ಬಳ್ಳಾರಿ ಜಿಲ್ಲೆಗೆ ಪರಿಣಾಮಕಾರಿ ಉಸ್ತುವಾರಿ ಮಂತ್ರಿ ಬೇಕು-ಕೊಂಡಯ್ಯ| ಜಿಲ್ಲಾ ಕೇಂದ್ರ ದೂರವಿದ್ದರೆ ಕೆಲಸ, ಕಾರ್ಯಗಳು ಕಷ್ಟವಾಗುತ್ತವೆ| ಯಾವ ತಾಲೂಕುಗಳನ್ನು ಜಿಲ್ಲೆ ಮಾಡಬೇಕು ಎಂಬುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು|  ಆಡಳಿತಾತ್ಮಕ ದೃಷ್ಟಿಯಿಂದ ಬಳ್ಳಾರಿ ಜಿಲ್ಲೆ ವಿಭಜನೆಯಾಗುವುದು ಮಾತ್ರ ಸೂಕ್ತ| 

ಹರಪನಹಳ್ಳಿ(ಫೆ.20): ಆಡಳಿತಾತ್ಮಕ ದೃಷ್ಟಿಯಿಂದ ಹನ್ನೊಂದು ತಾಲೂಕುಗಳನ್ನೊಳಗೊಂಡ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡುವುದು ಸೂಕ್ತ ಎಂದು ವಿಧಾನ ಪರಿಷತ್ತು ಸದಸ್ಯ ಕೆ.ಸಿ. ಕೊಂಡಯ್ಯ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಪನಹಳ್ಳಿ, ಹಡಗಲಿಯವರು ಜಿಲ್ಲಾ ಕೇಂದ್ರ ಬಳ್ಳಾರಿಗೆ ಬರುವುದು ಬಹಳ ಕಷ್ಟವಾಗುತ್ತದೆ. 180 ಕಿಲೋ ಮೀಟರ್‌ ದೂರವಾಗುತ್ತದೆ ಎಂದರು.

Add Asianetnews Kannada as a Preferred SourcegooglePreferred

ಜಿಲ್ಲಾ ಕೇಂದ್ರ ದೂರವಿದ್ದರೆ ಕೆಲಸ, ಕಾರ್ಯಗಳು ಕಷ್ಟವಾಗುತ್ತವೆ, ಯಾವ ತಾಲೂಕುಗಳನ್ನು ಜಿಲ್ಲೆ ಮಾಡಬೇಕು ಎಂಬುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು, ಆದರೆ ಆಡಳಿತಾತ್ಮಕ ದೃಷ್ಟಿಯಿಂದ ಬಳ್ಳಾರಿ ಜಿಲ್ಲೆ ವಿಭಜನೆಯಾಗುವುದು ಮಾತ್ರ ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.

ಎಫೆಕ್ಟಿವ್‌ ಜಿಲ್ಲಾ ಮಂತ್ರಿ ಬಂದಿಲ್ಲ:

ಬಳ್ಳಾರಿ ಜಿಲ್ಲೆಗೆ ಈಚೆಗೆ ಎಫೆಕ್ಟಿವ್‌ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಬರುತ್ತಿಲ್ಲ, ಧ್ವಜಾರೋಹಣಕ್ಕೆ, ಹಂಪಿ ಉತ್ಸವಗಳಂತಹ ಕಾರ್ಯಕ್ರಮಗಳಿಗೆ ಮಾತ್ರ ಉಸ್ತುವಾರಿ ಸಚಿವರು ಬಂದು ಹೋಗುತ್ತಾರೆ ಅಷ್ಟೆ ಎಂದು ಅವರು ನುಡಿದರು.
ಉಸ್ತುವಾರಿ ಮಂತ್ರಿಗಳೆಂದರೆ ಮಾದರಿಯಾಗಿ ಈ ಹಿಂದೆ ಎಂ.ವೈ. ಘೋರ್ಪಡೆ ಇದ್ದರು. ವಿಜಯನಗರ ಕ್ಷೇತ್ರದ ಮಂತ್ರಿಯವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗುವ ಇಷ್ಟವಿದೆಯೊ ಇಲ್ಲವೊ ಗೊತ್ತಿಲ್ಲ, ಇಷ್ಟವಿದ್ದರೆ ಆಗುತ್ತಿದ್ದರು ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹರಪನಹಳ್ಳಿ ತಾಲೂಕಿನ ಪೊಲೀಸ್‌ ಹಾಗೂ ಅರಣ್ಯ ಇಲಾಖೆಗಳು ಈ ವರೆಗೂ ಬಳ್ಳಾರಿ ಜಿಲ್ಲಾ ಆಡಳಿತ ವ್ಯಾಪ್ತಿಗೆ ಬಾರದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಕೂಡಲೇ ಅವೆರಡು ಇಲಾಖೆಗಳನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಹರಪನಹಳ್ಳಿ ಕಾಂಗ್ರೆಸ್‌ನಲ್ಲಿ ನಾಯಕತ್ವ ಇಲ್ಲ:

ಹರಪನಹಳ್ಳಿ ತಾಲೂಕಲ್ಲಿ ಕಾಂಗ್ರೆಸ್‌ ಗಟ್ಟಿಯಾಗಿದೆ, ಆದರೆ ನಾಯಕತ್ವದ ಕೊರತೆ ಇದೆ. ತಳಮಟ್ಟದಲ್ಲಿ ಕಾಂಗ್ರೆಸ್‌ ಚೆನ್ನಾಗಿ ಇದೆ. ಆದರೆ ತಾಲೂಕು ಮಟ್ಟದಲ್ಲಿ ನಡೆಸಿಕೊಂಡು ಹೋಗುವವರು ಇಲ್ಲವಾಗಿದೆ. ದಾವಣಗೆರೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರವನ್ನು ಬಿಜೆಪಿಯವರು ಆಪರೇಷನ್‌ ಕಮಲ ಮಾಡುವ ಮೂಲಕ ತಮ್ಮದಾಗಿಸಿಕೊಂಡರು. ಆದ್ದರಿಂದ ನಾವು ಆ ಚುನಾವಣೆಯಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಅವರು ಹೇಳಿದರು.

ಸ್ಥಳೀಯ ಕಾಂಗ್ರೆಸ್‌ ಮುಖಂಡರಾದ ಚಿಕ್ಕೇರಿ ಬಸಪ್ಪ, ಹುಲ್ಲಿಕಟ್ಟಿಚಂದ್ರಪ್ಪ ಅವರು ಸ್ಥಳೀಯ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಿಗೆ ಮಾಹಿತಿ ತಿಳಿಸುವುದಿಲ್ಲ, ಇಲ್ಲಿ ಗೊಂದಲವಿದೆ ಎಂದು ಕೊಂಡಯ್ಯನವರ ಗಮನಕ್ಕೆ ತಂದರು.
ಮಾಜಿ ಶಾಸಕ ಶಿರಾಜ್‌ ಶೇಖ್‌, ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್‌ ಅಧ್ಯಕ್ಷ ಟಿ.ಎಚ್‌.ಎಂ. ಮಂಜುನಾಥ, ಮುಖಂಡರಾದ ವಕೀಲ ಆನಂದ, ತೆಲಿಗಿ ಯೋಗೀಶ, ದುಗ್ಗಾವತ್ತಿ ಮಂಜುನಾಥ, ತಾಪಂ ಸದಸ್ಯ ಎಚ್‌. ಚಂದ್ರಪ್ಪ, ಪುಣಭಘಟ್ಟಿನಿಂಗಪ್ಪ, ಎಚ್‌. ವಸಂತಪ್ಪ, ಪಿಕಾರ್ಡ ಬ್ಯಾಂಕ್‌ ನಿರ್ದೇಶಕ ಕರಣಂ ಸಿದ್ದಲಿಂಗಪ್ಪ, ಇತರರು ಹಾಜರಿದ್ದರು.