ಮಹಿಳೆಯರು ಸ್ವಾವಲಂಬಿಗಳಾದರೆ ದೇಶದ ಅಭಿವೃದ್ಧಿಯ ವೇಗ ಹೆಚ್ಚಾಗಲಿದ್ದು, ಮಹಿಳೆಯರನ್ನು ಉದ್ಯಮಿಗಳನ್ನಾಗಿಸುವ ನಿಟ್ಟಿನಲ್ಲಿ ನಬಾರ್ಡ್ ಸಹಾಯ ಹಸ್ತ ನೀಡಲಿದೆ ಎಂದು ನಬಾರ್ಡ್‌ ಕರ್ನಾಟಕ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಟಿ. ರಮೇಶ್ ತಿಳಿಸಿದರು.

ಮೈಸೂರು : ಮಹಿಳೆಯರು ಸ್ವಾವಲಂಬಿಗಳಾದರೆ ದೇಶದ ಅಭಿವೃದ್ಧಿಯ ವೇಗ ಹೆಚ್ಚಾಗಲಿದ್ದು, ಮಹಿಳೆಯರನ್ನು ಉದ್ಯಮಿಗಳನ್ನಾಗಿಸುವ ನಿಟ್ಟಿನಲ್ಲಿ ನಬಾರ್ಡ್ ಸಹಾಯ ಹಸ್ತ ನೀಡಲಿದೆ ಎಂದು ನಬಾರ್ಡ್‌ ಕರ್ನಾಟಕ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಟಿ. ರಮೇಶ್ ತಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ದೇವರಾಜ ಅರಸು ರಸ್ತೆಯಲ್ಲಿರುವ ಶ್ರೀ ಗಂಗಾ ಚಾರಿಟಬಲ್ ಟ್ರಸ್ಟ್ ನಲ್ಲಿ ನಬಾರ್ಡ್ ಸಹಯೋಗದೊಂದಿಗೆ ಆಯೋಜಿಸಿದ್ದ 15 ದಿನಗಳ ಸೂಕ್ಷ್ಮ ಉದ್ಯಮ ಅಭಿವೃದ್ಧಿ ಕಾರ್ಯಕ್ರಮವನ್ನು (ಸಿಹಿತಿಂಡಿ, ಮಸಾಲಪುಡಿ ತಯಾರಿಕೆ ಹಾಗೂ ಕುರುಕಲು ತಿಂಡಿ ತಯಾರಿಕೆ) ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ದೇಶವೂ ಅಭಿವೃದ್ಧಿ ಹೊಂದಿದಂತೆ ಎಂದರು.

ಕೃಷಿ ಕ್ಷೇತ್ರದ ಜೊತೆಗೆ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಸ್ವಯಂ ಉದ್ಯೋಗ ಮಾಡಲು ನಬಾರ್ಡ್ ಸಹಕಾರ ನೀಡಲಿದೆ. ಸುಮಾರು 30 ವರ್ಷದ ಹಿಂದೆ ಮಹಿಳೆಯರಿಗೆ ಯಾವ ಬ್ಯಾಂಕ್ ಗಳಲ್ಲಿಯೂ ಸಾಲ ಸೌಲಭ್ಯಗಳು ದೊರೆಯುತ್ತಿರಲಿಲ್ಲ. ಸ್ವಸಹಾಯ ಸಂಘಗಳ ಸ್ಥಾಪನೆಯಿಂದ ಮಹಿಳೆಯರಿಗೆ ನೇರವಾಗಿ ಸಾಲ ಸೌಲಭ್ಯಗಳು ದೊರೆಯುವಂತಾಗಿದೆ. ಪ್ರಸ್ತುತ 25 ಲಕ್ಷಕ್ಕೂ ಅಧಿಕ ಮಹಿಳೆಯರು ಸ್ವಸಹಾಯ ಸಂಘಗಳ ಸದಸ್ಯರಾಗಿರುವುದು ಪ್ರಶಂಸನೀಯ ಎಂದು ಅವರು ಹೇಳಿದರು.

ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಶಾಂತವೀರ, ಕೃಷಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕರಾದ ಕೆ. ಕಾಮಯ್ಯ, ಪಿ. ಶಿವರಾಮೇಗೌಡ, ತೋಟಗಾರಿಕೆ ಇಲಾಖೆ ನಿವೃತ್ತ ಸಹಾಯಕ ಅಧಿಕಾರಿ ಎಂ. ಮರಿಗೌಡ, ಬೆಮೆಲ್‌ ನಿವೃತ್ತ ನಿರ್ದೇಶಕ ಬಿ. ಶಂಕರ್, ಶ್ರೀ ಗಂಗಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಜ್ ಕಾಮಯ್ಯ, ಕಾರ್ಯದರ್ಶಿ ಎಂ. ದಿವ್ಯಶ್ರೀ, ಸಂಯೋಜಕ ರಾಜಣ್ಣ, ಚಾಂದಿನಿ ಮೊದಲಾದವರು ಇದ್ದರು.