಯ ಗ್ರಾಹಕರು ಪರೇಶಾನ್‌ ಆಗಿದ್ದಾರೆ. 500 ರುಪಾಯಿ ಮಾರುಕಟ್ಟೆಯಲ್ಲಿ ವೆಚ್ಚ ಮಾಡಿದರೂ 1 ಪುಟ್ಟ ಕ್ಯಾರಿಬ್ಯಾಗ್‌ ತುಂಬುವಷ್ಟೂ ತರಕಾರಿ ಬರುತ್ತಿಲ್ಲ, ಮಳೆ ಹೀಗೆ ವಿಳಂಬವಾದರೆ ಮುಂದೇನು ಗತಿ? ಎಂದು ಜನ​ಸಾ​ಮಾ​ನ್ಯರು, ವ್ಯಾಪಾ​ರಿ​ಗಳು ಆತಂಕದಲ್ಲಿದ್ದಾರೆ.

ಕಲಬುರಗಿ(ಜೂ.23): ಮುಂಗಾರು ಮಳೆ ಬರು​ವುದು 1 ತಿಂಗಳು ವಿಳಂಬವಾಗಿದ್ದರಿಂದ ಕಲಬುರಗಿ ನಗರ ಹಾಗೂ ಜಿಲ್ಲಾದ್ಯಂತ ತರಕಾರಿ ಬೆಲೆ ಗಗನಕ್ಕೇರಿದೆ. ಬದನೆಕಾಯಿಯಿಂದ ಹಿಡಿದು ಬೀನ್ಸ್‌ವರೆಗೂ ಎಲ್ಲಾ ತರಕಾರಿಗಳ ಬೆಲೆ 100 ರುಪಾಯಿಗಿಂತ ಹೆಚ್ಚಾಗಿದೆ. ಹೀಗಾಗಿ ತರಕಾರಿ ಬೆಲೆ ಗ್ರಾಹಕರ ಜೇಬನ್ನೇ ಸುಡುವಂತೆ ಮಾಡಿದೆ.

ಸದ್ಯಕ್ಕೆ ಕಳೆದ 2 ವಾರದಿಂದ ಮಾರುಕಟ್ಟೆಯಲ್ಲಿ ಹಸಿ ಮೆಣಸಿನಕಾಯಿಯಿಂದ ಹಿಡಿದು ಎಲ್ಲಾ ನಮೂನೆ ತರಕಾರಿ ಬೆಲೆ ಶತಕ ದಾಟಿದೆ. ಇದರಿಂದಾಗಿ ಸಾಮಾನ್ಯ ಗ್ರಾಹಕರು ಪರೇಶಾನ್‌ ಆಗಿದ್ದಾರೆ. 500 ರುಪಾಯಿ ಮಾರುಕಟ್ಟೆಯಲ್ಲಿ ವೆಚ್ಚ ಮಾಡಿದರೂ 1 ಪುಟ್ಟ ಕ್ಯಾರಿಬ್ಯಾಗ್‌ ತುಂಬುವಷ್ಟೂ ತರಕಾರಿ ಬರುತ್ತಿಲ್ಲ, ಮಳೆ ಹೀಗೆ ವಿಳಂಬವಾದರೆ ಮುಂದೇನು ಗತಿ? ಎಂದು ಜನ​ಸಾ​ಮಾ​ನ್ಯರು, ವ್ಯಾಪಾ​ರಿ​ಗಳು ಆತಂಕದಲ್ಲಿದ್ದಾರೆ.

ಗೃಹ​ಜ್ಯೋ​ತಿ ಸಮ​ಸ್ಯೆಗೆ ಜನ ಹೈರಾಣು; ಹೆಚ್ಚುವರಿ ಆಧಾರ್‌ ಸೇವಾ ಕೇಂದ್ರಕ್ಕೆ ಆಗ್ರಹ

ಸದ್ಯ ಪೇಟೆಯಲ್ಲಿನ ತರಕಾರಿ ಧಾರಣೆ ಹೀಗಿದೆ

ತರಕಾರಿ ಪ್ರತಿ ಕೆ.ಜಿ.ಗೆ

ಹಸಿ ಮೆಣಸಿನಕಾಯಿ 120 ರು.
ನುಗ್ಗೆಕಾಯಿ/ಹಿರೇಕಾಯಿ 100 ರು.
ತಿಪ್ಪರಿಕಾಯಿ (ತುಪ್ಪದ ಹೀರಿಕಾಯಿ) 100 ರು.
ಬೆಂಡೆಕಾಯಿ 120 ರು.
ಬೀನ್ಸ್‌ 150 ರು.
ಹಾಗಲ ಕಾಯಿ 110 ರು.
ಹೂಕೋಸು 50- 60 ರು.
ಎಲೆಕೋಸು 80 ರು.
ಸೌತೆಕಾಯಿ 120 ರು.
ಚವಳೆಕಾಯಿ 100 ರು.
ಟೊಮೆಟೊ 50- 60 ರು.
ಬೆಳ್ಳುಳ್ಳಿ 180 ರು.
ಶುಂಠಿ (ಹಸಿ) 250 ರು.
ಸೋರೆಕಾಯಿ (ಒಂದಕ್ಕೆ) 30- 40 ರು.
ದಪ್ಪ ಮೆಣಸಿನಕಾಯಿ 80- 100 ರು.
ಸೊಪ್ಪು ಪ್ರತಿ ಸೂಡಿಗೆ
ಸಬ್ಬಕ್ಕಿ 20 ರು.
ಮೆಂತೆ ಪಲ್ಲೆ 15 ರು.
ಕರಿಬೇವು 10 ರು.
ಕೊತ್ತಂಬರಿ 15 ರು.
ಪಾಲಕ್‌ 15- 20 ರು.
ರಾಜಗಿರಿ 10 ರು.
ಗೋಳಿಪಲ್ಲೆ 15- 20 ರು.
ನಿಂಬೆ ಹಣ್ಣು(4ಕ್ಕೆ) 20 ರು.

ಮೆಂತೆ ಸೊಪ್ಪು, ಹುಣಚೀಕ, ಸಣ್ಣ ಗೋಳಿ, ದೊಡ್ಡಗೋಳಿಪಲ್ಲೆ ಎಲ್ಲವೂ ಒಂದು ಕಟ್ಟಿಗೆ 25-30 ರುಪಾಯಿಗಳಾಗಿದೆ. ತರಕಾರಿಯಲ್ಲದೆ ಎಲ್ಲಾ ನಮೂನೆಯ ಹಣ್ಣು ಹೂವಿನ ಬೆಲೆಯೂ ಗಗನಕ್ಕೇರಿದೆ. ಬಾಳೆಹಣ್ಣಿನ ಬೆಲೆ ಡಜನ್‌ಗೆ 40 ರಿಂದ 50 ರು ಇದ್ದದ್ದು ಇದೀಗ 60 ರಿಂದ 70 ರುಪಾಯಿಗೆ ಇದೆ. ಹಾಗೆಯೇ ಮಾವು, ಸೇಬು, ದಾಳಿಂಬೆ, ಕಿತ್ತಳೆ, ಡ್ಯ್ರಾಗನ್‌ ಪ್ರೂಟ್‌ , ಪೈನಾಪಲ್‌ ಸೇರಿದಂತೆ ಎಲ್ಲಾ ಹಣ್ಣಿನ ಬೆಲೆ ಗಗನಕ್ಕೇರಿದ್ದು ಗ್ರಾಹಕರ ಕೈಗೆಟುಕದಂತಾಗಿದೆ. ಇದಲ್ಲದೆ ಮಲ್ಲಿಗೆ, ಕನಕಾಂಬರ, ಸೇವಂತಿಗೆ, ಮೋಗರಾ, ಗುಲಾಬಿ ಸೇರಿದಂತೆ ತರಹೇವಾರಿ ಹೂವಿನ ಬೆಲೆಯೂ ಹೆಚ್ಚಾ​ಗಿದೆ. 1 ಮೊಳ ಹೂವಿನ ಮಾಲೆಗೆ 40 ಇಂದ 50 ರುಪಾಯಿ ಎಂದು ಬೆಲೆ ನಿಗದಿಯಾಗಿರೋದರಿಂದ ಜನ ಕಂಗಾಲಾಗಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಜನರಿಗೆ 15 ಕೆಜಿ ಅಕ್ಕಿ ಕೊಡ​ಲಿ: ಕಟೀಲ್ ಆಗ್ರಹ

ಸಾಬ್‌, ಮಳೆ ಇಲ್ಲ. ನಾವೇ ಪರೇಶಾನ್‌ ಇದ್ದೀನಿ. ನಾನು ವ್ಯಾಪಾರಿ. ಜೊತೆಗೆ ರೈತ ಕೂಡಾ. ಮಳೆ ಇಲ್ಲದೆ ಹಸಿ ತರಕಾರಿ ಬೆಲೆ ಹೆಚ್ಚಾ​ಗಿದೆ. ಗ್ರಾಹಕರಿಗೆ ನಿಜವಾಗಿಯೂ ಹೊರೆಯಾಗುತ್ತಿದೆ. ಇದಕ್ಕೆಲ್ಲ ಮಳೆ ಬೇಗ ಬಂದ್ರೆನೆ ಪರಿಹಾರ. ನಾವೀಗ ಟೊಮೆಟೊ ಕೆ.ಜಿ.ಗೆ 50 ರಿಂದ 60 ರು. ಮಾರುತ್ತಿದ್ದೇವೆ. ಮಳೆ ಬಂದರೆ ಕೆ.ಜಿ.ಗೆ 10 ರುಪಾಯಿ ಆಗಬಹುದು ಅಂತ ವರ್ತಕ, ರೈತ ಹಸನ್‌ ಭಾಗವಾನ್‌ ಹೇಳಿದ್ದಾರೆ. 

ನಿತ್ಯ ಅದೇನ್‌ ಕಾಯಿ ತರಕಾರಿ ಬಳಸೋಣ ಅನ್ನೋ ಚಿಂತೆ ಕಾಡುತ್ತಿದೆ. ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ತರಕಾರಿ ಬೆಲೆ ಹೆಚ್ಚುತ್ತಿದೆ. ಟೊಮೆಟೊ, ಈರುಳ್ಳಿ, ಕರಿಬೇವು, ಕೊತ್ತಂಬರಿ ಹೀಗೆ ಎಲ್ಲಾ ತರ​ಕಾರಿ ಬೆಲೆ ಗಗನಕ್ಕೇರುತ್ತಿದೆ. ಗ್ರಾಹಕರು ನಾವು ಕಂಗಾಲಾಗಿದ್ದೇವೆ ಅಂತ ಕಲಬುರಗಿ ತರಕಾರಿ ಗ್ರಾಹಕ ಮಲ್ಲಿಕಾರ್ಜುನ ಪಟೀಲ್‌ ತಿಳಿಸಿದ್ದಾರೆ.