ಮೈಸೂರಿನ ವಿಜಯನಗರ 3ನೇ ಹಂತದಲ್ಲಿ, ಮುಡಾ ಅಂದಾಜು 140 ಕೋಟಿ ರು. ಮೌಲ್ಯದ 7 ಎಕರೆ ಒತ್ತುವರಿ ಜಾಗವನ್ನು ತೆರವುಗೊಳಿಸಿದೆ. ಪೊಲೀಸ್ ಭದ್ರತೆಯಲ್ಲಿ ನಡೆದ ಈ ಕಾರ್ಯಾಚರಣೆಯ ವೇಳೆ ಕೆಲವರು ಆತ್ಮಹತ್ಯೆ ಬೆದರಿಕೆ ಒಡ್ಡಿದರೂ, ಅಧಿಕಾರಿಗಳು ಜಾಗವನ್ನು ಯಶಸ್ವಿಯಾಗಿ ವಶಕ್ಕೆ ಪಡೆದಿದ್ದಾರೆ.
ಮೈಸೂರು: ವಿಜಯನಗರ 3ನೇ ಹಂತದಲ್ಲಿ ಒತ್ತುವರಿಯಾಗಿದ್ದ ಅಂದಾಜು 140 ಕೋಟಿ ರು. ಮೌಲ್ಯದ 7 ಎಕರೆ ಜಾಗವನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರವು (ಎಂಡಿಎ) ಶನಿವಾರ ತೆರವು ಕಾರ್ಯಾಚರಣೆ ಮೂಲಕ ತನ್ನ ವಶಕ್ಕೆ ಪಡೆದಿದೆ.
ಪೊಲೀಸ್ ಭದ್ರತೆಯಲ್ಲಿ ಶನಿವಾರ ಮುಂಜಾನೆ ಕಾರ್ಯಾಚರಣೆ ನಡೆಸಿದ ಎಂಡಿಎ ಅಧಿಕಾರಿಗಳು, ಸ್ಥಳದಲ್ಲಿದ್ದ ಶೆಡ್ ತೆರವುಗೊಳಿಸುವ ಮೂಲಕ ಜಾಗದ ಸುತ್ತ ತಂತಿ ಬೇಲಿ ಹಾಕುವ ಕಾರ್ಯ ಆರಂಭಸಿದ್ದರು. ಈ ವೇಳೆ ಕೆಲವರು ಜೆಸಿಬಿ ಯಂತ್ರಗಳ ಮುಂದೆ ಮಲಗಿ ವಿಷ ಕುಡಿದು ಆತ್ಮ*ಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದರು.
ಇದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದು ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟರು.
1984ರಲ್ಲಿ ಈ ಜಾಗದ ಭೂಸ್ವಾಧೀನಕ್ಕೆ ಅಧಿಸೂಚನೆ
ವಿಜಯನಗರ 3ನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ 1984ರಲ್ಲಿ ಈ ಜಾಗದ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿ, ಮಾಲೀಕರಿಗೆ ನಿಯಮಾನುಸಾರ ಪರಿಹಾರ ಮಂಜೂರು ಮಾಡಿತ್ತು. ನಂತರದಲ್ಲಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದು, ಶೆಡ್ ನಿರ್ಮಿಸಿಕೊಂಡಿದ್ದರು. ಆರ್ ಟಿಸಿ ಪ್ರಕಾರ ಜಮೀನಿನ ಮಾಲೀಕತ್ವ ಪ್ರಾಧಿಕಾರದ ಹೆಸರಿನಲ್ಲಿದ್ದು, ಜಿಲ್ಲಾಧಿಕಾರಿ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಿ ಎಂಡಿಎ ಅಧಿಕಾರಿಗಳು ಜಾಗವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಟ್ರಾಫಿಕ್ ನಿಯಂತ್ರಣಕ್ಕೆ ಬೆಂಗಳೂರಿನಲ್ಲಿ ಮತ್ತೊಂದು 800 ಮೀ. ಉದ್ದದ ಮೇಲ್ಸೇತುವೆ: ತ್ವರಿತವಾಗಿ ಭೂಸ್ವಾಧೀನಕ್ಕೆ ಸೂಚನೆ
ಈ ಕಾರ್ಯಾಚರಣೆಯಲ್ಲಿ ಎಂಡಿಎ ಕಾರ್ಯದರ್ಶಿ ಕೆ. ಜಾನ್ಸನ್, ಕಾರ್ಯಪಾಲಕ ಎಂಜಿನಿಯರ್ ಗಳಾದ ನಾಗೇಶ್, ಮಹೇಶ್, ಎಇಇ ಸುನಿತಾ ಹಾಗೂ ಭೂಸ್ವಾಧೀನ ಶಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: Bengaluru: ಬಯಸಿದಂತೆ ಬಯಲು: ಬೆಂಗಳೂರಿನ ಬರೋಬ್ಬರಿ 194 ಸ್ಥಳಗಳ ಅಭಿವೃದ್ಧಿಗೆ ಮುಂದಾದ GBA


