ಬೆಲೆ ಕುಸಿತ: 4 ಕ್ವಿಂಟಲ್ ಈರುಳ್ಳಿ ಮಾರಿದ ರೈತನಿಗೆ ಸಿಕ್ಕಿದ್ದು ಕೇವಲ 8 ರು...!
ರೈತರಿಗೆ ದಿಢೀರ್ ಬೆಲೆ ಕುಸಿತದಿಂದ ಬರಸಿಡಿಲು ಬಡಿದಂತಾಗಿದೆ.
ಗದಗ(ನ.29): ಹೊಲ ಹರಗಿ, ಹದ ಮಾಡಿ, ಬೀಜ, ಗೊಬ್ಬರ ಹಾಕಿ ವರ್ಷ ಪೂರ್ತಿ ದುಡಿದು ಬೆಳೆದ ಈರುಳ್ಳಿಯನ್ನು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಬೇಕು ಎಂದ ರೈತರಿಗೆ ದಿಢೀರ್ ಬೆಲೆ ಕುಸಿತದಿಂದ ಬರಸಿಡಿಲು ಬಡಿದಂತಾಗಿದೆ.
ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ರೈತ ಪವಾಡೆಪ್ಪ ಹಳ್ಳಿಕೇರಿ ಎಂಬುವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ 4 ಕ್ವಿಂಟಲ್ ಈರುಳ್ಳಿಯನ್ನು ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ತಂದಿದ್ದರು. ಈರುಳ್ಳಿ ಬೆಲೆ ದಿಢೀರ್ ಕುಸಿತ ಕಂಡಿದ್ದು, 1 ಕ್ವಿಂಟಲ್ಗೆ 100 ರು.ನಂತೆ ಮಾರಾಟವಾಯಿತು. ಹೀಗಾಗಿ, 4 ಕ್ವಿಂಟಲ್ಗೆ (4 ಕ್ವಿಂಟಲ್ 10 ಕೆಜಿ) ಒಟ್ಟು 410 ರು.ಬಿಲ್ ಆಗಿದೆ. ಲಾರಿ ಬಾಡಿಗೆ 377 ರು., ಹಮಾಲಿ ಖರ್ಚು 24 ರು. ಇವೆಲ್ಲಾ ಕಳೆದು ಪವಾಡೆಪ್ಪ ಅವರಿಗೆ ದೊರೆತ ಹಣ ಕೇವಲ 8 ರೂಪಾಯಿ 36 ಪೈಸೆ. ಸರ್ಕಾರ ಮಧ್ಯ ಪ್ರವೇಶಿಸಿ ಈರುಳ್ಳಿಗೆ ಸೂಕ್ತ ಬೆಲೆ ನಿಗದಿ ಪಡಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಸಿ.ಟಿ. ರವಿ ಅವರದ್ದು ವಿನಾಶಕಾರಿ ಬುದ್ಧಿ: ಸಲೀಮ್ ಅಹ್ಮದ್ ಹೇಳಿಕೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ.ಎಚ್.ಬಾಬರಿ, ರೈತರು ಸಾಲ ಮಾಡಿ ಸಾವಿರಾರು ರೂ.ಖರ್ಚು ಮಾಡಿ ಈರುಳ್ಳಿ ಬೆಳೆಯುತ್ತಾರೆ. ಮಾಡಿದ ಖರ್ಚು ಸಹ ಮರಳಿ ಬಾರದಂತಾಗಿದೆ. ಈ ಬಗ್ಗೆ ಸರ್ಕಾರ ಮಧ್ಯ ಪ್ರವೇಶಿಸಿ ಈರುಳ್ಳಿಗೆ ಸೂಕ್ತ ಬೆಲೆ ನಿಗದಿ ಪಡಿಸಬೇಕು. ರೈತರ ಹಿತ ಕಾಯಬೇಕು ಎಂದು ಒತ್ತಾಯಿಸಿದ್ದಾರೆ.