ನಗರದ ವರ್ತುಲ ರಸ್ತಯಲ್ಲಿನ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಎಂಡಿಎ ಹಲವು ಕಾಮಗಾರಿ ಕೈಗೊಂಡಿದ್ದು, ಈ ಸಂಬಂಧ ಸಂಸದ ಪ್ರತಾಪ ಸಿಂಹ ಮತ್ತು ಎಂಡಿಎ ಅಧ್ಯಕ್ಷ ಯಶಸ್ವಿ ಸೋಮಶೇಖರ್‌ ಬುಧವಾರ ಸ್ಥಳ ಪರಿಶೀಲಿಸಿದರು.

 ಮೈಸೂರು : ನಗರದ ವರ್ತುಲ ರಸ್ತಯಲ್ಲಿನ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಎಂಡಿಎ ಹಲವು ಕಾಮಗಾರಿ ಕೈಗೊಂಡಿದ್ದು, ಈ ಸಂಬಂಧ ಸಂಸದ ಪ್ರತಾಪ ಸಿಂಹ ಮತ್ತು ಎಂಡಿಎ ಅಧ್ಯಕ್ಷ ಯಶಸ್ವಿ ಸೋಮಶೇಖರ್‌ ಬುಧವಾರ ಸ್ಥಳ ಪರಿಶೀಲಿಸಿದರು.

ಬೋಗಾದಿ ಜಂಕ್ಷನ್‌, ದಟ್ಟಗಳ್ಳಿ 3ನೇ ಹಂತದ ಸಾ.ರಾ. ಕಲ್ಯಾಣ ಮಂಟಪ ಜಂಕ್ಷನ್‌, ಜೆ.ಪಿ. ನಗರ ಕುಪ್ಪಲೂರು ರಸ್ತೆ ಜಂಕ್ಷನ್‌ನಲ್ಲಿ ಸುಗಮ ಸಂಚಾರಕ್ಕಾಗಿ ಮೇಲ್ಸೇತುವೆ ಅಥವಾ ಕೆಳ ಸೇತುವೆ ನಿರ್ಮಿಸಿ ವಾಹನ ದಟ್ಟಣೆ, ಸರಣಿ ಅಪಘಾತ ಪ್ರಕರಣ ನಿಯಂತ್ರಿಸಲು ಸ್ಥಳ ಪರಿಶೀಲಿಸಿದರು.

ಸಂಸದ ಪ್ರತಾಪ ಸಿಂಹ ಮಾತನಾಡಿ, ವರ್ತುಲ ರಸ್ತೆಯಲ್ಲಿನ (Road) ಬ್ಲಾಕ್‌ ಸ್ಪಾಟ್‌ಗಳಾಗಿರುವ ವರ್ತುಲ ರಸ್ತೆಯನ್ನು ಅಪಘಾತ ಮುಕ್ತ ವಲಯವಾಗಿ ಪರಿವರ್ತಿಸಲಾಗುವುದು. ಮೊದಲಿಗೆ ಈ ಸಂಬಂಧ ಡಿಪಿಆರ್‌ ಆಗಬೇಕು ನಂತರ ಟೆಂಡರ್‌ ಪ್ರಕ್ರಿಯೆ ನಡೆಸಬೇಕು. ಹೀಗಾಗಿ 5 ರಿಂದ ಆರು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.

ಎಂಡಿಎ (MDA) ಅಧ್ಯಕ್ಷ ಯಶಸ್ವಿ ಸೋಮಶೇಖರ್‌, ಪ್ರಾಧಿಕಾರದ ಕೆಲಸ ಸುಗಮವಾಗಿ ನಡೆಸುವ ಉದ್ದೇಶದಿಂದ ಹಾಗೂ ಸಾರ್ವಜನಿಕರ ಕೆಲಸವನ್ನು ತ್ವರಿತವಾಗಿ ಮಾಡಲು ಪ್ರತಿ ಮಂಗಳವಾರ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಎಂಡಿಎಗೆ ಆಗಮಿಸುವ ಜನರಿಗೆ ಖಾತೆ, ಕಂದಾಯ ಕಟ್ಟುವಲ್ಲಿ ಸಮಸ್ಯೆ ಆಗುತ್ತಿದೆ. ಅದನ್ನು ತಡೆಗಟ್ಟು ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುವುದು. ಸಾರ್ವಜನಿಕರಿಗೆ ನಿವೇಶನ ನೀಡುವ ಉದ್ದೇಶದಿಂದ ಬಡಾವಣೆ ನಿರ್ಮಿಸಲು ಬೊಮ್ಮೇನಳ್ಳಿ ಬಳಿ ರೈತರೊಂದಿಗೆ ಮಾತುಕತೆ ನಡೆಸಿ 50:50 ಅನುಪಾತದಲ್ಲಿ 600 ಎಕರೆ ಭೂಮಿ ಖರೀದಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಇಟ್ಟಿಗೆಗೂಡು ಬಡಾವಣೆಯ ಲಿಂಗಣ್ಣ ವೃತ್ತದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನೂತನ ಕಟ್ಟಡ ನಿರ್ಮಾಣ ಮಾಡಿದ್ದು, ಸದರಿ ಕಟ್ಟಡವನ್ನು ಮೈಸೂರಿನ ಪಾಸ್‌ಪೋರ್ಚ್‌ ಸೇವಾ ಕೇಂದ್ರ ವಿಸ್ತರಣೆಗಾಗಿ ನೀಡಲಾಗುತ್ತದೆ. ಈ ಸಂಬಂಧ ಸಂಸದ ಪ್ರತಾಪ್‌ ಸಿಂಹ ಅವರು ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ ಎಂದು ಅವರು ಹೇಳಿದರು.

ಎಂಡಿಎ ಸದಸ್ಯರಾದ ಲಕ್ಷ್ಮೀದೇವಿ, ನವೀನ್‌ಕುಮಾರ್‌, ಕೆ.ಮಾದೇಶ್‌, ಲಿಂಗಣ್ಣ, ಇಇ ಎನ್‌.ಬಿ. ಚೆನ್ನಕೇಶವ್‌ ಮೊದಲಾದವರು ಇದ್ದರು.

ನಾವೇ ಸೂಕ್ತ ವಸ್ತ್ರ ಧರಿಸಬೇಕು

ಮೈಸೂರು : ದೇವಸ್ಥಾನಕ್ಕೆ ಹೋಗಬೇಕಾದರೆ ಶ್ರದ್ಧಾಭಕ್ತಿಯಿಂದ ಹೋಗಬೇಕು. ಈ ಹಿನ್ನೆಲೆಯಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸುವುದಕ್ಕಿಂತ ಭಕ್ತರು ತಾವೇ ವಸ್ತ್ರಸಂಹಿತೆ ಅಳವಡಿಸಿಕೊಂಡರೆ ಒಳ್ಳೆಯದು ಎಂದು ಸಂಸದ ಪ್ರತಾಪ ಸಿಂಹ ಮನವಿ ಮಾಡಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರು ಸಾಂಪ್ರದಾಯಿಕ ಉಡುಗೆಯಲ್ಲಿ ಬರುವಂತೆ ಅಭಿಯಾನ ಆರಂಭವಾಗಿದೆ. ಇದಕ್ಕೆ ನನ್ನ ಬೆಂಬಲವಿದೆ. ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಡ್ರೆಸ್‌ ಕೋಡ್‌ ನಿಗದಿ ಮಾಡುವ ಬಗ್ಗೆ ಸಾರ್ವಜನಿಕರು ನನ್ನ ಗಮನಕ್ಕೂ ತಂದಿದ್ದರು. 

ಜೆಡಿ​ಎಸ್‌ ಅಧಿ​ಕಾ​ರಕ್ಕೆ ಬಂದಲ್ಲಿ ಪಂಚ​ರತ್ನ ಜಾರಿಗೆ: ನಿಖಿಲ್‌ ಕುಮಾ​ರ​ಸ್ವಾ​ಮಿ

ಕೆಲವು ವೇಳೆ ಬೆಟ್ಟಕ್ಕೆ ಬರುವವರು ಬೇರೆ ಬೇರೆ ವಸ್ತ್ರಗಳನ್ನು ಧರಿಸಿ ಬರುವುದನ್ನು ನೋಡಿದ್ದೇನೆ. ಕೇರಳದಲ್ಲಿ ಯಾವುದೇ ದೇವಸ್ಥಾನಕ್ಕೆ ಹೋದರೂ ಪುರುಷರು ಮತ್ತು ಮಹಿಳೆಯರಿಗೆ ನಿಗದಿತ ಡ್ರೆಸ್‌ಕೋಡ್‌ ಕಡ್ಡಾಯವಿದೆ ಎಂದರು. ದೇವಸ್ಥಾನಕ್ಕೆ ಹೋಗಬೇಕಾದರೆ ಶ್ರದ್ದಾಭಕ್ತಿಯಿಂದ ಹೋಗಬೇಕು. ಈ ರೀತಿಯ ಅಭಿಯಾನವನ್ನು ಚಾಮುಂಡಿಬೆಟ್ಟದಲ್ಲೂ ಮಾಡಿ ವಸ್ತ್ರ ಸಂಹಿತೆ ಜಾರಿಗೆ ತರಬೇಕು ಎಂದು ಹೊರಟಿರುವುದು ಒಳ್ಳೆಯ ಬೆಳವಣಿಗೆ, ಇದಕ್ಕೆ ನನ್ನ ಬೆಂಬಲವೂ ಇದೆ. ಇಂತಹ ಕಟ್ಟುಪಾಡುಗಳನ್ನು ಜಾರಿಗೆ ತಂದು ಅನುಷ್ಠಾನ ಮಾಡುವುದಕ್ಕಿಂತ ಬೆಟ್ಟಕ್ಕೆ ಬರುವ ಭಕ್ತರು ಸೂಕ್ತ ವಸ್ತ್ರ ಧರಿಸಿ ಬರುವಂತೆ ನಾನು ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ಮೊಟಕು ಸಾಧ್ಯತೆ: ಸಚಿವ ಗೋಪಾಲಯ್ಯ

ಚೀನಾದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗಿರುವುದಕ್ಕೆ ನಾವು ಭಯ ಪಡುವ ಅಗತ್ಯವಿಲ್ಲ. ಚೀನಾದಲ್ಲಿ ಕೋವಿಡ್‌ ಹೆಚ್ಚಾದ ಮಾತ್ರಕ್ಕೆ ಇಲ್ಲಿಗೆ ಭೂತ ಬಂತು ಭೂತ ಎನ್ನುವ ಕತೆ ಬೇಡ. ಚೀನಾದಲ್ಲಿನ ಪರಿಸ್ಥಿತಿ ಬೇರೆ ನಮ್ಮ ಪರಿಸ್ಥಿತಿ ಬೇರೆ ಇದೆ. ಚೀನಾದಲ್ಲಿ ಏನಾಗುತ್ತಿದೆ ಎಂದು ಯಾರಿಗೂ ತಿಳಿಯುತ್ತಿಲ್ಲ. ಕೋವಿಡ್‌ ನಿಭಾಯಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಎರಡು ವರ್ಷಗಳ ಅನುಭವವಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ದೇಶಕ್ಕಿಂತ ಮುಂಚೆ ಸ್ವದೇಶಿ ತಯಾರಿತ ಕೋವಿಡ್‌ ವ್ಯಾಕ್ಸಿನ್‌ ಕೊಡಿಸಿದ್ದರಿಂದ ಜನರು ಅಪಾಯದಿಂದ ಪಾರಾಗಿದ್ದಾರೆ. ಕೋವಿಡ್‌ ವಿಚಾರದಲ್ಲಿ ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ನಿಭಾಯಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಕೋವಿಡ್‌ ವಿಚಾರದಲ್ಲಿ ಅನಗತ್ಯ ರೀತಿಯ ಆತಂಕ ಬೇಡ ಎಂದು ಅವರು ಹೇಳಿದರು.

ದಶಪಥ ಎಕ್ಸ್‌ಪ್ರೆಸ್‌ ಹೆದ್ದಾರಿಗೆ ‘ಕಾವೇರಿ’ ಹೆಸರಿಡಲು ಮನವಿ: ಮೈಸೂರು ಬೆಂಗಳೂರು ದಶಪಥ ಎಕ್ಸ್‌ಪ್ರೆಸ್‌ ರಾಷ್ಟ್ರೀಯ ಹೆದ್ದಾರಿಗೆ ‘ಕಾವೇರಿ ಎಕ್ಸ್‌ಪ್ರೆಸ್‌ ವೇ’ ಎಂದು ಹೆಸರಿಡಲು ಸಂಸದ ಪ್ರತಾಪ್‌ ಸಿಂಹ ಮನವಿ ಮಾಡಿದ್ದಾರೆ. ಮುಕ್ತಾಯದ ಹಂತದಲ್ಲಿರುವ ಮೈಸೂರು ಬೆಂಗಳೂರು ನಡುವಿನ 119 ಕಿಲೋ ಮೀಟರ್‌ ಅಂತರದ ದಶಪಥ ಹೆದ್ದಾರಿಗೆ ಕಾವೇರಿ ಹೆಸರನ್ನು ಇಟ್ಟು ಕಾವೇರಿ ಎಕ್ಸ್‌ಪ್ರೆಸ್‌ ವೇ ಎಂದು ನಾಮಕರಣ ಮಾಡುವಂತೆ ಸಂಸದ ಪ್ರತಾಪ್‌ ಸಿಂಹ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ನವದೆಹಲಿಯಲ್ಲಿ ಮನವಿ ಸಲ್ಲಿಸಿದರು.