ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಸರ್ಕಾರಿ ಶಾಲೆಯ ಬಿಸಿಯೂಟದ ಕೋಣೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಶಿಕ್ಷಕರ ಸಮಯಪ್ರಜ್ಞೆಯಿಂದ 33 ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಮಕ್ಕಳ ರಕ್ಷಣೆಗೆ ಧಾವಿಸಿದ ಕಾರ್ಮಿಕರೊಬ್ಬರು ಅಸ್ವಸ್ಥಗೊಂಡಿದ್ದಾರೆ.
ಚಿಕ್ಕಮಗಳೂರು (ಫೆ.26): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಸರ್ಕಾರಿ ಶಾಲೆಯಲ್ಲಿ ಇಂದು ಮಧ್ಯಾಹ್ನ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಶಾಲೆಯ ಬಿಸಿಯೂಟದ ಕೋಣೆಯಲ್ಲಿ ಮಕ್ಕಳಿಗೆ ಹಾಲು ಕಾಯಿಸುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಅಡುಗೆ ಪಾತ್ರೆಗಳು ಹಾಗೂ ಅಕ್ಕಪಕ್ಕದಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ. ಈ ವೇಳೆ ಶಾಲೆಯಲ್ಲಿ 33 ವಿದ್ಯಾರ್ಥಿಗಳಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಿಕ್ಷಕರು ಮತ್ತು ಸಿಬ್ಬಂದಿ ಸಮಯಪ್ರಜ್ಞೆ
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ತಕ್ಷಣವೇ ಬೆಂಕಿ ಹರಿಸಲು ಯತ್ನಿಸಿದರು. ಬೆಂಕಿ ಸಿಲಿಂಡರ್ಗೆ ಹರಡದಂತೆ ತಡೆಯಲು ಒದ್ದೆಯಾದ ಗೋಣಿಚೀಲಗಳನ್ನು ಸಿಲಿಂಡರ್ ಮೇಲೆ ಹಾಕಿ ದೊಡ್ಡ ಮಟ್ಟದ ಸ್ಫೋಟವಾಗುವುದನ್ನು ತಪ್ಪಿಸಿದರು. ಶಿಕ್ಷಕರ ಈ ಸಮಯಪ್ರಜ್ಞೆಯಿಂದಾಗಿ ಶಾಲೆಯಲ್ಲಿದ್ದ ಎಲ್ಲಾ 33 ವಿದ್ಯಾರ್ಥಿಗಳು ಯಾವುದೇ ಅನಾಹುತವಿಲ್ಲದೆ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಕ್ಕಳ ರಕ್ಷಿಸಲು ಬಂದ ಕೂಲಿ ಕಾರ್ಮಿಕ ಅಸ್ವಸ್ಥ
ಶಾಲೆಗೆ ಬೆಂಕಿ ಬಿದ್ದಿರುವುದನ್ನು ಗಮನಿಸಿದ ಪಕ್ಕದ ತೋಟದ ಕೂಲಿ ಕಾರ್ಮಿಕರೊಬ್ಬರು ಮಕ್ಕಳ ರಕ್ಷಣೆಗೆ ಧಾವಿಸಿ ಬಂದಿದ್ದರು. ಈ ವೇಳೆ ಬೆಂಕಿಯಿಂದ ಹೊರಬಂದ ವಿಷಾನಿಲ ಹಾಗೂ ದಟ್ಟವಾದ ಹೊಗೆಯನ್ನು ಸೇವಿಸಿದ ಕಾರ್ಮಿಕ ಸ್ಥಳದಲ್ಲೇ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳೀಯರು ಮತ್ತು ಶಾಲಾ ಸಿಬ್ಬಂದಿ ಸಮಯಪ್ರಜ್ಞೆಯಿಂದಾಗಿ ಒಂದು ದೊಡ್ಡ ದುರಂತ ತಪ್ಪಿದಂತಾಗಿದೆ.


