ಬೀದರ್ನ ಪ್ರತಿಷ್ಠಿತ ಬ್ರಿಮ್ಸ್ ಆಸ್ಪತ್ರೆಯಲ್ಲಿ ಎಕ್ಸ್-ರೇ ಸೌಲಭ್ಯಕ್ಕಾಗಿ ದಿನಗಟ್ಟಲೆ ಕಾಯುವಂತಾದ ಔರಾದ್ ನಿವಾಸಿ ಆನಂದ ಕರಬಾಳೆ ಎಂಬುವವರು, ಚಿಕಿತ್ಸೆ ಸಿಗದೆ ಮನನೊಂದು ಆತ್ಮ೧ಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆಯು ಆಸ್ಪತ್ರೆಯ ಅವ್ಯವಸ್ಥೆ, ಸಿಬ್ಬಂದಿಯ ಬೇಜವಾಬ್ದಾರಿ ಬಯಲಾಗಿದೆ.
ಬೀದರ್ (ಮಾ.4): ಜಿಲ್ಲೆಯ ಪ್ರತಿಷ್ಠಿತ ಬ್ರಿಮ್ಸ್ (BRIMS) ಆಸ್ಪತ್ರೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಸಣ್ಣ ಸೌಲಭ್ಯವಾದ ಎಕ್ಸ್-ರೇಗಾಗಿ ದಿನಗಟ್ಟಲೆ ಕಾಯುವಂತಾದ ಅಸಹಾಯಕ ರೋಗಿಯೊಬ್ಬರು, ಚಿಕಿತ್ಸೆ ಸಿಗದೆ ಮನನೊಂದು ಆಸ್ಪತ್ರೆಯಲ್ಲೇ ನೇಣು ಬಿಗಿದುಕೊಂಡು ಆತ್ಮ೧ಹತ್ಯೆಗೆ ಯತ್ನಿಸಿದ ಆಘಾತಕಾರಿ ಸುದ್ದಿ ವರದಿಯಾಗಿದೆ.
ಚಿಕಿತ್ಸೆಗೆ ಬಂದಿದ್ದ ಔರಾದ್ ನಿವಾಸಿ
ಆತ್ಮ೧ಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಜಿಲ್ಲೆಯ ಔರಾದ್ ಪಟ್ಟಣದ ನಿವಾಸಿ ಆನಂದ ಕರಬಾಳೆ ಎಂದು ಗುರುತಿಸಲಾಗಿದೆ. ಆರಂಭದಲ್ಲಿ ಇವರು ಔರಾದ್ ತಾಲೂಕಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದರು. ಆದರೆ, ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಇವರನ್ನು ಬೀದರ್ನ ಬ್ರಿಮ್ಸ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು.
ಜವಾಬ್ದಾರಿಯಿಂದ ನುಣುಚಿಕೊಂಡ ಬ್ರಿಮ್ಸ್ ನಿರ್ದೇಶಕಿ
ಆಸ್ಪತ್ರೆಯ ಅವ್ಯವಸ್ಥೆಯಿಂದ ಆಕ್ರೋಶಗೊಂಡ ಆನಂದ ಅವರ ಸಂಬಂಧಿಕರು ಬ್ರಿಮ್ಸ್ ನಿರ್ದೇಶಕಿ ಶಾಂತಲಾ ಕೌಜಲಗಿ ಅವರಿಗೆ ಕರೆ ಮಾಡಿ ವಿಷಯ ತಿಳಿಸಲು ಮುಂದಾದರು. ಆದರೆ, ನಿರ್ದೇಶಕಿ ಸ್ವತಃ ಕರೆ ಸ್ವೀಕರಿಸದೆ ಬೇರೆಯವರಿಂದ ಮಾತನಾಡಿಸಿದ್ದು ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಸ್ಪತ್ರೆಯ ಮುಖ್ಯಸ್ಥರೇ ಸಂಕಷ್ಟದಲ್ಲಿದ್ದವರಿಗೆ ಸರಿಯಾಗಿ ಸ್ಪಂದಿಸದಿರುವುದು ಇಲ್ಲಿನ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ.
ನನಗೂ ಇದಕ್ಕೂ ಸಂಬಂಧವಿಲ್ಲ ಎಂದ ಡಿಹೆಚ್ಓ!
ಈ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿಗಳ (DHO) ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸಹಾಯ ಮಾಡಬೇಕಾದ ಡಿಹೆಚ್ಓ ಅವರು, 'ನನಗೂ ಬ್ರಿಮ್ಸ್ಗೂ ಯಾವುದೇ ಸಂಬಂಧವಿಲ್ಲ' ಎಂಬ ಉಡಾಫೆಯ ಉತ್ತರವನ್ನಷ್ಟೇ ನೀಡಿ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಎಕ್ಸ್-ರೇಗಾಗಿ ಬ್ರಿಮ್ಸ್ನಲ್ಲಿ ರೋಗಿಗಳ ಪರದಾಟ
ಬ್ರಿಮ್ಸ್ ಆಸ್ಪತ್ರೆಯಲ್ಲಿ ಕೇವಲ ಆನಂದ ಮಾತ್ರವಲ್ಲದೆ, ಜಿಲ್ಲೆಯ ವಿವಿಧ ಭಾಗಗಳಿಂದ ಬರುವ ನೂರಾರು ಬಡ ರೋಗಿಗಳು ನಿತ್ಯ ಎಕ್ಸ್-ರೇ ಸೌಲಭ್ಯಕ್ಕಾಗಿ ಗಂಟೆಗಟ್ಟಲೆ ಕಾದು ಸುಸ್ತಾಗುತ್ತಿದ್ದಾರೆ. ದಿನಗಟ್ಟಲೆ ಕಾಯಿಸಿದರೂ ಎಕ್ಸ್-ರೇ ಮಾಡದೆ ಸತಾಯಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಆಸ್ಪತ್ರೆಯ ಸಿಬ್ಬಂದಿಗಳು ರೋಗಿಗಳಿಗೆ ಚಿಕಿತ್ಸೆ ನೀಡುವ ಬದಲು ದರ್ಪ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ದೂರದ ಊರಿನಿಂದ ಬರುವ ಜನರ ಜೊತೆ ಅಮಾನವೀಯವಾಗಿ ನಡೆದುಕೊಳ್ಳುವ ಸಿಬ್ಬಂದಿಗಳು, ಪ್ರಶ್ನಿಸಿದರೆ ಗುಂಡಾವರ್ತನೆ ತೋರುತ್ತಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ
ಈ ತಕ್ಷಣವೇ ಬ್ರಿಮ್ಸ್ನ ಬೇಜವಾಬ್ದಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಬಡ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಜಿಲ್ಲೆಯ ಜನತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.


