ಬೆಂಗಳೂರು: ಮೆದುಳು ನಿಷ್ಕ್ರಿಯಗೊಂಡಿದ್ದ ಮಗನ ಅಂಗಾಂಗ ದಾನ ಮಾಡಿದ ಪೋಷಕರು
ತರುಣ್ ನಮ್ಮ ಶಕ್ತಿಯ ಮೂಲವಾಗಿದ್ದ. ಅವನ ಹಠಾತ್ ನಿಧನ ನಮ್ಮ ಕುಟುಂಬದ ಮೇಲೆ ಭಾರೀ ಪರಿಣಾಮ ಉಂಟು ಮಾಡಿದೆ. ಮತ್ತೊಬ್ಬರಲ್ಲಿ ಮಗ ಜೀವಂತವಾಗಿರಲಿ ಎಂಬ ಕಾರಣದಿಂದ ಅಂಗಾಂಗ ದಾನ ಮಾಡಲು ತೀರ್ಮಾನಿಸಲಾಯಿತು: ಮೃತ ತರುಣ್ ತಂದೆ ಚಾಲಚಂದ್ರ
![Parents who Donated the Organs of their Brain Dead Son in Bengaluru grg Parents who Donated the Organs of their Brain Dead Son in Bengaluru grg](https://static-ai.asianetnews.com/images/01hjpzx0139wkmf4hpnbz6xvjh/3839100227bng-426-27122023-1_363x203xt.jpg)
ಬೆಂಗಳೂರು(ಡಿ.28): ಗಾರೆ ಕೆಲಸದ ಸಹಾಯಕರಾಗಿದ್ದ 18 ವರ್ಷದ ಮಗನ ಅಂಗಾಂಗಗಳನ್ನು ಪೋಷಕರು ದಾನಮಾಡಿ ಸಾರ್ಥಕತೆ ಮೆರೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪುರದಮಾತ ಗ್ರಾಮ ಮೂಲದ ತರುಣ್ ಬಾಲಚಂದ್ರನ್ ನಗರದ ಕೆಂಗೇರಿ ಬಳಿಯ ನಿರ್ಮಾಣ ಹಂತದಲ್ಲಿರುವ ಕಟ್ಟಡದ 2ನೇ ಮಹಡಿಯಿಂದ ಡಿ.19ರಂದು ಆಯತಪ್ಪಿ ಬಿದ್ದಿದ್ದ ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗಾಗಿ ಹತ್ತಿರದ ಗ್ಲೆನಿಗಲ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ತಿಳಿಸಿದ್ದರು.
ಗಾರೆ ಕೆಲಸದ ಸಹಾಯಕರಾಗಿ ಕೆಲಸ ಮಾಡುವ ಬಾಲಚಂದ್ರ ಹಾಗೂ ಲತಾ ದಂಪತಿ ತಮ್ಮ ಮಗನ ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದರು.
ಕಂದನ ಸಾವಲ್ಲೂ ಸಾರ್ಥಕತೆ: 39 ದಿನಗಳ ಕಂದನ ಅಂಗಾಗ ದಾನ ಮಾಡಿದ ದಂಪತಿಗೆ ಪ್ರಧಾನಿ ಶ್ಲಾಘನೆ
ಮೃತ ತರುಣ್ ತಂದೆ ಚಾಲಚಂದ್ರ ಮಾತನಾಡಿ, ತರುಣ್ ನಮ್ಮ ಶಕ್ತಿಯ ಮೂಲವಾಗಿದ್ದ. ಅವನ ಹಠಾತ್ ನಿಧನ ನಮ್ಮ ಕುಟುಂಬದ ಮೇಲೆ ಭಾರೀ ಪರಿಣಾಮ ಉಂಟು ಮಾಡಿದೆ. ಮತ್ತೊಬ್ಬರಲ್ಲಿ ಮಗ ಜೀವಂತವಾಗಿರಲಿ ಎಂಬ ಕಾರಣದಿಂದ ಅಂಗಾಂಗ ದಾನ ಮಾಡಲು ತೀರ್ಮಾನಿಸಲಾಯಿತು ಎಂದು ತಿಳಿಸಿದ್ದಾರೆ.
ದಾನಿಯ ಮೂತ್ರಪಿಂಡಗಳನ್ನು 39 ಮತ್ತು 33 ವರ್ಷದ ಪುರುಷ ರೋಗಿಗಳಿಗೆ ಕಸಿ ಮಾಡಲಾಯಿತು. ಯಕೃತ್ ಅನ್ನು 35 ವರ್ಷದ ಪುರುಷ ಮತ್ತು ಹೃದಯವನ್ನು 49 ವರ್ಷದ ಪುರುಷ ರೋಗಿಗೆ ಯಶಸ್ವಿಯಾಗಿ ಕಸಿ ಮಾಡಲಾಯಿತು ಎಂದು ಆಸ್ಪತ್ರೆಯ ಮುಖ್ಯ ಆಪ್ತ ಸಮಾಲೋಚಕಿ ಮತ್ತು ಕಸಿ ವಿಭಾಗದ ಹಿರಿಯ ಸಮನ್ವಯಾಧಿಕಾರಿ ಸರಳಾ ಅನಂತರಾಜ್ ತಿಳಿಸಿದ್ದಾರೆ.