ಆತ ಪ್ರೀತಿಸಿ ಅವಳೇ ನನಗೆ ಬೇಕು ಎಂದು ಮದುವೆ ಆಗಿದ್ದ. ಮದುವೆ ಬಳಿಕ ಕೌಟುಂಬಿಕ ಕಲಹ. ಸಿಟ್ಟಿಗೆದ್ದ ಪತಿ ಆಕೆಯನ್ನ ಮುಗಿಸಿ ತಾನೂ ಕೂಡ ಬದುಕಿನ ಪಯಣ ಮುಗಿಸಿದ್ದಾನೆ. ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಸ್ಟೋರಿ ಇಲ್ಲಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೌಟುಂಬಿಕ ಕಲಹಕ್ಕೆ ಮತ್ತೊಂದು ಬಲಿಯಾಗಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಪತಿಯೊಬ್ಬ ಪತ್ನಿಯನ್ನು ಮುಗಿಸಿ ತಾನೂ ಸಾವಿಗೆ ಶರಣಾಗಿರುವ ಘಟನೆ ಬೆಂಗಳೂರಿನ ರಾಜಗೋಪಾಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರೀತಿಸಿ ಮದುವೆಯಾಗಿದ್ದ ಜೋಡಿ

ಮೃತರನ್ನು ಪದ್ಮಾವತಿ (29) ಮತ್ತು ಸುಮಂತ್ ಜೈನ್ (32) ಎಂದು ಗುರುತಿಸಲಾಗಿದೆ. ಪದ್ಮಾವತಿ ಅವರು ವೈಟ್‌ಫೀಲ್ಡ್ ಸಮೀಪದ ಖ್ಯಾತ ಸಾಫ್ಟ್‌ವೇರ್ ಕಂಪನಿ 'ಕ್ಯಾಪ್‌ಜೆಮಿನಿ'ಯಲ್ಲಿ (Capgemini) ಉದ್ಯೋಗಿಯಾಗಿದ್ದರು. ಪತಿ ಸುಮಂತ್ ಜೈನ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಸುಮಾರು ನಾಲ್ಕು ವರ್ಷಗಳ ಹಿಂದೆ ಈ ಜೋಡಿ ಪರಸ್ಪರ ಪ್ರೀತಿಸಿ ಮದುವೆಯಾಗಿತ್ತು.

ಜಗಳ ವಿಕೋಪಕ್ಕೆ ತಿರುಗಿ ಫಿನಿಶ್

ರಾಜೇಶ್ವರಿ ನಗರದಲ್ಲಿ ವಾಸವಾಗಿದ್ದ ಈ ದಂಪತಿ ನಡುವೆ ಕಳೆದ ರಾತ್ರಿ ಯಾವುದೋ ವಿಚಾರವಾಗಿ ತೀವ್ರ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ಜಗಳ ಜೋರಾದಂತೆ ಆವೇಶಕ್ಕೊಳಗಾದ ಸುಮಂತ್, ಪತ್ನಿ ಪದ್ಮಾವತಿಯನ್ನು ಮುಗಿಸಿದ್ದಾನೆ. ಬಳಿಕ ತಾನು ಮಾಡಿದ ತಪ್ಪಿನ ಅರಿವಾಗಿ ಅಥವಾ ಭಯಗೊಂಡು ತಾನೂ ಕೂಡ ನೇಣು ಬಿಗಿದುಕೊಂಡು ಪ್ರಾಣಬಿಟ್ಟಿದ್ದಾನೆ.

ಸುಮಂತ್ ಪ್ರಾಣಬಿಡುವ ಮುನ್ನ ತನ್ನ ತಾಯಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದಾನೆ. ಅಮ್ಮಾ ನಾನು ಸಾಯುತ್ತಿದ್ದೇನೆ.. ನನ್ನ ಪಿಎಫ್ (PF) ಹಣ ಹಾಗೂ ಮನೆಯಲ್ಲಿರುವ ವಸ್ತುಗಳನ್ನು ನೀವೇ ಬಂದು ತೆಗೆದುಕೊಂಡು ಹೋಗಿ ಎಂದು ಸುಮಂತ್ ಮೆಸೇಜ್ ಕಳುಹಿಸಿದ್ದಾನೆ. ಈ ಆಡಿಯೋ ಸಂದೇಶ ಕೇಳಿದ ತಾಯಿ ತಕ್ಷಣವೇ ಪೊಲೀಸರಿಗೆ ಮತ್ತು ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ರಾಜಗೋಪಾಲ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ದಂಪತಿ ಈ ರೀತಿ ದುರಂತ ಅಂತ್ಯ ಕಂಡಿರುವುದು ಕುಟುಂಬಸ್ಥರಲ್ಲಿ ಶೋಕ ಸಾಗರವನ್ನುಂಟು ಮಾಡಿದೆ.