ಬಾಲ್ಯ ವಿವಾಹ ಕಾನೂನು ಬಾಹಿರವಾಗಿದ್ದು, ಚಿಕ್ಕ ವಯಸ್ಸಿನಲ್ಲಿ ವಿವಾಹವಾದರೆ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ ಅಂತಹ ಪ್ರಕರಣ ಕಂಡು ಬಂದರೆ ಸಂಬಂಧಪಟ್ಟಇಲಾಖೆಗೆ ದೂರು ಸಲ್ಲಿಸಿ ತಡೆಗಟ್ಟುವಂತೆ ಪುರಸಭೆ ಅಧ್ಯಕ್ಷೆ ಧನಲಕ್ಷ್ಮೀ ಗೋವಿಂದರಾಜ್‌ ವಿದ್ಯಾರ್ಥಿ ಹಾಗೂ ಯುವ ಜನತೆಗೆ ಕರೆ ನೀಡಿದರು.

ಪಾವಗಡ : ಬಾಲ್ಯ ವಿವಾಹ ಕಾನೂನು ಬಾಹಿರವಾಗಿದ್ದು, ಚಿಕ್ಕ ವಯಸ್ಸಿನಲ್ಲಿ ವಿವಾಹವಾದರೆ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ ಅಂತಹ ಪ್ರಕರಣ ಕಂಡು ಬಂದರೆ ಸಂಬಂಧಪಟ್ಟಇಲಾಖೆಗೆ ದೂರು ಸಲ್ಲಿಸಿ ತಡೆಗಟ್ಟುವಂತೆ ಪುರಸಭೆ ಅಧ್ಯಕ್ಷೆ ಧನಲಕ್ಷ್ಮೀ ಗೋವಿಂದರಾಜ್‌ ವಿದ್ಯಾರ್ಥಿ ಹಾಗೂ ಯುವ ಜನತೆಗೆ ಕರೆ ನೀಡಿದರು.

ತಾಲೂಕು ಆಡಳಿತ, ತಾಲೂಕು ಪಂಚಾಯಿತ್‌, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ನಿಷೇಧ ಕುರಿತು ತಾಲೂಕು ಮಟ್ಟದ ಅರಿವು ಹಾಗೂ ಯುವ ಮೇಳ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ತಾಪಂ ಇಒ ಶಿವರಾಜಯ್ಯ ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇದಕ್ಕೆ ಪ್ರೋತ್ಸಾಹಿಸಬಾರದು ಮತ್ತು ಬಾಲ್ಯ ವಿವಾಹ ತಡೆಗಟ್ಟಲು ಪ್ರತಿಯೊಬ್ಬರು ಆಸಕ್ತಿವಹಿಸಬೇಕು. ಬಾಲ್ಯ ವಿವಾಹ ತಡೆಯುವುದು ಮತ್ತು ಈ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಹಿರಿಯ ಆರೋಗ್ಯಧಿಕಾರಿ ಡಾ. ತಿರುಪತಯ್ಯ ಮಾತನಾಡಿ, ಬಾಲ್ಯವಿವಾಹದಿಂದ ಆಗುವ ತೊಂದರೆ ಮತ್ತು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ಕುರಿತು ಸಮಗ್ರ ಮಾಹಿತಿ ನೀಡಿದರು.

ಪಾವಗಡ ಸರ್ಕಾರಿ ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕ ನಾಗರಾಜ್‌ ಮಾತನಾಡಿ, ಬಾಲ್ಯ ವಿವಾಹದ ಒಂದು ಅನಿಷ್ಟಪದ್ಧತಿ. ಇದಕ್ಕೆ ಪ್ರೋತ್ಸಾಹಿಸಬಾರದು. ಬಾಲ್ಯ ವಿವಾಹದಿಂದ ಆಗುವ ಅನಾಹುತ ಮತ್ತು ಕೆಟ್ಟಪರಿಣಾಮಗಳ ಬಗ್ಗೆ ವಿವರಿಸಿ, ಈ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಅರಿವು ಮೂಡಿಸುವಂತೆ ಯುವ ಜನತೆ ಹಾಗೂ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಬಿಇಒ ಕಚೇರಿಯ ದೈಹಿಕ ಶಿಕ್ಷಣಾಧಿಕಾರಿ ಚಿದಾನಂದಸ್ವಾಮಿ ಬಾಲ್ಯ ವಿವಾಹ ಕುರಿತು ಮಾತನಾಡಿದರು.

ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಿಸಿ ಗೌರವಿಸಲಾಯಿತು.

ವೃತ್ತ ಇನ್ಸ್‌ಪೆಕ್ಟರ್‌ ಅಜಯ್‌ ಸಾರಥಿ, ಸಮಾಜ ಕಲ್ಯಾಣ ಇಲಾಖೆಯ ನಿಲಯಪಾಲಕ ರಾಜ್‌ಕುಮಾರ್‌, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ್‌, ಸಹಾಯಕ ಯೋಜನಾಧಿಕಾರಿ ಸಯ್ಯದ್‌ ರಖೀಬ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೂಪರ್‌ ವೈಸರ್‌ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಬಾಲ್ಯವಿವಾಹ ತಡೆಗಟ್ಟಿ

ಬಾಲ್ಯ ವಿವಾಹ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಹೆಣ್ಣಿಗೆ 18 ಹಾಗೂ ಗಂಡಿಗೆ 21 ವರ್ಷ ತುಂಬಿದ್ದರೆ ಮಾತ್ರ ವಿವಾಹಕ್ಕೆ ಅರ್ಹರಾಗಿರುತ್ತಾರೆ. ಇದರ ಒಳಗೆ ವಿವಾಹವಾದರೆ ಅದು ಬಾಲ್ಯ ವಿವಾಹವಾಗಲಿದ್ದು ಕಾನೂನು ಕ್ರಮಕ್ಕೆ ಒಳಪಡಬೇಕಾಗುತ್ತದೆ. ಹೀಗಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹ ಪ್ರಕರಣ ಕಂಡುಬಂದರೆ ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಪುರಸಭೆ ಪೊಲೀಸ್‌ ಇತರೆ ಇಲಾಖೆಗಳಿಗೆ ಮಾಹಿತಿ ನೀಡಿ ತಡೆಗಟ್ಟುವಂತೆ ವಿದ್ಯಾರ್ಥಿ ಹಾಗೂ ಸಾರ್ವಜನಿಕರಲ್ಲಿ ಪುರಸಭೆ ಅಧ್ಯಕ್ಷೆ ಧನಲಕ್ಷ್ಮೀ ಮನವಿ ಮಾಡಿದರು.