ವ್ಯಾಪಕ ಮಳೆಯಿಂದ ಗುಡ್ಡ ಕುಸಿದು ರಸ್ತೆ ಕೊಚ್ಚಿ ಹೋಗಿದ್ದ ಪರಿಣಾಮ  ರಸ್ತೆ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿ ಬರೋಬ್ಬರಿ 3 ತಿಂಗಳ ಬಳಿಕ ತೆರವು

ಚಿಕ್ಕಬಳ್ಳಾಪುರ(ಡಿ.01): ವ್ಯಾಪಕ ಮಳೆಯಿಂದ ಗುಡ್ಡ ಕುಸಿದು ರಸ್ತೆ (Road) ಕೊಚ್ಚಿ ಹೋಗಿದ್ದ ಪರಿಣಾಮ ರಸ್ತೆ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿ ಬರೋಬ್ಬರಿ 3 ತಿಂಗಳ ಬಳಿಕ ತೆರವುಗೊಂಡಿದ್ದು, ಜಿಲ್ಲೆಯ ವಿಶ್ವ ವಿಖ್ಯಾತ ನಂದಿ ಗಿರಿಧಾಮ ( Nandi hill ) ಡಿಸೆಂಬರ್‌ 1ರಿಂದ ಪ್ರವಾಸಿಗರ ಪ್ರವೇಶಕ್ಕೆ ಮುಕ್ತವಾಗಲಿದೆ. ಕಳೆದ ಆಗಸ್ವ್‌ ತಿಂಗಳಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ನಂದಿ ಗಿರಿಧಾಮದಲ್ಲಿ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದು ರಸ್ತೆ ಕೋಚ್ಚಿ ಹೋಗಿತ್ತು. ಇದರಿಂದಾಗಿ ನಂದಿಗಿರಿಧಾಮದ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಸುಮಾರು 80 ಲಕ್ಷ ರು.ಗಳ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಸತತ ಒಂದೂವರೆ ತಿಂಗಳ ಕಾಲ ಕಾಮಗಾರಿ ನಡೆಸಿದ್ದು ಈಗ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಆರ್‌.ಲತಾ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ರಸ್ತೆ ಕಾಮಗಾರಿ : ದುರಸ್ತಿ ಮಾಡಿರುವ ನಂದಿ ಗಿರಿಧಾಮದ ರಸ್ತೆ ಹಾಗೂ ಸೇತುವೆಯನ್ನು(Bridge) ಅಧಿಕಾರಿಗಳೊಂದಿಗೆ ಮಂಗಳವಾರ ಪರಿವೀಕ್ಷಣೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ (DC), ಆದ್ಯತೆಯ ಮೇಲೆ ಈ ರಸ್ತೆ ದುರಸ್ತಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದು, ಡಿ.1 ರಿಂದ ನಂದಿ ಗಿರಿಧಾಮ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಲಿದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (SP) ಜಿ.ಕೆ.ಮಿಥುನ್‌ ಕುಮಾರ್‌ ಮಾತನಾಡಿ, ಈ ಹಿಂದೆ ನಂದಿ ಗಿರಿಧಾಮದಲ್ಲಿ ಜಾರಿಯಲ್ಲಿದ್ದ ಪೊಲೀಸ್‌ ಗಸ್ತನ್ನು ಡಿ.1 ರಿಂದ ಮುಂದುವರೆಸಲಾಗುವುದು. ವಾರದ ಎಲ್ಲ ದಿನಗಳಲ್ಲಿಯೂ ಪೊಲೀಸ್‌ ಬಂದೋಬಸ್ತ್ ಇರಲಿದೆ. ಕೋವಿಡ್‌ ಮಾರ್ಗಸೂಚಿ (Covid Norms) ಉಲ್ಲಂಘಿಸುವವರಿಗೆ ದಂಡ ವಿಧಿಸಸಲಾಗುವುದು. ಗಿರಿಧಾಮದ ತಪ್ಪಲಿನ ಪ್ರವೇಶ ದ್ವಾರದಲ್ಲಿಯೂ ಈ ಹಿಂದಿನಂತೆ ವಾಹನಗಳ ತಪಾಸಣೆ ನಡೆಯಲಿದೆ. ಗಿರಿ ಧಾಮದ ಪ್ರವೇಶಕ್ಕೆ (Entry) ಸರ್ಕಾರ (Karnataka Govt) ನೀಡಿರುವ ಎಲ್ಲಾ ನೀತಿ ನಿಯಮಗಳನ್ನು ಪೊಲೀಸ್‌ ಇಲಾಖೆ (Police Department) ಕಟ್ಟು ನಿಟ್ಟಾಗಿ ಜಾರಿಗೊಳಿಸಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ (Tahasildra) ಗಣಪತಿ ಶಾಸ್ತ್ರಿ, ಲೋಕೋಪಯೋಗಿ ಇಲಾಖೆಯ ಕಾರ್ಯ ಪಾಲಕ ಅಭಿಯಂತರ ತಿಮ್ಮ ರಾಯಪ್ಪ, ನಂದಿ ಗಿರಿಧಾಮದ ವಿಶೇಷ ಅಧಿಕಾರಿ ಗೋಪಾಲ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

ವಾರಾಂತ್ಯದಲ್ಲಿ ಪ್ರವಾಸಿಗರಿಗೆ ನಿರ್ಬಂಧ

ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಗಿರಿ ಧಾಮದ ಪ್ರವೇಶಕ್ಕೆ ಪ್ರವಾಸಿಗರ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ, ವಾರಾಂತ್ಯದ (weekends) ಶನಿವಾರ ಮತ್ತು ಭಾನುವಾರದ ದಿನಗಳಂದು ಸಾರ್ವಜನಿಕರ ಮತ್ತು ಪ್ರವಾಸಿಗರ ಪ್ರವೇಶಕ್ಕೆ (Tourist Entry) ಅವಕಾಶವಿರುವುದಿಲ್ಲ. ಗಿರಿಧಾಮದ ಹೋಟೆಲ್‌ (Hotel) ಮತ್ತು ವಸತಿ ಗೃಹಗಳಲ್ಲಿ (Guest House ) ಮುಂಗಡವಾಗಿ ಕೊಠಡಿಗಳನ್ನು ಕಾಯ್ದಿರಿಸಿದವರಿಗೆ ಮಾತ್ರ ವಾರಾಂತ್ಯದ ದಿನಗಳಂದು ಪ್ರವೇಶವಿರುತ್ತದೆ.

ಡಿ.1 ರಿಂದ ಗಿರಿಧಾಮಕ್ಕೆ ಬರುವ ವಾಹನಗಳ ಸಂಖ್ಯೆಗೆ ಮಿತಿ (VehicleNumberslimitation) ಹೇರಲಾಗಿದೆ. ಗಿರಿಧಾಮದ ವಾಹನ ನಿಲುಗಡೆ (Vehicle parking) ಪ್ರದೇಶದಲ್ಲಿನ ಸ್ಥಳಾವಕಾಶ ಕ್ಕನುಗುಣವಾಗಿ 350 ಕಾರು ಮತ್ತು 1,500 ದ್ವಿ ಚಕ್ರ ವಾಹನಗಳನ್ನು ಮಾತ್ರ ಬಿಡಲಾಗುತ್ತದೆ. ಗಿರಿಧಾಮದ ಕೆಳಭಾಗದಲ್ಲಿರುವ ಮುಖ್ಯ ಪ್ರವೇಶ ದ್ವಾರದಲ್ಲಿಯೇ ತಪಾಸಣೆ ನಡೆಸಿ ಪಾಸ್‌ (pass) ಹೊಂದಿರುವ ವಾಹನಗಳನ್ನು ಮಾತ್ರ ಮೇಲ್ಭಾಗಕ್ಕೆ ಬಿಡಲಾಗುವುದು. ಗಿರಿಧಾಮದ ಪ್ರವೇಶ ಬಯಸುವವರು ಪಾಸ್‌ ಗಳನ್ನು ಹೊಂದುವುದು ಕಡ್ಡಾಯವಾಗಿದ್ದು, ಪಾಸ್‌ ಗಳನ್ನು ವಿತರಿಸಲು ಆನ್‌ ಲೈನ್‌ ಮತ್ತು ಆಫ್‌ ಲೈನ್‌ ಎರಡೂ ವ್ಯವಸ್ಥೆ ಮಾಡಲಾಗಿದೆ.