Asianet Suvarna News Asianet Suvarna News

ಕಂದನ ಸಾವಲ್ಲೂ ಸಾರ್ಥಕತೆ: 39 ದಿನಗಳ ಕಂದನ ಅಂಗಾಗ ದಾನ ಮಾಡಿದ ದಂಪತಿಗೆ ಪ್ರಧಾನಿ ಶ್ಲಾಘನೆ

ಗಂಭೀರ ಕಾಯಿಲೆಯ ಕಾರಣಕ್ಕೆ ಮಗುವನ್ನು ಕಳೆದುಕೊಂಡಿದ್ದ ಅಮೃತ್‌ಸರದ ದಂಪತಿ ತಮ್ಮ ನೋವಿನ ನಡುವೆಯೂ 39 ದಿನಗಳ  ತಮ್ಮ ಮಗುವಿನ ಅಂಗಾಗ ದಾನ ಮಾಡುವ ಮೂಲಕ  ತಮ್ಮ ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ದಂಪತಿಯ ಕಾರ್ಯವನ್ನು ಪ್ರಧಾನಿ ಶ್ಲಾಘಿಸಿದ್ದಾರೆ.

PM praises Amritsar couple who donated the organ of their 39 year old baby akb
Author
First Published Mar 31, 2023, 3:04 PM IST

ನವದೆಹಲಿ: ಗಂಭೀರ ಕಾಯಿಲೆಯ ಕಾರಣಕ್ಕೆ ಮಗುವನ್ನು ಕಳೆದುಕೊಂಡಿದ್ದ ಅಮೃತ್‌ಸರದ ದಂಪತಿ ತಮ್ಮ ನೋವಿನ ನಡುವೆಯೂ 39 ದಿನಗಳ  ತಮ್ಮ ಮಗುವಿನ ಅಂಗಾಗ ದಾನ ಮಾಡುವ ಮೂಲಕ  ತಮ್ಮ ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ದಂಪತಿಗಳ ಈ ಮಾನವೀಯ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮನ್‌ ಕೀ ಬಾತ್‌ನಲ್ಲಿ ಕೊಂಡಾಡಿದ್ದಾರೆ. ಜೊತೆಗೆ ಅಂಗಾಂಗ ದಾನದ ಮಹತ್ವದ ಬಗ್ಗೆ ದೇಶದ ಜನರಿಗೆ ತಿಳಿಸಿದ್ದಾರೆ. ಹೀಗೆ ತಮ್ಮ ಮಗಳ ಕಿಡ್ನಿ ದಾನದ ಮೂಲಕ ಇನ್ನೊಂದು ಎಳೆಯ ಜೀವವನ್ನು ಉಳಿಸಿದರುವುದಕ್ಕೆ ದಂಪತಿಯನ್ನು ಶ್ಲಾಘಿಸಿದ ಪ್ರಧಾನಿ  ಈ ದಂಪತಿಯನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ. 

39 ದಿನದ ಹೆಣ್ಣು ಮಗುವಿನ ತಂದೆ ಸುಖ್ಬೀರ್ ಸಿಂಗ್ ಸಂಧು (Sukhbir Singh Sandhu) ಅವರು ಪಂಜಾಬ್‌ನಲ್ಲಿ ಸರ್ಕಾರಿ (Punjab government) ಕೃಷಿ ಅಭಿವೃದ್ಧಿ (agriculture development officer) ಅಧಿಕಾರಿಯಾಗಿದ್ದು, ಇವರ ಪತ್ನಿ ಆಕ್ಟೋಬರ್ 2020ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.  ಆಕೆಗೆ ಅಬಾದತ್ ಕೌರ್ ಎಂದು ದಂಪತಿ ಹೆಸರಿಟ್ಟಿದ್ದರು.  ಹುಟ್ಟುವಾಗ ಆರೋಗ್ಯವಾಗಿಯೇ ಇದ್ದ ಮಗುವಿಗೆ ಕ್ರಮೇಣ Vein of Galen Malformation ಎಂಬ ಮರಣಾಂತಿಕ ಕಾಯಿಲೆ ಬಂದಿದೆ. ಈ ಕಾಯಿಲೆಯ ಪರಿಣಾಮ ಆಮ್ಲಜನಕದಿಂದ ತುಂಬಿದ ರಕ್ತವು ನೇರವಾಗಿ ಅಭಿಧಮನಿಯ ಮೂಲಕ ಹರಿಯುತ್ತದೆ ಆದರೆ ಮೆದುಳಿಗೆ ಹೋಗುವ ಬದಲು, ಸುತ್ತಮುತ್ತಲಿನ ಮೆದುಳಿನ ಅಂಗಾಂಶಗಳಿಗೆ  ರಕ್ತವನ್ನು ತಲುಪಿಸುತ್ತದೆ. ಇದು ಮೆದುಳಿನ ಮೇಲೆ ಒತ್ತಡವನ್ನು ಉಂಟು ಮಾಡುವುದಲ್ಲದೇ ರಕ್ತ ಕಟ್ಟಿ ಹೃದಯ ಸ್ಥಂಭನಕ್ಕೆ ಅಥವಾ ಶ್ವಾಸಕೋಶದ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. 

ಅಂಗಾಂಗ ದಾನ ಮಾಡಿ: 99ನೇ ಮನ್‌ ಕೀ ಬಾತ್‌ ಭಾಷಣದಲ್ಲಿ ಜನತೆಗೆ ಮೋದಿ ಕರೆ

ಕೇವಲ 24 ದಿನಗಳಿದ್ದಾಗಲೇ ಅಬಾದತ್‌ಗೆ ಹೃದಯಘಾತವಾಗಿದ್ದು,  ಆಕೆಯನ್ನು ಚಂಡೀಗಢದ (Chandigarh) PGIMERಗೆ ದಾಖಲಿಸುವಂತೆ ಸೂಚಿಸಲಾಗಿತ್ತು. ಆದರೆ ಅದಾಗಿ 39ನೇ ದಿನಕ್ಕೆ  ಅಬಾದತ್‌ಗೆ ಮತ್ತೆ ಹೃದಯಾಘಾತವಾಗಿದ್ದು ಆಕೆ ಸಾವನ್ನಪ್ಪಿದ್ದಾಳೆ.  ಇದು ಪೋಷಕರಿಗೆ ಆಘಾತವನ್ನುಂಟು ಮಾಡಿತ್ತು. ಆದರೂ ಆಘಾತದಿಂದ ಚೇತರಿಸಿಕೊಂಡ ಅವರು ಮಗುವಿನ ಅಂಗಾಂಗ ದಾನಕ್ಕೆ ಮುಂದಾದರು.  ಇದರಿಂದ ಇತರ ಮಕ್ಕಳಿಗೆ ಸಹಾಯವಾಗಬಹುದು ಎಂದು ಅವರು ಭಾವಿಸಿದರು.  ಬಹಳ ಎಳೆಯ ಮಗುವಾಗಿದ್ದರಿಂದ ಕಿಡ್ನಿ ಮಾತ್ರ ದಾನ ಮಾಡಲು ಸಾಧ್ಯವಾಗಿತ್ತು. 

ಅಬಾದತ್ ಅವರ ಮರಣದ ನಂತರ, ನಾವು ಅವಳ ಅಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದೇವೆ. ಕುಟುಂಬದ ಯಾವ ಸದಸ್ಯರು ನಮ್ಮ ನಿರ್ಧಾರವನ್ನು ವಿರೋಧಿಸಲಿಲ್ಲ ಬದಲಿಗೆ ಅವರು ನಮಗೆ ಬೆಂಬಲ ನೀಡಿದರು. ನಮ್ಮ ಪುಟ್ಟ ಹೆಣ್ಣು ಮಗು ಇನ್ನೊಬ್ಬ ವ್ಯಕ್ತಿಯ ಜೀವ ಉಳಿಸಲು ಸಾಧ್ಯವಾಗಿದೆ ಎಂದು ನಾವು ಹೆಮ್ಮೆಪಡುತ್ತೇವೆ ಎಂದು ಆಕೆಯ ಪೋಷಕರು ಅಂಗಾಂಗ ದಾನ ಮಾಡಿದ ಸಂದರ್ಭದಲ್ಲಿ ಹೇಳಿಕೊಂಡಿದ್ದರು. 

Udupi: ರಸ್ತೆ ಅಪಘಾತಗೊಂಡು, ಮೆದುಳು ನಿಷ್ಕ್ರೀಯ ಬಳಿಕ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

ನವೆಂಬರ್ 2020ರಲ್ಲಿ,  ಪಿಜಿಐಎಂಇಆರ್‌ (PGIMER) ಆಸ್ಪತ್ರೆಯ  ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ ಆಶಿಶ್ ಶರ್ಮಾ  ಅವರು, ಅಬಾದತ್ ಹೇಗೆ 15 ವರ್ಷದ ಬಾಲಕನ ಜೀವ ಉಳಿಸಿದರು ಎಂದು ಹೇಳಿಕೊಂಡಿದ್ದಾರೆ.  ಅಬಾದತ್ ಅಲ್ಲದೇ ಅಮೃತ್‌ಸರ್‌ನ (Amritsar) ಈ ದಂಪತಿಗೆ 5 ವರ್ಷದ ಮಗನಿದ್ದಾನೆ.  ದಂಪತಿಯ ಈ ಕಾರ್ಯವನ್ನು ಶ್ಲಾಘಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ್ದರು.  ನಮಗೆ ಕರೆ ಮಾಡಿದ ಪ್ರಧಾನಿ 15 ನಿಮಿಷಗಳ ಕಾಲ ಮಾತನಾಡಿದರು.  ನಾವು ಗುರು ಹೇಳಿಕೊಟ್ಟ ಮಾರ್ಗವನ್ನು ಅನುಸರಿಸುತ್ತಿರುವುದರಿಂದ ನಿಮ್ಮ ಕುಟುಂಬದ ಬಗ್ಗೆ ಬಹಳ ಹೆಮ್ಮೆ ಇದೆ ಎಂದು ಪ್ರಧಾನಿ ನಮಗೆ ತಿಳಿಸಿದರು ಎಂದು ದಂಪತಿ ಹೇಳಿಕೊಂಡಿದ್ದರು.

ಅಂಗಾಗ ದಾನದ ಬಗ್ಗೆ ಅನೇಕರಿಗೆ ಅರಿವಿಲ್ಲ. ಅರಿವುಗಳಿದ್ದರೂ ಕೆಲವರು ಕೆಲ ನಂಬಿಕೆಗಳ ಕಾರಣಕ್ಕೆ ಅಂಗಾಂಗ ದಾನ ಮಾಡುವುದಿಲ್ಲ.  ಆದರೆ ಅಂಗಾಂಗ ದಾನದಿಂದ ಹಲವು ಅಮೂಲ್ಯ ಜೀವಗಳು ಹೊಸ ಬದುಕನ್ನು ಪಡೆದುಕೊಳ್ಳುತ್ತವೆ. 

Follow Us:
Download App:
  • android
  • ios