ಸೆಸ್ಕ್ ಎಂಡಿ ಹುದ್ದೆಯಿಂದ ವರ್ಗಾವಣೆಗೊಂಡಿದ್ದ ಐಎಎಸ್ ಅಧಿಕಾರಿ ಎಂ.ಎಸ್. ಅರ್ಚನಾ, ಕಾನೂನು ಸಂಘರ್ಷದ ಮೂಲಕ ಒಂದೇ ದಿನದಲ್ಲಿ ಮರಳಿ ಅಧಿಕಾರ ಸ್ವೀಕರಿಸಿದ್ದಾರೆ. ಎನ್. ಚಂದ್ರಶೇಖರ್ ಅವರು ಮೈಸೂರಿಗೆ ಬಂದು ಅಧಿಕಾರ ಸಹ ಸ್ವೀಕರಿಸಿದ್ದರು.

ಮೈಸೂರು: ವರ್ಗಾವಣೆ ಮಾಡಿದ ಒಂದೇ ದಿನಕ್ಕೆ ಐಎಎಸ್ ಅಧಿಕಾರಿಯಾದ ಎಂ.ಎಸ್. ಅರ್ಚನಾ ಅವರು ಕರ್ತವ್ಯಕ್ಕೆ ಮರಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸೆಸ್ಕ್ ಎಂಡಿ ಆಗಿದ್ದ ಎಂ.ಎಸ್. ಅರ್ಚನಾ ಅವರನ್ನು ವರ್ಗಾವಣೆ ಮಾಡಿ, ಅವರ ಜಾಗಕ್ಕೆ ಎನ್. ಚಂದ್ರಶೇಖರ್ ಅವರನ್ನು ಸರ್ಕಾರ ನಿಯೋಜಿಸಿತ್ತು. ಅದರಂತೆ ಎನ್. ಚಂದ್ರಶೇಖರ್ ಅವರು ಮೈಸೂರಿಗೆ ಬಂದು ಅಧಿಕಾರ ಸಹ ಸ್ವೀಕರಿಸಿದ್ದರು.

ಈ ವರ್ಗಾವಣೆ ಸಂಬಂಧ ಎಂ.ಎಸ್. ಅರ್ಚನಾ ಅವರು ಕೇವಿಯೆಟ್ ಸಲ್ಲಿಸಿದ್ದರು. ಕಾನೂನು ಸಂಘರ್ಷದ ಮೂಲಕ ಒಂದೇ ದಿನಕ್ಕೆ ಸೆಸ್ಕ್ ಎಂಡಿಯಾಗಿ ಮರಳಿದ್ದಾರೆ. ಹೀಗಾಗಿ, ಒಂದು ದಿನಕ್ಕೆ ಸೆಸ್ಕ್ ಎಂಡಿಯಾಗಿ ಎನ್. ಚಂದ್ರಶೇಖರ್ ಅವರು ಕಾರ್ಯ ನಿರ್ವಹಿಸಿ ನಿರ್ಗಮಿಸಿದ್ದಾರೆ.

ಸೆಸ್ಕ್ ಗೆ ಆರ್ಥಿಕ ನಷ್ಟ ಆರೋಪ- ನಾಲ್ವರು ಸಿಬ್ಬಂದಿ ಅಮಾನತು

ಮೈಸೂರು: ವಿದ್ಯುತ್ ನಿಗಮಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಸೆಸ್ಕ್ ನಾಲ್ವರು ಹಿರಿಯ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಸೆಸ್ಕ್ ಎನ್.ಆರ್. ಮೊಹಲ್ಲಾ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಹಾಯಕ ಎಂಜಿನಿಯರ್ ಗಳಾದ ಕಿರಣ್ ಕುಮಾರ್ (ಬೆಸ್ಕಾಂ ವರ್ಗಾವಣೆ), ನಾಹೀದ ಅಂಜುಮ್, ಕಿರಿಯ ಎಂಜಿನಿಯರ್ ನಾಗೇಂದ್ರ ಮತ್ತು ಮಾಪಕ ಓದುಗ ಅಪ್ಸರ್ ಪಾಷ ಸೇವೆಯಿಂದ ಅಮಾನತುಗೊಂಡವರು.

ಕೆಸರೆ ಬಡಾವಣೆಯ ವಾಣಿಜ್ಯ ಸ್ಥಾವರದಲ್ಲಿ ವಿದ್ಯುತ್ ಸಂಪರ್ಕದಲ್ಲಿ ಜಕಾತಿ ಬದಲಾವಣೆ ಹಾಗೂ ಅಧಿಕ ಹೊರೆ ಮಂಜೂರಾತಿ ವೇಳೆ ಕಟ್ಟಡದ ವಿಸ್ತೀರ್ಣ ತಪ್ಪಾಗಿ ನಮೂದು, ಗ್ರಾಹಕರಿಂದ ಮೀಟರ್ ಖರೀದಿಸದೇ ನಿಗಮದ ಮೀಟರ್ ಅಳವಡಿಸಿರುವ ಆರೋಪ ಹಿನ್ನೆಲೆಯಲ್ಲಿ ಜಾಗೃತ ದಳ ವರದಿ ಸಲ್ಲಿಸಿತು. ಹೀಗಾಗಿ, ಸೆಸ್ಕ್ ಗೆ ಆರ್ಥಿಕ ನಷ್ಟ ಉಂಟು ಮಾಡಿರುವುದಕ್ಕೆ ಸರ್ಕಾರ ಅಮಾನತುಗೊಳಿಸಿ, ಇಲಾಖಾ ವಿಚಾರಣೆಗೆ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಬೆಂಗಳೂರು-ಮಂಗಳೂರಿಗೆ ವಿಶೇಷ ರೈಲು ಇಲ್ಲ: ರೈಲ್ವೆ ಇಲಾಖೆ ವಿರುದ್ಧ ಪ್ರಯಾಣಿಕರ ಆಕ್ರೋಶ

ಇದನ್ನೂ ಓದಿ : ಕೌಟುಂಬಿಕ ಜಗಳದಲ್ಲಿ ಮಕ್ಕಳೇ ದಾಳ: ಮಕ್ಕಳ ಸುಪರ್ದಿಗೆ 'ಪೋಕ್ಸೋ' ದುರುಪಯೋಗ ಕುರಿತು ಹೈಕೋರ್ಟ್ ಕಳವಳ!