Asianet Suvarna News Asianet Suvarna News

ಕಾರವಾರ: ನೇವಿ ಅಧಿಕಾರಿಗಳು ಮೀನುಗಾರರನ್ನು ಟೆರರಿಸ್ಟ್‌ಗಳಂತೆ ನೋಡ್ತಾರೆ, ಮೀನುಗಾರರ ಆರೋಪ

ಮೀನುಗಾರರ ಮೇಲೆ ನಾವು ಯಾವುದೇ ದೌರ್ಜನ್ಯ ನಡೆಸಿಲ್ಲ ಎಂದು ನೇವಿ ಅಧಿಕಾರಿಗಳು ಹೇಳಿದ್ರೆ, ಮೀನುಗಾರರು ಮಾತ್ರ ನಮ್ಮನ್ನು ಟೆರರಿಸ್ಟ್‌ಗಳಂತೆ ನೋಡುತ್ತಾರೆ ಎಂದು ಆರೋಪಿಸಿದ್ದಾರೆ. 

Navy Officials See Fishermen as Terrorists Says Fishermen grg
Author
First Published Feb 1, 2023, 1:30 AM IST

ಭರತ್‌ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ(ಫೆ.01): ದೇಶದ ರಕ್ಷಣೆಗಾಗಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಏಷ್ಯಾದಲ್ಲೇ ಅತೀ ದೊಡ್ಡ ನೌಕಾನೆಲೆಯನ್ನು ನಿರ್ಮಿಸಲಾಗಿದೆ. ಈ ನೌಕಾನೆಲೆಗಾಗಿ ಸಾವಿರಾರು ರೈತರು, ಮೀನುಗಾರರು ತಮ್ಮ ಜಮೀನು, ಮನೆಗಳನ್ನು ಬಿಟ್ಟುಕೊಟ್ಟಿದ್ದರು. ಆದರೆ, ಇಂತಹ ಮೀನುಗಾರರ ಮೇಲೆ ಸಮುದ್ರದಲ್ಲಿ ನೇವಿ ಅಧಿಕಾರಿ ಹಾಗೂ ಸಿಬ್ಬಂದಿ ದೌರ್ಜನ್ಯ ನಡೆಸಿರುವುದು ಮಾತ್ರ ತಪ್ಪಿಲ್ಲ. ಮೀನುಗಾರರ ಮೇಲೆ ನಾವು ಯಾವುದೇ ದೌರ್ಜನ್ಯ ನಡೆಸಿಲ್ಲ ಎಂದು ನೇವಿ ಅಧಿಕಾರಿಗಳು ಹೇಳಿದ್ರೆ, ಮೀನುಗಾರರು ಮಾತ್ರ ನಮ್ಮನ್ನು ಟೆರರಿಸ್ಟ್‌ಗಳಂತೆ ನೋಡುತ್ತಾರೆ ಎಂದು ಆರೋಪಿಸಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ...

ಹೌದು, ದೇಶದ ಸುರಕ್ಷತೆಗಾಗಿ ಉತ್ತರಕನ್ನಡ‌ ಜಿಲ್ಲೆಯ ಕಾರವಾರದ ಅರಗಾದಲ್ಲಿ ಬೃಹತ್ ಕದಂಬ ನೌಕಾನೆಲೆಯನ್ನು ನಿರ್ಮಿಸಲಾಗಿದೆ. ಪ್ರಸ್ತುತ ಇದು ಏಷ್ಯಾದಲ್ಲೇ ಬೃಹತ್ ನೌಕಾನೆಲೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ನೌಕಾನೆಲೆಯನ್ನು ಪ್ರಪಂಚದಲ್ಲೇ ದೊಡ್ಡ ನೌಕಾನೆಲೆ ಮಾಡೋ ಯೋಚನೆ ಕೇಂದ್ರ ಸರಕಾರ ಹಾಗೂ ನೇವಿ ವಿಭಾಗಕ್ಕಿದೆ. ಈ ಹಿಂದೆ ನೌಕಾನೆಲೆ ನಿರ್ಮಾಣವಾದಾಗ ಇದಕ್ಕೆ ಬೇಕಾದ ಜಮೀನು ಹಾಗೂ ಮನೆಗಳನ್ನು ಬಿಟ್ಟುಕೊಟ್ಟಿದ್ದವರು ಮೀನುಗಾರರು ಹಾಗೂ ರೈತರು. ಮುಂದೆಯೂ ಸಾಕಷ್ಟು ಜಾಗಗಳು ಈ ಯೋಜನೆಗಾಗಿ ಬಿಟ್ಟುಕೊಡಬೇಕಾದ ಅನಿವಾರ್ಯತೆ ಎದುರಾಗಬಹುದು. ಆದರೆ, ನೌಕಾನೆಲೆಗಾಗಿ ತಮ್ಮ ಜಾಗ ಬಿಟ್ಟುಕೊಟ್ಟ ಮೀನುಗಾರರ ಮೇಲೆಯೇ ನೌಕಾನೆಲೆಯ ಸಿಬ್ಬಂದಿ ದೌರ್ಜನ್ಯ ಎಸಗಿದ ಹಲವು ನಿದರ್ಶನಗಳಿದ್ದು, ಇದು ಪದೇ ಪದೇ ಮುಂದುವರಿಯುತ್ತಿದೆ‌‌. ನೇವಿ ಅಧಿಕಾರಿಗಳು ಮಾತ್ರ ಇದಕ್ಕೆ ವಿರುದ್ಧವಾಗಿ ಹೇಳಿಕೆ ನೀಡುವುದರಿಂದ ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Uttara Kannada: ಚಕ್ಕಡಿಯ ಚಕ್ರ ಮೈಮೇಲೆ ಹರಿದು ಯುವಕ ಸಾವು

ನೇವಿ ಅಧಿಕಾರಿಗಳು ಇದೀಗ ರಾಜಕೀಯದವಂತೆ ನಡೆಯುತ್ತಿದ್ದು, ಮಾಧ್ಯಮದ ಮುಂದೆ ಸುಳ್ಳು ಹೇಳ್ತಾರೆ. 2021ರಲ್ಲಿ ಆದಿಶಕ್ತಿ ಬೋಟ್ ಬೈತ್‌ಕೋಲ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದಾಗ ಸಮುದ್ರದ ಅಲೆಗಳ ಹೊಡೆತಕ್ಕೆ ಬೋಟ್ ನೇವಿ ವ್ಯಾಪ್ತಿಗೆ ಬಂದಿತ್ತು. ಈ ಕಾರಣಕ್ಕೆ ಬೋಟ್‌ನಲ್ಲಿದ್ದ 9 ಮಂದಿ ಮೀನುಗಾರರ ಮೇಲೆ ಹಲ್ಲೆ ನಡೆಸಿದ್ದು, ಅವರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನೇವಿ ಸಿಬ್ಬಂದಿ ವಿರುದ್ಧ ದೂರು ನೀಡಿದರೂ ಮತ್ತೆ ಯಾರು ಕೋರ್ಟ್ ಅಲೆದಾಡುವುದು ಎಂದು ಮೀನುಗಾರರು ಹಿಂಜರಿಯುತ್ತಾರೆ. ಸಮುದ್ರದ ಅಲೆಯ ಏಟಿಗೆ ಅವರ ವ್ಯಾಪ್ತಿಯ ಬಳಿ ಹೋದಂತೆ ಎಕೆ-47 ಗನ್ ಹಿಡಿದುಕೊಂಡು ಕೆಟ್ಟದಾಗಿ ಬೈಯುತ್ತಾರೆ. ಅವರು ಏನೂ ತೊಂದರೆ ಮಾಡಿಲ್ಲವೆಂದು ಮೀನುಗಾರರ ಯೂನಿಯನ್ ಎದುರಲ್ಲಿ ಎದೆತಟ್ಟಿ ಹೇಳಲಿ. ಜಿಲ್ಲಾಡಳಿತಕ್ಕೂ ಸಾವಿರ ಬಾರಿ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರಕಾರ, ಜಿಲ್ಲಾಡಳಿತ ಹಾಗೂ ನೇವಿಯಿಂದ ಮೀನುಗಾರರಿಗೆ ಯಾವುದೇ ಸ್ಪಂದನೆಯಿಲ್ಲ. ಮೀನುಗಾರರನ್ನು ಇವರು ಉಗ್ರವಾದಿಗಳಂತೆ ನೋಡುತ್ತಾರೆ ಎಂದು ಮೀನುಗಾರ ಮುಖಂಡ ವಿನಾಯಕ ಹರಿಕಾಂತ್ ಅಸಾಮಧಾನ ವ್ಯಕ್ತಪಡಿಸಿದ್ದಾರೆ. 

ಮೀನುಗಾರರ ಆರೋಪಕ್ಕೆ ಸ್ಪಷ್ಟನೆ ನೀಡಿರುವ ನೌಕಾನೆಲೆಯ ಉನ್ನತಾಧಿಕಾರಿಗಳು, ನೇವಿಯಿಂದ ಮೀನುಗಾರರಿಗೆ ಯಾವುದೇ ತೊಂದರೆಗಳಾಗುತ್ತಿಲ್ಲ ಎಂದು ಹೇಳಿದ್ದಾರೆ. ಸಮುದ್ರದಲ್ಲಿ ನೇವಿಯ ಚಟುವಟಿಕೆಗಳು ನಡೆಯುತ್ತಿವೆ. ಮುಂಬೈನಲ್ಲಿ ಮೀನುಗಾರರ ವೇಷದಲ್ಲಿ ಉಗ್ರಗಾಮಿಗಳು ಬಂದಂತೆ ಇಲ್ಲಿ ನಡೆಯಬಾರದು ಅನ್ನೋದು ನಮ್ಮ ಉದ್ದೇಶ. ಕೋಸ್ಟಲ್ ಭದ್ರತೆ ನಮ್ಮ ಆದ್ಯ ಕರ್ತವ್ಯ. ಮೀನುಗಾರರಿಗೆ ನಾವು ಯಾವುದೇ ತೊಂದರೆ ಕೊಡೋದಿಲ್ಲ. ತನಿಖೆ ಮಾಡುವಾಗಲೂ ನಾವು ವಿಡಿಯೋ ಮಾಡುವುದರಿಂದ ದಾಖಲೆಗಳನ್ನು ಹೊಂದಿದ್ದೇವೆ. ಅವರಿಗೆ ನಮ್ಮಿಂದ ತೊಂದರೆಯಾಗೋದು ಸತ್ಯಕ್ಕೆ ದೂರವಾದ ಮಾತು. ಮೀನುಗಾರರು ನಮ್ಮ ಕಣ್ಣು ಹಾಗೂ ಕಿವಿಯಿದ್ದಂತೇ. 

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ವನ್ಯಜೀವಿ ಮಂಡಳಿ ಅಸ್ತು

ಯಾವುದೇ ತಪ್ಪು ಕೆಲಸ ಕಂಡುಬಂದಲ್ಲಿ ಬಯೋಮೆಟ್ರಿಕ್ ಸಿಸ್ಟಮ್ ಮೂಲಕ ಪರೀಕ್ಷೆ ನಡೆಸುತ್ತೇವೆ. ಕೆಲವೊಮ್ಮೆ ಸಣ್ಣಪುಟ್ಟ ಸಮಸ್ಯೆಗಳಾಗುವುದು ಸಹಜ. ಅದನ್ನೇನು ಮಾಡಲಾಗಲ್ಲ. ನಮ್ಮ ಕುಟುಂಬ ಮೀನುಗಾರರ ಕುಟುಂಬ ಕಾರವಾರದಲ್ಲೇ ಇರೋದು. ಜನರ ಹಾಗೂ ದೇಶದ ಸುರಕ್ಷತೆ ನಮ್ಮ ಆದ್ಯ ಕರ್ತವ್ಯ ಎಂದು ಹೇಳ್ತಾರೆ ಕಾರವಾರ ಕದಂಬ ನೌಕಾನೆಲೆ ಕರ್ನಾಟಕ ನೌಕಾ ಪ್ರದೇಶದ ಫ್ಲಾಗ್ ಆಫೀಸರ್ ಅತುಲ್ ಆನಂದ್ ತಿಳಿಸಿದ್ದಾರೆ.  

ಒಟ್ಟಿನಲ್ಲಿ ನೌಕಾನೆಲೆ ಸಿಬ್ಬಂದಿಯಿಂದ ಮೀನುಗಾರರ ಮೇಲೆ ಪದೇ ಪದೇ ದೌರ್ಜನ್ಯ ಎಸೆಯಲಾಗುತ್ತಿದೆ ಎಂದು ಮೀನುಗಾರರು ಆರೋಪಿಸಿದ್ರೆ, ನೌಕಾನೆಲೆ ಅಧಿಕಾರಿಗಳು ಮಾತ್ರ ನಮ್ಮದೇನೂ ತಪ್ಪಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಸರಕಾರ ತನಿಖೆ ನಡೆಸಬೇಕಲ್ಲದೇ, ಸ್ಥಳೀಯ ಮೀನುಗಾರರ ಜತೆ ಕೊಂಚ ಶಾಂತ ರೀತಿಯಲ್ಲಿ ನೌಕಾನೆಲೆ ಸಿಬ್ಬಂದಿ ವರ್ತಿಸಲು ಪಾಠ ಹೇಳಬೇಕಾಗಿರುವುದಂತೂ ಸತ್ಯ.

Follow Us:
Download App:
  • android
  • ios