ತಾಕತ್ತಿದ್ದರೆ ನೀವೂ 15 ಮಕ್ಕಳನ್ನು ಹುಟ್ಟಿಸಿ: ಮೌಲಾನಾ ವಿವಾದ
ಮುಸ್ಲಿಮರಿಗೆ 15 ಮಕ್ಕಳನ್ನು ಹುಟ್ಟಿಸುವ ತಾಕತ್ತು ಇದೆ. ತಾಕತ್ ಇದ್ದರೆ ನೀವು ಹುಟ್ಟಿಸಿ ಎನ್ನುವ ಮೂಲಕ ಮೌಲಾನಾ ಪಿ.ಎಂ. ಮುಜಾಮ್ಮಿಲ್ ಸಾಹೇಬ್ ವಿವಾದಾತ್ಮಕ ಹೇಳಿಕೆ ನೀಡಿದರು.
ಬೆಂಗಳೂರು [ಜ.04]: ಭಾರತದಲ್ಲಿ 30 ಕೋಟಿ ಮಂದಿ ಮುಸ್ಲಿಮರು ಇದ್ದೇವೆ. ಪ್ರತಿಭಟನೆಗೆ ರಸ್ತೆಗಿಳಿಯುತ್ತಿರುವ ಮುಸ್ಲಿಮರ ಸಂಖ್ಯೆ ನೋಡಿ ಪ್ರಧಾನಿ ನರೇಂದ್ರ ಮೋದಿ ಗೊಂದಲಕ್ಕೆ ಒಳಗಾಗಿದ್ದಾರೆ. ಇವರೆಲ್ಲರೂ ಭಾರತೀಯರೇ. ಮುಸ್ಲಿಮರಿಗೆ 14-15 ಮಕ್ಕಳನ್ನು ಹುಟ್ಟಿಸುವ ತಾಕತ್ತು ಇದೆ. ತಾಕತ್ತಿದ್ದರೆ ನೀವೂ ಮಕ್ಕಳನ್ನು ಹುಟ್ಟಿಸಿ ಎಂದು ಮೌಲಾನಾ ಪಿ.ಎಂ. ಮುಜಾಮ್ಮಿಲ್ ಸಾಹೇಬ್ ವಿವಾದಾತ್ಮಕ ಹೇಳಿಕೆ ನೀಡಿದರು.
ಮೈಸೂರು ರಸ್ತೆಯ ಜದೀದ್ ಈದ್ಗಾ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್ಆರ್ಸಿ) ವಿರೋಧಿಸಿ ನಡೆದ ‘ಸಂವಿಧಾನ ರಕ್ಷಿಸಿ, ದೇಶ ಉಳಿಸಿ’ ಎಂಬ ಶಾಂತಿಯುತ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ರಸ್ತೆಗೆ ಇಳಿಯುತ್ತಿರುವ ಮುಸ್ಲಿಮರು ಯಾರೂ ಪಾಕಿಸ್ತಾನ, ಬಾಂಗ್ಲಾದೇಶದಿಂದ ಬಂದವರಲ್ಲ. ಇಲ್ಲೇ ಹುಟ್ಟಿದವರು ಎಂದರು.
‘ಮೋದಿ ಮೌನ ಇಡೀ ರಾಜ್ಯಕ್ಕೇ ಅವಮಾನ : BSYಗೆ ಕೆಟ್ಟ ಹೆಸರು ತರಲು ಪ್ಲಾನ್’...
ಮುಸ್ಲಿಮರ ಜನಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದಕ್ಕೆ ಅವರಿಗೆ ಚಿಂತೆಯಾಗಿದೆ. ನಮ್ಮ ಕುಟುಂಬದಲ್ಲಿ ಹತ್ತು ಹದಿನೈದು ಮಂದಿ ಮಕ್ಕಳು ಜನಿಸುತ್ತಾರೆ. ಇದು ನಮ್ಮ ತಾಕತ್ತು. ನಿಮಗೆ ತಾಕತ್ತಿದ್ದರೆ ನಿಮ್ಮ ಕುಟುಂಬದ ಜನಸಂಖ್ಯೆ ಹೆಚ್ಚಿಸಿಕೊಳ್ಳಿ. ದೇವರು ನಮಗೆ ಮಕ್ಕಳನ್ನು ಹುಟ್ಟಿಸುವ ತಾಕತ್ತು ನೀಡಿದ್ದಾರೆ ಎಂದು ಹೇಳಿದರು. ಪಾಕಿಸ್ತಾನದಲ್ಲಿ 100 ವರ್ಷ ಇರುವುದಕ್ಕಿಂತ ಭಾರತದಲ್ಲಿ ಒಂದು ದಿನ ಬದುಕುವುದೇ ಲೇಸು ಎಂದರು.