Asianet Suvarna News Asianet Suvarna News

ಮುಂಬೈನಿಂದ ಧಾರವಾಡಕ್ಕೆ ಬಂದು ಏಕಾಏಕಿ ಗುಂಡು ಹಾರಿಸಿದ ವ್ಯಕ್ತಿ: ಸ್ಥಳೀಯರಲ್ಲಿ ಆತಂಕ

ಕರ್ನಾಟಕದ ವಿದ್ಯಾಕಾಶಿ ಧಾರವಾಡ ನಗರಕ್ಕೆ ಮುಂಬೈನಿಂದ ಬಂದ ವ್ಯಕ್ತಿಯೊಬ್ಬ ಏಕಾಏಕಿ ಬಂದೂಕು ಹಿಡಿದು ಗುಂಡು ಹಾರಿಸಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.

Mumbai land owner Sushant Agarwal gun fire in Dharwad and Locals panic sat
Author
First Published Aug 23, 2023, 5:54 PM IST | Last Updated Aug 23, 2023, 5:54 PM IST

ವರದಿ : ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಧಾರವಾಡ (ಆ.23): ಕರ್ನಾಟಕದಲ್ಲಿ ಅತಿವೇಗವಾಗಿ ಅಭಿವೃದ್ಧಿ ಹೊಂದಿರುತ್ತಿರುವ ನಗರವಾದ ಧಾರವಾಡದ ಅತ್ತಿಕೊಳ್ಳ ಬಡಾವಣೆಯ ಬಳಿಯ ಜಮೀನುಗಳು ಹಾಗೂ ನಿವೇಶನಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೆಲೆ ಬಾಳುತ್ತಿವೆ. ಹೀಗಾಗಿ, ಮುಂಬೈನಿಂದ ಬಂದ ವ್ಯಕ್ತಿಯೊಬ್ಬ ಬಂದೂಕು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿ ಸ್ಥಳೀಯರಿಗೆ ಬೆದರಿಕೆ ಹಾಕಿದ್ದಾನೆ. 

ಮುಂಬೈನಲ್ಲಿ ನೆಲೆಸಿರುವ ಸುಶಾಂತ್​​ ಅಗರವಾಲ್‌ ಎನ್ನುವವರು ಧಾರವಾಡ ನಗರದ ಅತ್ತಿಕೊಳ್ಳ ಬಡಾವಣೆಯನ್ನು ಒಂದು ನಿವೇಶನವನ್ನು ಹೊಂದಿದ್ದನು. ಆದರೆ, ಈ ನಿವೇಶನ ಕೆಲ ಸ್ಥಳೀಯರಿಂದ ಅತಿಕ್ರಮಣ ಆಗುತ್ತಿದೆ ಎಂಬ ವಿಚಾರವನ್ನು ತಿಳಿದುಕೊಂಡಿದ್ದಾನೆ. ಇನ್ನು ಅತಿಕ್ರಮಣದಾರರಿಗೆ ಹೇಗೆ ಬುದ್ಧಿ ಕಲಿಸಬೇಕು ಎಂಬುದು ತಿಳಿಯದೇ ಆತ ಮುಂಬೈನಿಂದ ಕಾರಿನಲ್ಲಿ ಬಂದು ಏಕಾಏಕಿ ಹಗಲು ವೇಳೆಯಲ್ಲಿಯೇ ಬಂದೂಕು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಶಾಂತ ವಾತಾವರಣದಲ್ಲಿ ಜೀವನ ಮಾಡುತ್ತಿದ್ದ ಧಾರವಾಡದ ನಿವಾಸಿಗಳಿಗೆ ಬಂದೂಕಿನ ಶಬ್ದ ಕೇಳಿ ಆತಂಕವಾಗಿದೆ. ಮನೆಯಲ್ಲಿ ಕೆಲಹೊತ್ತು ಅವಿತುಕೊಂಡು ಕಿಟಕಿ ಮೂಲಕ ಬಗ್ಗಿ ನೋಡಿದರೆ, ಸುಶಾಂತ್‌ ಅಗರವಾಲ್‌ ಗುಂಡು ಹಾರಿಸುತ್ತಾ ಕೂಗಾಡುತ್ತಿದ್ದನು.

ಭದ್ರಾ ಹುಲಿ ಸಂರಕ್ಷಿತ ಪ್ರದೇಶವನ್ನೇ ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿಕೊಟ್ಟ ತಹಶೀಲ್ದಾರ್‌

ಇನ್ನು ಶಾಂತವಾಗಿರುವ ಬಡಾವಣೆಯಲ್ಲಿ ಕಿಡಿಗೇಡಿಯಂತೆ ಬಂದು ಬಂದೂಕಿನಿಂದ ಗುಂಡು ಹಾರಿಸುವ ಮೂಲಕ ಯಾರಿಗಾದರೂ ಪ್ರಾಣಾಪಾಯ ಆಗಬಹುದು ಎಂಬ ಆತಂಕದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಸುಶಾಂತ್‌ ಅಗರ್‌ವಾಲ್‌ ಗುಂಡು ಹಾರಿಸಿ ಭಯದ ವಾತಾವರಣ ನಿರ್ಮಾಣ ಮಾಡಿರುವುದು ಕಂಡುಬಂದಿದೆ. ಆಗ, ಪೊಲೀಸರು ಈತನನ್ನು ಕೇಳಿದರೆ ನನ್ನ ಸೈಟ್‌ ಅನ್ನು ಕೆಲವರು ಕಬಳಿಕೆ ಮಾಡುತ್ತಿದ್ದಾರೆ. ಅವರನ್ನು ಹೆದರಿಸುವ ಉದ್ದೇಶದಿಂದ ನಾನು ಗಾಳಿಯಲ್ಲಿ ಗುಂಡು ಹಾರಿಸಿದ್ದೇನೆ ಎಂದು ಹೇಳಿದ್ದಾನೆ. ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಅತ್ತಿಕೊಳ್ಳ ಬಡಾವಣೆಯಲ್ಲಿ ಮುಂಬೈ ಮೂಲದ ಸುಶಾಂತ್ ಅಗರ್ವಾಲ್ ಅನ್ನೋರಿಗೆ ಸೇರಿದ 5 ಎಕರೆ 30 ಗುಂಟೆ ಜಮೀನಿದೆ. ಈಗಾಗಲೇ ಈ ಜಮೀನಿಗೆ ಕಾಂಪೌಂಡ್ ಕೂಡ ನಿರ್ಮಿಸಿ, ಒಂದು ಫಾರ್ಮ್ ಹೌಸ್ ಕೂಡ ಕಟ್ಟಿಸಿದ್ದಾರೆ. ಆ ಕಟ್ಟಡದ ಹೊರ ಭಾಗದಲ್ಲಿ ಈ ಜಮೀನು ತಮಗೆ ಸೇರಿದ್ದು ಅಂತಾನೂ ಬೋರ್ಡ್ ಹಾಕಿದ್ದಾರೆ. ಆದರೂ, ಈ ಜಮೀನು ತಮ್ಮದು ಎಂದು ಸುಳ್ಳು ದಾಖಲೆ ಸೃಷ್ಟಿಕೊಂಡು ಬರುವವರೂ ಕೂಡ ಹೆಚ್ಚಾಗಿದ್ದಾರೆ ಎಂದು ತಿಳಿದುಬಂದಿತ್ತು. ಇಂದು ಕೂಡ ಅಂಥದ್ದೇ ಘಟನೆ ನಡೆದಿದೆ.

ಜಗದ್ವಿಖ್ಯಾತ ಗಣಿತಶಾಸ್ತ್ರಜ್ಞ ಸಿ.ಆರ್. ರಾವ್ ಇನ್ನಿಲ್ಲ: ಹೂವಿನ ಹಡಗಲಿಯಲ್ಲಿ ಜನನ ಅಮೇರಿಕಾದಲ್ಲಿ ನಿಧನ

ಪವನ್ ಕುಲಕರ್ಣಿ ಎನ್ನುವ ವ್ಯಕ್ತಿಯ ಜಮೀನು ಸುಶಾಂತ್‌ ಅಗರ್‌ವಾಲ್‌ ಜಮೀನಿನ ಪಕ್ಕದಲ್ಲಿಯೇ ಇದೆ. ಇಬ್ಬರ ಮಧ್ಯೆ ಜಾಗದ ಬಗ್ಗೆ ವಿವಾದವಿದೆ. ಆಗಾಗ ಈ ಬಗ್ಗೆ ಇಬ್ಬರ ನಡುವೆ ತಿಕ್ಕಾಟವೂ ನಡೆದಿದೆ. ಇಂದು ಮುಂಬೈನಿಂದ ಬಂದ ಸುಶಾಂತನ ಜಮೀನಿನನಲ್ಲಿ ಕೆಲವರು ಕೆಲಸ ಮಾಡುತ್ತಿದ್ದರಂತೆ. ಅವರನ್ನು ಅಲ್ಲಿಂದ ಹೋಗುವಂತೆ ಸುಶಾಂತ್ ಹೇಳಿದ್ದಾರೆ. ಈ ವೇಳೆ ಕೆಲಸಗಾರರು ತನ್ನ ಮೇಲೆ ಹಲ್ಲೆ ಮಾಡಲು ಬರುತ್ತಿದ್ದಾರೆಂದು ತಿಳಿದು ಲೈಸೆನ್ಸ್ಡ್ ರಿವಾಲ್ವರ್ ನಿಂದ ನೆಲದತ್ತ ಹಾಗೂ ಆಕಾಶದತ್ತ ಫೈರ್ ಮಾಡಿದ್ದಾರೆ. ಇದರಿಂದ ಭಯಗೊಂಡ ಅವರೆಲ್ಲಾ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. 

ಹುಬ್ಬಳ್ಳಿ-ಧಾರವಾಡ ಕಾನೂನು ಸುವ್ಯವಸ್ಥೆ ಡಿಸಿಪಿ ರಾಜೀವ್ ಮಾತನಾಡಿ, ವಿದ್ಯಾಗಿರಿ ಠಾಣೆ ವ್ಯಾಪ್ತಿಯ ಅತ್ತಿಕೊಳ್ಳ ಬಡಾವಣೆಯಲ್ಲಿ ಸುಶಾಂತ ಅಗರವಾಲ್ ಗಾಳಿಯಲ್ಲಿ ಗುಂಡು ಹಾರಿಸಿದ ಮಾಹಿತಿ ಬಂದಿತ್ತು. ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ. ಸುಶಾಂತ ಅಗರವಾಲ್ ಮತ್ತು ಪವನ ಕುಲಕರ್ಣಿ ಎಂಬುವವರ ಮಧ್ಯೆ ಭೂ ವಿವಾದ ಇದೆ. ಈ ಸಂಬಂಧ ಇವತ್ತು ಇಬ್ಬರ ಮಧ್ಯೆ ಮಾತು ನಡೆದಿತ್ತು. ಕುಲಕರ್ಣಿ ಕಡೆಯವರು ಅಲ್ಲಿ ಕೆಲಸ ಮಾಡುತ್ತಿದ್ದರಂತೆ ಸುಶಾಂತ ಅವರಿಗೆ ಕೆಲಸ ಮಾಡಬೇಡಿ ಎಂದಿದ್ದಾರೆ. ಆಗ ಅವರು ಸುಶಾಂತ ಸಮೀಪಕ್ಕೆ ಬಂದಿದ್ದಾರೆ. ಆಗ ಸುಶಾಂತ ಹೆದರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪ್ರಾಥಮಿಕ ವಿಚಾರಣೆ ಮಾಡಿದ್ದು, ಹೆಚ್ಚಿನ ಮಾಹಿತಿಯನ್ನು ಪಡೆಯಲಾಗುತ್ತಿದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios