Asianet Suvarna News Asianet Suvarna News

ಚಿಕ್ಕಮಗಳೂರು: ದತ್ತಪೀಠ ಸಮಿತಿ ರದ್ದತಿಗೆ ಮುಸ್ಲಿಂ ಮುಖಂಡರ ಆಗ್ರಹ

ದತ್ತಪೀಠ ವ್ಯವಸ್ಥಾಪನಾ ಸಮಿತಿ ಉಸ್ತುವಾರಿಯಲ್ಲಿ ಮಾ.8 ರಿಂದ ಮೂರು ದಿನಗಳ ಕಾಲ ಬಾಬಾಬುಡನ್‌ಗಿರಿಯಲ್ಲಿ ಉರುಸ್‌ ನಡೆಸಿದ್ದೆಯಾದರೆ ಅದರಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮುಸ್ಲಿಂ ಒಕ್ಕೂಟ ಹಾಗೂ ಮುಸ್ಲಿಂ ವಿವಿಧ ಸಂಘಟನೆಗಳ ಮುಖಂಡರು, ಉರುಸ್‌ ಸಮಿತಿ ಸದಸ್ಯರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

Muslim leaders demand cancellation of Dattapeeth Committee at chikkamagaluru rav
Author
First Published Feb 23, 2023, 5:11 AM IST

ಚಿಕ್ಕಮಗಳೂರು (ಫೆ.23) :

ದತ್ತಪೀಠ ವ್ಯವಸ್ಥಾಪನಾ ಸಮಿತಿ ಉಸ್ತುವಾರಿಯಲ್ಲಿ ಮಾ.8 ರಿಂದ ಮೂರು ದಿನಗಳ ಕಾಲ ಬಾಬಾಬುಡನ್‌ಗಿರಿ(Baba Budangiri)ಯಲ್ಲಿ ಉರುಸ್‌(Urus) ನಡೆಸಿದ್ದೆಯಾದರೆ ಅದರಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮುಸ್ಲಿಂ ಒಕ್ಕೂಟ ಹಾಗೂ ಮುಸ್ಲಿಂ ವಿವಿಧ ಸಂಘಟನೆಗಳ ಮುಖಂಡರು, ಉರುಸ್‌ ಸಮಿತಿ ಸದಸ್ಯರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬಾಬಾ ಬುಡನ್‌ ದರ್ಗಾ(Baba Budan Dargah)ದಲ್ಲಿ ಉರುಸ್‌ ಆಚರಣೆ ಸಂಬಂಧ ಗುರುವಾರ ಜಿಲ್ಲಾಧಿಕಾರಿಗಳು ತಮ್ಮ ಕಚೇರಿ ಸಭಾಂಗಣದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಮುಸ್ಲಿಂ ಸಮುದಾಯ(Muslim community)ದ ಮುಖಂಡರ ಸಭೆ ಕರೆದಿದ್ದಾರೆ, ಈ ಸಭೆಗೆ ಹಾಜರಾಗುವುದಿಲ್ಲ ಎಂದು ಮುಸ್ಲಿಂ ಮುಖಂಡರಾದ ಕೆ. ಮಹಮದ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದತ್ತಪೀಠದ ಬಗ್ಗೆ ವಿವಾದಾತ್ಮಕ ಹೇಳಿಕೆ: ಕೊನೆಗೂ ಕ್ಷಮೆಯಾಚಿಸಿದ ಶಾಸಕ ಟಿ.ಡಿ.ರಾಜೇಗೌಡ

ಪ್ರತಿ ವರ್ಷ ಅಧಿಕಾರಿಗಳ ಜತೆ ಉರುಸ್‌ ಸಮಿತಿ ಸದಸ್ಯರನ್ನು ಮಾತ್ರ ಆಹ್ವಾನಿಸಿದ್ದೀರಿ, ನಾವುಗಳು ಸಹ ತಪ್ಪದೆ ಭಾಗವಹಿಸಿ ನಮ್ಮ ಸಲಹೆ, ಸಹಕಾರ ನೀಡುತ್ತಾ ಬಂದಿದ್ದೇವೆ. ಆದರೆ, ಈ ಬಾರಿ ವ್ಯವಸ್ಥಾಪನಾ ಸಮಿತಿ ಜತೆಗೆ ನಮ್ಮನ್ನು ಕರೆಯುವುದಕ್ಕೆ ನಮ್ಮ ಸಹಮತ ಇರುವುದಿಲ್ಲ ಎಂದರು. ವ್ಯವಸ್ಥಾಪನಾ ಸಮಿತಿ ರಚನೆ ಸಮರ್ಪಕವಾಗಿ ನಡೆದಿಲ್ಲ, ಸಮಿತಿಯಲ್ಲಿ ಎರಡೂ ಸಮುದಾಯಗಳ ಸಮಸಂಖ್ಯೆ ಸದಸ್ಯರಿರಬೇಕಾಗಿತ್ತು. ಆದರೆ, ಮುಸ್ಲಿಂ ಸಮುದಾಯದ ಒಬ್ಬರನ್ನೇ ಸೇರಿಕೊಂಡಿದ್ದಾರೆ. ಅವರು ಈ ಸಮುದಾಯದ ಪ್ರತಿನಿಧಿ ಅಲ್ಲ ಎಂದು ಹೇಳಿದರು.

ಬಾಬಾ ಬುಡನ್‌ ದರ್ಗಾದಲ್ಲಿ ಮೌಲಾನಾಗೆ ನಮಾಜ್‌ ಮಾಡಲು, ಅಜಾನ್‌ ನೀಡಲು ತೊಂದರೆ ನೀಡುತ್ತಿದ್ದಾರೆ. ಬಂದಂಥ ಭಕ್ತಾಧಿಗಳಿಗೆ ಹರಕೆ ಮಾಡಲು ತೊಂದರೆ ನೀಡುತ್ತಿದ್ದಾರೆ. ಈ ಎಲ್ಲಾ ವಿಷಯಗಳನ್ನು ಸಮಿತ ಅಧ್ಯಕ್ಷರಿಗೆ ತಿಳಿಸಿದರೂ ಸಹ ಅವರು ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಒಟ್ಟಾರೆ ಇದು, ನಮ್ಮ ಧಾರ್ಮಿಕ ಪದ್ಧತಿಯನ್ನು ಹೊರಗಿಡುವ ಹುನ್ನಾರ ಎಂದು ಹೇಳಿದರು.

ಗುಹೆಯೊಳಗೆ ಇದ್ದ ಪಾದುಕೆಗಳನ್ನು ಸ್ಥಳಾಂತರಿಸಿದ್ದು, ಅದನ್ನು ಪೂರ್ವ ಸ್ಥಳದಲ್ಲಿ ಇಡಬೇಕಾಗಿತ್ತು. ಆದರೆ, ಇಟ್ಟಿಲ್ಲ, ಮುಜರಾಯಿ ಇಲಾಖೆಯವರು ಕಾಣಿಕೆ ಡಬ್ಬಿಯನ್ನು ಇಡುತ್ತಿದ್ದರೂ ಕೂಡ ಪಕ್ಕದಲ್ಲೇ ಬೇರೆ ಪಾತ್ರೆ ಇಟ್ಟು ಹಣ ಸಂಗ್ರಹಿಸಿ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಗದ್ದುಗೆಗೆ (ಮಾಮಾಜಿನ್ನಿ) ಬಟ್ಟೆಹಾಕಲು ಅನುಮತಿ ಕೊಟ್ಟಿಲ್ಲದಿದ್ದರೂ ಸಹ ಅಲ್ಲಿರುವ ಅರ್ಚಕರು ಅಲ್ಲಿ ಅರಿಶಿಣ, ಕುಂಕುಮ ಹಚ್ಚಿ, ತಟ್ಟೆಇಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಜಿಲ್ಲಾಡಳಿತ ನಿಗದಿಪಡಿಸಿದ ಸಮಯ ಮೀರಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಅರ್ಚಕರು ಪೂಜೆ ಮಾಡುತ್ತಿದ್ದಾರೆ ಎಂದರು.

ಕೋಮು ಸೌಹಾರ್ದ ವೇದಿಕೆ ಮುಖಂಡರಾದ ಗೌಸ್‌ ಮೊಹಿಯುದ್ದೀನ್‌ ಮಾತನಾಡಿ, 1989ರಲ್ಲಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಹೊರಡಿಸಿರುವ ಆದೇಶ ಪಾಲನೆ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಕೆಲವು ವರ್ಷಗಳಿಂದ ಸಂಘಪರಿವಾರ ದತ್ತ ಜಯಂತಿ ನಡೆಸಿಕೊಂಡು ಬರುತ್ತಿದೆ. ಆದರೆ, ಇದೀಗ ಜಿಲ್ಲಾಡಳಿತ ನಡೆಸುತ್ತಿದೆ. ಜಿಲ್ಲಾಧಿಕಾರಿಗಳು ಒಂದು ರಾಜಕೀಯ ಪಕ್ಷದ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದರು.

ಬಾಬಾ ಬುಡನ್‌ ದರ್ಗಾದಲ್ಲಿ ನಡೆಯುತ್ತಿರುವ ಮುಸ್ಲಿಂ ಆಚರಣೆಗಳನ್ನು ಒಂದೊಂದಾಗಿ ಮೊಟಕುಗೊಳಿಸುವ ಕೆಲಸ ನಡೆಯುತ್ತಿದೆ. ಮಾ. 8 ರಿಂದ 10 ದಿನಗಳ ಕಾಲ ನಡೆಯಲಿರುವ ಉರುಸ್‌ ಆಚರಣೆಯೊಳಗೆ ನಮ್ಮಗಳ ಬೇಡಿಕೆ ಈಡೇರಿಸದೆ ಹೋದರೆ ಪ್ರತಿಭಟನೆ ಆಯೋಜಿಸಲಾಗುವುದು ಎಂದು ಹೇಳಿದರು.

ಬೇಡಿಕೆ :

ಎರಡು ಧರ್ಮೀಯರಿಗೆ ಸಮಾನ ಪ್ರಾತಿನಿಧ್ಯ ನೀಡದಿರುವ ವ್ಯವಸ್ಥಾಪನಾ ಸಮಿತಿಯನ್ನು ರದ್ದುಗೊಳಿಸಬೇಕು ಎಂದು ಕೆ. ಮಹಮದ್‌ ಆಗ್ರಹಿಸಿದರು.

ದತ್ತಜಯಂತಿ(Datta jayanti)ಯ 3 ದಿನಗಳ ಕಾರ್ಯಕ್ರಮಕ್ಕೆ ನೇಮಿಸಿರುವ ತಾತ್ಕಾಲಿಕ ಅರ್ಚಕರನ್ನು ವಾಪಸ್‌ ಕರೆಸಿಕೊಳ್ಳಬೇಕು, ದರ್ಗಾದ ಒಳಗೆ ಇರುವ ಮಸೀದಿ (ಹಿಂದಿನಿಂದಲೂ ಇದ್ದ) ಕಟ್ಟಡದಲ್ಲಿ ನಮಾಜ್‌ ಮಾಡಲು ಅವಕಾಶ ನೀಡಬೇಕು. ಒಳಗಿರುವ ಎಲ್ಲಾ ಗೋರಿಗಳಿಗೆ ಪ್ರತಿನಿತ್ಯ ಹಸಿರು ಬಟ್ಟೆಹಾಕಿ ಪ್ರತಿನಿತ್ಯ ಫಾತಿಹಾ (ಪ್ರಾರ್ಥನೆ) ಸಲ್ಲಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಹಿನ್ನೆಲೆ; ಮುಡಿ ಕೊಟ್ಟ ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ

ಸುದ್ದಿಗೋಷ್ಠಿಯಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳ ಮುಖಂಡರಾದ ಸಿ.ಎಸ್‌. ಖಲಂಧರ್‌, ಹಜ್ಮತ್‌ ಖಾನ್‌, ಜಂಶೀದ್‌ ಖಾನ್‌ ಹಾಗೂ ಗೌಸ್‌ ಮುನೀರ್‌ ಉಪಸ್ಥಿತರಿದ್ದರು.

Follow Us:
Download App:
  • android
  • ios